ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನ ಪ್ರೇಮಿ- ಟೆಕ್ಕಿ ಯುವತಿ ಸಾವು

ಚೆನ್ನೈ: ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಟೆಕ್ಕಿ ಯುವತಿ ಸಾವನ್ನಪ್ಪಿದ್ದು, ಆಕೆಯ ತಾಯಿ ಹಾಗೂ ಸಹೋದರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಆಡಂಬಕ್ಕಂನ ಸರಸ್ವತಿ ನಗರದ ಎಜಿಎಸ್ ಕಾಲೋನಿಯಲ್ಲಿ ನಡೆದಿದೆ.

ಆರೋಪಿ ಅಶೋಕ್ ಕಳೆದ ಕೆಲವು ವರ್ಷಗಳಿಂದ ಟೆಕ್ಕಿ ಇಂದುಜಾ ಅವರ ಹಿಂದೆ ಬಿದ್ದಿದ್ದ. ಇಬ್ಬರೂ ಒಂದೇ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಇಂದುಜಾ ಐಟಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆದ್ರೆ ಅಶೋಕ್ ಮಾತ್ರ ಆಕೆಯ ಬೆನ್ನು ಬಿದ್ದಿದ್ದ. ಈತ ಇಂದುಜಾಗೆ ಪ್ರಪೋಸ್ ಕೂಡ ಮಾಡಿದ್ದು, ಆಕೆ ನಿರಾಕರಿಸಿದ್ದರು ಎನ್ನಲಾಗಿದೆ.

ಸೋಮವಾರ ಸಂಜೆ ಕೂಡ ಅಶೋಕ್ ಇಂದುಜಾ ಮನೆಯ ಬಳಿ ಬಂದಿದ್ದಾನೆ. ಆದ್ರೆ ಇಂದುಜಾ ತಾಯಿ ರೇಣುಕಾ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ನಾನು ಕೆಲವೇ ನಿಮಿಷ ಇಂದುಜಾ ಜೊತೆ ಮಾಡನಾಡಬೇಕೆಂದು ಹೇಳಿದ ಅಶೋಕ್, ಬಾಗಿಲು ತೆರೆಯಲು ಒತ್ತಾಯಿಸಿದ್ದಾನೆ. ಇಂದುಜಾ ತಾಯಿ ಬಾಗಿಲು ತೆಗೆದ ಕೂಡಲೇ ಇಂದುಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಬಂದ ತಾಯಿ ರೇಣುಕಾ ಅವರ ಮೇಲೂ ಪೆಟ್ರೋಲ್ ಬಿದ್ದಿದೆ. ಬಳಿಕ ಇಂದುಜಾ ರಕ್ಷಣೆಗೆ ಬಂದ ಸಹೋದರಿ ನಿವೇದಿತಾಗೆ ಕೂಡ ಸುಟ್ಟ ಗಾಯಗಳಾಗಿವೆ.

ನಂತರ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದು, ಕೂಡಲೇ ಮೂವರನ್ನೂ ಕಿಲ್ಪಾಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದುಜಾ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ರೇಣುಕಾ ಅವರಿಗೆ 49% ಸುಟ್ಟ ಗಾಯಗಳಾಗಿದ್ದು, ನಿವೇದಿತಾಗೆ 23% ಸುಟ್ಟ ಗಾಯಗಳಾಗಿವೆ.

ಆರೋಪಿ ಅಶೋಕ್ ಸದ್ಯ ತಲೆಮರೆಸಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *