Tag: vishwanth

  • ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ – ಮಿತ್ರಮಂಡಳಿಯಲ್ಲಿ ಬಿರುಕು

    ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ – ಮಿತ್ರಮಂಡಳಿಯಲ್ಲಿ ಬಿರುಕು

    ಬೆಂಗಳೂರು: ಸಿಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಿರುವ ವಿಚಾರ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲ ಮಿತ್ರಮಂಡಳಿಯಲ್ಲಿ ಬಿರುಕು ಮೂಡಿದೆ.

    ಯೋಗೇಶ್ವರ್ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾದರು ಎಂದು ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದರೆ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಯೋಗೇಶ್ವರ್ ಪರ ಬಲವಾಗಿ ಬ್ಯಾಟ್ ಮಾಡಿದ್ದಾರೆ.

    ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ. ಮೆಗಾ ಸಿಟಿ ಹೆಸರಿನಲ್ಲಿ 9,731 ಜನರಿಗೆ ಟೋಪಿ ಹಾಕಿದ್ದಾರೆ. ಇಂತಹ ಭ್ರಷ್ಟ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ ಎಂದು ಪರಿಷತ್‌ ಸದಸ್ಯ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಬೆಳಗಾವಿ ಸಾಹುಕಾರ ಮಾತ್ರ ಯೋಗೇಶ್ವರ್ ತ್ಯಾಗವನ್ನು ಸ್ಮರಿಸಿದ್ದಾರೆ.

    ಯೋಗೇಶ್ವರ್ ಎಲ್ಲರನ್ನು ಒಗ್ಗೂಡಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಆರೋಗ್ಯ ಹಾಳು ಮಾಡಿಕೊಂಡರು. ಮನೆ ಅಡ ಇಟ್ಟು ಎಂಟಿಬಿ ಬಳಿ 9 ಕೋಟಿ ಸಾಲ ಮಾಡಿಕೊಂಡರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಕಿಡಿಕಾರಿದರು.

    ಯೋಗೇಶ್ವರ್‌ ಅವರಿಗೆ ಮಂತ್ರಿ ಸ್ಥಾನ ನೀಡಿದ್ದು ಸರಿಯಿದೆ. ಯಾಕೆಂದರೆ ಈ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ. ವಿಶ್ವನಾಥ್ ಹೇಳಿಕೆಗಳನ್ನು ಆಶೀರ್ವಾದ ಎಂದು ಪರಿಗಣಿಸುತ್ತೇನೆ ಎಂದು ಜಾರಕಿಹೊಳಿ ಸುಮ್ಮನಾದರು.

    ಬಿಸಿ ಪಾಟೀಲ್ ಪ್ರತಿಕ್ರಿಯಿಸಿ, ವಿಶ್ವನಾಥ್ ಈ ರೀತಿ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸೋತರೂ ವಿಶ್ವನಾಥ್‍ರನ್ನು ಸಿಎಂ ದೊಡ್ಡ ಮನಸ್ಸು ಮಾಡಿ ಎಂಎಲ್‍ಸಿ ಮಾಡಿದ್ದಾರೆ ಎಂದು ಹೇಳಿದರು.

  • ಹುಣಸೂರಿನಲ್ಲಿ ನನ್ನ ಸೋಲಿಗೆ ಸಿ.ಪಿ ಯೋಗೇಶ್ವರ್ ನೇರ ಕಾರಣ: ವಿಶ್ವನಾಥ್

    ಹುಣಸೂರಿನಲ್ಲಿ ನನ್ನ ಸೋಲಿಗೆ ಸಿ.ಪಿ ಯೋಗೇಶ್ವರ್ ನೇರ ಕಾರಣ: ವಿಶ್ವನಾಥ್

    ಬೆಂಗಳೂರು: ಹುಣಸೂರಲ್ಲಿ ನಾನು ಸೋಲನುಭವಿಸಲು ಸಿ.ಪಿ ಯೋಗೇಶ್ವರ್ ಅವರೇ ನೇರ ಕಾರಣ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಯೋಗೇಶ್ವರ್ ಅವರನ್ನ ನೂರಕ್ಕೆ ನೂರು ಸಚಿವರನ್ನಾಗಿ ಮಾಡುವುದಾಗಿ ಹೇಳಿದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಎಸ್‍ವೈ ಹಾಗೂ ಯೋಗೇಶ್ವರ್ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದರು. ಹುಣಸೂರಿನಲ್ಲಿ ನನ್ನ ಸೋಲಿಗೆ ನೇರ ಕಾರಣ ಸಿ.ಪಿ. ಯೋಗೇಶ್ವರ್. ನನಗೆ ಟಿಕೆಟ್ ಕೊಡದೆ ಇದ್ದಕ್ಕೂ ಮುಂಚಿತವಾಗಿ ನಾನೇ ಕ್ಯಾಂಡಿಡೇಟ್ ಅಂತ ಬಿಂಬಿಸಿ ಸೀರೆ ಹಂಚಿ ಡ್ಯಾಮೇಜ್ ಮಾಡಿದ್ದ. ಅದಾದ ಬಳಿಕ ನಾನು ಅಭ್ಯರ್ಥಿ ಆದ್ಮೇಲೆ ಪಕ್ಷದಿಂದ ಚುನಾವಣೆಗೆ ಅಂತ ನನಗೆ ಬಂದಂತಹ ದೊಡ್ಡ ಮೊತ್ತದ ಹಣ ನನಗೆ ತಲುಪಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನನಗೆ ಅಂತ ಬಂದ ಹಣವನ್ನ ಯೋಗೇಶ್ವರ್ ಹಾಗೂ ಸಂತೋಷ್ ಲಪಟಾಯಿಸಿದ್ರು. ನನ್ನ ಸೋಲಿಗೆ ಇದು ಕೂಡ ಕಾರಣ. ಇದೇ ವಿಚಾರ ಸಂಬಂಧ ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೂ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ವಿಚಾರದಿಂದ ನನಗೆ ತುಂಬಾನೇ ಬೇಸರವಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

    ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡಿರುವ ಹೇಳಿಕೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿ, ಯೋಗೇಶ್ವರ್ ಸಿಎಂಗೆ ಅಭಿನಂದನೆ ಸಲ್ಲಿಸಿದರು. ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲ ಇದ್ದೇ ಇರುತ್ತೆ. ಪಕ್ಷದೊಳಗಿನ ಗೊಂದಲಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹೇಳಿದ್ದಾರೆ.