Tag: workers

  • ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು  ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

    ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

    ನಂತರ ಬಸ್‍ನಲ್ಲೇ ಕುಳಿತು ಮನವಿ ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು, ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.

  • ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿತ – ಮೂವರ ದುರ್ಮರಣ

    ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿತ – ಮೂವರ ದುರ್ಮರಣ

    – ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ವಾಟರ್ ಟ್ಯಾಂಕ್ ಕುಸಿತ ಸಂಭವಿಸಿ ಮೂರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ರಕ್ಷಣೆ ಮಾಡಿರುವ ಘಟನೆ ನಗರದ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‍ನಲ್ಲಿ ಘಟನೆ.

    ನೀರು ಶುದ್ಧೀಕರಣ ಘಟಕ ನಿರ್ಮಿಸಲು ಸುಮಾರು 8 ವಾಟರ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿತ್ತು. ಇಂದು ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ಸೆಂಟ್ರಿಂಗ್ ಕಾರ್ಯದಲ್ಲಿ ತೊಡಗಿದ್ದರು. ಆದರೆ ಈ ವೇಳೆ ಏಕಾಏಕಿ ಕಟ್ಟದ ಸೆಂಟ್ರಿಂಗ್ ಕುಸಿತ ಆಗಿದೆ. ಪರಿಣಾಮ ಸುಮಾರು 80 ಅಡಿ ಅಳಕ್ಕೆ ಉರುಳಿ ಬಿದ್ದಿದ್ದಾರೆ.

    ಘಟನೆ ನಡೆಯುತ್ತಿದಂತೆ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ಘಟನೆಯಲ್ಲಿ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನು ಹಲವು ಮಂದಿ ಸೆಂಟ್ರಿಂಗ್ ಕೆಳಗೆ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಈಗಾಗಲೇ ರಕ್ಷಣೆ ಮಾಡಿರುವ ಮಂದಿಯಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಬಹುತೇಕ ಮಂದಿ ಉತ್ತರ ಕರ್ನಾಟಕ ಮೂಲದವರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಕೆಲ ಉತ್ತರ ಭಾರತದ ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಘಟನೆಯಲ್ಲಿ ಜೀವ ಉಳಿಸಿಕೊಂಡ ಕೆಲ ಕಾರ್ಮಿಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಿರ್ಮಾಣ ಹಂತದಲ್ಲಿದ್ದ ವಾಟರ್ ಟ್ಯಾಂಕ್ ಬಿಡಬ್ಲೂಎಸ್‍ಎಸ್‍ಬಿ ಕಚೇರಿಗೆ ಸೇರಿದೆ ಎಂಬ ಮಾಹಿತಿ ಲಭಿಸಿದೆ. ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಬೃಹತ್ 8 ವಾಟರ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿತ್ತು. ಸುಮಾರು 30 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

  • ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ಗದಗ: ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ವೇತನ ಜಾರಿಗಾಗಿ ಆಗ್ರಹಿಸಿ ಪೌರಕಾರ್ಮಿಕರು ಗದಗ-ಬೆಟಗೇರಿ ನಗರಸಭೆಯ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.

    ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 7 ತಿಂಗಳು ಹಾಗೂ ಖಾಯಂ ನೌಕರರಿಗೆ 3 ತಿಂಗಳಿಂದ ವೇತನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

    ಸರಿಯಾದ ಸಂಬಳ ಸಿಗದ ಕಾರಣಕ್ಕೆ ತಮ್ಮ ಕುಟುಂಬಗಳು ನಿತ್ಯ ಊಟಕ್ಕೂ ಪರಿತಪಿಸುವಂತಾಗಿದೆ. ಆದರೆ ನಗರಸಭೆ ಅಧಿಕಾರಿಗಳಿಗೆ ಮಾತ್ರ ಕಾರ್ಮಿಕರ ಕಷ್ಟ ಕಾಣುತ್ತಿಲ್ಲ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ನಗರಸಭೆ ಗೇಟ್ ಬಂದ್ ಮಾಡಿ ಕಚೇರಿ ಎದುರು ವಾಹನಗಳನ್ನು ಇಟ್ಟು ಕಾರ್ಮಿಕರು ಅರೆಬೆತ್ತಲೆ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದರು. ವೇತನ ನೀಡಿ, ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದರು. ಜೊತೆಗೆ ಕಷ್ಟ ಪಟ್ಟು ಮಾಡುವ ಕೆಲಸಕ್ಕೆ ನಮಗೆ ನೀಡಬೇಕಾದ ವೇತನ ಜಾರಿಗೊಳಿಸಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

  • ಬಾವಿ ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕರಿಬ್ಬರ ದುರ್ಮರಣ!

    ಬಾವಿ ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕರಿಬ್ಬರ ದುರ್ಮರಣ!

    ಬೆಂಗಳೂರು: ಬಾವಿ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಕಾರ್ಮಿಕರ ದುರ್ಮರಣಕ್ಕೀಡಾದ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯ ಪೊಲೀಸ್ ಠಾಣೆ ಬಳಿ ನಡೆದಿದೆ.

    ಚೋಟು ಮತ್ತು ಗಫೂರ್ ಮೃತ ದುರ್ದೈವಿ ಕಾರ್ಮಿಕರು. ಟೀ ಅಂಗಡಿಯೊಳಗೆ ಇರುವ ನಾಲ್ಕು ರಿಂಕಲ್ ಬಾವಿಯನ್ನು ಶುಚಿಗೊಳಿಸಲೆಂದು ಕಾರ್ಮಿಕರಿಬ್ಬರು ಇಳಿದಿದ್ದಾರೆ. ಒಬ್ಬ ಒಳಗೆ ಇಳಿದು ಕ್ಲೀನ್ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದರೆ, ಮತ್ತೊರ್ವ ಬಾವಿಯೊಳಗೆ ಇಳಿದಾಗಲೇ ಮೃತಪಟ್ಟಿದ್ದಾರೆ.

    ಈ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ಮಾತನಾಡಿ, ಟ್ಯಾನರಿ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಟೀ ಪಾಯಿಂಟ್‍ನಲ್ಲಿ ಘಟನೆ ನಡೆದಿದೆ. ಟೀ ಪಾಯಿಂಟ್‍ನ ಹಿಂಭಾಗದಲ್ಲಿದ್ದ ಬಾವಿ ರೀತಿಯ ಸಂಪ್ ನಲ್ಲಿ ಕೊಳಚೆ ತುಂಬಿಕೊಂಡಿತ್ತು. ಕೊಳಚೆ ಸ್ವಚ್ಛಗೊಳಿಸಲು ಚೋಟು ಅನ್ನೋರನ್ನು ಕೆಲಸಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಉಸಿರುಗಟ್ಟಿದ ಕಾರಣ ಚೋಟು ಜೋರಾಗಿ ಕಿರುಚಿಕೊಂಡಿದ್ದಾರೆ. ಆಗ ಗಫೂರ್ ಚೋಟುವಿಗೆ ಸಹಾಯ ಮಾಡಲು ಹೋಗಿ ಆತನೂ ಮೃತಪಟ್ಟಿದ್ದಾನೆ. ಹೀಗಾಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಚೋಟು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರೆ, ಗಫರ್ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕೆಜಿ ಹಳ್ಳಿ ಪೊಲೀಸರು ಹಾಗೂ ಆಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಪ್ರಕರಣ ಸಂಬಂಧ ಬಿಸ್ಮಿಲ್ಲಾ ಟೀ ಪಾಯಿಂಟ್ ನಡೆಸುತ್ತಿದ್ದ ನವೀದ್ ಅಹ್ದದ್‍ಯನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮೋದಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದನ್ನು ಮರೆತುಬಿಡಿ: ಪ್ರಧಾನಿ

    ಮೋದಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದನ್ನು ಮರೆತುಬಿಡಿ: ಪ್ರಧಾನಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ವಾರಣಾಸಿಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ನಿಮ್ಮ ಅದ್ಭುತ ಸ್ವಾಗತಕ್ಕೆ ನಾನು ಕೃತಜ್ಞನಾಗಿದ್ದೇನೆ. ಗುರುವಾರ ನಡೆದ ರೋಡ್ ಶೋನಲ್ಲಿ ನಾನು ವಾರಣಾಸಿಯ ಪ್ರತಿ ನಿವಾಸಿಗಳನ್ನು ನನ್ನ ಕುಟುಂಬದವರಂತೆ ನೋಡಿದ್ದೇನೆ. ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ತಿರುಗುತ್ತಿದ್ದೇನೆ. ನಾನು, ಅಮಿತ್ ಶಾ ಹಾಗೂ ಯೋಗಿ ಅದಿತ್ಯಾನಾಥ್ ಈ ಪಕ್ಷದ ಕಾರ್ಯಕರ್ತರು ಎಂದರು.

    ನಾನು ಕಾರ್ಯಕರ್ತರನ್ನು ಭೇಟಿ ಮಾಡಲು ಎಂದಿಗೂ ನಿರಾಕರಿಸಿಲ್ಲ. ಅವರು ನನ್ನನ್ನು ಭೇಟಿ ಮಾಡಬೇಕು ಎಂದಾಗಲೆಲ್ಲಾ ನಾನು ಅವರನ್ನು ಭೇಟಿ ಮಾಡಿದ್ದೇನೆ. ನಾವು ಭಾರತದ ಚಿಕ್ಕ ಯೋಧರು. ದೇಶಕ್ಕಾಗಿ ಕೆಲಸ ಮಾಡಲು ನಾನು ಬಂದಿದ್ದೇನೆ. ಈ ಚುನಾವಣೆ ಮೋದಿ ಬಗ್ಗೆ ಅಲ್ಲ. ಈ ಚುನಾವಣೆ ಕಾರ್ಯಕರ್ತರದ್ದು. ಪ್ರತಿಯೊಂದು ಮತ ಇಲ್ಲಿ ಮುಖ್ಯವಾಗುತ್ತದೆ. ಮೋದಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬುದನ್ನು ಮರೆತುಬಿಡಿ. ಏಕೆಂದರೆ ಏನೇ ಆದರೂ ಗಂಗಾಮಾತೆ ಅದನ್ನು ನೋಡುತ್ತಿರುತ್ತಾಳೆ ಅಂದ್ರು.

    ಈ ರಾಷ್ಟ್ರೀಯ ಚುನಾವಣೆಯಲ್ಲಿ ಎರಡು ಅಂಶಗಳು ಇದೆ. ಮೊದಲು ವಾರಣಾಸಿಯಲ್ಲಿ ಗೆಲುವು ಸಾಧಿಸಬೇಕು. ನನಗೆ ಅನಿಸುತ್ತೆ ನಾವು ಈಗಾಗಲೇ ಇಲ್ಲಿ ಗೆದ್ದಿದ್ದೇವೆ. ಇದಕ್ಕೆ ರೋಡ್ ಶೋನಲ್ಲಿ ಇದ್ದ ಜನರೇ ಸಾಕ್ಷಿ. ಮತ್ತೊಂದು ಪ್ರಜಾಪ್ರಭುತ್ವದ ಗೆಲುವು ಆಗಬೇಕು. ಇಡೀ ಭಾರತ, ದೇಶಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ಹೇಳುತ್ತಿದೆ. ಸರ್ಕಾರ ಆಯ್ಕೆ ಮಾಡಿಕೊಳ್ಳುವುದು ಈ ದೇಶದ ಪ್ರಜೆಯ ಕೈಯಲ್ಲಿದೆ. ಆದರೆ ಸರ್ಕಾರ ನಡೆಸುವುದು ನಮ್ಮ ಜವಾಬ್ದಾರಿ ಎಂದರು.

    ಯಾವುದೇ ಮತಗಟ್ಟೆಯಲ್ಲಿ ನನ್ನ ಕಾರ್ಯಕರ್ತರು ಸೋಲು ಕಂಡರೆ ನಾನು ನನ್ನ ಗೆಲುವನ್ನು ಎಂಜಾಯ್ ಮಾಡುವುದಿಲ್ಲ. ಈಗ ಒಂದು ಮಂತ್ರ ಇರಬೇಕಿತ್ತು. ‘ಮೇರಾ ಬೂತ್, ಸಬ್‍ಸೇ ಮಜ್ಬೂತ್ (ನನ್ನ ಮತ, ನನ್ನ ಶಕ್ತಿ). ಎಲ್ಲ ವೋಟಿಂಗ್ ದಾಖಲೆಗಳನ್ನು ಮುರಿಯಬೇಕು ಎಂದು ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

    ನೀವು ಮೋದಿ ಅವರ ಸೈನಿಕ ಆಗಿದ್ದರೆ, ಟಿವಿಯಲ್ಲಿ ಕುಳಿತು ಡಿಬೇಟ್ ಮಾಡುವವರ ಮಾತುಗಳನ್ನು ಕೇಳಬೇಡಿ. ಏಕೆಂದರೆ ರಾಜಕೀಯಗಿಂತ ಸ್ನೇಹ, ಪ್ರೀತಿ ಮುಖ್ಯ. ಆದರೆ ಇದು ಈಗ ಕಾಣೆಯಾಗುತ್ತಿದೆ. ಹಾಗಾಗಿ ನಾವು ಅದನ್ನು ಮತ್ತೆ ವಾಪಸ್ ತರಬೇಕು. ಮೋದಿ ಬಗ್ಗೆ ಯಾರೇ ಏನೇ ಮಾತನಾಡಿದರೂ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದರು.

    ಖರ್ಚು ಹೇಗೆ ಕಡಿಮೆ ಮಾಡುವುದು ಎಂಬುದನ್ನು ನಾನು ಹೇಳುತ್ತೇನೆ. ಪ್ರತಿಯೊಂದು ಪಕ್ಷದ ಕಾರ್ಯಕರ್ತರು 10 ಕುಟುಂಬದ ಜವಾಬ್ದಾರಿ ತೆಗೆದುಕೊಂಡು ಅವರ ಮನೆಗೆ ಭೇಟಿ ಮಾಡಬೇಕು. ಆಗ ಅವರ ಜೊತೆ ತಿಂಡಿ ತಿನ್ನಬಹುದು, ಟೀ ಕುಡಿಯಬಹುದು. ಇದರಲ್ಲಿ ಯಾವುದೇ ಖರ್ಚು ಆಗುವುದಿಲ್ಲ ಹೊರತು ಕೇವಲ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಎಲ್ಲರೂ ಕೆಟ್ಟದನ್ನು ನಿರ್ಲಕ್ಷಿಸಿ ಎಂದರು. ಇದೇ ವೇಳೆ ಮೊದಲ ಬಾರಿಗೆ ಮತ ಹಾಕುವವರು ನಮೋ ಆ್ಯಪ್ ಓದಿ ಎಂದು ತಿಳಿಸಿದರು.

    ಪಕ್ಷದ ಕಾರ್ಯಕರ್ತರು ತಮ್ಮ ಮನೆಯಿಂದ ಹೊರ ಹೋಗುವಾಗ ನಾನು ಬಿಜೆಪಿಗೆ ಸೇವೆ ಸಲ್ಲಿಸಲು ಹೊರ ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ. ಅಲ್ಲದೆ ಒಂದು ವೇಳೆ ನಾನು ಜೀವಂತವಾಗಿ ಹಿಂತಿರುಗಲಿಲ್ಲ ಎಂದರೆ ನನ್ನ ತಮ್ಮನನ್ನು ನಾಳೆಯಿಂದ ಪಕ್ಷದ ಪರವಾಗಿ ಕೆಲಸ ಮಾಡಲು ಕಳುಹಿಸು ಎಂದು ಹೇಳುತ್ತಾರೆ. ಇದು ನಿಜವಾಗಿಯೂ ನಡೆದಿದೆ ಎಂದು ಮೋದಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

  • ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.

    ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.

    ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.

  • ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ – ಓರ್ವ ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

    ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ – ಓರ್ವ ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

    ಧಾರವಾಡ: ನಗರದಲ್ಲಿ ನೋಡನೋಡುತ್ತಿದ್ದಂತೆ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವನ್ನಪ್ಪಿ, 50ಕ್ಕೂ ಹೆಚ್ಚು ಕಾರ್ಮಿಕರು ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ನಗರದ ಕೆವಿಜಿ ಬ್ಯಾಂಕ್ ಬಳಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ಒಂದು ವರ್ಷದಿಂದ ನಡೆಯುತಿತ್ತು. ಇಂದು ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ ಏಕಾಏಕಿ ಕಟ್ಟಡ ಕುಸಿದಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.  ನಿರ್ಮಾಣದ ಕೆಲಸ ನಡೆಯುತ್ತಿದ್ದ ವೇಳೆಯಲ್ಲಿಯೇ ಸಂಪೂರ್ಣ ಕುಸಿದು ನೆಲಸಮವಾಗಿದೆ.

    ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜೊತೆ ಸ್ಥಳೀಯರು ಕೈಜೋಡಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಹೊರತೆಯಲು ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಘಟನೆಯಲ್ಲಿ ಗಾಯಗೊಂಡಿರುವ ಮಂದಿಯನ್ನು ಬಸ್ ಹಾಗೂ ಇತರೇ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿ ದೀಪಾ ಚೇಳನ್ ಅವರು ಖುದ್ದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಸದ್ಯ ಕಟ್ಟಡದಡಿಯಲ್ಲಿ ಸಿಲುಕಿದ್ದ 10- 15 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

  • ಪ್ರಧಾನಿ ಮೋದಿ ಆಯ್ತು ಈಗ ಬಿಎಸ್‍ವೈ ಹುಟ್ಟುಹಬ್ಬಕ್ಕೆ ಬಿಜೆಪಿ ಮುಖಂಡರಿಂದ ಪೌರ ಕಾರ್ಮಿಕರ ಪಾದ ಪೂಜೆ

    ಪ್ರಧಾನಿ ಮೋದಿ ಆಯ್ತು ಈಗ ಬಿಎಸ್‍ವೈ ಹುಟ್ಟುಹಬ್ಬಕ್ಕೆ ಬಿಜೆಪಿ ಮುಖಂಡರಿಂದ ಪೌರ ಕಾರ್ಮಿಕರ ಪಾದ ಪೂಜೆ

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಆಯ್ತು ಈಗ ಮಂಡ್ಯ ಬಿಜೆಪಿ ಮುಖಂಡರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮುಖಂಡರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ. ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ, ಶಿವಕುಮಾರ್ ಆರಾಧ್ಯ ಸೇರಿದಂತೆ ಇತರರು ಸುಮಾರು ಎಂಟು ಜನ ಪೌರಕಾರ್ಮಿಕರ ಪಾದ ತೊಳೆದು ಪೂಜೆ ಸಲ್ಲಿಸಿದ್ದಾರೆ. ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬಾ ದೇವಾಲಯದ ಆವರಣದಲ್ಲಿ ಈ ಪಾದ ಪೂಜೆ ನಡೆದಿದೆ. ಪಾದ ಪೂಜೆ ಬಳಿಕ ಪೌರ ಕಾರ್ಮಿಕರಿಗೆ ವಸ್ತ್ರ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದಪೂಜೆ – ವಿಡಿಯೋ ನೋಡಿ

    ಭಾನುವಾರ ಪ್ರಧಾನಿ ಮೋದಿ ಉತ್ತರಪ್ರದೇಶದ ಪ್ರಯಾಗ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹಣೆಗೆ ವಿಭೂತಿ ಹಚ್ಚಿಕೊಂಡು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಜನ ಪೌರಕಾರ್ಮಿಕರ ಪಾದಕ್ಕೆ ನೀರು ಹಾಕಿ ತೊಳೆದು, ಕರವಸ್ತ್ರದಿಂದ ಸ್ವಚ್ಛಗೊಳಿಸಿದ್ದರು. ಪಾದಪೂಜೆಯ ಬಳಿಕ ಅವರಿಗೆ ಶಾಲು ಹೊದಿಸಿ ಕೈಮುಗಿದು ಧನ್ಯವಾದ ತಿಳಿಸಿದ್ದರು. ಪಾದಪೂಜೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ತ್ರಿವೇಣಿ ಸಂಗಮಕ್ಕೆ ತೆರಳಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಬಳಿಕ ಸ್ವಚ್ಛ ಕುಂಭ್ – ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ದುರ್ಮರಣ- 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ದುರ್ಮರಣ- 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಗುವಾಹಟಿ: ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ಟೀ ಎಸ್ಟೇಟ್ ಕಾರ್ಮಿಕರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸಲ್ಮರಾ ಟೀ ಎಸ್ಟೇಟ್‍ನಲ್ಲಿ ಕಾರ್ಮಿಕರು ಕಳ್ಳಬಟ್ಟಿ ಸಾರಾಯಿ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಸ್ವಾಹಿದ್ ಕುಶಾಲ್ ಕೊನ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇವರೆಗೆ ಚಿಕಿತ್ಸೆ ಫಲಕಾರಿಯಾಗದೇ 80 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

    ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುವ ಅಸ್ವಸ್ಥ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜುಗಳ ವೈದ್ಯರು ಕೂಡ ಆಗಮಿಸುತ್ತಿದ್ದಾರೆ. ಈ ಕುರಿತು ಅಸ್ಸಾಂ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ಆಸ್ಪತ್ರೆಯಿಂದ ಪ್ರತಿ 10 ನಿಮಿಷಕ್ಕೊಮ್ಮೆ ನಾವು ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಅಸ್ಸಾಂನ ಗುವಾಹಟಿಯಲ್ಲಿಯಾದ ದುರಂತದಿಂದ ಬೇಸರವಾಗಿದೆ. ಮೃತರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಬೇಗನೇ ಚೇತರಿಸಿಕೊಳ್ಳಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ವೇಳೆ ಗೊಲ್ಘಾಟ್‍ನ ದ್ರೌಪದಿ ಓರನ್ (65) ಹಾಗೂ ಆಕೆಯ ಮಗ ಸಂಜು ಓರಾನ್ ಮನೆಯಲ್ಲಿ ಕಳ್ಳಬಟ್ಟಿಯನ್ನು ತಯಾರಿಸಲಾಗಿತ್ತು. ಅಲ್ಲದೆ ಈ ಘಟನೆಯಲ್ಲಿ ತಾಯಿ, ಮಗ ಇಬ್ಬರೂ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೋರ್ಹಟ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಮಿಕರಲ್ಲಿ 9 ಮಂದಿ ಮಹಿಳೆಯರು ಹಾಗೂ 11 ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಅವರ ವಾರದ ಸಂಬಳ ದೊರಕಿತ್ತು ಆದರಿಂದ ಅವರು ಮದ್ಯಪಾನ ಮಾಡಿದ್ದಾರೆ. ಆಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೃಹತ್ ಡ್ಯಾಮ್ ಒಡೆದು 110 ಮಂದಿ ಬಲಿ- ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

    ಬೃಹತ್ ಡ್ಯಾಮ್ ಒಡೆದು 110 ಮಂದಿ ಬಲಿ- ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

    ಬ್ರೆಜಿಲ್: ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಗಣಿಗಾರಿಕೆಯ ಅಣೆಕಟ್ಟು ಒಡೆದ ಪರಿಣಾಮ 110 ಮಂದಿ ಸಾವನ್ನಪ್ಪಿದ ಭಯಾನಕ ವಿಡಿಯೋ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.

    ಕಳೆದ ಜನವರಿ 25ರಂದು ಬ್ರೆಜಿಲ್‍ನ ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಕಬ್ಬಿಣದ ಗಣಿಗಾರಿಕಾ ಪ್ರದೇಶದ ಪಕ್ಕದಲ್ಲಿದ್ದ ಬೃಹತ್ ಅಣೆಕಟ್ಟು ಒಡೆದು ಹೋಗಿತ್ತು. ಈ ವೇಳೆ ಗಣಿಗಾರಿಕೆ ಪ್ರದೇಶಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಸ್ಥಳದಲ್ಲಿದ್ದ 110 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 238 ಮಂದಿ ಕಾಣೆಯಾಗಿದ್ದರು. ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ, ಡ್ಯಾಮ್ ಒಡೆದು ಗಣಿ ಪ್ರದೇಶಕ್ಕೆ ನೀರು ನುಗ್ಗಿದ ತಕ್ಷಣ ಸ್ಥಳದಲ್ಲಿದವರು ಪ್ರಾಣ ಉಳಿಸಿಕೊಳ್ಳು ಓಡುತ್ತಿರುವ ದೃಶ್ಯ ಹಾಗೂ ಕಾರು ಲಾರಿಗಳು ಸ್ಥಳದಿಂದ ದೂರ ಹೋಗಲು ಪ್ರಯತ್ನಿಸುತ್ತಿರುವ ದೃಶ್ಯಗಳು, ಅಲ್ಲದೆ ಏಕಾಏಕಿ ಡ್ಯಾಮ್ ನೀರು ಗಣಿ ಪ್ರದೇಶಕ್ಕೆ ನುಗ್ಗಿ, ಸಂಪೂರ್ಣ ಜಲಾವೃತವಾಗುತ್ತಿರುವ ದೃಶ್ಯ ಸೆರೆಯಾಗಿದೆ.

    ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದ್ದು, ಸದ್ಯ ಅದರ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮಧ್ಯಾಹ್ನದ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು 110 ಮಂದಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv