ಗಂಡಸರು ಇಲ್ಲದೆ ಮಕ್ಕಳು ಹೇಗಾಯ್ತು ಅದಾದ್ರೂ ಗೊತ್ತಾ – ಮಹಿಳೆಯರೊಂದಿಗೆ ತಹಶೀಲ್ದಾರ್ ಅಸಭ್ಯ ವರ್ತನೆ

ತುಮಕೂರು: ಜಿಲ್ಲೆಯ ತಿಪಟೂರು ತಹಶೀಲ್ದಾರ್ ಮಂಜುನಾಥ್ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನ ಗುರುಗದಹಳ್ಳಿ ಗ್ರಾಮದಲ್ಲಿ ಯೋಗೇಶ್ ಎಂಬವರ ಮನೆಗೆ ದಾರಿ ಇಲ್ಲದ ಕಾರಣ ರಸ್ತೆ ಬಿಡಿಸಿಕೊಡಲು ತಹಶಿಲ್ದಾರ್ ಹೋಗಿದ್ದಾರೆ. ದಾರಿ ನಿರ್ಮಿಸಬೇಕಿದ್ದರೆ ಶಂಕುತಲಾ ಎಂಬುವವರ ನಿವೇಶನದಿಂದ ಜಾಗ ಬಿಡಿಸಿಕೊಡಬೇಕಿತ್ತು. ಆದರೆ ನಾನು ಜಾಗ ನೀಡುವುದಿಲ್ಲ ಎಂದು ಶಕುಂತಲಾ ಹೇಳಿದ್ದರು.

ದಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ಗುರುಗದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯಲ್ಲಿ ಗಂಡಸರು ಯಾರು ಇಲ್ಲ. ಜಾಗಕ್ಕೆ ಸಂಬಂಧಿಸಿದ ಭೂ ದಾಖಲೆಗಳನ್ನು ಅವರು ನೀಡುತ್ತಾರೆ. ನಾವೇ ಬಂದು ಮಾಹಿತಿ ನೀಡುತ್ತೇವೆ ಸರ್ ಎಂದಿದ್ದಾರೆ.

 

ಈ ವೇಳೆ ತಹಶೀಲ್ದಾರ್ ಮಂಜುನಾಥ್ ಗಂಡಸರು ಇಲ್ಲದೆ ಮಕ್ಕಳು ಹೇಗಾಯ್ತು ಅದಾದ್ರೂ ಗೊತ್ತಾ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶಕುಂತಲಾ ದೂರಿದ್ದಾರೆ. ಈ ವೇಳೆ ಯೋಗೇಶ್ ಮನೆ ಮುಂದೆ ಬೈಕ್ ನಿಲ್ಲಿಸಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ ಎಂದು ಮಹಿಳೆಯರು ತಹಶೀಲ್ದಾರ್ ಗೆ ದೂರು ಹೇಳಿದ್ದಾರೆ. ಈ ದೂರಿಗೆ ತಹಶೀಲ್ದಾರ್ ಒಬ್ಬ ಮಹಿಳೆಗೆ, ನೀನು ಚೆನ್ನಾಗಿದ್ದೀಯಾ ಅದಕ್ಕೆ ಹುಡುಗರು ನೋಡ್ತಾರೆ ಬಿಡು ಎಂದು ಅನುಚಿತವಾಗಿ ಮಾತನಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಈ ಎಲ್ಲ ವಿಚಾರವನ್ನು ಇಟ್ಟುಕೊಂಡು ನೊಂದ ಮಹಿಳೆ ಶಕುಂತಲಾ ತಹಶೀಲ್ದಾರ್ ವಿರುದ್ಧ ಎಸಿ ಕೃಷ್ಣಮೂರ್ತಿಯವರಿಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *