ಚಕ್ರವ್ಯೂಹ ಬೇಧಿಸುವ ಅಭಿಮನ್ಯುವಿನ ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜಗಮಗ

ಬೆಂಗಳೂರು: ಸ್ಯಾಂಡಲ್‍ವುಡ್ ನ ದೊಡ್ಡ ಬಜೆಟ್‍ನ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’. ಸಿನಿಮಾ ಸೆಟ್ಟೇರಿದಾಗಿನಿಂದಲೂ ಪ್ರತಿದಿನ ಒಂದಿಲ್ಲ ಒಂದು ಸುದ್ದಿಗಳಿಂದ ಕುರುಕ್ಷೇತ್ರ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದೆ. ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುಪುತ್ರ ನಿಖಿಲ್ ಅಭಿನಯಿಸಿದ ಅಭಿಮನ್ಯು ಪಾತ್ರದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಟೀಸರ್ ಅದ್ಧೂರಿತನದಿಂದ ಕೂಡಿದ್ದು, ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಅರ್ಜುನ್ ಮತ್ತು ಸುಭದ್ರೆಯ ಮಗನಾದ ಅಭಿಮನ್ಯು ಯುದ್ಧಕ್ಕೆ ತೆರಳುವ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಯುದ್ಧದ ಸನ್ನಿವೇಶ ಮತ್ತು ಚಕ್ರವ್ಯೂಹದ ರೂಪುರೇಷಗಳ ಒಂದು ಝಲಕ್ ತೋರಿಸಲಾಗಿದೆ. ಅಭಿಮನ್ಯು ಮಹಾಭಾರತದಲ್ಲಿ ಶೌರ್ಯದ ಪ್ರತೀಕವಾಗಿ ನಿಲ್ಲುತ್ತಾನೆ. ಅಂತಹ ಗಾಂಭೀರ ಪಾತ್ರದಲ್ಲಿ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಅಮೋಘವಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿರೋದು ಟೀಸರ್ ನಲ್ಲಿ ಕಾಣಬಹುದು.

ಚಕ್ರವ್ಯೂಹ ಬೇಧಿಸುವ ನಿಖಿಲ್(ಅಭಿಮನ್ಯು) ಯುದ್ಧದ ರಣತಂತ್ರಗಳ ಬಗ್ಗೆ ಟೀಸರ್ ಹೇಳುತ್ತಿದೆ. ಆದರೆ Zಅಭಿಮನ್ಯು ಹಿಂದಿರುಗಿ ಬರುವ ರಣತಂತ್ರಗಳು ತಿಳಿಯದೇ ಏಕಾಂಗಿಯಾಗಿ ಹೋರಾಡಿ ವೀರಮರಣ ಹೊಂದುತ್ತಾನೆ.

ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಲಿದ್ದಾರೆ.

ಮುನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿಬರಲಿದೆ.

https://youtu.be/gWVZRqgAwDo

 

 

Comments

Leave a Reply

Your email address will not be published. Required fields are marked *