Tag: wellesley Bridge

  • ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟಿನಿಂದ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದೆ.

    ವೆಲ್ಲೆಸ್ಲಿ ಸೇತುವೆ ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಇತಿಹಾಸ ಪ್ರಸಿದ್ಧವಾದ ಈ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆಯ ಅಕ್ಕ ಪಕ್ಕ ಇರುವ ತೋಟಗಳು ಸಂಪೂರ್ಣ ಜಲಾವೃತವಾಗಿದೆ.

    ತೆಂಗಿನ ಮರದ ಅರ್ಧದವರೆಗೂ ನೀರು ಆವರಿಸಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ವೆಲ್ಲೆಸ್ಲಿ ಸೇತುವೆ ಬಳಿ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಕೆ.ಆರ್.ಎಸ್ ನಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ವೆಲ್ಲಿಸ್ಲಿ ಸೇತುವೆ ಬಳಿಯಿರುವ ರಾಮಕೃಷ್ಣ ಮಠ ಕೂಡ ಜಲಾವೃತವಾಗಿದೆ.

    ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ 118.75 ಅಡಿ ಇದೆ. 1,87,721 ಕ್ಯೂಸೆಕ್ ಒಳಹರಿವು ಇದ್ದರೆ 1,19,997 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಎತ್ತರದ ಡ್ಯಾಂನಲ್ಲಿ ಪ್ರಸ್ತುತ 41.484 ಟಿಎಂಸಿ ನೀರು ಸಂಗ್ರಹಗೊಂಡಿದೆ.

  • ಕೆಆರ್‌ಎಸ್‌ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ- ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿ

    ಕೆಆರ್‌ಎಸ್‌ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ- ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿ

    ಮಂಡ್ಯ: ಕೆಆರ್‌ಎಸ್‌ ನಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್‍ಗೂ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಐತಿಹಾಸಿ ವೆಲ್ಲೆಸ್ಲಿ ಸೇತುವೆಯನ್ನು ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ಸೇತುವೆ ಮುಳುಗುವ ಭೀತಿಯಲ್ಲಿದೆ.

    ಪರಿಣಾಮ ಜಾಗೃತರಾದ ಅಧಿಕಾರಿಗಳು ಹಾಗೂ ಪೊಲೀಸರು ಸೇತುವೆಯ ಎರಡೂ ಬದಿ ಕಾವಲು ನಿಂತು ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ. ಇತ್ತ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿ ಪಕ್ಷಿ ಸಂಕುಲಕ್ಕೆ ಆತಂಕ ಎದುರಾಗಿದೆ.

    ಕಾವೇರಿ ಜಲಾನಯನದಲ್ಲಿ ಮಳೆ ಆರ್ಭಟಿಸುತ್ತಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಅಪಾಯದ ಮಟ್ಟ ಮೀರುತ್ತಿದ್ದು, ಅನಿವಾರ್ಯವಾಗಿ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಬೇಕಾಗಿದೆ. ಇದರಿಂದಾಗಿ ಕಾವೇರಿ ನದಿಪಾತ್ರದ ದೇವಾಲಯ, ಜಮೀನು ಜಲಾವೃತವಾಗಿ ಪ್ರವಾಹದ ಭೀತಿ ಎದುರಾಗಿದೆ.

    ಪಶ್ಚಿಮವಾಹಿನಿ ಬಳಿ ಶ್ರೀರಾಮ, ಶ್ರೀಕೃಷ್ಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಜಲಾವೃತವಾಗಿದೆ. ನಿಮಿಷಾಂಭ ದೇವಾಲಯದ ಮೆಟ್ಟಿಲುಗಳವರೆಗೂ ನೀರು ಆವರಿಸಿಕೊಂಡಿದೆ. ಇತ್ತ ಪ್ರವಾಹ ಮಟ್ಟ ಹೆಚ್ಚಾಗಿದ್ದರಿಂದ ನದಿಗೆ ಇಳಿಯದಂತೆ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ನಿಂತಿದ್ದಾರೆ.

    ಕಾವೇರಿ ನದಿ ಪಾತ್ರದ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ರಂಗನತಿಟ್ಟು, ಮುತ್ತತ್ತಿ ಸೇರಿದಂತೆ ಹಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೆಆರ್‌ಎಸ್‌ ಜಲಾಶಯ ತುಂಬದೆ ಸತತ ಬರಗಾಲದಿಂದ ಕಂಗೆಟ್ಟ ಮಂಡ್ಯ ಜನ ಇದೀಗ ಕಾವೇರಿ ನದಿ ಹರಿಯುತ್ತಿರುವ ರಭಸಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಪ್ರವಾಹದ ಭೀತಿ ಎದುರಾಗಿದ್ದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಗೆ ನೀಡಲಾಗಿದೆ. ಸ್ವತಃ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಕಾವೇರಿ ನದಿ ಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv