ತಮ್ಮದೇ ರಾಜಕೀಯ ನಡೆಸಲು ನನ್ನನ್ನು ಪಕ್ಷದಿಂದ ಬಿಡಿಸಿದ್ರು: ಜಾಧವ್ ಕಿಡಿ

– ಕಾಂಗ್ರೆಸ್ ಪಕ್ಷದ್ದೂ ಲೋ ಲೆವೆಲ್ ರಾಜಕೀಯ

ಕಲಬುರಗಿ: ಜಿಲ್ಲೆಯಲ್ಲಿ ತಮ್ಮದೇ ರಾಜಕೀಯ ನಡೆಯಬೇಕು ಎನ್ನುವ ಒಂದೇ ಉದ್ದೇಶಕ್ಕಾಗಿ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಶಾಸಕ ಉಮೇಶ್ ಜಾಧವ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ನಾನು ಯಾಕೆ ಪಕ್ಷ ಬಿಟ್ಟಿದ್ದು ಎಂದು ಪ್ರಿಯಾಂಕ್ ಖರ್ಗೆಗೆ ಗೊತ್ತು. ಕಲಬುರಗಿಯಲ್ಲಿ ತಮ್ಮದೇ ರಾಜಕೀಯ ನಡೀಬೇಕು ಎಂದು ಉದ್ದೇಶಪೂರ್ವಕವಾಗಿ ಅವರೇ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಆರೋಪಿಸಿದರು.

`ಜಂಪಿಂಗ್ ಜಾಧವ್’ ಎಂಬ ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೈ ಪಕ್ಷ ಬಿಟ್ಟು ದೇವರಾಜ ಅರಸು ಜೊತೆಗೆ ಹೋದಾಗ ಜಂಪಿಂಗ್ ಆಗಲಿಲ್ವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು.

ಮೈತ್ರಿ ಸರ್ಕಾರ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಅವರು ನನ್ನ ಬೈಯ್ಯುವುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದವರದ್ದು ಅಭಿವೃದ್ಧಿ ಇಲ್ಲದ ಲೋ ಲೆವೆಲ್ ರಾಜಕೀಯ ಎಂದರು. ಬಳಿಕ ಇಂದು ನಡೆಯುತ್ತಿರುವ ಚಿಂಚೊಳ್ಳಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬೆಡಸೂರ ಗ್ರಾಮದಲ್ಲಿ ಮತದಾನ ಬಳಿಕ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಡಿಸಿದರು.

ಅಷ್ಟೇ ಅಲ್ಲದೆ `ಡಾಕ್ಟರ್ ಇದ್ದಾರೆ ಆಪರೇಷನ್ ಮಾಡುತ್ತಾರೆ ಎಂದು ಪಕ್ಷಕ್ಕೆ ಕರೆತಂದರೆ ಡಾ.ಜಾಧವ್ ಅಬಾರ್ಷನ್ ಮಾಡಿ ಹೋಗಿದ್ದಾರೆ’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ತಾಯಿ ಹೆಲ್ತ್ ಕೆಡಬಾರದು ಎಂದು ಅಬಾರ್ಷನ್ ಮಾಡಿದ್ದೇವೆ. ಅದನ್ನ ಇನ್ವೈಟೇಬಲ್ ಅಬಾರ್ಷನ್ ಎಂದು ಕರೀತೀವಿ. ಅಬಾರ್ಷನ್ ಮಾಡದಿದ್ದರೆ ಮಗು ಆರೋಗ್ಯವೂ ಕೆಡುತಿತ್ತು, ತಾಯಿ ಆರೋಗ್ಯವೂ ಕೆಡುತಿತ್ತು ಎಂದು ಜಾಧವ್ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *