ಮುಗಿಸದೇ ಬಿಡಲ್ಲ- ಅನಂತ್‍ಕುಮಾರ್ ಹೆಗ್ಡೆಗೆ ಬೆದರಿಕೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ಅಪರಿಚಿತ ವ್ಯಕ್ತಿಯೋರ್ವ ಜೀವ ಬೆದರಿಕೆ ಕರೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ದೂರು ನೀಡಿದ್ದಾರೆ.

ಶುಕ್ರವಾರ ಬೆಳಗ್ಗಿನ ಜಾವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಮನೆಯ ದೂರವಾಣಿ ಸಂಖ್ಯೆಗೆ 02233.. ಎಂಬ ಇಂಟರ್ ನೆಟ್ ನಂಬರ್ ನಿಂದ ಕರೆ ಬಂದಿದ್ದು ಕರೆಯನ್ನು ಅನಂತ್ ಕುಮಾರ್ ಹೆಗ್ಡೆ ಪತ್ನಿ ಶ್ರೀ ರೂಪ ಸ್ವೀಕರಿಸಿದ್ದರು.

ಈ ವೇಳೆ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ, `ಎಲ್ಲಿ ನಿನ್ನ ಗಂಡ ಅವನನ್ನು ಬಿಡುವುದಿಲ್ಲ ಮುಗಿಸುತ್ತೇವೆ. ಇಂದು ಮನೆಯಲ್ಲಿ ಇರಬೇಕಿತ್ತು ಎಲ್ಲಿ ಅಡಗಿ ಕುಳಿತಿದ್ದಾರೆ. ಮೊಬೈಲ್ ಫೋನ್ ಗೆ ಕರೆ ಮಾಡಿದ್ರೆ ಸ್ವೀಕರಿಸುತ್ತಿಲ್ಲ. ಒಂದುಸಲ ತಪ್ಪಿಸಿಕೊಂಡ ಮಾತ್ರಕ್ಕೆ ನಮ್ಮ ಕೈಯಿಂದ ಪ್ರತಿಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಮುಗಿಸದೇ ಬಿಡುವುದಿಲ್ಲ. ಪೊಲೀಸ್ ಭದ್ರತೆಯಲ್ಲಿ ಎಷ್ಟು ದಿನ ತಿರುಗುತ್ತಾರೆಂದು ನಾವೂ ನೋಡುತ್ತೇವೆ. ಯಾವ ಪೊಲೀಸ್ ನಾಯಿಗೆ ಹೇಳುತ್ತೀರೋ ಹೇಳಿಕೊಳ್ಳಿ. ನಿಮ್ಮನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಬಿಡುವುದಿಲ್ಲ. ಎಲ್ಲರನ್ನೂ ಮುಗಿಸುತ್ತೇವೆ’ ಎಂದು ಅಶ್ಲೀಲ ಶಬ್ಧಗಳಿಂದ ಮಾತನಾಡಿದ್ದಾನೆ.

ಈ ವೇಳೆ ಅನಂತ್‍ಕುಮಾರ್ ಹೆಗ್ಡೆಯವರು ಬೇರೊಂದು ಕರೆಯಲ್ಲಿದ್ದು ಬೆದರಿಕೆ ಕರೆ ಎಂದು ತಿಳಿದ ತಕ್ಷಣ ಆತನ ಧ್ವನಿಯನ್ನು ಪೊಲೀಸ್ ಸಿಬ್ಬಂದಿಗೆ ಕೇಳಿಸಿದ್ದಾಗಿ ಆಪ್ತ ಕಾರ್ಯದರ್ಶಿ ಸುರೇಶ್ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫೆಬ್ರವರಿ 10ರಂದು ಇದೇ ಮಾದರಿಯಲ್ಲಿ ಕರೆ ಬಂದಿದ್ದು ಇದು ಎರಡನೇ ಕರೆಯಾಗಿದೆ.

Comments

Leave a Reply

Your email address will not be published. Required fields are marked *