Tag: Vishwesha Teertha

  • ಪೇಜಾವರಶ್ರೀಗಳ 60ರ ದಶಕದ ಕ್ರಾಂತಿ ನೆನೆದ ಜನ

    ಪೇಜಾವರಶ್ರೀಗಳ 60ರ ದಶಕದ ಕ್ರಾಂತಿ ನೆನೆದ ಜನ

    ಉಡುಪಿ: ಅಸ್ಪೃಶ್ಯತೆ ನಿವಾರಣೆ ಉದ್ದೇಶ ಇಟ್ಟುಕೊಂಡು ಪೇಜಾವರಶ್ರೀಗಳು ದಲಿತ ಕೇರಿಗೆ ಪ್ರವೇಶ ಮಾಡಿದ್ದು, ಬ್ರಾಹ್ಮಣ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. 1960ರ ಈ ಸಾಮಾಜಿಕ ಕ್ರಾಂತಿಯನ್ನು ನೆನೆದು ದಲಿತ ವಠಾರ ಹೆಮ್ಮೆ ವ್ಯಕ್ತಪಡಿಸಿದೆ.

    ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ 60ರ ದಶಕದಲ್ಲಿ ಮಾಡಿದ ಕ್ರಾಂತಿ ದೇಶದಲ್ಲೇ ಸಂಚಲನವನ್ನುಂಟು ಮಾಡಿತ್ತು. ಕೇರಿ ಪ್ರವೇಶ, ಪಾದಪೂಜೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದಲಿತರಿಗೆ ಬ್ರಾಹ್ಮಣ ದೀಕ್ಷೆ ಕೂಡಾ ಶ್ರೀಗಳು ಮಾಡಿದ ಕ್ರಾಂತಿಗಳಲ್ಲೊಂದು. ವಿಶ್ವೇಶತೀರ್ಥ ಸ್ವಾಮೀಜಿ ಆರಾಧನೆಯನ್ನು ಕರಂಬಳ್ಳಿಯ ದಲಿತ ಬಡಾವಣೆಯಲ್ಲಿ ಆಚರಿಸಲಾಯ್ತು.

    ಪೇಜಾವರಶ್ರೀ ಭಾವಚಿತ್ರ ಇಟ್ಟು ಶ್ರೀಗಳ ಹೋರಾಟ, ದಲಿತ ಕೇರಿಗೆ ಹೋದ ನೆನಪುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಲಾಯಿತು. ಸ್ಥಳೀಯರಾದ ಭುಜಂಗ ಮಾತನಾಡಿ, ಪೇಜಾವರ ಸ್ವಾಮೀಜಿ ಬ್ರಾಹ್ಮಣರಾಗಿದ್ದರೂ ನಮ್ಮ ವಠಾರಕ್ಕೆ ಬಂದಿದ್ದರು. ನಮ್ಮ ಪುಣ್ಯ ಎಂದು ಇದನ್ನು ಭಾವಿಸುತ್ತೇವೆ. ಇವತ್ತು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ನಮ್ಮ ಜೊತೆ ಇದೆ ಎಂದು ಹೇಳಿದರು.

    ಕರಂಬಳ್ಳಿ ವ್ಯಾಪ್ತಿಯ ಹಿಂದುಳಿದ, ದಲಿತ, ಕೊರಗ, ಸಮುದಾಯದ ನೂರಾರು ಜನ ಶ್ರೀಗಳಿಗೆ ಪುಷ್ಪಾಂಜಲಿ ಅರ್ಪಣೆ ಮಾಡಿದರು. ಆರಾಧನೆ ಲೆಕ್ಕದ ವಿಶೇಷ ಭೋಜನ ಸ್ವೀಕರಿಸಿದರು. ಪೇಜಾವರಶ್ರೀ ಕಾರ್ಯಕ್ರಮ ಆಯೋಜನೆಯಾದ ಸಂದರ್ಭದಲ್ಲಿ ಈ ಭಾಗಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಇಲ್ಲಿನ ಜನ ಸ್ಮರಿಸುತ್ತಾರೆ.

  • ಹೆಲಿಕಾಪ್ಟರ್‌‌ನಲ್ಲಿ ಬೆಂಗಳೂರಿನತ್ತ ಪೇಜಾವರ ಶ್ರೀ ಪಾರ್ಥಿವ ಶರೀರ

    ಹೆಲಿಕಾಪ್ಟರ್‌‌ನಲ್ಲಿ ಬೆಂಗಳೂರಿನತ್ತ ಪೇಜಾವರ ಶ್ರೀ ಪಾರ್ಥಿವ ಶರೀರ

    ಬೆಂಗಳೂರು: ಇಂದು ಕೃಷ್ಣೈಕ್ಯರಾದ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗುತ್ತಿದೆ.

    ಹರ್ನಿಯಾ ಆಪರೇಷನ್ ನಡೆದಾಗಲೇ ವಿದ್ಯಾಪೀಠದಲ್ಲಿ ನನ್ನ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂಬ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಿಂದ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

    ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಈಗಾಗಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್ ಪ್ರತಿಕ್ರಿಯಿಸಿ, ಸಂಜೆ 5 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ವಿದ್ಯಾಪೀಠಕ್ಕೆ ಪಾರ್ಥಿವ ಶರೀರ ತೆಗದುಕೊಂಡು ಹೋಗಲಾಗುತ್ತದೆ. ಸಂಜೆಯ ಬಳಿಕ ಅಂತಿಮ ವಿಧಿವಿಧಾನಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂದು ಪೇಜಾವರ ಶ್ರೀಗಳು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರು. ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು. ಕಳೆದ ಬಾರಿ ಹರ್ನಿಯಾ ಅಪರೇಷನ್‍ಗೆ ಒಳಗಾಗಿದ್ದ ಶ್ರೀಗಳು ತಮ್ಮ ಕೊನೆಯಾಸೆಯ ಬಗ್ಗೆ ತಿಳಿಸಿದ್ದರು ಎಂದು ಪಬ್ಲಿಕ್ ಟಿವಿಗೆ ರಘುಪತಿ ಭಟ್ ತಿಳಿಸಿದ್ದಾರೆ. ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಶ್ರೀಗಳ ಕೊನೆಯ ಆಸೆಯಂತೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣನ ಪಾದ ಸೇರಿದ್ದಾರೆ. ಇದನ್ನೂ ಓದಿ; ಪೇಜಾವರ ಶ್ರೀಗಳು ಡಿ.23ರ ನಂತ್ರ ವಿದೇಶಕ್ಕೆ ಹೋಗ್ಬೇಡಿ ಅಂದಿದ್ರು: ಪುತ್ತಿಗೆ ಶ್ರೀಗಳು