ಲಕ್ನೋ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಕ್ಕಳು ರಾಷ್ಟ್ರಗೀತೆ ಹಾಡುತ್ತಿರುವಾಗ ಅಡ್ಡಿಪಡಿಸಿದ ಕ್ರಮಕ್ಕೆ ಮದರಸದ ಮಾನ್ಯತೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಆಗಸ್ಟ್ 15ರಂದು ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಮದರಸದಲ್ಲಿ ಪ್ರಾಂಶುಪಾಲರು ಹಾಗೂ ಮುಸ್ಲಿಂ ಧರ್ಮಗುರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನಂತರ ಮಕ್ಕಳು ಹಾಡುತ್ತಿದ್ದ ರಾಷ್ಟ್ರಗೀತೆಯನ್ನು ತಡೆದು, ಇದು ಇಸ್ಲಾಂಗೆ ವಿರೋಧವೆಂದು ಅಡ್ಡಿಪಡಿಸಿದ್ದರು. ಈ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಮದರಸದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಲೇ ಮದರಸದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ
ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಯಾದ ಪ್ರಭತ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ವೇಳೆ ಮಕ್ಕಳಿಂದ ರಾಷ್ಟ್ರಗೀತೆಯನ್ನು ತಡೆದಿದ್ದು, ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಮದರಸದ ಮಾನ್ಯತೆಯನ್ನು ರದ್ದುಗೊಳಿಸಿದ್ದೇವೆ. ಅಲ್ಲದೇ ಸರ್ಕಾರದಿಂದ ಮದರಸಕ್ಕೆ ನೀಡುತ್ತಿದ್ದ ಎಲ್ಲಾ ಹಣಕಾಸು ಹಾಗೂ ಇತರೆ ನೆರವುಗಳನ್ನು ತಕ್ಷಣದಿಂದ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಗೀತೆ ಹಾಡುವ ವೇಳೆ ಮದರಸಾದ ಪ್ರಾಂಶುಪಾಲ ಫೈಯಾಸ್ ರೆಹ್ಮಾನ್ ಹಾಗೂ ಧರ್ಮಗುರು ಜುನೈದ್ ಅನ್ಸಾರಿ ಅಡ್ಡಿಪಡಿಸಿದ್ದು ತನಿಖೆಯಲ್ಲಿ ದೃಢಪಟ್ಟಿದೆ.
ಲಕ್ನೋ: ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಸುಪ್ರೀಂ ಕೋರ್ಟ್ ಆದೇಶವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಳ್ಳಿಹಾಕಿದ್ದಾರೆ.
ನಗರದ 5 ಎಕರೆ ವ್ಯಾಪ್ತಿಯಲ್ಲಿ, 10 ಬೆಡ್ ರೂಮ್ ಗಳನ್ನು ಒಳಗೊಂಡ ಬಂಗಲೆಯಾಗಿದ್ದು, ರಾಜಸ್ಥಾನದ ಮರಳುಗಲ್ಲು ಮತ್ತು ಗುಲಾಬಿ ಅಮೃತಶಿಲೆಯನ್ನು ಬಳಸಿ ಕಟ್ಟಲಾಗಿದೆ. ಇದು ಸ್ಮಾರಕವಾಗಿದ್ದು ಈ ವಿಚಾರದಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.
ಬಂಗಲೆಯ ಹೊರಗೆ ಶ್ರೀ ಕಾನ್ಶಿ ರಾಮ್ಜಿ ಯಾದ್ಗಾರ್ ವಿಶ್ರಾಂ ಸ್ಥಳ ಎಂಬ ಹೊಸ ಬೋರ್ಡ್ ಅನ್ನು ಹಾಕಲಾಗಿದೆ. ಬಿ ಎಸ್ ಪಿ ಸಂಸ್ಥಾಪಕರು ಮಾಯಾವತಿಯ ಗುರುಗಳು ಕಾನ್ಶಿ ರಾಮ್. ಹೊಸ ಬೋರ್ಡ್ ಹಾಕಿದ ಮರುದಿನವೇ ಮಾಯಾವತಿ ಸಹಾಯಕ ಸತೀಶ್ ಚಂದ್ರ ಮಿಶ್ರ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಬಂಗಲೆಗೆ ಸಂಬಂಧಪಟ್ಟ ದಾಖಲೆಯನ್ನು ತೋರಿಸಿದ್ದಾರೆ.
2011 ಜನವರಿ 13, ರಂದು ಬಂಗಲೆಯನ್ನು ಕಾನ್ಶಿ ರಾಮ್ ಸ್ಮಾರಕ ಎಂದು ಘೋಷಿಸಲಾಗಿದೆ. ಜೀವನ ಪರ್ಯಂತ ಮಾಯಾವತಿಯವರು ಈ ಬಂಗಲೆಯಲ್ಲಿ ಇರಬಹುದು. ಬಂಗಲೆಯ ಎರಡು ರೂಮ್ ಗಳನ್ನು ಉಪಯೋಗಿಸತ್ತಾರೆ ಹಾಗೂ ಬಂಗಲೆಯ ಉಸ್ತುವಾರಿಯಾಗಿರುತ್ತಾರೆ ಎಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಯೋಗಿಯವರಿಗೆ ತೋರಿಸಿದ್ದಾರೆ.
ಮಾಯಾವತಿಯವರು ಬಂಗಲೆಯಲ್ಲಿ ಎರಡು ಸಣ್ಣ ರೂಮ್ ಗಳನ್ನು ಮಾತ್ರ ಬಳಸುತ್ತಿದ್ದಾರೆ. ಉಳಿದ ರೂಮ್ ಗಳಲ್ಲಿ ಕಾನ್ಶಿ ರಾಮ್ ಲೈಬ್ರರಿ ಮತ್ತು ಭಿತ್ತಿ ಚಿತ್ರಗಳು ಇವೆ. ಹಾಗಾಗಿ ಬಂಗಲೆಯನ್ನು ಸಂಪೂರ್ಣ ಸ್ಮಾರಕವನ್ನಾಗಿ ಮಾಡವಂತೆ ಸರ್ಕಾರ ಪುನಃ ಆದೇಶವನ್ನು ಹೊರಡಿಸಿದೆ ಎಂದು ಭೇಟಿಯ ಬಳಿಕ ಮಿಶ್ರ ಅವರು ತಿಳಿಸಿದ್ದಾರೆ.
ಬಂಗಲೆಯನ್ನು ಖಾಲಿ ಮಾಡಿದರು ಎಂದೆಂದಿಗೂ ಈ ಬಂಗಲೆ ಸ್ಮಾರಕವಾಗಿಯೇ ಇರಬೇಕು ಎಂದು ಮಾಯಾವತಿಯವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದು ಬಿ ಎಸ್ ಪಿ ತಿಳಿಸಿದೆ.
4 ಮಾಜಿ ಮುಖ್ಯಮಂತ್ರಿಗಳಿಗೆ ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಬಂಗಲೆಯನ್ನು 15 ದಿನದೊಳಗಾಗಿ ಖಾಲಿ ಮಾಡುವಂತೆ ನೋಟೀಸ್ ಕೊಟ್ಟಿತ್ತು. ಕುಟುಂಬ ಮತ್ತು ಭದ್ರತೆಯ ಕಾರಣದಿಂದ ಸದ್ಯಕ್ಕೆ ಖಾಲಿ ಮಾಡಲು ಆಗುವುದಿಲ್ಲ 2 ವರ್ಷ ಕಾಲಾವಕಾಶವನ್ನು ಅಖಿಲೇಶ್ ಯಾದವ್ ಕೇಳಿದ್ದಾರೆ ಎನ್ನಲಾಗಿದೆ.
ಲಕ್ನೊ: ಬಿಜೆಪಿ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಜನರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಕಡಿಮೆಯಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಮಿನಲ್ ಗಳು ತರಕಾರಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದಿನ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದ್ದವು ಎಂದು ದೂರಿದರು.
ಇದೇ ವೇಳೆ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ನೀಡಿದರು. 1.62 ಲಕ್ಷ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಮತ್ತು 1.37 ಲಕ್ಷ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತದೆ. ಗುತ್ತಿಗೆ ಆಧಾರದ ಶಿಕ್ಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
2013ರಲ್ಲಿ ಮುಜಾಫರ್ ನಗರದಲ್ಲಿ ನಡೆದ ಹಿಂದು ಮುಸ್ಲಿಂ ಗಲಭೆಯಲ್ಲಿ ಹಲವಾರು ಮುಸಲ್ಮಾನ ಕುಟುಂಬಗಳು ಸ್ಥಳಾಂತರಗೊಂಡವು. 2016 ರಲ್ಲಿ ಶಾಮ್ಲಿ ಜಿಲ್ಲೆಯ ಕೈರಾನ ಬ್ಲಾಕ್ ನಲ್ಲಿ ಹಿಂದೂಗಳಿಗೆ ಅಪಾಯ ಇದೆ ಎಂದು ಹಲವಾರು ಹಿಂದು ಕುಟುಂಬಗಳು ಸ್ಥಳಾಂತರಗೊಂಡವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಎಸ್ ಪಿ ಸರ್ಕಾರದಲ್ಲಿ ಎಲ್ಲಾ ಸಮುದಾಯದ ಯುವಕರಿಗೆ ಉದ್ಯೋಗ ಸಿಗಲಿಲ್ಲ. ಕೇವಲ ನಿರ್ಧಿಷ್ಟ ಸಮುದಾಯದವರಿಗೆ ಉದ್ಯೋಗಗಳು ದೊರೆತಿದೆ. ನಮ್ಮ ಸರ್ಕಾರದಲ್ಲಿ ಎಲ್ಲಾ ವರ್ಗದವರಿಗೂ ಉದ್ಯೋಗ ಸಿಗುವಂತೆ ನಿಯಮಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.
ಉಡುಪಿ: ನಾನು ಕರ್ನಾಟಕಕ್ಕೆ ಬಂದ್ರೆ ಸಿದ್ದರಾಮಯ್ಯ ಹರಿಹಾಯೋದ್ಯಾಕೆ? ಅವರಿಗೇನು ಕಷ್ಟ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬಿ.ಎಂ ಸುಕುಮಾರ್ ಶೆಟ್ಟಿ ಪರ ಪ್ರಚಾರ ನಡೆಸಲು ಬಂದಿದ್ದ ಸಂದರ್ಭ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇಲ್ಲಿನ ರೈತ, ಯುವಕ, ಸಂಕಷ್ಟದಲ್ಲಿದ್ದಾನೆ. ಹಿಂದೂ ಯುವಕರಿಗೆ ರಕ್ಷಣೆಯಿಲ್ಲ ಹೀಗಾಗಿ ನಾನು ಅಲ್ಲಿಂದ ಇಲ್ಲಿಗೆ ಬರಬೇಕಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಿಳಿಸಿ ಇಲ್ಲಿನ ಜನರಿಗೆ ಮನವರಿಕೆ ಮಾಡಲು, ನಾನು ಪದೇ ಪದೇ ಕರ್ನಾಟಕಕ್ಕೆ ಬರುತ್ತೇನೆ ಅಂತ ಯೋಗಿ ಸವಾಲೆಸೆದಿದ್ದಾರೆ.
ಕರ್ನಾಟಕ ಸರ್ಕಾರ ಮಾಡದೇ ಇರೋದನ್ನು ಉತ್ತರ ಪ್ರದೇಶದಲ್ಲಿ ನಾನು ಸಾಧಿಸಿ ತೋರಿಸಿದ್ದೇನೆ. ಯುಪಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ, 12 ಲಕ್ಷ ಬಡವರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಎಲ್.ಪಿ.ಜಿ ಸಂಪರ್ಕ ನೀಡೋದರಲ್ಲೂ ನಾವು ಕರ್ನಾಟಕಕ್ಕಿಂತ ಮುಂದಿದ್ದೇವೆ. ವಿಕಾಸ ಸಿದ್ದರಾಮಯ್ಯ ಸರ್ಕಾರದ ಅಜೆಂಡಾ ಅಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಮಾಡೋದೊಂದೇ ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.
