10 ರೂಪಾಯಿಗೆ ಆಸೆ ಪಟ್ಟು 1.40 ಲಕ್ಷ ರೂ. ಹಣ ಕಳೆದುಕೊಂಡ ಸೆಕ್ಯೂರಿಟಿ!

ಬೆಂಗಳೂರು: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಖದೀಮರು ವ್ಯಕ್ತಿಯೊಬ್ಬರಿಗೆ 10 ರೂಪಾಯಿ ಆಸೆ ತೋರಿಸಿ 1.40 ಲಕ್ಷ ಹಣ ಎಗರಿಸಿರುವ ಘಟನೆ ವಿವೇಕನಗರದ ವಿಕ್ಟೋರಿಯಾ ಲೇಔಟ್ ನಲ್ಲಿ ನಡೆದಿದೆ.

ಡೇವಿಡ್ ಥಾಮಸ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇವರು ಸೆಕ್ಯೂರಿಟಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಥಾಮಸ್ ಬ್ಯಾಂಕ್ ನಲ್ಲಿದ್ದ ಪಿಎಫ್ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದ ವೇಳೆ ಖದೀಮರು ಈ ಕೃತ್ಯ ಎಸಗಿದ್ದಾರೆ.

ಥಾಮಸ್ ಎಸ್‍ಬಿಐ ಬ್ಯಾಂಕ್ ನಲ್ಲಿ 1.40 ಲಕ್ಷ ಹಣ ಡ್ರಾ ಮಾಡಿದ್ದರು. ಬಳಿಕ ಬ್ಯಾಂಕಿನಿಂದ ಹಣ ತಂದು ಬೈಕಿನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಇಬ್ಬರು ಖದೀಮರು ಡೇವಿಡ್ ಥಾಮಸ್ ಅವರನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ.

ಖದೀಮರು ಬೈಕ್ ಹಿಂಭಾಗ 10 ರೂಪಾಯಿ ಎಸೆದಿದ್ದಾರೆ. ಬಳಿಕ ಸರ್, ಅಲ್ಲಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಯಾಮಾರಿಸಿದ್ದಾರೆ. ಥಾಮಸ್ 10 ರೂಪಾಯಿ ಹಣ ತಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಖದೀಮರು ಅವರ 1.40 ಲಕ್ಷ ಹಣವಿದ್ದ ಬ್ಯಾಗ್ ಎಗರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಈ ಬಗ್ಗೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *