ಐಪಿಎಸ್ ಅಧಿಕಾರಿಯ ಮೊಬೈಲ್ ಎಗರಿಸಿದ ಕಳ್ಳರು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಈಗ ಐಪಿಎಸ್ ಅಧಿಕಾರಿಯೊಬ್ಬರ ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ.

ಕಂಪ್ಯೂಟರ್ ವಿಂಗ್ ಎಡಿಜಿಪಿ ಸಂಜಯ್ ಸಹಾಯ್ ಮೊಬೈಲ್ ಕಳೆದುಕೊಂಡ ಪೊಲೀಸ್ ಅಧಿಕಾರಿ. ನಗರದ ಎಚ್.ಎಸ್.ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಕಳ್ಳತನ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂಜಯ್ ಸಹಾಯ್ ಅವರು ಎಚ್‍ಎಸ್‍ಆರ್ ಲೇಔಟ್ ನಾಲ್ಕನೇ ಸೆಕ್ಟರ್ ನಲ್ಲಿ ಶುಕ್ರವಾರ ಸಂಜೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಕಳ್ಳರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತು ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋದಲ್ಲಿ ಏನಿದೆ?:
ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು ಸಂಜಯ್ ಸಹಾಯ್ ಅವರ ಕೈಯಲ್ಲಿ ಮೊಬೈಲ್ ಇರುವುದನ್ನು ನೋಡುತ್ತಾರೆ. ಬಳಿಕ ಬೈಕ್ ನಿಲ್ಲಿಸಿ ಒಬ್ಬ ಕಳ್ಳ ವಾಪಾಸ್ ಹೋಗಿ ಮೊಬೈಲ್ ಕಿತ್ತುಕೊಂಡು ಓಡಲು ಆರಂಭಿಸುತ್ತಾನೆ. ತಕ್ಷಣವೇ ಸಂಜಯ್ ಅವರು ಕಳ್ಳನ ಹಿಂದೆ ಓಡುತ್ತಾರೆ. ಆದರೆ ಬೈಕ್ ಮೇಲೆ ಬಂದ ವ್ಯಕ್ತಿಯು ಮೊಬೈಲ್ ಹಿಡಿದು ಓಡುತ್ತಿದ್ದ ಕಳ್ಳನನ್ನು ಹತ್ತಿಸಿಕೊಂಡು ಪರಾರಿಯಾಗುತ್ತಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *