Tag: Vishweshwar Hegde Kageri

  • ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಗೇರಿ

    ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಗೇರಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

    ರಮೇಶ್ ಕುಮಾರ್ ಅವರ ರಾಜೀನಾಮೆಯಿಂದ ಸ್ಪೀಕರ್ ಸ್ಥಾನ ತೆರವವಾಗಿದೆ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರ ಕಚೇರಿಗೆ ಆಗಮಿಸಿದ ಆಡಳಿತ ಪಕ್ಷ ಬಿಜೆಪಿಯ ವಿಶ್ವೇಶರ ಹೆಗಡೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಟಿ.ರವಿ, ಸುರೇಶ್ ಕುಮಾರ್, ಮಾಧುಸ್ವಾಮಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

    ಸ್ಪೀಕರ್ ಸ್ಥಾನದ ಮೂಚೂಣಿಯಲ್ಲಿ ಬಿಜೆಪಿ ಮೂವರ ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೆ.ಜಿ.ಬೋಪಯ್ಯ ಅವರ ಹೆಸರು ಕೇಳಿ ಬಂದಿತ್ತು. ಈಗಾಗಲೇ ಈ ಜವಾಬ್ದಾರಿ ನಿರ್ವಹಿಸಿದ್ದ ಕೆ.ಜಿ.ಬೋಪಯ್ಯನವರಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಆದರೆ ಅವರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಹೀಗಾಗಿ ಹೈಕಮಾಂಡ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ.

  • ಹನಿಮೂನ್‍ನಲ್ಲಿ ಇರಬೇಕಾದ ಸಮ್ಮಿಶ್ರ ಸರ್ಕಾರ ಡಿವೋರ್ಸ್ ಹಂತಕ್ಕೆ ತಲುಪಿದೆ: ಕಾಗೇರಿ

    ಹನಿಮೂನ್‍ನಲ್ಲಿ ಇರಬೇಕಾದ ಸಮ್ಮಿಶ್ರ ಸರ್ಕಾರ ಡಿವೋರ್ಸ್ ಹಂತಕ್ಕೆ ತಲುಪಿದೆ: ಕಾಗೇರಿ

    ಬಳ್ಳಾರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹನಿಮೂನ್ ಪಿರಿಯಡ್‍ನಲ್ಲಿರುವ ಬದಲು, ಡಿವೋರ್ಸ್ ಹಂತಕ್ಕೆ ತಲುಪಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯವಾಡಿದ್ದಾರೆ.

    ಲೋಕಸಭಾ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ನಗರದಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಕೇವಲ ವರ್ಗಾವಣೆಯ ದಂಧೆಯಲ್ಲಿ ತೊಡಗಿದೆ. ಸರ್ಕಾರದ ನಾಯಕರಲ್ಲೇ ಕಿತ್ತಾಟ ಏರ್ಪಟ್ಟಿದ್ದು, ಸಮ್ಮಿಶ್ರ ಸರ್ಕಾರ ಹನಿಮೂನ್ ಪಿರಿಯಡ್ ನಲ್ಲಿರುವ ಬದಲು, ಡಿವೋರ್ಸ್ ಹಂತಕ್ಕೆ ತಲುಪಿದೆ. ಈ ಚುನಾವಣೆಯಲ್ಲಿ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಬಿಜೆಪಿಗೆ ಮತವಾಗಿ ಪರಿವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಲೋಕಸಭಾ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಅಲ್ಲದೇ ನಿರೀಕ್ಷೆಗೂ ಮೀರಿ ಭಾರೀ ಬಹುಮತದಿಂದ ಬಿಜೆಪಿ ಗೆಲ್ಲುವ ವಾತಾವರಣವೂ ಕಾಣುತ್ತಿದೆ. ನಮ್ಮ ಸಂಘಟನೆಯ ಶಕ್ತಿ ಬಹಳ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ನಮಗೆ ನಮ್ಮ ಬಗ್ಗೆ ವಿಶ್ವಾಸ ಮೂಡುವ ಆಡಳಿತ ಸಿಕ್ಕಿದೆ. ಅಲ್ಲದೇ ಬೇರೆ ಬೇರೆ ಜವಾಬ್ದಾರಿ ಇದ್ದ ಕಾರಣ, ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಪ್ರಚಾರಕ್ಕೆ ಬರಲು ಆಗಿಲ್ಲ. ಬಿಜೆಪಿ ಪ್ರಚಾರ ನಿರ್ವಹಣೆಗೆ ನಾವು ಸಮರ್ಥರಿದ್ದೇವೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ಪ್ರತಿಕ್ರಿಯಿಸಿ, ಇದು ನಿರೀಕ್ಷಿತ ಘಟನೆ ಎಂದು ನನಗೆ ಅನಿಸುತ್ತಿಲ್ಲ. ಆದರೂ ಸಹ ಈ ರೀತಿಯ ಘಟನೆಗಳು ಆಗಬಾರದು, ರೆಡ್ಡಿಯವರ ಹೇಳಿಕೆ ಬಗ್ಗೆ ಪಕ್ಷದ ನಾಯಕರು ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv