ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

ಮೈಸೂರು: ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ, ನಿಮ್ಮ ಧಮ್ಕಿಗೆಲ್ಲ ನಾವು ಹೆದರಲ್ಲ ಅಂತ ಸಂಸದ ಪ್ರತಾಪ್ ಸಿಂಹಗೆ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದರ್ಗಾ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಮೇಲೆ ಕಿಡಿಕಾರಿದರು. ಮೈಸೂರಿನ ಅರಸು ರಸ್ತೆ ಮೊದಲು ಬಂತಾ, ಇಲ್ಲ ದರ್ಗಾ ಮೊದಲು ಬಂತಾ ಅನ್ನುವ ವಿಚಾರ ಈಗ ಕೋರ್ಟ್ ನಲ್ಲಿದೆ. ಆ ದರ್ಗಾ ಇದ್ದದ್ದು ಮನೆಯಲ್ಲಿ ಬಳಿಕ ಅಲ್ಲಿ ರಸ್ತೆ ಆಗಿದೆ. ಕೋರ್ಟ್ ಈ ಸಮಸ್ಯೆಯನ್ನು ಬಗೆಹರಿಸುತ್ತದೆ. ಅದನ್ನು ಬಿಟ್ಟು ಓರ್ವ ಜನಪ್ರತಿನಿಧಿಯಾಗಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.  ಇದನ್ನೂ ಓದಿ: 24 ಗಂಟೆಯೊಳಗೆ ರೈತರ ಪಂಪ್‍ಸೇಟ್‍ಗೆ ಟ್ರಾನ್ಸ್​ಫಾರ್ಮರ್ ವ್ಯವಸ್ಥೆ ಮಾಡಿ: ಸುನಿಲ್ ಕುಮಾರ್

ಇಂತಹ ವಿಚಾರಗಳು ಕಾನೂನಿನ ಮೂಲಕ ಬಗೆಹರಿಯಬೇಕು. ಅದನ್ನು ಬಿಟ್ಟು ಇದರಲ್ಲೂ ರಾಜಕೀಯ ಬೆರೆಸುವುದು ಸರಿಯಲ್ಲ. ನಿಮ್ಮ ಧಮ್ಕಿಗೆಲ್ಲ ಹೆದರಲು ಕೈಗೆ ಬಳೆ ತೊಟ್ಟು ಕುಳಿತಿಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹ ಹೇಳಿದ್ದೇನು..?

ಮೈಸೂರಿನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕುರಿತಾಗಿ ಪ್ರತಾಪ್ ಸಿಂಹ ಕೆಡಿಪಿ ಸಭೆಯಲ್ಲಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇವಲ ಹಿಂದೂ ಧಾರ್ಮಿಕ ಕಟ್ಟಡಗಳನ್ನು ಮಾತ್ರ ತೆರವು ಮಾಡುತ್ತಿದ್ದಿರಾ, ಇದು ತರವಲ್ಲ. ಇದುವರೆಗೂ ಎಷ್ಟು ಅನಧಿಕೃತ ದರ್ಗಾ ಮಸೀದಿಗಳನ್ನು ತೆರವು ಮಾಡಿದ್ದೀರಾ..? ಇರ್ವಿನ್ ರಸ್ತೆಯಲ್ಲಿರುವ ಮಸೀದಿ, ರಸ್ತೆ ಆಗಲೀಕರಣಕ್ಕೆ ತಡೆಯಾಗಿದೆ. ಅಲ್ಲಿನ ಗೋಪುರವನ್ನು ತೆರವು ಮಾಡಲು ನಿಮ್ಮಿಂದ ಆಗಿಲ್ಲ. ದೇವರಾಜ ರಸ್ತೆಯ ಬಳಿ ಅನಧಿಕೃತ ದರ್ಗಾವಿದೆ ಅದನ್ನು ಯಾವಾಗ ತೆರವು ಮಾಡುತ್ತಿರಾ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದರು.  ಇದನ್ನೂ ಓದಿ: ತಂದೆ, ತಾಯಿ ಕಿರುಕುಳಕ್ಕೆ ಮಗ ಆತ್ಮಹತ್ಯೆ

ಅನಧಿಕೃತ ದರ್ಗಾ ಮಸೀದಿಗಳ ತೆರವು ನಿಮ್ಮಿಂದ ಆಗದಿದ್ದರೆ ಹೇಳಿ ನಾವೇ ರಸ್ತೆಗಿಳಿಯುತ್ತೇವೆ. ನಮ್ಮ ಮೇಲೆ ಕೇಸ್ ದಾಖಲಿಸಿದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಹಿಂದೂ ದೇಗುಲಗಳು ಟಾರ್ಗೆಟ್ ಆಗಬಾರದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *