ಕಲ್ಕೆರೆಯಲ್ಲಿ ಟೆಕ್ಕಿ ನಾಪತ್ತೆ ಪ್ರಕರಣ – 2ನೇ ದಿನವೂ ಮುಂದುವರಿದ ಶೋಧಕಾರ್ಯ

ಬೆಂಗಳೂರು: ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ನಾಪತ್ತೆ ಹಿನ್ನೆಲೆಯಲ್ಲಿ ಇಂದು ಕೂಡ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ಶುರುಮಾಡಿದ್ದಾರೆ.

ಶನಿವಾರ ಬೆಳಗಿನ ಜಾವ 3 ಗಂಟೆಗೆ ಸಚಿನ್ ಮತ್ತು ಉಲ್ಲಾಸ್ ಇಬ್ಬರು ಟೆಕ್ಕಿಗಳು ಕಲ್ಕೆರೆಯ ಕೆರೆಯಲ್ಲಿ ಮಧ್ಯದ ಐಲ್ಯಾಂಡ್‍ಗೆ ಹೊರಟಿದ್ದರು. ಸುಮಾರು ನೂರು ಮೀಟರ್ ಕೆರೆಯ ಒಳಗೆ ಹೋಗುತ್ತಿದ್ದಂತೆ ಹುಟ್ಟು ಜಾರಿ ಬಿದ್ದು, ಬರಿ ಕೈಯಲ್ಲಿ ತೆಪ್ಪ ತಳ್ಳುವ ವೇಳೆ ಮುಗುಚಿ ಬಿದ್ದು ಇಬ್ಬರು ನೀರಲ್ಲಿ ಮುಳುಗಿದರು. ಇದನ್ನೂ ಓದಿ: ಕೆರೆಯಲ್ಲಿ ತೆಪ್ಪ ಮುಗುಚಿ ಟೆಕ್ಕಿ ಕಣ್ಮರೆ – ಪಾರ್ಟಿ ಅಮಲಿನಲ್ಲಿ ಮುಳುಗಿದ್ರು

ಟೆಕ್ಕಿ ಉಲ್ಲಾಸ್ ಈಜಿ ದಡ ಸೇರಿದರೆ, ಮತ್ತೊಬ್ಬ ಟೆಕ್ಕಿ ಸಚಿನ್ ನೀರಿನಲ್ಲಿ ಮುಳುಗಿದರು. ವಿಷಯ ತಿಳಿದು ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶನಿವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು. ಸಂಜೆ ವೇಳೆ ಮುಗುಚಿ ಬಿದ್ದ ತೆಪ್ಪ ಪತ್ತೆಯಾಗಿತ್ತು. ಆದರೆ ಟೆಕ್ಕಿ ಸಚಿನ್ ಎಲ್ಲೂ ಪತ್ತೆಯಾಗಿರಲಿಲ್ಲ.

ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸಿಬ್ಬಂದಿ ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇಡೀ ಕೆರೆಯಲ್ಲಿ ಹುಡುಕಾಟ ನಡೆದಿದ್ದು, ಇಲ್ಲಿವರೆಗೂ ಟೆಕ್ಕಿ ಸಚಿನ್ ಪತ್ತೆಯಾಗಿಲ್ಲ. ಇಂದೂ ಕೂಡ ಮುಳುಗು ತಜ್ಞರು ಕೆರೆಯಲ್ಲಿ ಇಳಿಯಲಿದ್ದು, ಹೈ ಕ್ವಾಲಿಟಿ ಕ್ಯಾಮೆರಾ ಬಳಸಿ ಕೆರೆಯಲ್ಲಿ ಶೋಧ ನಡೆಸಲಿದ್ದಾರೆ.

Comments

Leave a Reply

Your email address will not be published. Required fields are marked *