ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

ತುಮಕೂರು: ನಿವೃತ್ತಿ ಸಂದರ್ಭದಲ್ಲಿ ಬಂದ ಹಣ ಕಿತ್ತುಕೊಂಡು ವೃದ್ಧ ತಂದೆಯನ್ನು ಮಕ್ಕಳು ಬೀದಿಗೆ ತಳ್ಳಿರೋ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೆಎಸ್‍ಆರ್‍ಟಿಸಿ ನಿವೃತ್ತ ನೌಕರರೊಬ್ಬರು ಮಕ್ಕಳಿಂದ ಮನೆ ಮಠ, ಪಿಂಚಣಿ ಹಣ ಎಲ್ಲವನ್ನೂ ಕಳೆದುಕೊಂಡು ಫುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದಾರೆ. ರಾಮಚಂದ್ರಪ್ಪ ಮಕ್ಕಳಿಂದ ದೌರ್ಜನ್ಯಕ್ಕೊಳಗಾಗಿ ಬೀದಿ ಪಾಲಾದವರು.

ಕಳೆದ ಒಂದು ವಾರದಿಂದ ತುಮಕೂರಿನ ರೇಲ್ವೆ ನಿಲ್ದಾಣದ ಬಳಿಯ ಫುಟ್‍ಪಾತ್ ನಲ್ಲಿ ಮಲಗುತ್ತಿದ್ದಾರೆ. ದಾರಿ ಹೋಕರು, ತರಕಾರಿ ಮಾರುವವರು ಕೊಟ್ಟ ಹಣದಿಂದ ಊಟ ತಿಂಡಿ ಸೇವಿಸುತಿದ್ದಾರೆ. ಮೈಸೂರಿನ ಡಿಪೋ ನಂಬರ್ 2 ರಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದ ಇವರು ಐದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದಾರೆ. ಕೆಎಸ್‍ಆರ್‍ಟಿಸಿಯಲ್ಲಿ ಇವರ ದಾಖಲಾತಿ ಸಂಖ್ಯೆ-1926 ಆಗಿರುತ್ತದೆ.

ನಿವೃತ್ತಿ ಸಂದರ್ಭದಲ್ಲಿ ಬಂದಂತಹ 20 ಲಕ್ಷ ರೂಪಾಯಿ ಹಾಗೂ ಪಿಂಚಣಿ ಹಣ ಬರುವ ದಾಖಲೆ ಎಲ್ಲವನ್ನೂ ಮಕ್ಕಳು ಕಿತ್ತುಕೊಂಡಿದ್ದಾರೆ ಎಂದು ರಾಮಚಂದ್ರಪ್ಪ ಹೇಳುತ್ತಾರೆ. ಮೈಸೂರಿನ ನಜರಾಬಾದ್ ನಿವಾಸಿಯಾದ ರಾಮಚಂದ್ರಪ್ಪ ಇದೀಗ ಕೆಲಸ ಹುಡುಕಿಕೊಂಡು ತುಮಕೂರಿಗೆ ಬಂದಿದ್ದಾರೆ.

ಇವರು ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಲ್ಲಳ್ಳಿ ಗ್ರಾಮದವರಾಗಿದ್ದು, ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ ಮೈಸೂರಿನಲ್ಲೇ ಮನೆ ಕಟ್ಟಿಕೊಂಡು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೂ ನಾನು ಬೀದಿಗೆ ಬಂದಿದ್ದೇನೆ ಎಂದು ರಾಮಚಂದ್ರಪ್ಪ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾರೆ.

 

Comments

Leave a Reply

Your email address will not be published. Required fields are marked *