33 ಸೆಕೆಂಡ್‌ನಲ್ಲಿ 33 ಲಕ್ಷ ದೋಚಿದ ಖದೀಮರು – ಕಾರಿನ ಗ್ಲಾಸ್ ಒಡೆದು ಕಳ್ಳತನ

ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು, 33 ಸೆಕೆಂಡ್‌ನಲ್ಲಿ ಕಾರಿನಲ್ಲಿದ್ದ 33 ಲಕ್ಷ ರು. ಹಣವನ್ನು ಖದೀಮರು ದೋಚಿರುವ ಘಟನೆ ಹಾವೇರಿ (Haveri) ನಗರದಲ್ಲಿ ನಡೆದಿದೆ.

ಬಸವೇಶ್ವರ ನಗರದ ಹತ್ತನೇ ಕ್ರಾಸ್‌ನಲ್ಲಿರುವ ಸಂತೋಷ್ ಹಿರೇಮಠ ಎಂಬುವರಿಗೆ ಸೇರಿದ ನಗದು ಕಳ್ಳತನವಾಗಿದೆ.

ಸಿವಿಲ್ ಕಾಂಟ್ರ‍್ಯಾಕ್ಟರ್ ಆಗಿರುವ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಹಣ ಡ್ರಾ ಮಾಡಿಕೊಂಡಿದ್ದರು. ಡ್ರಾ ಮಾಡಿದ ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟಿದ್ದರು. ಇದನ್ನೂ ಓದಿ: ಚಾಮರಾಜನಗರ: 4 ಕರುಗಳನ್ನು ಕೊಂದಿದ್ದ ಚಿರತೆ ಕೊನೆಗೂ ಸೆರೆ

ಸಂತೋಷ್ ಮಾ.6ರಂದು ಸಂಜೆ 4:05ಕ್ಕೆ ಮನೆ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿದ್ದರು. ಮನೆಯಲ್ಲಿ ಊಟ ಮಾಡಿ ವಾಪಸ್ ಸಂಜೆ 5:20ಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

2 ಬೈಕ್‌ಗಳಲ್ಲಿ ಬಂದಿದ್ದ 4 ಜನ ಕಳ್ಳರಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್‌ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ರಾಯಚೂರು ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 26 ಸಾವಿರ ರೂ. ದಂಡ

ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ ಎಂದು ತಿಳಿಸಿದರು