ಉಚಿತ ತರಕಾರಿಗಾಗಿ ಮುಗಿಬಿದ್ದ ಜನ – ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಎನ್ನದ ತಹಶೀಲ್ದಾರ್

ಯಾದಗಿರಿ: ಜಿಲ್ಲೆಯಲ್ಲಿ ಇಷ್ಟು ದಿನ ಜನಸಾಮಾನ್ಯರು ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದರು. ಆದರೆ ಈಗ ಅಧಿಕಾರಿಗಳು ಸಹ ಲಾಕ್‍ಡೌನ್‍ಗೆ ಕ್ಯಾರೇ ಮಾಡುತ್ತಿಲ್ಲ ಎನ್ನುವಂತಾಗಿದೆ.

ಹೌದು. ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರು ಜನ ಗುಂಪು ಗುಂಪಾಗಿ ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಅವರ ಬೇಜವಬ್ದಾರಿಯನ್ನು ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಂದು ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಬಡ ಜನರಿಗೆ ಉಚಿತ ತರಕಾರಿ ಹಂಚುವ ಕಾರ್ಯಕ್ರಮವಿತ್ತು. ನಿಗಧಿ ವೇಳೆಗಿಂತ ಮುಂಚೆಯೇ ಜನರು ತರಕಾರಿಗಾಗಿ ಮುಗಿಬಿದ್ದಿದ್ದರು. ಆಗಿನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಸ್ಥಳಕ್ಕೆ ಬಂದಿರಲಿಲ್ಲ, ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ತಹಶೀಲ್ದಾರ್‍ರು ಜನರು ಸಾಮಾಜಿಕ ಅಂತರ ಕಾಪಾಡದ ದೃಶ್ಯ ಕಣ್ಣಿಗೆ ಬಿದ್ದರೂ ಈ ಬಗ್ಗೆ ಜನರಿಗೆ ಏನು ಹೇಳಲಿಲ್ಲ. ಆದರೆ ಸ್ಥಳಕ್ಕೆ ಬಂದ ಶಾಸಕರು ಜನರಿಗೆ ಬುದ್ಧಿ ಹೇಳಿ ಸಾಮಾಜಿಕ ಅಂತರ ಕಾಪಾಡುವಂತೆ ಮನವೊಲಿಸಿದರು.

ತಹಶೀಲ್ದಾರ್‍ರ ವಿರುದ್ಧ ಅನೇಕ ಆರೋಪಗಳನ್ನು ಜಿಲ್ಲೆಯಲ್ಲಿ ಕೇಳಿಬರುತ್ತಿವೆ. ಕೆಲ ಪಡಿತರ ಅಂಗಡಿಗಳ ಅಕ್ರಮದ ಬಗ್ಗೆ, ಲಾಕ್‍ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದ ಸುರಪುರ ತಹಶೀಲ್ದಾರ್ ಸುಮ್ಮನ್ನಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *