Tag: Water dispute

  • ಜಲ ವಿವಾದ ಬಗೆಹರಿಸಲು ಪಾಕಿಸ್ತಾನದ ನಿಯೋಗ ಭಾರತಕ್ಕೆ ಭೇಟಿ

    ಇಸ್ಲಾಮಾಬಾದ್: ಉಭಯ ದೇಶಗಳ ನಡುವಿನ ಜಲ ವಿವಾದದ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ನಿಯೋಗದ 5 ಸದಸ್ಯರು ಮೇ 30-31 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸಿಂಧೂ ನದಿ ವಿವಾದವನ್ನು ಬಗೆಹರಿಸುವ ಬಗ್ಗೆ ಮೇ 30 ಹಾಗೂ 31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ಕಮಿಷನರ್ ಸೈಯದ್ ಮಹಮ್ಮದ್ ಮೆಹರ್ ಅಲಿ ಷಾ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ – 7 ಪಾಸಿಟಿವ್

    ಪಾಕಿಸ್ತಾನದ ನಿಯೋಗ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವಾಸ ಮಾಡಲಿದ್ದು, ಭಾರತದೊಂದಿಗಿನ ಮಾತುಕತೆಯಲ್ಲಿ ಪ್ರವಾಹ ಮುನ್ಸೂಚನೆಯ ದತ್ತಾಂಶವನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಪಿಸಿಐಡಬ್ಲ್ಯು(ಸಿಂಧೂ ನೀರಿನ ಪಾಕಿಸ್ತಾನದ ಆಯುಕ್ತ)ವಿನ ವಾರ್ಷಿಕ ವರದಿಯನ್ನು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ

    ಮಾರ್ಚ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸಿಂಧೂ ಜಲ ಒಪ್ಪಂದವನ್ನು ಅದರ ನೈಜ ಸ್ಫೂರ್ತಿಯೊಂದಿಗೆ ಕಾರ್ಯಗತಗೊಳಿಸುವ ಬದ್ಧತೆ ಬಗ್ಗೆ ಮತ್ತೆ ಪ್ರಸ್ತಾಪ ನಡೆಸಿತ್ತು. ಈ ಬಗ್ಗೆ ಖಾಯಂ ಸಿಂಧೂ ಆಯೋಗ ಮುಂದಿನ ಸಭೆಯನ್ನು ಭಾರತದಲ್ಲಿ ನಡೆಸುವ ಬಗ್ಗೆ ಭರವಸೆ ನೀಡಿತ್ತು.

  • ಜಲಸಂಪನ್ಮೂಲ ಖಾತೆ ಸಚಿವರಿದ್ದೂ, ಜಲ ವಿವಾದಗಳನ್ನ ನಿಭಾಯಿಸುವ ಹೊಣೆ ಬೊಮ್ಮಾಯಿ ಹೆಗಲಿಗೆ ಹಾಕಿದ್ರಾ ಸಿಎಂ?

    ಜಲಸಂಪನ್ಮೂಲ ಖಾತೆ ಸಚಿವರಿದ್ದೂ, ಜಲ ವಿವಾದಗಳನ್ನ ನಿಭಾಯಿಸುವ ಹೊಣೆ ಬೊಮ್ಮಾಯಿ ಹೆಗಲಿಗೆ ಹಾಕಿದ್ರಾ ಸಿಎಂ?

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜಲ ವಿವಾದಗಳನ್ನು ನಿಭಾಯಿಸುವ ಜವಾಬ್ದಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದ್ರಾ? ಇಂಥದ್ದೊಂದು ಪ್ರಶ್ನೆ ಈಗ ಸರ್ಕಾರದ ಮಟ್ಟದಲ್ಲಿ ಎದ್ದಿದೆ.

    ಮಹದಾಯಿ ಕುರಿತ ನ್ಯಾಯಾಧೀಕರಣದ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರು ಇಂದು ತಮ್ಮ ಧವಳಗಿರಿ ನಿವಾಸದಲ್ಲಿ ನಡೆಸಿದ ಸಭೆಯೇ ಈ ಪ್ರಶ್ನೆ ಎದ್ದೇಳಲು ಕಾರಣವಾಗಿದೆ. ಇಷ್ಟು ದಿನ ಜಲಸಂಪನ್ಮೂಲ ಇಲಾಖೆಗೆ ಪ್ರತ್ಯೇಕ ಸಚಿವರು ಇರಲಿಲ್ಲ. ಆದರೆ ಈಗ ಗೋಕಾಕ್ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಇಲಾಖೆಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಇಲಾಖೆಯ ಹೊಣೆ ಹೊತ್ತುಕೊಂಡ ಬಳಿಕ ಮಹದಾಯಿ ತೀರ್ಪಿನ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.

    ಕಳೆದ ಗುರುವಾರ ಸುಪ್ರೀಂಕೋರ್ಟ್ ನಿಂದ ಈ ಕುರಿತು ಮಧ್ಯಂತರ ಆದೇಶ ಬಂದ ಹಿನ್ನೆಲೆಯಲ್ಲಿ ಇವತ್ತು ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಹಾಗೂ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು. ಆದರೆ ಬೆಳಗಾವಿಯಲ್ಲಿರುವ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಸಭೆಗೆ ಆಗಮಿಸಿರಲಿಲ್ಲ.

    ಹಾಲಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಬದಲು ಗೃಹ ಸಚಿವ ಬೊಮ್ಮಾಯಿ ಜೊತೆ ಮಹದಾಯಿ ವಿಚಾರವನ್ನು ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಮಹದಾಯಿ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವಗಿಂತಲೂ ಬಸವರಾಜ್ ಬೊಮ್ಮಾಯಿ ಅವರಿಗೆ ಹೆಚ್ಚು ಆದ್ಯತೆ ಕೊಟ್ರಾ ಸಿಎಂ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    ಸಿಎಂ ಯಡಿಯೂರಪ್ಪ ಅವರು ಕೆಲ ತಿಂಗಳ ಹಿಂದೆಯೂ ಮಹಾರಾಷ್ಟ್ರಕ್ಕೆ ಹೋಗಿದ್ದಾಗಲೂ ಬಸವರಾಜ್ ಬೊಮ್ಮಾಯಿ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದರು. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದಾಗಲೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಎಂ ಜತೆಯೆ ಇದ್ದರು. ಆ ನಂತರ ಮಹದಾಯಿ ಕುರಿತು ಏನೇ ಸಮಸ್ಯೆಗಳು ಉಂಟಾದಾಗ ಅದನ್ನು ಬೊಮ್ಮಾಯಿ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದರು. ಇದೀಗ ಕೇಂದ್ರದ ಗೆಜೆಟ್ ನೊಟಿಫಿಕೇಶನ್ ಹೊರಡಿಸುವ ಬಗ್ಗೆಯೂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸಿಎಂ ಚರ್ಚಿಸಿದ್ದಾರೆ. ಹೀಗಾಗಿ ಜಲವಿವಾದಗಳನ್ನು ನಿಭಾಯಿಸಲು ನೀರಾವರಿ ಕ್ಷೇತ್ರದ ಆಳ-ಅಗಲಗಳನ್ನು ಅರ್ಥ ಮಾಡಿಕೊಂಡಿರುವ, ಜಲ ವಿವಾದಗಳ ಕುರಿತು ಪರಿಣಿತರಾಗಿರುವ ಬಸವರಾಜ್ ಬೊಮ್ಮಾಯಿ ಅವರೇ ಸೂಕ್ತ ಅನ್ನುವ ತೀರ್ಮಾನಕ್ಕೆ ಸಿಎಂ ಯಡಿಯೂರಪ್ಪ ಬಂದ್ರಾ ಎನ್ನುವ ಪ್ರಶ್ನೆ ಎದ್ದಿದೆ.

    ಸಭೆಯಲ್ಲಿ ಏನು ಚರ್ಚೆಯಾಯ್ತು?
    ಮಹದಾಯಿ ನೀರು ಹಂಚಿಕೆ ಬಗ್ಗೆ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ವಿಚಾರವಾಗಿ ಸಿಎಂ ಸಭೆಯಲ್ಲಿ ಚರ್ಚಿಸಲಾಯ್ತು. ಕಳೆದ ವಾರ ಕೇಂದ್ರದ ಗೆಜೆಟ್ ನೋಟಿಫಿಕೇಷನ್‍ಗೆ ಸುಪ್ರೀಂಕೋರ್ಟ್ ಸಮ್ಮತ ಕೊಟ್ಟಿತ್ತು. ಆದರೆ ಈ ನಿಟ್ಟಿನಲ್ಲಿ ಕೇಂದ್ರದಿಂದ ಪ್ರಕ್ರಿಯೆ ನಡೆಯುತ್ತಿರುವ ಸುಳಿವು ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಸಂಬಂಧ ಕೇಂದ್ರದ ಮೇಲೆ ಒತ್ತಾಯ ಹಾಕುವ ಬಗ್ಗೆ ಸಿಎಂ – ಬೊಮ್ಮಾಯಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು, ಸಾಧ್ಯವಾದರೆ ಮುಂದಿನ ವಾರ ದೆಹಲಿಗೆ ಒಂದು ನಿಯೋಗ ಕೊಂಡೊಯ್ದು ಕೇಂದ್ರದ ಜತೆ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    – ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆಯಲ್ಲಿ ಬದಲಾವಣೆ
    – ಹಿರಿಯ ವಕೀಲರಿಂದ ಅಸಮಾಧಾನ

    ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ನದಿ ನೀರಿನ ವಿಚಾರದಲ್ಲೂ ರಾಜಕೀಯ ಬೇಕಿತ್ತಾ? ನೆಲ-ಜಲಕ್ಕಿಂತ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಮುಖ್ಯವಾಯಿತೇ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಜಲ ವಿವಾದ ಸಂಬಂಧ ಹಲವು ವರ್ಷಗಳಿಂದ ಕರ್ನಾಟಕ ಪರ ವಾದ ಮಂಡಿಸುತ್ತಿದ್ದ 8 ವಕೀಲರನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವ ನಡೆಯಿಂದಾಗಿ ಈ ಪ್ರಶ್ನೆ ಎದ್ದಿದೆ.

    ಕೃಷ್ಣಾ, ಮಹದಾಯಿ ಹಾಗೂ ಕಾವೇರಿ ವಿವಾದದಲ್ಲಿ ರಾಜ್ಯದ ಪರ ವರ್ಷಗಳಿಂದ ವಾದ ಮಂಡಿಸುತ್ತಿದ್ದ ವಕೀಲರನ್ನು ಎತ್ತಂಗಡಿ ಮಾಡಲಾಗಿದೆ. ಯಾವುದೇ ಚರ್ಚೆ ನಡೆಸದೇ 8 ಜನ ವಕೀಲರನ್ನು ಕೈಬಿಟ್ಟು ಬೆಂಗಳೂರಿಂದ ಇಬ್ಬರು ವಕೀಲರ ನೇಮಕ ಮಾಡಲಾಗಿದೆ. ರಾಜ್ಯದ ಸರ್ಕಾರದ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಅವರನ್ನು ಮಾತ್ರ ಮುಂದುವರಿಸಲಾಗಿದೆ. ಆದರೆ ಸರ್ಕಾರ ದೀಢಿರ್ ಎಂಬಂತೆ ವಕೀಲರನ್ನು ಬದಲಿಸಿ, ಬೆಂಗಳೂರಿನ ಅಶ್ವಿನ್ ಚಿಕ್ಕಮಠ, ರಾಜೇಶ್ವರ್ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.

    ಈ ಹಂತದಲ್ಲಿ ವಕೀಲರ ಬದಲಾವಣೆ ಬೇಕಿತ್ತಾ? ಜಲ ವಿವಾದದಲ್ಲಿ ವಕೀಲರ ಬದಲಾವಣೆ ಪ್ರಯೋಗ ಬೇಕಿತ್ತಾ? ಹಾಗೂ ಯಾರೊಂದಿಗೂ ಚರ್ಚಿಸದೇ ಸರ್ಕಾರ ನಿರ್ಧಾರ ಸರೀನಾ ಎನ್ನುವ ಪ್ರಶ್ನೆ ಶುರುವಾಗಿದೆ.

    ಯಾರಿಗೆ ಕೊಕ್?:
    ಕೃಷ್ಣಾ ನದಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರಾದ ಕನ್ನಡಿಗರಾದ ಶರತ್ ಜವಳಿ, ಉತ್ತರ ಭಾರತ ಮೂಲದ ಅಂಕೋಲೆಕರ್, ಅಜೀಂ ಕಾಳೆಬುದ್ದಿ ಹಾಗೂ ರಣವೀರ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ. ಮಹದಾಯಿ ವ್ಯಾಜ್ಯದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿದ್ದ ವಕೀಲರಾದ ಬೆಳಗಾವಿ ಮೂಲದ ಎಂ.ಬಿ ಜಿರಳಿ, ಮಂಗಳೂರು ಮೂಲದ ಅನಿತಾ ಶಣೈ ಮತ್ತು ಉತ್ತರ ಭಾರತ ಮೂಲದ ಥಾಸಿ ವಿಶ್ವೇಶ್ವರ್ ಅವರಿಗೆ ಗೇಟ್‍ಪಾಸ್ ನೀಡಲಾಗಿದೆ.

    ಕಾವೇರಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ಕೊಡಗು ಮೂಲದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ, ವಕೀಲರಾದ ಕನ್ನಡಿಗ ಶರತ್ ಜವಳಿ, ಉತ್ತರಭಾರತ ಮೂಲದ ಅಜೀಂ ಕಾಳೆಬುದ್ದಿ ಅವರನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

    ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆ ವೇಳೆ ರಾಜ್ಯ ಸರ್ಕಾರ ನಿರ್ಧಾರ ಸರಿಯಲ್ಲ. ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15ಕ್ಕೆ ನಡೆಯಲಿದೆ. ಹಲವು ವರ್ಷಗಳಿಂದ ಕೆಲಸ ಮಾಡಿದರೂ ಏಕಾಏಕಿ ತೆಗೆದರೆ ಅಂತಿಮ ವಿಚಾರಣೆಗೆ ತೊಂದರೆ ಆಗಬಹುದು. ಮುಖ್ಯಮಂತ್ರಿ, ಜಲ ಸಂಪನ್ಮೂಲ ಇಲಾಖೆಯಿಂದ ಯಾವುದೇ ಸಭೆಗಳನ್ನು ಮಾಡುತ್ತಿಲ್ಲ. ಹೀಗಾಗಿ ಪೂರ್ಣ ಬೆಂಬಲ ಸಿಗುತ್ತಿಲ್ಲ ಎಂದು ಹಿರಿಯ ವಕೀಲರು ಅಸಮಾಧಾನ ಹೊರ ಹಾಕಿದ್ದಾರೆ.

    ಕಿರಿಯ ವಕೀಲರ ಕೈಬಿಟ್ಟ ವಿಚಾರವಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪ್ರತಿಕ್ರಿಯಿಸಿ, ಜಲವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಹಿರಿಯ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಮುಂದುವರಿಯಲಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ನದಿ ವಿಚಾರಕ್ಕೆ ಸಂಬಂಧಿಸಿದಂತೆ ಎಂದಿನಂತೆ ಕರ್ನಾಟಕದ ವಾದ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.