ಚೌಕಿದಾರ್‌ನನ್ನು ಟೀಕಿಸುವವರು ಜಾಮೀನು ಪಡೆದು ಹೊರಗಿದ್ದಾರೆ: ಪ್ರಧಾನಿ ಮೋದಿ

ಇಟಾನಗರ: ಚೌಕಿದಾರ್‌ನನ್ನು ನಿಂದಿಸುವವರು ದೆಹಲಿಯಲ್ಲಿ ಕುಳಿತು ತೆರಿಗೆ ವಂಚಿಸಿದ್ದಾರೆ. ಆದರೆ ಈಗ ಕೋರ್ಟ್ ಜಾಮೀನು ಪಡೆದು ಹೊರಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ಅರುಣಾಚಲ ಪ್ರದೇಶದ ವೆಸ್ಟ್ ಜಿಯಾಂಗ್ ಜಿಲ್ಲೆಯ ಐಟಿಬಿಪಿ ಮೈದಾನದಲ್ಲಿ ಇಂದು ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಸರ್ಕಾರಿ ಭೂಮಿಯನ್ನು ಪಡೆದು ಲಕ್ಷಾಂತರ ರೂಪಾಯಿಗಾಗಿ ಪತ್ರಿಕೆಗಳಿಗೆ ಬಾಡಿಗೆ ಕೊಟ್ಟವರು, ಭಾರತೀಯ ಸೇನೆಯ ವ್ಯವಹಾರದಲ್ಲಿ ಡೀಲ್ ಮಾಡಿ ಕಮಿಷನ್ ಪಡೆದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಎದುರಿಸುತ್ತಿರವವರು ರಾಜಕೀಯ ನಾಯಕರಾಗಿದ್ದು, ಕೋರ್ಟ್ ನಿಂದ ಜಾಮೀನು ಪಡೆದು ಈಗ ಹೊರಗಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

ಅರುಣಾಚಲ ಪ್ರದೇಶದ ಪ್ರತಿಯೊಬ್ಬರೂ ದೇಶದ ರಕ್ಷಣೆಗಾಗಿ ನಿಮ್ಮನ್ನ ಸಮರ್ಪಿಸಿಕೊಂಡಿದ್ದೀರಿ. ಹೀಗಾಗಿ ನಿಮ್ಮನ್ನು ಹೊಗಳಲು ನಾನು ಹೆಮ್ಮೆಪಡುತ್ತೇನೆ. ಕಳೆದ ಐದು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ಮುಂದಿನ ಅವಧಿಯಲ್ಲಿ ಅರುಣಾಚಲ ಪ್ರದೇಶದಿಂದಲೇ ನನ್ನ ಅಭಿವೃದ್ಧಿಯ ಕಾರ್ಯಗಳು ಆರಂಭವಾಗುತ್ತದೆ ಎಂದು ಭರವಸೆ ನೀಡಿದರು.

ನೀವು ಚೌಕಿದಾರ್ ಹೌದು ಅಲ್ವಾ ಎಂದು ಪ್ರಧಾನಿ ಮೋದಿ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿದರು. ಜನರು ಹೌದು ನಾವು ಚೌಕಿದಾರ್ ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ಹಾಗಾದರೇ ನಾನು ಚೌಕಿದಾರ್ ಅಂತ ಒಮ್ಮೆ ಹೇಳಿ ಎಂದು ಜನರಿಗೆ ಕೇಳಿದರು. ಆಗ ಸಮಾವೇಶದಲ್ಲಿ ಸೇರಿದ್ದ ಜನರು ಮೈ ಬಿ ಚೌಕಿದಾರ್ ಹೂಂ ಎಂದು ಕೂಗಿದರು.

2016ರಲ್ಲಿ ಭಾರತೀಯ ಸೈನಿಕರು ಉರಿ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ಇದೇ ವರ್ಷ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ನಮ್ಮ ಭಾರತೀಯ ಪಡೆ ಏರ್ ಸ್ಟ್ರೈಕ್ ಮೂಲಕ ಪ್ರತ್ಯುತ್ತರ ನೀಡಿತು. ದೇಶದ ಜನರು ಸಂತೋಷ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ಹಾಗೂ ಉಗ್ರರು ಸಂತೋಷ ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಕೇವಲ ಒಂದು ಕುಟುಂಬಕ್ಕಾಗಿ ಶ್ರಮಿಸುತ್ತಿದೆ. ಹೀಗಾಗಿ ಅವರು ದೇಶದ ಅಭಿವೃದ್ಧಿಗಾಗಿ ಕಾಳಜಿ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರವು ದೇಶವನ್ನು ದುರ್ಬಲವಾಗಿಯೇ ಉಳಿಯುವಂತೆ ಮಾಡಿತು ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *