ಇದು ನಮ್ಮ ರಾಜ್ಯದ ಡೆಂಗ್ಯೂ ಗ್ರಾಮ!

ದಾವಣಗೆರೆ: ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಯಾರೂ ಕೆಲಸ ಮಾಡಿಲ್ಲ, ಬಹುತೇಕ ಗ್ರಾಮಸ್ಥರು ಮನೆಯಿಂದ ಕೂಡ ಎದ್ದು ಹೊರ ಬಂದಿಲ್ಲ, ಹಾಸಿಗೆ ಮೇಲೆ ಮಲಗಿರುವ ಮಕ್ಕಳು, ಖಾಲಿ ಖಾಲಿಯಾಗಿ ಕಾಣುತ್ತಿರುವ ಗ್ರಾಮ, ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿರುವ ದೃಶ್ಯ. ಇಂಥದ್ದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ.

ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಡೆಂಗ್ಯೂ, ಮಲೇರಿಯ ರೋಗ ಬಂದು ಆವರಿಸಿಕೊಂಡಿದೆ. ಇದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಹಾಸಿಗೆ ಹಿಡಿದು ಮಲಗಿದೆ.

ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ವೈದ್ಯಾಧಿಕಾರಿ ತ್ರಿಪುಲಾಂಭ ಹಾಗೂ ಹರಿಹರ ತಾಲೂಕು ವೈದ್ಯಾಧಿಕಾರಿ ಹನುಮ ನಾಯ್ಕ ಅವರಿಗೆ ತಿಳಿಸಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಅಧಿಕ ಗ್ರಾಮಸ್ಥರು, ದಾವಣಗೆರೆ ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ಯಾರು ಹೊರಗಡೆ ಹೋಗದಂತಾಗಿದೆ, ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ಆರೋಗ್ಯಾಧಿಕಾರಿಗೂ ಮಾಹಿತಿ ನೀಡಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಜೊತೆಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ರೋಗ ಹೆಚ್ಚಾಗಿ ಆವರಿಸಿದ್ದರು ಕೂಡ ಅಧಿಕಾರಿಗಳು ಮಾತ್ರ ದಿವ್ಯನಿರ್ಲಕ್ಷ ವಹಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಚಿಕಿತ್ಸೆ ನೀಡಬೇಕಿದೆ.

 

Comments

Leave a Reply

Your email address will not be published. Required fields are marked *