Tag: wild-buffalo

  • ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    – ಐದು ಜನರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲಿನ ಕ್ರೌರ್ಯ ಮರುಕಳಿಸಿದೆ. ಗರ್ಭಿಣಿ ಕಾಡು ಎಮ್ಮೆಯನ್ನು ಅಮಾನುಷವಾಗಿ ಬೇಟೆಯಾಡಿ ಕೊಲ್ಲಲಾಗಿದೆ.

    ಗರ್ಭಿಣಿ ಕಾಡು ಎಮ್ಮೆ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಈಗ ಐದು ಜನರನ್ನು ಬಂಧಿಸಿದೆ. ಆರೋಪಿಗಳನ್ನು ಪುಲ್ಲಾರ ಅಬು ಅಕಾ ನಾನಿಪ್ಪ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಎಂದು ಗುರುತಿಸಲಾಗಿದೆ.

    ಕಳೆದ ಎರಡು ತಿಂಗಳ ಹಿಂದೆ ಇದೇ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯನ್ನು ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಲಾಗಿತ್ತು. ಈಗ ನಿಲಾಂಬೂರ್ ದಕ್ಷಿಣ ಅರಣ್ಯ ವಿಭಾಗದ ಕಾಳಿಕಾವ್ ವ್ಯಾಪ್ತಿಯಲ್ಲಿರುವ ಚಕ್ಕಿಕುಜಿ ಅರಣ್ಯ ಕೇಂದ್ರದ ವ್ಯಾಪ್ತಿಯ ಪುಂಚ ಅರಣ್ಯದಲ್ಲಿ ಆರೋಪಿಗಳು ಕಾಡು ಎಮ್ಮೆಯನ್ನು ಬೇಟೆಯಾಡಿದ್ದಾರೆ ಎಂದು ವರದಿಯಾಗಿದೆ.

    ಆಗಸ್ಟ್ 10ರಂದು ರಾತ್ರಿ ನಡೆದ ದಾಳಿಯಲ್ಲಿ ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಯಿಂದ ಕಾಡು ಎಮ್ಮೆ ಮಾಂಸವನ್ನು ಪತ್ತೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಸುಮಾರು 25 ಕೆಜಿಗಳಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 200 ಕೆಜಿಗಳಷ್ಟು ಮಾಂಸ ಇತ್ತು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಎರಡು ತಲೆಬುರುಡೆ ಮತ್ತು ಇತರ ಕಾಡು ಎಮ್ಮೆಯ ಅವಶೇಷಗಳನ್ನು ಕಾಡಿನ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕಾಡು ಎಮ್ಮೆಯ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳನ್ನು ಇಂದು ಮಲಪ್ಪುರಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

  • ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    – ನಿಗೂಢವಾಗಿ ಉಳಿದ ಸಾವಿನ ಸರಣಿ
    – ಮನುಷ್ಯರಿಗೂ ರೋಗ ಭಾದಿಸುವ ಭಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ರಕ್ಷಿತ ಪ್ರದೇಶಗಳಲ್ಲಿ ಕಾಡುಕೋಣಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದು, ಕಾಡುಕೋಣಗಳಲ್ಲಿ ಸಾಂಕ್ರಾಮಿಕ ರೋಗದ ವಾಸನೆ ಹೊಡೆಯಲು ಆರಂಭವಾಗಿದೆ.

    ಕಳೆದ ಒಂದು ತಿಂಗಳಿಂದ 15 ಕಾಡುಕೋಣಗಳು ಸಾವನ್ನಪ್ಪಿವೆ. ಇದರಲ್ಲಿ ಈಗಾಗಲೇ ನಾಲ್ಕು ಕಾಡುಕೋಣಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅರಣ್ಯ ಇಲಾಖೆ ಮಾತ್ರ ದಾಖಲೆಯಲ್ಲಿ ಕೇವಲ ನಾಲ್ಕು ಕಾಡುಕೋಣಗಳು ಸಾವನ್ನಪ್ಪಿರುವ ಕುರಿತು ಉಲ್ಲೇಖಿಸಿದೆ.

    ಕಾಡುಕೋಣಗಳ ಕಳೆ ಬರಹಗಳು ಜೋಯಿಡಾ ಅರಣ್ಯ ಭಾಗವಾದಕಟ್ಟೆ, ಕೋಡುಗಾಳಿ, ಕಡಗರ್ಣಿ, ದಿಗಾಳಿ ಕಾಡಿನಲ್ಲಿ ಸಿಕ್ಕಿವೆ. ಇನ್ನು ಕುಂಬಾರವಾಡ, ಕ್ಯಾಸಲ್ ರಾಕ್ ಭಾಗದಲ್ಲಿಯೂ ಕಾಡುಕೋಣಗಳು ಅಸುನೀಗಿರುವ ಕುರಿತು ಸಂದೇಹಗಳು ವ್ಯಕ್ತವಾಗಿದೆ.

    ದಿಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ಡಾ.ವಿನಯ್ ನೇತ್ರತ್ವದಲ್ಲಿ ನಡೆಸಲಾಗಿದ್ದು, ಅಂಗಾಂಗ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

    ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮಂಗಗಳು ಕ್ಯಾಸನೂರು ಕಾಯಿಲೆಗೆ ತುತ್ತಾಗಿ ಹಲವು ಮಂಗಗಳು ಸಾವನ್ನಪ್ಪಿದ್ದವು. ಇದರಿಂದಾಗಿ ಮನುಷ್ಯನಿಗೂ ರೋಗಾಣುಗಳು ಪಸರಿಸಿ ಅನೇಕರು ಮಂಗನಕಾಯಿಲೆಗೆ ತುತ್ತಾಗಿದ್ದರು.

    ಈಗ ಕಾಡುಕೋಣಗಳು ಸರಣಿ ಸಾವನ್ನಪ್ಪುತಿದ್ದು, ಮೊದಲು ನೀರಿನ ಕೊರತೆ ಎನ್ನಲಾಗಿತ್ತು. ಆದರೆ ಕಾಡುಕೋಣಗಳ ಕಳೇಬರಹ ಸಿಕ್ಕ ಸುತ್ತಮುತ್ತ ಅರಣ್ಯ ಇಲಾಖೆ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು ಹಾಗೂ ಹೇಳುವಂತಹ ಸಮಸ್ಯೆ ಕೂಡ ಇರಲಿಲ್ಲ. ಆದರೂ ಕಾಡುಕೋಣಗಳು ಸಾಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಯಾವುದೋ ಸಾಂಕ್ರಾಮಿಕ ರೋಗದಿಂದ ಸತ್ತಿರಬಹುದೇ ಎಂಬ ಅನುಮಾನ ಮೂಡತೊಡಗಿದೆ.

    ಸಾವುಕಂಡ ಕಾಡುಕೋಣದ ಗಂಟಲು ಹಾಗೂ ದೇಹದ ಒಳಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗ ಭಾದಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಾಡುಕೋಣದ ಮರಣೋತ್ತರ ಪರೀಕ್ಷೆಯಿಂದ ವಿಷಯ ಬಹಿರಂಗಗೊಳ್ಳಬೇಕಿದೆ.

  • ಬೃಹತ್ ಕೋಣ ಕಂಡು ಭಯಗೊಂಡ ಜನ!

    ಬೃಹತ್ ಕೋಣ ಕಂಡು ಭಯಗೊಂಡ ಜನ!

    ಚಿಕ್ಕಮಗಳೂರು: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡುಕೋಣಗಳು ಹಾಗೂ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಜನಸಾಮಾನ್ಯರು ಕೂಲಿ ಕಾರ್ಮಿಕರು ಆತಂಕದಲ್ಲಿ ಬದುಕುವಂತಾಗಿದೆ.

    ಭಾನುವಾರ ಕೂಡ ಮೂಡಿಗೆರೆ ತಾಲೂಕಿನ ದುಂಡುಗ ಎಂಬ ಗ್ರಾಮದಲ್ಲಿ ಪ್ರಮೋದ್ ಎಂಬವರ ಕಾಫಿತೋಟದಲ್ಲಿ ಬೃಹತ್ ಕಾಡುಕೋಣ ಕಾಣಿಸಿಕೊಂಡಿದೆ. ತೋಟದ ಕೂಲಿ ಕಾರ್ಮಿಕರು ಹಾಗೂ ಮಾಲೀಕರು ಗಾಬರಿಗೊಂಡಿದ್ದಾರೆ. ಕಾಡು ಕೋಣಗಳು ಹೆಚ್ಚಾಗಿ ಕಾಫಿತೋಟದೊಳಗೆ ಕಾಣಿಸಿಕೊಳ್ಳುತ್ತಿರುವುದರಿಂದ ತೋಟದ ಕಾರ್ಮಿಕರು ಮತ್ತುಷ್ಟು ಆತಂಕದಲ್ಲಿ ಬದುಕುತ್ತಿದ್ದಾರೆ.

    ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆಗಾಗಾ ಕಾಡುಕೋಣ ಹಾಗೂ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಮಲೆನಾಡಿಗರು ಜೀವಭಯದಲ್ಲಿ ಬದುಕುತ್ತಿದ್ದಾರೆ.

    ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv