ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌!

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್‌ಗೆ (Shah Rukh Khan) ರಾಯ್‌ಪುರ (Raipur) ಮೂಲದ ವಕೀಲರೊಬ್ಬರ ಫೋನ್‌ನಿಂದ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈ ಪೊಲೀಸರು (Mumbai Police) ತಿಳಿಸಿದ್ದಾರೆ.

ವಕೀಲ ಫೈಜಾನ್ ಖಾನ್ ಎಂಬವರ ಫೋನ್‌ನಿಂದ ಶಾರುಖ್‌ ಖಾನ್‌ ಅವರಿಗೆ ಬೆದರಿಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಶಾರುಖ್ ಖಾನ್‌ ಅವರಿಗೆ ಬೆದರಿಕೆ ಕರೆ ಬರುವ 3 ದಿನಗಳ ಮೊದಲು ತನ್ನ ಫೋನ್ ಕಳ್ಳತನವಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ಮಂಗಳವಾರ ಬಾಂದ್ರಾ ಪೊಲೀಸ್ ಠಾಣೆಯ ಫೋನ್‌ಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಕರೆ ಮಾಡಿದ್ದ ವ್ಯಕ್ತಿ ನಟನಿಂದ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದ. ಆ ಹಣವನ್ನು ನೀಡದಿದ್ದರೆ ಭಾರೀ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು.

ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸ್ ತಂಡ ರಾಯ್‌ಪುರಕ್ಕೆ ತೆರಳಿತ್ತು. ಇದೀಗ ರಾಯ್‌ಪುರ ಪೊಲೀಸರೊಂದಿಗೆ ವಕೀಲನ ಫೋನ್ ಕಳ್ಳತನದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆದರಿಕೆ ಹಾಕಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಶಾರುಖ್ ಖಾನ್ ಅವರ ಅಂಜಾಂ (1994) ಚಿತ್ರದಲ್ಲಿ ಜಿಂಕೆ ಬೇಟೆಯನ್ನು ಉಲ್ಲೇಖಿಸುವ ಸಂಭಾಷಣೆಯ ಕುರಿತು ವಕೀಲ ಈ ಹಿಂದೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

ನಾನು ರಾಜಸ್ಥಾನದಿಂದ ಬಂದವನು. ಬಿಷ್ಣೋಯ್ ಸಮುದಾಯದವರು ನನ್ನ ಸ್ನೇಹಿತರು. ಜಿಂಕೆಗಳನ್ನು ರಕ್ಷಿಸುವುದು ಅವರ ಧರ್ಮದಲ್ಲಿದೆ. ಹಾಗಾಗಿ ಮುಸ್ಲಿಮರು ಜಿಂಕೆಗಳ ಬಗ್ಗೆ ಈ ರೀತಿ ಹೇಳಿದರೆ ಅದು ಖಂಡನೀಯ. ಆದ್ದರಿಂದ, ನಾನು ಆಕ್ಷೇಪ ಎತ್ತಿದ್ದೇನೆ ಎಂದು ಫೈಜಾನ್ ಖಾನ್ ಹಿಂದೆ ಹೇಳಿದ್ದರು.

ನನ್ನ ಫೋನ್‌ನಿಂದ ಯಾರೇ ಕರೆ ಮಾಡಿದ್ದರೂ ಅದು ಉದ್ದೇಶಪೂರ್ವಕವಾಗಿ ತೋರುತ್ತದೆ. ಇದು ನನ್ನ ವಿರುದ್ಧದ ಪಿತೂರಿ ಎಂದು ನಾನು ಭಾವಿಸುತ್ತೇನೆ ಎಂದು ವಕೀಲರು ಹೇಳಿದ್ದಾರೆ.