ಮಂಗಳೂರು: ಬಶೀರ್ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಕೈದಿಗಳೇ ಒಳಸಂಚು ರೂಪಿಸಿದ ವಿಚಾರ ತಡವಾಗಿ ಬಯಲಾಗಿದೆ.
ಕಳೆದ ಜನವರಿ 3ರಂದು ದೀಪಕ್ ಹತ್ಯೆಯಾದ ದಿನವೇ ಸಂಜೆ ಬಶೀರ್ ಹತ್ಯೆಯ ಆರೋಪಿಗಳಲ್ಲಿ ಒಬ್ಬಾತ ಮಂಗಳೂರು ಜೈಲಿಗೆ ಭೇಟಿ ನೀಡಿದ್ದು ವಿಚಾರಣಾಧೀನ ಕೈದಿಗಳಾದ ಕಲ್ಲಡ್ಕ ಮಿಥುನ್ ಮತ್ತು ತಿಲಕರಾಜ್ ಶೆಟ್ಟಿ ಜೊತೆಗೆ ಮಾತುಕತೆ ನಡೆಸಿದ್ದ. ದೀಪಕ್ ರಾವ್ ಹತ್ಯೆಗೆ ರಿವೇಂಜ್ ತೀರಿಸುವಂತೆ ನೀಡಿದ ನಿರ್ದೇಶನದಂತೆ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ನಡೆಸುತ್ತಿದ್ದ ಬಶೀರ್ ಮೇಲೆ ದಾಳಿ ಮಾಡಿದ್ದರು. ಹೀಗಾಗಿ ಮಿಥುನ್, ತಿಲಕರಾಜ್ ಶೆಟ್ಟಿ, ರಾಜು ಮತ್ತು ಅನೂಪ್ ವಿರುದ್ಧ ಸಂಚು ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿದ್ದಾರೆ.

ಸದ್ಯಕ್ಕೆ ಈ ಆರೋಪಿಗಳು ಬೆಂಗಳೂರು, ಬಳ್ಳಾರಿ, ಬೆಳಗಾವಿ ಜೈಲಿನಲ್ಲಿದ್ದು ಕೋರ್ಟ್ ಮೂಲಕ ಬಾಡಿ ವಾರೆಂಟ್ ಪಡೆಯಬೇಕಿದೆ. ಅನೂಪ್ ಮಂಗಳೂರಿನ ಆಕಾಶಭವನ ನಿವಾಸಿಯಾಗಿದ್ದು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಂಗಳೂರು ಜೈಲಿನಲ್ಲಿ ಗಲಾಟೆ ನಡೆಸಿದ ಆರೋಪದಲ್ಲಿ ಕೈದಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಾಲ್ವರು ಆರೋಪಿಗಳಾದ ಶ್ರೀಜಿತ್ ಪಿ.ಕೆ(25), ಕಿಶನ್ ಪೂಜಾರಿ(21), ಧನುಷ್ ಪೂಜಾರಿ(22) ಹಾಗೂ ಸಂದೇಶ್ ಕೋಟ್ಯಾನ್ (22) ಎಂಬವರನ್ನ ಬಂಧಿಸಲಾಗಿತ್ತು. ಶ್ರೀಜಿತ್ ಕಾಸರಗೋಡಿನ ಉಪ್ಪಳದ ಮಂಗಲ್ಪಾಡಿ ನಿವಾಸಿ, ಸಂದೇಶ್ ಮಂಜೇಶ್ವರದ ಕುಂಜತ್ತೂರು ನಿವಾಸಿ, ಕಿಶನ್ ಮತ್ತು ಧನುಷ್ ಮಂಗಳೂರಿನ ಪಡೀಲ್ ನಿವಾಸಿಗಳು.

ಅನಂತರ ಮತ್ತಿಬ್ಬರಾದ ಕಾಸರಗೋಡಿನ ಲತೀಶ್(24) ಹಾಗೂ ಪುಷ್ಪರಾಜ್(23) ಸೇರಿದಂತೆ ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಜ.3 ರಂದು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಶೀರ್ ಮೇಲೆ 7 ಜನರ ತಂಡವೊಂದು ತಲ್ವಾರ್ ದಾಳಿ ನಡೆಸಿತ್ತು. ಪರಿಣಾಮ ಗಂಟಲು, ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಬಶೀರ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಜ.7 ರಂದು ಬಶೀರ್ ಮೃತಪಟ್ಟಿದ್ದರು.
https://www.youtube.com/watch?v=prf8LAzRcus
https://www.youtube.com/watch?v=nqZ3ZShX1q0
https://www.youtube.com/watch?v=82lslIp7u0w
https://www.youtube.com/watch?v=XIln_78eJlQ







Leave a Reply