ಜಿಹಾದಿ ತತ್ವ ಪ್ರೋತ್ಸಾಹಿಸೋದು, ಬಿಜೆಪಿ ಕಾರ್ಯಕರ್ತರ ಕೊಲೆ ಮಾಡೋದು ಸಿದ್ದರಾಮಯ್ಯ ಅಜೆಂಡಾ. ಕರ್ನಾಟಕದಲ್ಲಿ ಹನುಮಜಯಂತಿ, ಶಿವಾಜಿ ಜಯಂತಿಗೆ ಅವಕಾಶ ಇಲ್ಲ. ಟಿಪ್ಪು ಜಯಂತಿ ಆಚರಿಸಲು ಈ ಸರ್ಕಾರಕ್ಕೆ ಇರುವ ಉತ್ಸಾಹ ಬೇರೆ ಯಾವ ವಿಚಾರದಲ್ಲೂ ಇಲ್ಲ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಡಬ್ಬಲ್ ಎಂಜಿನ್ ಓಡಿಸಲು ಅಭಿವೃದ್ಧಿಯ ಗುರಿ ತಲುಪಲು ಬಿಜೆಪಿಯನ್ನು ಬೆಂಬಲಿಸಿ ಎಂದು ಯೋಗಿ ಕರೆ ನೀಡಿದ ಅವರು, ಮೀನುಗಾರರ, ರೈತರ ಹಿತ ಕಾಪಾಡಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಮಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಬಿಜೆಪಿ ಜನಸುರಕ್ಷಾ ಜಾಥಾದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಜನ ಆತಂಕದಲ್ಲಿದ್ದಾರೆ. ರಾಜ್ಯದ ಬೇರೆ ಪ್ರದೇಶಗಳಲ್ಲಿ ಇಂತಹ ಸ್ಥಿತಿ ಇಲ್ಲ. ಹೀಗಾಗಿ ಉತ್ತರಪ್ರದೇಶದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂದ್ರು.
ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರೆಲ್ಲರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ. ನೂರಾರು ಮಕ್ಕಳನ್ನು ಬಲಿ ತೆಗೆದುಕೊಂಡ ಯೋಗಿಯಿಂದ ಭಾಷಣ ಮಾಡಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳ ರಕ್ಷಣೆ ಮಾಡದ ಯೋಗಿಯಿಂದ ಇಲ್ಲಿ ಭಾಷಣ ಮಾಡಿಸಲಾಗುತ್ತಿದೆ ಎಂದು ಟೀಕಿಸಿದ್ರು.
ಲಕ್ನೋ: ರೇಪ್ ಸಂತ್ರಸ್ತೆಯೊಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಉನ್ನತ ಅಧಿಕಾರಿಗಳ ಪರಿಚಯವಿರುವುದರಿಂದ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೇ ಆರೋಪಿಗಳು ಕೇಸ್ ವಾಪಸ್ ಪಡೆಯುವಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ನನಗೆ ನ್ಯಾಯಬೇಕು ಇಲ್ಲವೆಂದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಸಂತ್ರಸ್ತೆ ಈ ಪತ್ರವನ್ನು ಜನವರಿ 20ರಂದು ಬರೆದಿದ್ದು, ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿ ಎಎಸ್ಪಿ ಶಶಿಶೇಖರ್ ಸಿಂಗ್ ಅವರು, ಸಂತ್ರಸ್ತೆಯ ತಂದೆ ನೀಡಿದ ದೂರಿನಂತೆ 2017ರ ಮಾರ್ಚ್ 24ರಂದು ಆರೋಪಿಗಳಾದ ದಿವ್ಯ ಪಾಂಡೇ ಹಾಗೂ ಅಂಕಿತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಮಗಳ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆ ಬಳಿಕ ಆಕೆಗೆ ಬೆದರಿಕೆ ಹಾಕುತ್ತಿದ್ದಾರೆ ಅಂತ ಆಕೆಯ ತಂದೆ ದೂರಿನಲ್ಲಿ ತಿಳಿಸಿದ್ದರು.
2017ರ ಅಕ್ಟೋಬರ್ ತಿಂಗಳಿನಲ್ಲಿ ರಾಯ್ ಬರೇಲಿಯಲ್ಲಿ ವ್ಯಕ್ತಿಯೊಬ್ಬ ನಕಲಿ ಫೇಸ್ಬುಕ್ ಖಾತೆ ತೆರೆದು ಅದರಲ್ಲಿ ಹುಡುಗಿಯೊಬ್ಬಳ ಫೋಟೋ ಹಾಕಿ ಅದರಲ್ಲಿ ಅಶ್ಲೀಲ ಫೋಟೋಗಳನ್ನು ಫೋಸ್ಟ್ ಮಾಡುತ್ತಿದ್ದವನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಅಂತ ಸಿಂಗ್ ಹೇಳಿದ್ದಾರೆ.
ಮಂಗಳೂರು, ಉಡುಪಿ: ಕಳೆದ 12 ವರ್ಷಗಳಿಂದ ವಿವಾದವೇ ಇಲ್ಲದೆ, ತಣ್ಣಗೆ ನಡೆಯುತ್ತಿದ್ದ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಈ ಬಾರಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿಯ ಭಾರೀ ವಿರೋಧದ ನಡುವೆ ಡಾ. ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಬಹುಭಾಷಾ ನಟ ಪ್ರಕಾಶ್ ರೈ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಡಿವೈಎಫ್ಐ ಕಾರ್ಯಕರ್ತರು ಸ್ವಾಗತಿಸಿದ್ರು.
ಇದೇ ವೇಳೆ ಮಾತನಾಡಿದ ಪ್ರಕಾಶ್ ರೈ, ಪ್ರತಿಭಟಿಸುವುದು ಅವರವರ ಹಕ್ಕು. ಪ್ರತಿಭಟಿಸಲಿ ಬೇಡ ಅನ್ನುವುದಿಲ್ಲ. ಕಾರಂತ ನನಗೆ ಅಜ್ಜ. ತುಂಬಾ ಆತ್ಮೀಯರಾಗಿದ್ದರು. ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯಿದೆ ಅಂತ ಹೇಳಿದರು. ಬಳಿಕ ಉಡುಪಿ ಮೂಲಕ ಕುಂದಾಪುರಕ್ಕೆ ತೆರಳಿದ್ರು. ಹಲವರ ಆಕ್ಷೇಪದ ನಡುವೆಯೂ ಇಂದು ಕುಂದಾಪುರದ ಕೋಟದಲ್ಲಿ ಪ್ರಕಾಶ ರೈಗೆ ಕಾರಂತ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಪ್ರಕಾಶ್ ರೈಗೆ ನೀಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದ ಬೆನ್ನಲ್ಲೇ ಬಿಜೆಪಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಶಿವರಾಮ ಕಾರಂತ ಟ್ರಸ್ಟ್, ಶಿವರಾಮಕಾರಂತ ಹುಟ್ಟೂರ ಪ್ರತಿಷ್ಠಾನ ಜಂಟಿಯಾಗಿ ಕಳೆದ ಹದಿಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಖ್ಯಾತ ನಟ ಪ್ರಕಾಶ್ ರೈಗೆ ಈ ಬಾರಿಯ ಸನ್ಮಾನವನ್ನು ಮಾಡಬೇಕು ಎಂದು ಪ್ರತಿಷ್ಠಾನ ಮೂರು ತಿಂಗಳ ಹಿಂದೆ ನಿರ್ಧಾರ ಮಾಡಿತ್ತು. ಆಯ್ಕೆ ಸಮಿತಿ, ಪಂಚಾಯತ್ ಮತ್ತು ಪ್ರತಿಷ್ಠಾನ ಹತ್ತು ದಿನಗಳ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ರೈ ಗೆ ಪ್ರಶಸ್ತಿ ನೀಡಬಾರದು ಎಂಬ ದೊಡ್ಡ ಕೂಗು ಎದ್ದಿದೆ. ಪ್ರಕಾಶ್ ರೈ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ವಿರುದ್ಧವೆಂಬಂತಹ ಹೇಳಿಕೆಗಳನ್ನ ನೀಡಿದ್ದರು. ಗೌರಿ ಲಂಕೇಶ್ ಹತ್ಯೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಡಿವೈಎಫ್ಐ ರಾಜ್ಯ ಸಮ್ಮೇಳನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಒಳ್ಳೆ ನಟ ಅಂತ ಲೇವಡಿ ಮಾಡಿದ್ದರು. ಈ ಎಲ್ಲಾ ವಿಚಾರವನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ರೈಗೆ ಪ್ರಶಸ್ತಿ ನೀಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರಕಾಶ್ ರೈ ಅವರಿಗೆ ನೈತಿಕತೆ ಇಲ್ಲ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿ ಶೇರ್ ಆಗ್ತಾ ಇದೆ. ಆದ್ರೆ ಪ್ರಶಸ್ತಿ ನೀಡುವ ಸಂಸ್ಥೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈ ಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಕುಂದಾಪುರ ತಾಲೂಕಿನ ಕೋಟ ಕಾರಂತ ಥೀಂ ಪಾರ್ಕಿನಲ್ಲಿ ತಂಬೆಲರು ಎಂಬ 10 ದಿನದ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಜೈ ಭಾರ್ಗವ ಸಂಘಟನೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಪಂಥದ ಜೋಗಿ ಮಠದ ಭಕ್ತರು ಕಪ್ಪು ಅಂಗಿ ಧರಿಸಿ ಕಾರ್ಯಕ್ರಮದಲ್ಲೇ ಕುಳಿತು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.
ಲಕ್ನೋ: ಅತ್ಯಾಚಾರದಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣದ ವೇಳೆ ಮಹಿಳೆಯರ ಸುರಕ್ಷತೆಗಾಗಿ ಉತ್ತರಪ್ರದೇಶದಲ್ಲಿ ಗುಲಾಬಿ ಬಣ್ಣದ ಹವಾನಿಯಂತ್ರಿತ ಬಸ್ಗಳನ್ನ ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರ್ಕಾರ ನಿಧಿ ಸ್ಥಾಪಿಸಿತ್ತು. ಇದೀಗ ಪಿಂಕ್ ಬಸ್ ಯೋಜನೆಗಾಗಿ ಈ ನಿಧಿಯಿಂದ 50 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ಈ ನಿಧಿಗಾಗಿ 1000 ಕೋಟಿ ರೂ. ಘೋಷಣೆ ಮಾಡಿದೆ. ಮಹಿಳಾ ಸುರಕ್ಷತೆಯ ಕಾರ್ಯಗಳಿಗೆ ಇದರ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಪಿಂಕ್ ಬಸ್ಗಳು ಉತ್ತರಪ್ರದೇಶದ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಓಡಾಡಲಿವೆ. ಅಲ್ಲದೇ ಇದರಲ್ಲಿ ಪುರುಷರು ಸಂಚರಿಸುವಂತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋ: ಉತ್ತರಪ್ರದೇಶದ ವಿಧಾನಸಭೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಸದನದೊಳಗೆ ಶಾಸಕರು ಮೊಬೈಲ್ ಫೋನ್ ತರದಂತೆ ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದ ವೇಳೆ ವಿರೋಧ ಪಕ್ಷದ ಶಾಸಕ ರಾಮ್ ಗೋವಿಂದ್ ಚೌಧರಿ ಎಂಬವರ ಕುರ್ಚಿಯ ಕೆಳಗೆ ಅನುಮಾನಾಸ್ಪದವಾದ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗಿನೊಳಗೆ 150 ಗ್ರಾಂ ಬಿಳಿ ಹುಡಿ ಇರೋದನ್ನು ಶ್ವಾನದಳ ಪತ್ತೆಹಚ್ಚಿತ್ತು.
ಸದ್ಯ ದೊರಕಿರುವ ಬಿಳಿ ಬಣ್ಣದ ಪುಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪುಡಿಯಿಂದ ಇಡೀ ಸದನಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ವಿಧಾನಸಭೆಯಲ್ಲಿ ಪಿಇಟಿಎನ್ ಸ್ಫೋಟಕ ವಸ್ತು ಪತ್ತೆಯಾಗಿದೆ. 500 ಗ್ರಾಂ ಪಿಇಟಿಎನ್ ಸಾಕು ಇಡೀ ವಿಧಾನಸಭೆಯನ್ನು ಸ್ಫೋಟಿಸಲು, ಅಂತಹ 150 ಗ್ರಾಂ ಪಿಇಟಿಎನ್ ವಿರೋಧ ಪಕ್ಷದ ನಾಯಕರೊಬ್ಬ ಕುರ್ಚಿಯ ಕೆಳಗೆ ದೊರಕಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತೀವ್ರಗೊಂಡಿದೆ ಎಂಬುದನ್ನು ಇದು ಸೂಚಿಸುತ್ತಿದೆ. ವಿಧಾನಸಭೆಯಲ್ಲಿರುವ ಪ್ರತಿಯೊಬ್ಬರು ಪೆÇಲೀಸರ ತನಿಖೆಗೊಳಪಡಬೇಕೆಂದು ಸಿಎಂ ಆದೇಶಿಸಿದ್ದಾರೆ.
ಘಟನೆಯಿಂದ ರಾಜ್ಯ ಭದ್ರತೆಯಲ್ಲಿ ರಾಜಿಯಾಗಿದೆ ಎಂಬುದನ್ನು ತೋರಿಸುತ್ತಿದೆ. ದೇಶದ ಅಥವಾ ರಾಜ್ಯದ ಭದ್ರತಾ ವಿಚಾರದಲ್ಲಿ ಯಾರೇ ಆದರೂ ರಾಜಿಯಾಗಬಾರದು ಅಂತ ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಬಜೆಟ್ ಮಂಡನೆ ಅಧಿವೇಶನದ ಅವಧಿಯಲ್ಲೇ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಉನ್ನತಾಧಿಕಾರಿಗಳ ಸಭೆ ಕರೆದಿರುವ ಸಿಎಂ ಯೋಗಿ ಆದಿತ್ಯನಾಥ್, ಎನ್ಐಎ ತನಿಖೆ ನಡೆಸಲು ಆದೇಶಿಸಿದ್ದಾರೆ.
ಲಕ್ನೋ: ಒಂದೆಡೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಕಳೆದ ಖುಷಿಯಾದ್ರೆ, ಇನ್ನೊಂದೆಡೆ ರಾಜ್ಯದಲ್ಲಿ ಅತ್ಯಾಚಾರದಂತಹ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಹೌದು. ಉತ್ರಪ್ರದೇಶದ ಸಾಂಭಾಲ್ ಜಿಲ್ಲೆಯಲ್ಲಿ ತಮ್ಮ ಮಗ ಹಾಗೂ ಮಗಳ ಎದುರು ನಾಲ್ಕು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಇಂದು ವರದಿಯಾಗಿದೆ.
ನಡೆದಿದ್ದೇನು?: 40 ವರ್ಷದ ಮಹಿಳೆಯೊಬ್ಬರು ಜೂನ್ 16ರಂದು ಪಾಣಿಪತ್ ಕಡೆ ಹೋಗಲೆಂದು ತನ್ನ 11 ವರ್ಷದ ಮಗಳು ಹಾಗೂ 13 ವರ್ಷದ ಮಗನ ಜೊತೆ ಜಿಲ್ಲೆಯ ಬರೇಲಿ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಮೂವರು ಮಹಿಳೆಯ ಹತ್ತಿರ ಬಂದು ಮಾತನಾಡುತ್ತಾ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಇಬ್ಬರು ಮಕ್ಕಳ ಸಮೇತ ಅಪಹರಿಸಿದ್ದಾರೆ. ಬಳಿಕ ಗ್ರಾಮದ ಗಿನ್ನೌ ಎಂಬ ಪ್ರದೇಶಕ್ಕೆ ಕೆರದುಕೊಂಡು ಸತತ ನಾಲ್ಕು ದಿನಗಳ ಕಾಲ ಮಕ್ಕಳ ಎದುರೇ ಅತ್ಯಾಚಾರವೆಸಗಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ ಎಂಬುವುದಾಗಿ ಅಲ್ಲಿನ ಎಸ್ಪಿ ಪಂಕಜ್ ಪಾಂಡೇ ತಿಳಿಸಿದ್ದಾರೆ.
ಸದ್ಯ ಮಹಿಳೆ ತನ್ನ ಮಗನೊಂದಿಗೆ ಕಾಮುಕರಿಂದ ತಪ್ಪಿಸಿಕೊಂಡು ಬಂದಿದ್ದು, ಪೊಲಿಸರಿಗೆ ದೂರು ನಿಡಿದ್ದಾರೆ. ಆದ್ರೆ ಮಗಳು ಇನ್ನೂ ಅದೇ ಗ್ರಾಮದಲ್ಲಿದ್ದು, ಆಕೆಯನ್ನು ರಕ್ಷಿಸುವಂತೆ ಮಹಿಳೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಇಬ್ಬರು ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಚಂದೌಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸೋಮವಾರ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಅಂತಾ ಎಸ್ ಪಿ ರವಿಶಂಕರ್ ಚಾಬಿ ತಿಳಿಸಿದ್ದಾರೆ.