ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್‌ರನ್ನು ಭೇಟಿ ಮಾಡಿದ ರಕ್ಷ್

ಬೆಂಗಳೂರು: ಕಿರುತೆರೆ ನಟ, ಗಟ್ಟಿಮೇಳ ಖ್ಯಾತಿಯ ವೇದಾಂತ್ ಪಾತ್ರಧಾರಿಯ ರಕ್ಷ್ ಅವರು ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

ಇತ್ತೀಚೆಗೆ ರಕ್ಷ್, ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಈ ಲೆಜೆಂಡ್ ಅನ್ನು ಭೇಟಿ ಆದ ಕ್ಷಣ ಸುಂದರವಾಗಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ನಿಮ್ಮ ಜೀವನದಲ್ಲಿ ನೀವು ಭೇಟಿಯಾದ ನೂರು ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀವು ನೂರು ಪುಸ್ತಕಗಳನ್ನು ಓದಿದ್ದೀರಿ ಎಂದು ಅರ್ಥ. ನೀವು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ. ಕೆಲವು ಬೋರಿಂಗ್, ಕೆಲವು ಅದ್ಭುತ, ಕೆಲವು ಶಕ್ತಿಯುತ, ಕೆಲವು ದುರ್ಬಲ. ಆದರೆ ಅವೆಲ್ಲವೂ ಬಹಳ ಉಪಯೋಗವಾಗಿದೆ. ಏಕೆಂದರೆ ಅವೆಲ್ಲವೂ ವಿಭಿನ್ನ ಅನುಭವಗಳನ್ನು ಹೊಂದಿದೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಕಳೆದ ತಿಂಗಳು ರಕ್ಷ್ ತಮ್ಮ ಹುಟ್ಟುಹಬ್ಬಕ್ಕಾಗಿ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದರು. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದರು. ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದರು. ರಕ್ಷ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರಿದ್ದರು.

ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಮುಗಿದ ಕೆಲವು ದಿನಗಳ ನಂತರ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಸದ್ಯ ರಕ್ಷ್ ಇದೀಗ `ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *