10 ವರ್ಷಗಳ ಹಿಂದೆ ಸೈಕಲ್ ಕೂಡ ಇರ್ಲಿಲ್ಲ, ಈಗ ಕೋಟಿ ಒಡೆಯ – 5 ವರ್ಷಗಳಿಂದ ಹೂವಿನ ಅಲಂಕಾರ ಸೇವೆ

ಉಡುಪಿ: ವ್ಯಕ್ತಿಯೊಬ್ಬರು ದೇವರಿಗೆ ಹರಕೆ ಹೊತ್ತು ಕಳೆದ 5 ವರ್ಷದಿಂದ ಉಡುಪಿಯ ಅಂಬಲ್ಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಗಳಿಗೆ ಹೂವಿನ ಅಲಂಕಾರದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ರಮೇಶ್ ಬಾಬು ಅವರು ವಿಭಿನ್ನ ಹರಕೆ ಹೊತ್ತು, ಪ್ರತೀ ವರ್ಷ ದೇವರನ್ನು ನಂದನವನದಲ್ಲಿ ಕುಳ್ಳಿರಿಸುತ್ತಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದವರಾದ ರಮೇಶ್, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲೂ ಇರಲಿಲ್ಲ. ಆದರೆ ಇವತ್ತಿಗೆ ಕೋಟಿಗಳ ಒಡೆಯರಾಗಿದ್ದಾರೆ. ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ. ಆದ್ದರಿಂದ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ನಾನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಆಷಾಢ ಶುಕ್ರವಾರದಂದು ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರುತ್ತಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಇಂದು ಪರಿವರ್ತನೆಗೊಂಡಿದೆ. ಈ ರೀತಿಯ ಹರಕೆ ನೀಡುತ್ತಿರುವುದು ಐದನೇ ಬಾರಿಯಾಗಿದೆ ಎಂದು ಭಕ್ತರಾದ ಮಂಜುಳಾ ಮತ್ತು ಶರಣ್ಯ ಹೇಳಿದ್ದಾರೆ.

ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. 50 ಮಂದಿ ಯುವಕರು ಉಚಿತವಾಗಿ ಸಿಂಗಾರ ಸೇವೆಯನ್ನು ಮಾಡಿದ್ದರು.

Comments

Leave a Reply

Your email address will not be published. Required fields are marked *