ನಾಗಾರ್ಜುನಗೆ ಬಿಗ್ ರಿಲೀಫ್- ಎನ್ ಕನ್ವೆನ್ಷನ್ ಸೆಂಟರ್ ಕಟ್ಟಡ ತೆರವಿಗೆ ಹೈಕೋರ್ಟ್‌ ತಡೆ

ತೆಲುಗು ನಟ ನಾಗಾರ್ಜುನಗೆ (Nagarjuna) ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಸೆಂಟರ್ ಕೆಡವದಂತೆ ತೆಲಂಗಾಣ ಹೈಕೋರ್ಟ್ (Telangana High Court) ಮಧ್ಯಂತರ ಆದೇಶ ನೀಡಿದೆ.

ಹೈದರಾಬಾದ್‌ನ ಮದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ಕೆಲ ಭಾಗಗಳನ್ನು ಇಂದು (ಆ.24) ಹೈಡ್ರಾ (HYDRA) ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ವಿವಾದ ಕೋರ್ಟ್‌ನಲ್ಲಿದ್ರೂ ನೋಟಿಸ್ ನೀಡದೇ ತೆರವು ಮಾಡಲಾಗಿದೆ ಎಂದು ನಾಗಾರ್ಜುನ ಮತ್ತೆ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇದನ್ನೂ ಓದಿ:ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

ಅಂದ ಹಾಗೆ, ಅಕ್ಕಿನೇನಿ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಹಾಲ್ ಅನ್ನು ಇಂದು (ಆ.24) ನೆಲಸಮಗೊಳಿಸಲಾಗಿದೆ. ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಸಂಸ್ಥೆ) ಸಂಸ್ಥೆ ಶನಿವಾರ ಆಸ್ತಿಯನ್ನು ನೆಲಸಮಗೊಳಿಸಿದೆ.

10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್‌ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.