Tag: Yajna Shetty

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ನ್ನಡ ಚಿತ್ರರಂಗವನ್ನು ತಮ್ಮ ವಿಭಿನ್ನ ಆಲೋಚನೆಗಳ ಮೂಲಕವೇ ಬೆಳಗಿದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರರಂಗ ಒಂದೇ ಬಿಂದುವಿನ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಹೊಸ ಸಾಧ್ಯತೆಗಳ ಬ್ರಹ್ಮಾಂಡವನ್ನೇ ಬಿಚ್ಚಿಟ್ಟವರು ಪುಟ್ಟಣ್ಣ ಕಣಗಾಲ್. ಇದರೊಂದಿಗೆ ಪರಭಾಷಾ ಚಿತ್ರರಂಗದ ಮಂದಿಯೇ ಬೆರಗಾಗುವಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಣಗಾಲರ ಪ್ರಯೋಗಶೀಲತೆಗೆ ಕಥಾ ಸಂಗಮ ಕಿರೀಟವಿದ್ದಂತೆ. ಇದೀಗ ಈಗಿನ ತಲೆಮಾರಿನ ಕ್ರಿಯಾಶೀಲ ನಿರ್ದೇಶಕ ರಿಷಬ್ ಶೆಟ್ಟಿ ಆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ರೂಪುಗೊಂಡಂತಿರುವ ಹೊಸ `ಕಥಾ ಸಂಗಮ’ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮವೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಅಲ್ಲೇನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನವರು ರೂಪಿಸಿದ್ದ ರೀತಿಯೇ ಅವರೆಂತಹ ಭಿನ್ನ ನಿರ್ದೇಶಕ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಕಥಾ ಸಂಗಮದಲ್ಲಂತೂ ಅವರು ಕನ್ನಡ ಚಿತ್ರರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ಮಾಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನಾಲ್ಕು ಕಥೆಗಳನ್ನು ಹೇಳಿದ್ದರು. ರಿಷಬ್ ಶೆಟ್ಟರು ಈ ಕಥಾ ಸಂಗಮದಲ್ಲಿ ಏಳು ಕಥೆಗಳನ್ನು ಹೇಳಿದ್ದಾರೆ. ಇಲ್ಲಿ ಏಳು ಜನ ನಿರ್ದೇಶಕರು, ಏಳು ಮಂದಿ ಛಾಯಾಗ್ರಾಹಕರು ಮತ್ತು ಏಳು ಜನ ಸಂಗೀತ ನಿರ್ದೇಶಕರು ಸೇರಿ ಈ ಸಿನಿಮಾವನ್ನು ನಿರ್ವಹಿಸಿದ್ದಾರೆ. ರಿಷಬ್ ಶೆಟ್ಟಿ ಅದರ ಸೂತ್ರ ಹಿಡಿದು ಮುನ್ನಡೆಸಿದ್ದಾರೆ. ಈ ಸಿನಿಮಾಗೀಗ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಈ ಮೂಲಕ ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ನೋಡುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿವೆ. ನಿರ್ದೇಶಕ ರಿಷಬ್ ಶೆಟ್ಟಿ ಸದಾ ಸಿನಿಮಾ ಧ್ಯಾನದಲ್ಲಿಯೇ ತಲ್ಲೀನರಾಗಿರುವವರು. ಕಥಾ ಸಂಗಮದಂತಹ ಗುಂಗೀಹುಳ ಅವರ ಮನಸ್ಸು ಹೊಕ್ಕು ಕೆಲಸ ಶುರುವಿಟ್ಟುಕೊಂಡಿದ್ದದ್ದು ವರ್ಷಗಳ ಹಿಂದೆ. ನಂತರ ಪಟ್ಟು ಬಿಡದೇ ಏಳು ಮಂದಿ ಪ್ರತಿಭಾವಂತರನ್ನು ಹುಡುಕಿ, ಚೆಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ರಿಸ್ಕಿ ಸಾಹಸಕ್ಕೆ ಕೈ ಹಾಕಿದ್ದರು. ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದಲೇ ತಯಾರಾದ ಈ ಸಿನಿಮಾವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವ ತೋರಿಸಲಾಗಿದೆ. ಕಣಗಾಲರ ಕೀರ್ತಿಯನ್ನು ಮತ್ತಷ್ಟು ಮಿರುಗಿಸುವಂತೆಯೇ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಈಗಾಗಲೇ ಸ್ಪಷ್ಟಗೊಂಡಿದೆ.

    ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಏಳೂ ಕಥೆಗಳ ಪ್ರತೀ ಪಾತ್ರಗಳೂ ಅದೆಷ್ಟು ಭಿನ್ನವಾಗಿವೆ ಅನ್ನೋದಕ್ಕೆ ಮೊನ್ನೆ ಬಿಡುಗಡೆಗೊಂಡಿರೋ ಟ್ರೇಲರ್‍ನಲ್ಲಿ ಸಾಕ್ಷಿಗಳಿವೆ. ವಾರದೊಪ್ಪತ್ತಿನಲ್ಲಿಯೇ ಕಥಾ ಸಂಗಮ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

     

  • ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಬೆಂಗಳೂರು: ಹರಿವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಸಾಧ್ಯತೆಗಳ ಹರಿವೊಂದನ್ನು ಹಾಯಿಸಿ ಬಿಟ್ಟು, ನಾತಿಚರಾಮಿ ಚಿತ್ರದೊಂದಿಗೆ ನಿರ್ದೇಶಕರಾಗಿ ಮತ್ತಷ್ಟು ಗಟ್ಟಿಯಾಗಿ ನೆಲೆ ಕಂಡುಕೊಂಡಿರುವವರು ಮಂಸೋರೆ. ನಾತಿಚರಾಮಿ ಪ್ರೇಕ್ಷಕರ ಮನ ಗೆದ್ದ ನಂತರದಲ್ಲಿ ಈ ಬಾರಿ ಭಿನ್ನ ಜಾಡಿನ ಚಿತ್ರವೊಂದನ್ನು ನಿರ್ದೇಶನ ಮಾಡೋ ಸುಳಿವು ಮಂಸೋರೆ ಕಡೆಯಿಂದ ಜಾಹೀರಾಗಿತ್ತು. ಕಥೆಯನ್ನು ಗಟ್ಟಿಗೊಳಿಸೋದಕ್ಕಾಗಿ ಸುತ್ತಾಟದಲ್ಲಿದ್ದ ಅವರು ಹೊಸಾ ಪ್ರಾಜೆಕ್ಟಿನ ಬಗ್ಗೆ ಒಂದಷ್ಟು ಚರ್ಚೆಗಳಾಗುವಂತೆ ಮಾಡಿದ್ದರು. ಆದರೆ ತಿಂಗಳು ಕಳೆದರೂ ಆ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡದಿದ್ದ ಮಂಸೋರೆ ಇದೀಗ ಸಂಪೂರ್ಣವಾಗಿಯೇ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೋಷನ್ ಪೋಸ್ಟರ್‌ನೊಂದಿಗೆ ಸದ್ದು ಮಾಡಿದ್ದಾರೆ.

    ಈ ಬಾರಿ ಮಂಸೋರೆ ಶಶಕ್ತವಾದ ಕ್ರಿಯಾಶೀಲರ ಸಾಥ್‌ನೊಂದಿಗೆ ಸಾಮಾಜಿಕ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಈ ಚಿತ್ರಕ್ಕೆ ಆಕ್ಟ್ 1978 ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್‌ನಲ್ಲಿ ರೋಚಕ ಕಥೆಯ ಸುಳಿವಿನೊಂದಿಗೆ, ಥ್ರಿಲ್ಲರ್ ಜಾನರಿನ ಚಹರೆಯನ್ನೂ ಹೊಮ್ಮಿಸಿದ್ದಾರೆ. ಯಾರೇ ನೋಡಿದರೂ ಅವರೊಳಗೆ ಕಥೆಯೇನಿರಬಹುದೆಂಬ ಪ್ರಶ್ನೆಗಳ ತಾಕಲಾಟ ಶುರು ಮಾಡುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಈ ಚಿತ್ರದಲ್ಲಿ ಮೊನ್ನೆಯಷ್ಟೇ ದಾಂಪತ್ಯ ಜೀವನ ಆರಂಭಿಸಿರುವ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೈಲಿ ಗನ್ನು ಹಿಡಿದು, ಬಾಂಬು ಕಟ್ಟಿಕೊಂಡು ಕೂತ ಗರ್ಭಿಣಿಯ ಅವತಾರವೇ ಯಜ್ಞಾರ ಪಾತ್ರ ವಿಶೇಷವಾಗಿದೆ ಎಂಬುದರ ಸುಳಿವು ಕೊಡುವಂತಿದೆ. ಈ ಬಾರಿ ನಿರ್ದೇಶಕ ಮಂಸೋರೆ ಕಮರ್ಶಿಯಲ್ ಜಾಡಿನತ್ತ ಹೊರಳಿಕೊಂಡಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಬೆಲ್‌ಬಾಟಂ ಖ್ಯಾತಿಯ ಕಥೆಗಾರ ಟಿ.ಕೆ ದಯಾನಂದ್ ಮತ್ತು ಯುವ ನಿರ್ದೇಶಕ ವೀರು ಮಲ್ಲಣ್ಣ ಸಾಥ್ ಕೊಟ್ಟಿದ್ದಾರೆ. ಯಾವ ಜಾನರಿನ ಚಿತ್ರವನ್ನೇ ಆದರೂ ಹೊಸತನದೊಂದಿಗೆ ಕಟ್ಟಿ ನಿಲ್ಲಿಸುವ ಕಸುವು ಹೊಂದಿರೋ ಮಂಸೋರೆ ಈ ಬಾರಿ ಮ್ಯಾಜಿಕ್ ಮಾಡೋ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.