ತಮಿಳುನಾಡು ಸಿಎಂಗೆ ಬೌಲಿಂಗ್ ಮಾಡಿದ ರಾಹುಲ್ ದ್ರಾವಿಡ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಾಲ್ ಮಾಡಿದ್ದಾರೆ.

ವಾಲ್ಪಾಡಿಯಲ್ಲಿ ಭಾನುವಾರ ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರಿಕೆಟ್ ಮೈದಾನ ಉದ್ಘಾಟನೆಗೊಂಡಿತು. ಉದ್ಘಾಟನೆಯ ಬಳಿಕ ರಾಹುಲ್ ದ್ರಾವಿಡ್ ಅವರು ಸಿಎಂ ಪಳನಿಸ್ವಾಮಿ ಅವರಿಗೆ ಬೌಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ಟಿಎನ್‍ಸಿಎ ಅಧ್ಯಕ್ಷ ರೂಪಾ ಗುರುನಾಥ್ ಕೂಡ ಉಪಸ್ಥಿತರಿದ್ದರು.

ಉದ್ಘಾಟನೆ ಬಳಿಕ ಮಾತನಾಡಿದ ದ್ರಾವಿಡ್, ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರೀಡಾಂಗಣದಲ್ಲಿನ ವಿವಿಧ ಸೌಲಭ್ಯ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ತಮಿಳುನಾಡು ಕ್ರಿಕೆಟ್ ಸಂಘವನ್ನು (ಟಿಎನ್‍ಸಿಎ) ಶ್ಲಾಘಿಸಿದರು.

ಮುಂದಿನ ಪೀಳಿಗೆಯ ಕ್ರಿಕೆಟಿಗರು, ಪ್ರತಿಭೆಗಳು ಸಣ್ಣ ಪಟ್ಟಣ ಮತ್ತು ನಗರಗಳಿಂದ ಬರಲಿದ್ದಾರೆ. ಅವರಿಗೆ ಇಂತಹ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದರು. ಇದೇ ವೇಳೆ ಸೇಲಂ ಮೂಲದ ತಮಿಳುನಾಡಿನ ಎಡಗೈ ವೇಗಿ ಟಿ.ನಟರಾಜನ್ ಅವರನ್ನು ದ್ರಾವಿಡ್ ಹೊಗಳಿದರು. ಟಿ.ನಟರಾಜನ್ ಅವರು ಮುಂದಿನ ತಲೆಮಾರಿನ ಆಟಗಾರರಿಗೆ ಆದರ್ಶಪ್ರಾಯರಾಗಲಿದ್ದಾರೆ ಎಂದು ಹೇಳಿದರು.

ಶ್ರೀನಿವಾಸನ್ ಮಾತನಾಡಿ, ಸೇಲಂ ಕ್ರಿಕೆಟ್ ಫೌಂಡೇಶನ್ ಕ್ರಿಕೆಟ್ ಮೈದಾನವನಲ್ಲಿ ಐಪಿಎಲ್ ಪಂದ್ಯವನ್ನು ತರುವ ಭರವಸೆ ನೀಡಿದರು. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಈ ಮೈದಾನದಲ್ಲಿ ಮೂರು ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *