ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗಳನ್ನೇ ಕೊಂದು ಮನೆಯಲ್ಲೇ ಹೂತಿಟ್ರು!

ಲಕ್ನೋ: ಆರೋಗ್ಯವಂತ ಮಗುವನ್ನು ಪಡೆಯಲು ಮಂತ್ರವಾದಿಯ ಮಾತು ಕೇಳಿ ದಂಪತಿಯು ತಮ್ಮ 6 ವರ್ಷದ ಮಗಳನ್ನು ಕೊಂದು ಮನೆಯಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ.

6 ವರ್ಷದ ಬಾಲಕಿ ತಾರಾ ತನ್ನ ಪೋಷಕರಿಂದಲೇ ಹತ್ಯೆಗೀಡಾದ ದುರ್ದೈವಿ. ತಾರಾ ಹುಟ್ಟಿನಿಂದಲೂ ಅಪೌಷ್ಟಿಕತೆ ಹಾಗೂ ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಗೆ ಹಲವು ವರ್ಷಗಳಿಂದಲೂ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ. ಇದರಿಂದ ರೋಸಿಹೋದ ಪೋಷಕರು ಕೊನೆಗೆ ಮಂತ್ರವಾದಿಯ ಮೊರೆ ಹೋಗಿದ್ದರು.

ಮಂತ್ರವಾದಿಯು ದಂಪತಿಗೆ ನಿಮ್ಮ ಬದುಕಿರುವ ಮಗಳನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿದರೆ, ಮುಂದೆ ನಿಮಗೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂದು ಸಲಹೆ ನೀಡಿದ್ದಾನೆ. ಈತನ ಸಲಹೆಯಿಂದ ಪ್ರಭಾವಿತರಾದ ದಂಪತಿ ತಮ್ಮ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಅಲ್ಲದೇ ಬಾಲಕಿಯನ್ನು ಹೂತುಹಾಕುವ ವೇಳೆ ನೆರೆಮನೆಯ ಸದಸ್ಯರು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಾಲಕಿಯು ಮೃತಪಟ್ಟಾಗ ಆಕೆ ಯಾವುದೇ ಆಹಾರವನ್ನು ಸೇವಿಸಿರಲಿಲ್ಲ ಹಾಗೂ ತುಂಬಾ ಒದ್ದಾಡಿ ಮೃತಪಟ್ಟಿದ್ದಾಳೆಂದು ವರದಿ ಬಂದಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ರವೀಂದ್ರ ಗೌರ್, ಬಾಲಕಿಯು ಅಪೌಷ್ಠಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಮಂತ್ರವಾದಿಯ ಮಾತನ್ನು ಕೇಳಿ, ಪೋಷಕರೆ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರನ್ನು ಬಂಧಿಸಿದ್ದು, ಕೃತ್ಯಕ್ಕೆ ಸಹಕರಿಸಿದ ಆಕೆಯ ಅಜ್ಜಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *