Tag: Wasim Jaffer

  • ವಾಸಿಮ್ ಜಾಫರ್ ತಂಡದಲ್ಲಿ ಧೋನಿಯೇ ಕ್ಯಾಪ್ಟನ್, ಕೀಪರ್

    ವಾಸಿಮ್ ಜಾಫರ್ ತಂಡದಲ್ಲಿ ಧೋನಿಯೇ ಕ್ಯಾಪ್ಟನ್, ಕೀಪರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ತಂಡವೊಂದನ್ನು ರಚಿಸಿದ್ದು, ಅದರಲ್ಲಿ ಎಂ.ಎಸ್.ಧೋನಿ ಅವರೇ ನಾಯಕ, ವಿಕೆಟ್ ಕೀಪರ್ ಆಗಿದ್ದಾರೆ.

    ಹೌದು. ವಾಸಿಮ್ ಜಾಫರ್ ತಮ್ಮ ಸಾರ್ವಕಾಲಿಕ ಏಕದಿನ ತಂಡವನ್ನು ಶನಿವಾರ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಯಕ ಸ್ಥಾನ ನೀಡಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಓಪನರ್ ಆಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ನಲ್ಲಿ ಇರಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆಸ್ಟ್ರೇಲಿಯಾಕ್ಕೆ 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ತಂದುಕೊಟ್ಟ ರಿಕಿ ಪಾಂಟಿಂಗ್ ಅವರಿಗೆ ಜಾಫರ್ ತಮ್ಮ ತಂಡದಲ್ಲಿ 12ನೇ ಸ್ಥಾನ ನೀಡಿದ್ದಾರೆ.

    ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚಡ್ರ್ಸ್ ಜಾಫರ್ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 5ನೇ ಸ್ಥಾನದಲ್ಲಿದ್ದರೆ ಮತ್ತು ಇಂಗ್ಲೆಂಡ್ ಆಲೌರೌಂಡರ್ ಬೆನ್ ಸ್ಟೋಕ್ಸ್ ಆರನೇ ಸ್ಥಾನದಲ್ಲಿದ್ದಾರೆ.

    ಒಬ್ಬ ಭಾರತೀಯ ಬೌಲರ್‌ಗೂ ಜಾಫರ್ ತಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರನ್ನು ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೇಗದ ಬೌಲರ್‌ಗಳಲ್ಲಿ ವಿಂಡೀಸ್‍ನ ಜೊವಾನ್ನೆ ಗಾರ್ನರ್, ಪಾಕಿಸ್ತಾನದ ದಂತಕಥೆ ವಾಸಿಮ್ ಅಕ್ರಮ್ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮೆಕ್‍ಗ್ರಾತ್ ಸೇರಿದ್ದಾರೆ.

    ಧೋನಿ ನಾಯಕತ್ವ ಯಾಕೆ?:
    ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಅವರು ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದರು. ಧೋನಿ ಭಾರತದ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ಭಾರತ ತಂಡವು 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇದೇ ಕಾರಣಕ್ಕೆ ಧೋನಿ ಅವರನ್ನೇ ವಾಸಿಮ್ ಜಾಫರ್ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ದೇಶೀಯ ಕ್ರಿಕೆಟ್‍ನಲ್ಲಿ ಜಾಫರ್ ರನ್ ಮಳೆ:
    ವಾಸಿಮ್ ಜಾಫರ್ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ರಣಜಿಯಲ್ಲಿ 12,038 ರನ್, ಇರಾನಿ ಟ್ರೋಫಿಯಲ್ಲಿ 1,294 ರನ್ ಮತ್ತು ದುಲೀಪ್ ಟ್ರೋಫಿಯಲ್ಲಿ 2,545 ರನ್ ಗಳಿಸಿದ್ದಾರೆ. ಅವರು ಅತಿ ಹೆಚ್ಚು 156 ರಣಜಿ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. ಜಾಫರ್ ಮುಂಬೈ ತಂಡಕ್ಕೆ ಎರಡು ಬಾರಿ ರಣಜಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಜೊತೆಗೆ ಎರಡು ಬಾರಿ ರಣಜಿ ಪ್ರಶಸ್ತಿಯನ್ನು ಗೆದ್ದ ವಿದರ್ಭ ತಂಡದ ಸದಸ್ಯರಾಗಿದ್ದರು. ವಿಶೇಷವೆಂದರೆ ರಣಜಿಯಲ್ಲಿ 12 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಜಾಫರ್ ಪಡೆದುಕೊಂಡಿದ್ದಾರೆ.

  • ಕ್ರಿಕೆಟ್‍ನಿಂದ 30 ಲಕ್ಷ ದುಡಿಯಬೇಕೆಂದಿದ್ದ ಎಂಎಸ್‍ಡಿ – ಜಾಫರ್ ಬಿಚ್ಚಿಟ್ಟ ಧೋನಿ ಕಥೆ

    ಕ್ರಿಕೆಟ್‍ನಿಂದ 30 ಲಕ್ಷ ದುಡಿಯಬೇಕೆಂದಿದ್ದ ಎಂಎಸ್‍ಡಿ – ಜಾಫರ್ ಬಿಚ್ಚಿಟ್ಟ ಧೋನಿ ಕಥೆ

    – ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಬಯಸಿದ್ದ ಕ್ಯಾಪ್ಟನ್ ಕೂಲ್

    ನವದೆಹಲಿ: ಇಂದು ಕ್ರಿಕೆಟ್ ಜಗತ್ತಿನ ಶ್ರೀಮಂತ ಆಟಗಾರನಾಗಿರುವ ಧೋನಿ ಅವರು, ಅದೊಂದು ದಿನ ಕ್ರಿಕೆಟ್ ಆಡಿ ಕೇವಲ 30 ಲಕ್ಷ ದುಡಿಯಬೇಕು ಎಂಬ ಆಸೆಯನ್ನು ಹೊಂದಿದ್ದರು ಎಂದು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ತಿಳಿಸಿದ್ದಾರೆ.

    ಎಂಎಸ್ ಧೋನಿ ಸುಮಾರು ಎಂಟು ತಿಂಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಿದ್ದರೂ, ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿ ಮುಂದುವರೆದಿದ್ದಾರೆ. ಕ್ಯಾಪ್ಟನ್ ಕೂಲ್ ಆಗಿ ಮಿಂಚಿ ಭಾರತಕ್ಕೆ ಮೂರು ಐಸಿಸಿ ಪ್ರಶಸ್ತಿ ತಂದು ಕೊಟ್ಟಿದ್ದ ಧೋನಿ, ಒಂದು ಕಾಲದಲ್ಲಿ ಕ್ರಿಕೆಟ್ ಆಡಿ 30 ಲಕ್ಷ ಸಂಪಾದಿಸಿ ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಬಯಸಿದ್ದರು ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.

    ಕೊರೊನಾದಿಂದ ದೇಶ ಲಾಕ್‍ಡೌನ್ ಆಗಿದ್ದು, 60 ವರ್ಷದ ಬಳಿಕ ಕ್ರಿಕೆಟ್ ತನ್ನ ಎಲ್ಲಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಕ್ರಿಕೆಟ್‍ನಿಂದ ಬ್ರೇಕ್ ಪಡೆದ ಆಟಗಾರರು ಮನೆಯಲ್ಲೇ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಾಗೇಯೆ ಮನೆಯಲ್ಲೇ ಕುಳಿತಿರುವ ವಾಸಿಮ್ ಜಾಫರ್ ಅವರು, ಒಂದು ಟ್ವೀಟ್ ಮಾಡಿದ್ದು, ಹೆಲೋ ಗೆಳೆಯರೇ ಇಂದು ನೀವು ನನ್ನನ್ನು ಏನಾದರೂ ಪ್ರಶ್ನೆ ಕೇಳಲು ಬಯಸಿದ್ದರೆ ಕೇಳಬಹುದು ನಾನು ಅದಕ್ಕೆ ಪ್ರಾಮಾಣಿಕ ಉತ್ತರ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಕೆಲವರು, ನಿಮ್ಮ ಬಾಲ್ಯದ ನೆಚ್ಚಿನ ನಾಯಕ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಜಾಫರ್ ನನ್ನ ಬಾಲ್ಯದ ನೆಚ್ಚಿನ ನಾಯಕ ಸಚಿನ್ ತೆಂಡೂಲ್ಕರ್ ಎಂದು ಹೇಳಿದ್ದಾರೆ. ಹಾಗೂ ಕೊಹ್ಲಿ, ಸ್ಮಿತ್ ಮತ್ತು ರೂಟ್ ಈ ಮೂವರಲ್ಲಿ ನನಗೆ ಕೊಹ್ಲಿ ಇಷ್ಟ ಎಂದು ಕೂಡ ಹೇಳಿದ್ದಾರೆ. ಇದರ ನಡುವೆ ಧೋನಿ ಅಭಿಮಾನಿಯೊಬ್ಬ ಧೋನಿ ಅವರ ಜೊತೆಗಿನ ನಿಮ್ಮ ನೆನಪನ್ನು ನಮ್ಮ ಜೊತೆ ಹಂಚಿಕೊಳ್ಳಿ ಎಂದು ಹೇಳಿದ್ದಾನೆ.

    ಧೋನಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಜಾಫರ್, ಧೋನಿ ಅವರು ಅಂತರಾಷ್ಟ್ರೀಯ ಭಾರತ ತಂಡವನ್ನು ಸೇರಿದ ಮೊದಲ ವರ್ಷವೋ ಅಥವಾ ಎರಡನೇ ವರ್ಷವೋ, ಅವರು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ಅವರು ಕ್ರಿಕೆಟ್ ಆಡಿ 30 ಲಕ್ಷವನ್ನು ಗಳಿಸಿ ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಅವರು ಬಯಸಿದ್ದರು ಎಂದು ಉತ್ತರಿಸಿದ್ದಾರೆ. ಈ ಮೂಲಕ ಧೋನಿಯವರ ಹಳೇಯ ಆಸೆಯೊಂದನ್ನು ತೆರೆದಿಟ್ಟಿದ್ದಾರೆ.

    ಕೊನೆಯದಾಗಿ 2019ರ ಜುಲೈನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಪರ ಆಡಿದ್ದ ಧೋನಿ, ಮಾರ್ಚ್ 29ರಂದು ಪ್ರಾರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡಬೇಕಿತ್ತು. ಇದಕ್ಕಾಗಿ ತರಬೇತಿಯನ್ನು ಸಹ ಧೋನಿ ಅವರು ಶುರು ಮಾಡಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಐಪಿಎಲ್ ಮುಂದೂಡಲಾಗಿದೆ.

    ವಿಶ್ವಕಪ್ ಸೈಮಿಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿ, ನಂತರ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿದ್ದರು. ಇದಾದ ನಂತರ ಅವರು ಚೆನ್ನೈಗೆ ಬಂದು ಐಪಿಎಲ್‍ಗಾಗಿ ರೈನಾ ಜೊತೆಗೂಡಿ ಅಭ್ಯಾಸವನ್ನು ಆರಂಭಿಸಿದ್ದರು. ಆದರೆ ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡಿದ ಕಾರಣ ಐಪಿಎಲ್ ಮುಂದಕ್ಕೆ ಹೋಗಿದೆ. ಈ ಮೂಲಕ ಐಪಿಎಲ್‍ನಲ್ಲಿ ಧೋನಿ ಬ್ಯಾಟಿಂಗ್ ನೋಡಲು ಬಯಸಿದ್ದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ.