ವೈದ್ಯರ ಎಡವಟ್ಟಿನಿಂದ ಗರ್ಭಿಣಿಗೆ ಎಚ್‍ಐವಿ ಸೋಂಕು

ಚೆನ್ನೈ: ಎಚ್‍ಐವಿ ಸೋಂಕಿತ ವ್ಯಕ್ತಿಯ ರಕ್ತವನ್ನು 24 ವರ್ಷದ ಗರ್ಭಿಣಿಗೆ ವರ್ಗಾವಣೆ ಮಾಡಿದ ಘಟನೆ ತಮಿಳುನಾಡಿನ ವಿರುಧ್‍ನಗರ ಜಿಲ್ಲೆಯ ಸತ್ತೂರ್ ಆಸ್ಪತ್ರೆಯಲ್ಲಿ ನಡೆದಿದ್ದು, ರಾಜ್ಯದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್, ಕೆಲ ದಿನಗಳ ಹಿಂದೆ ಎಚ್‍ಐವಿ ಸೋಂಕಿತ ವ್ಯಕ್ತಿಯೊಬ್ಬ ಸೂಕ್ತ ಮಾಹಿತಿ ನೀಡದೆ ರಕ್ತ ದಾನ ಮಾಡಿದ್ದಾನೆ. ಬಳಿಕ ಆತನ ರಕ್ತದ ಮಾದರಿಯನ್ನು ಸಿಬ್ಬಂದಿ ಪರೀಕ್ಷೆಗೆ ಒಳಪಡಿಸದೆ ಬೇಜವಾಬ್ದಾರಿ ಮೆರೆದಿದ್ದಾರೆ. ಪರಿಣಾಮ ಎಚ್‍ಐವಿ ಸೋಂಕಿತ ವ್ಯಕ್ತಿಯ ರಕ್ತವನ್ನೇ ಗರ್ಭಿಣಿಗೆ ವರ್ಗಾವಣೆ ಮಾಡಿದ್ದರಿಂದ ಎಚ್‍ಐವಿ ತಗುಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವೈದ್ಯರು, ಅಧಿಕಾರಿಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ ಎಚ್‍ಐವಿ ಸೋಂಕಿನ ರಕ್ತವನ್ನು ಗುರುತಿಸಿ, ದಾಖಲಿಸಲು ವಿಫಲರಾಗಿದ್ದರೆ. ಇದು ದುರದೃಷ್ಟಕರ ಸಂಗತಿಯಾಗಿದ್ದು, ಈ ಪ್ರಕರಣದ ಹೊಣೆಗಾರರು ಅಧಿಕಾರಿಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ ಎಂದು ತಿಳಿಸಿದರು.

ಈ ಪ್ರಕರಣವನ್ನು ತಮಿಳುನಾಡು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಎಲ್ಲ ರಕ್ತ ನಿಧಿಗಳಲ್ಲಿರುವ ರಕ್ತವನ್ನು ಎಚ್‍ಐವಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದೆ.

ಏನಿದು ಪ್ರಕರಣ?:
24 ವರ್ಷದ ಮಹಿಳೆಯೊಬ್ಬರು ಎರಡನೇ ಮಗುವಿನ ಹೆರಿಗೆಗಾಗಿ ಸತ್ತೂರ್‍ನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಈ ವೇಳೆ ಆಕೆಗೆ ಹಿಮೋಗ್ಲೋಬಿನ್ ಕೊರತೆ ಕಂಡುಬಂದಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಯ ರಕ್ತನಿಧಿಯಿಂದ ರಕ್ತವನ್ನು ತಂದು ವರ್ಗಾವಣೆ ಮಾಡಲಾಗಿತ್ತು. ಬಳಿಕ ಸರ್ಕಾರಿ ಆಸ್ಪತ್ರೆಯಿಂದ ತಂದಿದ್ದ ರಕ್ತ ಎಚ್‍ಐವಿ ಸೋಂಕಿತ ವ್ಯಕ್ತಿಯದ್ದು ಎಂದು ಬೆಳಕಿಗೆ ಬಂದಿದೆ. ಅಷ್ಟೋತ್ತಿಗಾಗಲೇ ಗರ್ಭಿಣಿ ಎಚ್‍ಐವಿ ಸೋಂಕಿಗೆ ಒಳಗಾಗಿದ್ದರು. ಈ ಪ್ರಕರಣ ಸಂಬಂಧಿಸಿದಂತೆ ರಕ್ತ ಪೂರೈಕೆ ಮಾಡಿದ ಸರ್ಕಾರಿ ರಕ್ತ ನಿಧಿಯ ಓರ್ವ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *