ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

ಕೊಪ್ಪಳ: ಮೊಬೈಲ್, ಕಂಪ್ಯೂಟರ್ ಬಂದ ಮೇಲೆ ಮಕ್ಕಳ ಸಾಹಿತ್ಯ ನಶಿಸಿ ಹೋಗ್ತಿದೆ. ಆದ್ರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಗ್ರಾಮದ ಶಿಕ್ಷಕರು, ಜನಪ್ರಿಯ ಗೀತೆಗೆ ಸಾಹಿತ್ಯ ಬರೆದಿರೋ ಹಾಡು ಈಗ ಎಲ್ಲಾ ಕಡೆ ಕೇಳಿ ಬರ್ತಿದೆ.

ಹೌದು. ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಅನ್ನೋ ಹಾಡಿಗೆ “ಬಾರೋ ಬೇಗ ನೀನು.. ಶಾಲೆ ಸೇರು ನೀನು.. ನನ್ನ ರಾಜಕುಮಾರ” ಅಂತ ಹೊಸದಾಗಿ ಸಾಹಿತ್ಯ ಬರೆದು ಮಕ್ಕಳನ್ನ ಶಾಲೆಗೆ ಬರುವಂತೆ ಮಾಡಿದ್ದಾರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಶಾಲೆಯ ಶಿಕ್ಷಕ ಸುರೇಶ್ ಕಂಬಳಿ. ಈ ಹಾಡಿಗೆ ದನಿಕೊಟ್ಟವರು ಪಕ್ಕದ ಬರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರೇವಣ್ಣ ಕೋಳೂರು. ಇನ್ನು ಮೇಷ್ಟ್ರ ಈ ಸಾಹಿತ್ಯ-ಗಾಯನಕ್ಕೆ ಮನಸೋತಿರುವ ನಟ ಪುನೀತ್ ಅವರೇ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಇದನ್ನ ಶೇರ್ ಮಾಡಿದ್ದಾರೆ.

ಈ ಹಾಡನ್ನ ಪ್ರತಿದಿನ ಪ್ರಾರ್ಥನೆಯ ಹಾಡಿನಂತೆ ಹಾಡಿಸಲಾಗುತ್ತಿದೆ. ಮಕ್ಕಳೂ ಸಹ ಖುಷಿಯಿಂದ ಹಾಡುತ್ತಿದ್ದಾರೆ. ಈ ಹಾಡಿನ ಜೊತೆಗೆ ಇತರೆ ಹಳೇ ಹಾಡಿಗೆ ಹೊಸ ಸಾಹಿತ್ಯ ಬರೆದು ಹತ್ತು ಹಾಡುಗಳನ್ನ ಒಳಗೊಂಡ ಸಿಡಿಯೊಂದನ್ನು ಹೊರತಂದಿದ್ದಾರೆ.

ಒಟ್ಟಿನಲ್ಲಿ ಮಕ್ಕಳನ್ನ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರ ಈ ಪ್ರಯತ್ನ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Comments

Leave a Reply

Your email address will not be published. Required fields are marked *