ಯಾವ ವಿಕಾಸವೂ ಆಗಿಲ್ಲ, ಅಚ್ಛೇ ದಿನ್ ಎಲ್ಲಿದೆ: ಡಿಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಈ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ ಯಾವ ಸಾಧನೆಯನ್ನು ಮಾಡಿಲ್ಲ. ಯಾವ ವಿಕಾಸವೂ ಆಗಿಲ್ಲ. ಅಚ್ಛೇ ದಿನ್ ಎಲ್ಲಿದೆ ಎಂದು ನೀವೇ ನೋಡಿ ಹೇಳಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಮೋದಿ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಬಗ್ಗೆ ಕುಮಾರಕೃಪಾದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ದ್ವೇಷದ ರಾಜಕಾರಣ ಬಿಟ್ಟು ಬೇರೇನು ನಡೆದೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಐಟಿ ರೇಡ್ ಮಾಡಿಸುತ್ತಿದ್ದಾರೆ. ಕೆಲವರ ಫೋನ್ ಟ್ರ್ಯಾಪ್ ಆಗುತ್ತಿದೆ ಅನ್ನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಮಾಧ್ಯಮದವರೇ ತನಿಖೆ ಮಾಡಲಿ. ಕಣ್ಣೊರೆಸಲು ಬಿಜೆಪಿ ಪಕ್ಷದವರ ಮೇಲೆ ಐಟಿ ರೇಡ್ ನಾಟಕ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.

ನಾನು ಕೈ ಕಾರ್ಯಕರ್ತ: ಜೆಡಿಎಸ್ ರೆಬೆಲ್‍ಗಳಿಗೆ ನಾನು ಟಿಕೆಟ್ ಭರವಸೆ ನೀಡಿಲ್ಲ. ನಾನು ಕೇವಲ ಕಾಂಗ್ರೆಸ್ ಕಾರ್ಯಕರ್ತ. ಹಿಂದಿನ ಉಸ್ತುವಾರಿ ದಿಗ್ವಿಜಯ್ ಸಿಂಗ್, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಭರವಸೆ ಕೊಟ್ಟವರು. ಅವರೇ ಅದನ್ನ ತೀರ್ಮಾನಿಸುತ್ತಾರೆ. ನನಗೆ ಟಿಕೆಟ್ ಬಗ್ಗೆ ಗೊತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಜಾರಿಕೊಂಡರು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಿರ್ಧರಿಸಲಿದ್ದಾರೆ. ಚುನಾವಣೆ ಎದುರಿಸಲು ಕಾರ್ಯಕರ್ತನಿಂದ ಮೇಲ್ಮಟ್ಟದ ನಾಯಕರು ಸಜ್ಜಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕೆಂದು ಚರ್ಚೆ ನಡೆಯುತ್ತಿದೆ. ನಾನು ಪಕ್ಷದ ಕಾರ್ಯಕರ್ತ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

Comments

Leave a Reply

Your email address will not be published. Required fields are marked *