ಮನೆಗಳ್ಳರ ಬಂಧನ- ಎರಡೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಶಿವಮೊಗ್ಗ: ಭದ್ರಾವತಿ ಹಳೇನಗರ ಮತ್ತು ಶಿರಾಳಕೊಪ್ಪ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲೆಯ ಭದ್ರಾವತಿಯ ಲೋಯರ್ ಹುತ್ತಾ ಕಾಲೋನಿ ನಿವಾಸಿ ವೆಂಕಟೇಶ್ ಅಲಿಯಾಸ್ ಕೆಮ್ಮಣ್ಣುಗುಂಡಿ (44) ಹಾಗೂ ಹಾವೇರಿ ಜಿಲ್ಲೆಯ ಮತ್ತಿಹಳ್ಳಿ ಗ್ರಾಮದ ಬಸವರಾಜ್ ದಾನಪ್ಪ ಶೇಷಗಿರಿ (41) ಬಂಧಿತರು. ಬಂಧಿತರಿಂದ 2.40 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಫೆ.24 ರಂದು ಭದ್ರಾವತಿ ಬಳೆಗಾರರ ಬೀದಿಯ ಮನೆಯೊಂದರ ಬಾಗಿಲು ಮುರಿದು ಆರೋಪಿ ವೆಂಕಟೇಶ್ ಚಿನ್ನ ಕಳವು ಮಾಡಿದ್ದ. ಈ ಬಗ್ಗೆ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 1.20 ಲಕ್ಷ ರೂ. ಮೌಲ್ಯದ 40 ಗ್ರಾಂ. ಚಿನ್ನದ ಆಭರಣ ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯ ತಡಗಣಿ ಗ್ರಾಮದ ಮನೆಯೊಂದರಲ್ಲಿ ಕಳವು ಮಾಡಿದ್ದ ಮತ್ತಿಹಳ್ಳಿ ಗ್ರಾಮದ ಬಸವರಾಜ್‍ನನ್ನು ಬಂಧಿಸಿದ್ದಾರೆ. ಈತನಿಂದ 1.28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಎರಡೂ ಪ್ರಕರಣಗಳ ಆರೋಪಿಗಳನ್ನು ಬಂಧಿಸಿರುವ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *