Tag: virajpet

  • ಸೇತುವೆಯಿಂದ ಕೆಳಕ್ಕೆ ಉರುಳಿದ ಐರಾವತ ಬಸ್ಸು

    ಸೇತುವೆಯಿಂದ ಕೆಳಕ್ಕೆ ಉರುಳಿದ ಐರಾವತ ಬಸ್ಸು

    ಮಡಿಕೇರಿ: ಕೇರಳಕ್ಕೆ ತೆರಳುತ್ತಿದ್ದ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಘಟನೆ ವಿರಾಜಪೇಟೆ ತಾಲೂಕಿನ ಮಾಪಿಳ್ಳೆತೋಡಿನಲ್ಲಿ ನಡೆದಿದೆ.

    ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಕೇಂದ್ರಿಯ ವಿಭಾಗದ 4ನೇ ಘಟಕದ ಮಲ್ಟಿ ಆಕ್ಸೆಲ್ ವೋಲ್ಟೋ ಐರಾವತ ಬಸ್ಸು ಸೇತುವೆಯಿಂದ ಉರುಳಿದೆ.

    ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೊನ್ನೆಯಷ್ಟೇ ಇದೇ ಸೇತುವೆ ಬಳಿ ಕೇರಳದ ರಾಜ್ಯ ನೋಂದಣಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದಿತ್ತು. ಕಾರಿನೊಳಗಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

    ಈಗ ಮತ್ತೆ ಅದೇ ಸ್ಥಳದಲ್ಲಿ ಐರಾವತ ಬಸ್ಸು ಉರುಳಿಬಿದ್ದಿದೆ. ನದಿಯಲ್ಲಿ ನೀರಿಲ್ಲದ ಕಾರಣದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಪೊನ್ನಂಪೇಟೆ  ಪೊಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ

    ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ

    ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಹುಣಸೂರು ರಸ್ತೆಯಲ್ಲಿ ಚಿರತೆಯನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

    ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಹೊಸಲು ಮಾರಮ್ಮ ದೇವಾಲಯದ ಬಳಿ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ವಾಹನ ಚಾಲಕರು ಮತ್ತು ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ಚಿರತೆ ಓಡಾಡುತ್ತಿರುವುದನ್ನು ಸೆರೆ ಹಿಡಿದಿದ್ದಾರೆ.

    ಚಿರತೆ ಹೋದ ಬಳಿಕವೇ ವಾಹನ ಸವಾರರು ಪ್ರಯಾಣ ಬೆಳೆಸಿದ್ದಾರೆ. ಚಿರತೆ ಕಾಣಿಸಿಕೊಂಡ ಪರಿಸರದಲ್ಲಿನ ನಿವಾಸಿಗಳು ಚಿರತೆ ಪ್ರತ್ಯಕ್ಷವಾಗಿದ್ದರಿಂದ ಭಯಗೊಂಡಿದ್ದಾರೆ.

  • ಮದ್ಯದ ಅಮಲಿನಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಬೈದು, ಭದ್ರತಾ ಸಿಬ್ಬಂದಿಗೆ ಥಳಿಸಿದ ರೋಗಿ

    ಮದ್ಯದ ಅಮಲಿನಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಬೈದು, ಭದ್ರತಾ ಸಿಬ್ಬಂದಿಗೆ ಥಳಿಸಿದ ರೋಗಿ

    ಮಡಿಕೇರಿ: ರೋಗಿಯೊಬ್ಬ ಮದ್ಯದ ಅಮಲಿನಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಬೈದು, ಸೆಕ್ಯುರಿಟಿ ಗಾರ್ಡ್ ಗೆ ಥಳಿಸಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ವಿರಾಜಪೇಟೆಯ ದರ್ಶನ್ ಆಸ್ಪತ್ರೆಯಲ್ಲಿ ಗಲಾಟೆ ಮಾಡಿಕೊಂಡ ವ್ಯಕ್ತಿ. ದರ್ಶನ್ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದಿದ್ದ. ಈ ವೇಳೆ ಮಹಿಳಾ ಸಿಬ್ಬಂದಿಯ ಜೊತೆಗೆ ಜಗಳ ಆರಂಭಿಸಿ, ಅವಾಚ್ಯ ಪದಗಳಿಂದ ಬೈದಿದ್ದಾನೆ. ಇದನ್ನು ಕೇಳಿಸಿಕೊಂಡ ಸೆಕ್ಯುರಿಟಿ ಗಾರ್ಡ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಈ ವೇಳೆ ಮತ್ತಷ್ಟು ರಂಪಾಟ ಮಾಡಿದ ದರ್ಶನ್ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ.

    ದರ್ಶನ್ ವರ್ತನೆಯಿಂದ ಬೇಸತ್ತ ಆಸ್ಪತ್ರೆಯ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ದರ್ಶನ್‍ನನ್ನು ವ್ಯಕ್ತಿಯ ಬಂಧಿಸಿದ್ದಾರೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಠಕ್ಕೂ ಸೈ, ಕೆಲಸಕ್ಕೂ ಸೈ ಎಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು

    ಪಾಠಕ್ಕೂ ಸೈ, ಕೆಲಸಕ್ಕೂ ಸೈ ಎಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು

    ಮಡಿಕೇರಿ: ಪ್ರತಿದಿನ ಪಠ್ಯಪುಸ್ತಕ, ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳು ಶುಕ್ರವಾರ ಕೃಷಿ ಭೂಮಿಗೆ ತೆರಳಿ ಭತ್ತ ಕಟಾವು ಮಾಡಿ ಗದ್ದೆಯಿಂದ ಭತ್ತದ ತೇನೆಹೋತ್ತು ಭತ್ತವನ್ನು ಬಡಿದರು. ಮುಂದೊಂದು ದಿನ ನಾವು ಕಷ್ಟ ಪಟ್ಟು ಭೂಮಿತಾಯಿ ಸೇವೆ ಮಾಡುವುದಾಗಿ ವಿದ್ಯಾರ್ಥಿಗಳು ಆಶಾಭವನೆ ವ್ಯಕ್ತಪಡಿಸಿದರು.

    ಹೌದು. ನಿತ್ಯವೂ ಆಟ-ಪಾಠದಲ್ಲೇ ನಿರತರಾಗಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಭತ್ತದ ಗದ್ದೆಯಲ್ಲಿ ದುಡಿದು ಬೆವರಿಳಿಸಿದರು. ಕಿರುಗೂರು ಗ್ರಾಮದ ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳೆಲ್ಲಾರು ಸೇರಿ ಮೊದಲು ಭತ್ತದ ಬೆಳೆಯನ್ನು ಕಟಾವು ಮಾಡಿದರು. ನಂತರ ಅದನ್ನು ಹೊತ್ತು ಒಂದು ಕಡೆಗೆ ಹಾಕಿ ಬಡಿದು ಭತ್ತವನ್ನು ಬೇರ್ಪಡಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಕಾವೇರಿ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು, ಇಂದಿನ ಆಧುನಿಕ ಯುಗದಲ್ಲಿ ಕೃಷಿ ಚಟುವಟಿಕೆ ಮರೆಯಾಗುತ್ತಿದೆ. ಇರುವ ಅಲ್ಪಸ್ವಲ್ಪ ಕೃಷಿಯನ್ನು ಮಾಡಲು ಯಂತ್ರೋಪಕರಣಗಳು ಬಂದಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ಕೃಷಿ ಚಟುವಟಿಕೆಯ ಬಗ್ಗೆ ಅರಿವು ಇರಬೇಕು ಎಂಬ ಉದ್ದೇಶದಿಂದ ಹಾಗೂ ರೈತರ ಕಷ್ಟಗಳು ಅರ್ಥವಾಗಬೇಕು ಎಂಬ ಕಾರಣಕ್ಕಾಗಿ ಕೃಷಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಿರುಗೂರು ಗ್ರಾಮದಲ್ಲಿ ನಡೆಯುತ್ತಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಕೃಷಿ ಚಟುವಟಿಕೆಯೊಂದಿಗೆ ಗ್ರಾಮೀಣ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಪಾಲ್ಗೊಂಡು ಸಖತ್ ಮಜಾ ಮಾಡಿದರು. ಅಳವಿನ ಅಂಚಿನಲ್ಲಿರುವ ಕುಂಟೆಬಿಲ್ಲೆ ಆಟ, ಕಣ್ಣು ಕಟ್ಟಿ ಓಡುವುದು, ಗೋಣಿಚೀಲ ಓಟದಂತಹ ಹತ್ತು ಹಲವು ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಭವಿಷ್ಯದ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ರವಾನಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿ ಸಖತ್ ಎಂಜಾಯ್ ಮಾಡಿದರು.

  • ಪೆಟ್ರೋಲ್ ಬಂಕ್ ದರೋಡೆ- ಅಪ್ರಾಪ್ತ ಸೇರಿ ಮೂವರು ಅರೆಸ್ಟ್

    ಪೆಟ್ರೋಲ್ ಬಂಕ್ ದರೋಡೆ- ಅಪ್ರಾಪ್ತ ಸೇರಿ ಮೂವರು ಅರೆಸ್ಟ್

    ಮಡಿಕೇರಿ: ಪೆಟ್ರೋಲ್ ಬಂಕ್ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಸೈಯ್ಯದ್ ಸಕ್ಲೇನ್ (21), ಅಕ್ಬರ್ ಶರೀಪ್ (18) ಹಾಗೂ ಓರ್ವ ಅಪ್ರಾಪ್ತ ಬಂಧಿತ ಆರೋಪಿಗಳು. ಬಂಧಿತರಿಂದ 20,500 ರೂ.ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಶಾಂತಿನಗರದ ಮತ್ತೋರ್ವ ಆರೋಪಿ ನುಹೀದ್ ಖಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಅಪ್ರಾಪ್ತ ಸೇರಿದಂತೆ ನಾಲ್ವರು ಡಿಸೆಂಬರ್ 12ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‍ಗೆ ಕೆಎ-03 ಎಎಫ್-3919 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದರು. ಈ ವೇಳೆ ಸಂಚು ಹಾಕಿ ಬಂಕ್‍ನಲ್ಲಿದ್ದ 24,200 ರೂ. ನಗದು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕ ಚಂದನ್ ಕಾಮತ್ ಅವರು ಕುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನ ಹಾಗೂ ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಎಸ್.ಪರಶಿವಮೂರ್ತಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಈ ತಂಡವು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿ ಶುಕ್ರವಾರ ಬಂಧಿಸಿ, ಅವರ ಬಳಿ ಇದ್ದ 20,500 ರೂ.ವನ್ನು ವಶಕ್ಕೆ ಪಡೆಯಲಾಗಿದೆ.

  • ಹುಲಿ ದಾಳಿಗೆ ಮತ್ತೊಂದು ಹಸು ಬಲಿ- ಗ್ರಾಮಸ್ಥರಲ್ಲಿ ಆಂತಕ

    ಹುಲಿ ದಾಳಿಗೆ ಮತ್ತೊಂದು ಹಸು ಬಲಿ- ಗ್ರಾಮಸ್ಥರಲ್ಲಿ ಆಂತಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಜಾನುವಾರಗಳ ಮೇಲೆ ಹುಲಿಗಳ ದಾಳಿ ಮಿತಿಮೀರಿದ್ದು, ನಿರಂತರ ದಾಳಿ ನಡೆಯುತ್ತಿದೆ. ಇಂದು ಕೂಡ ವಿರಾಜಪೇಟೆ ತಾಲೂಕಿನ ಕುಮಟೂರಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ತಿಂದು ಹಾಕಿದೆ.

    ಕುಮಟೂರು ಗ್ರಾಮದ ಕಳ್ಳಂಗಡ ಕೌಶಿಕ್ ರಮೇಶ್ ಅವರು ಇಂದು ಬೆಳಗ್ಗೆ ಮರಕ್ಕೆ ಕಟ್ಟಿದ ಸುಮಾರು 60 ಸಾವಿರ ರೂ. ಮೌಲ್ಯದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಈ ಸಂಬಂಧ ಹಸುವಿನ ಮಾಲೀಕ ಕೌಶಿಕ್ ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಘಟನೆಯನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಗಮನಕ್ಕೆ ತರಲಾಯಿತು.

    ಹುಲಿ ದಾಳಿ ನಡೆದ ಕುಮಟೂರು ಗ್ರಾಮವು ಪೊನ್ನಂಪೇಟೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅಲ್ಲಿನ ವಲಯ ಅರಣ್ಯಾಧಿಕಾರಿ ತೀರ್ಥ ಅವರಿಗೆ ಫೋನ್ ಮಾಡಿ, ಕೂಡಲೇ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಮೊತ್ತವನ್ನು ನೀಡುವಂತೆ ಮನವಿ ಮಾಡಲಾಗಿದೆ.

    ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿಗಳು ಬರೋಬ್ಬರಿ 10ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ತಿಂದುಹಾಕಿವೆ. ಹೀಗೆ ನಿರಂತರವಾಗಿ ಹುಲಿದಾಳಿ ನಡೆಯುತ್ತಿರುವುದರಿಂದ ಅರಣ್ಯ ಪ್ರದೇಶ ಸಮೀಪದ ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

  • 15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ- ಅಚ್ಚರಿಯಿಂದ ನೋಡಿದ ಸ್ಥಳೀಯರು

    15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ- ಅಚ್ಚರಿಯಿಂದ ನೋಡಿದ ಸ್ಥಳೀಯರು

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವವೊಂದನ್ನು ಸೆರೆ ಹಿಡಿಯಲಾಗಿದೆ.

    ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ನಾಮೇರ ಬೋಸು ಎಂಬವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ನಾಮೇರ ಅವರ ಕುಟುಂಬಸ್ಥರು ಹಾಗೂ ಸ್ಥಳೀಯರು ಉರಗ ತಜ್ಞ ಅಲೆಮಾಡ ನವೀನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ನವೀನ್ ಅವರನ್ನು ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಇದನ್ನೂ ಓದಿ: 1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಅರಣ್ಯ ಪ್ರದೇಶಕ್ಕೆ ಬಿಡುವುದಕ್ಕೂ ಮುನ್ನ ಗ್ರಾಮದ ಮೈದಾನದಲ್ಲಿ ಕೆಲ ಹೊತ್ತು ಕಾಳಿಂಗ ಸರ್ಪವನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ 15 ಅಡಿ ಉದ್ದ ಕಾಳಿಂಗ ಸರ್ಪವನ್ನು ಜನರು ಆತಂಕ ಹಾಗೂ ಅಚ್ಚರಿಯಿಂದ ವೀಕ್ಷಿಸಿದರು. ಹಾವನ್ನು ಸೆರೆ ಹಿಡಿದಿದ್ದರಿಂದ ಬಿ.ಶೆಟ್ಟಿಗೇರಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ

  • ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಮನವೊಲಿಸಲು ತೆರಳಿದ್ದ ತಹಶೀಲ್ದಾರ್ ಗೆ ತರಾಟೆ

    ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಮನವೊಲಿಸಲು ತೆರಳಿದ್ದ ತಹಶೀಲ್ದಾರ್ ಗೆ ತರಾಟೆ

    ಮಡಿಕೇರಿ: ಚುನಾವಣೆ ಬಹಿಷ್ಕರಿಸಿದ ಗ್ರಾಮಕ್ಕೆ ಮತದಾನ ಮಾಡುವಂತೆ ಮನವೊಲಿಸಲು ತೆರಳಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗೋಡು ಗ್ರಾಮದ ಜನರು ಸಿಟ್ಟಾಗಿ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ್ದಾರೆ.

    ಬಹಿಷ್ಕಾರ ಯಾಕೆ?
    ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ನದಿ ದಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳು ಗ್ರಾಮವನ್ನು ಅಭಿವೃದ್ಧಿ ಪಡಿಸುವಂತೆ ಕಳೆದ ಹಲವು ವರ್ಷಗಳಿಂದಲೂ ಜಿಲ್ಲಾಡಳಿತವನ್ನು ಒತ್ತಾಯಿಸಿ ನಿರಂತರ ಪ್ರತಿಭಟನೆ ಮಾಡುತಿದ್ದರು. ಆದರೆ ಗ್ರಾಮಸ್ಥರ ಪ್ರತಿಭಟನೆಗೆ ಯಾರೂ ಕ್ಯಾರೇ ಎಂದಿರಲಿಲ್ಲ.

    ಪ್ರತಿಭಟನೆ ಮಾಡಿದರೂ ಯಾರು ನಮ್ಮ ಸಮಸ್ಯೆಗೆ ಸ್ಪಂದಿಸದ ಕಾರಣ ಗ್ರಾಮಸ್ಥರು ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಒಂದು ತಿಂಗಳ ಹಿಂದೆ ನೀಡಿದ್ದರು. ಆದರೂ ಜಿಲ್ಲಾಡಳಿತದ ಅಧಿಕಾರಿಗಳು ಗ್ರಾಮದತ್ತ ತಿರುಗಿ ನೋಡಿರಲಿಲ್ಲ. ನಿನ್ನೆ ಸಂಜೆ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಮತದಾನ ಮಾಡುವಂತೆ ಮನವೊಲಿಸಲು ಮುಂದಾದಾಗ ಗ್ರಾಮಸ್ಥರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕಾಫಿ ಘಮದ ನಡುವೆ ಕರಿ ಮೆಣಸಿನ ಘಾಟು. ಮಡಿಕೇರಿಯ ಚಳಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ನು..! ಅರೆ ಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರೋ ಕೂರ್ಗ್ ಪ್ರವಾಸಿಗರ ಎವರ್ ಗ್ರೀನ್ ಹಾಟ್ ಸ್ಪಾಟ್..!ಎತ್ತ ನೋಡಿದ್ರೂ ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ ಕಾಣೋ ಕರುನಾಡ ಕಾಶ್ಮೀರ ನಿತ್ಯ ಸುಮಂಗಲೆ. ಚುಮು ಚುಮು ಚಳಿ. ಅದಕ್ಕೆ ಹಿತವಾದ ಅನುಭವ ನೀಡೋ ಕಾಫಿ ವಾಹ್, ಸ್ವರ್ಗ ಅಂತೇನಾದ್ರೂ ಇದ್ರೆ ಇದೇ ಕಣ್ರೀ..ಮಡಿಕೇರಿಯ ಸೌಂದರ್ಯ ಒಂದು ರೀತಿಯಲ್ಲಿ ವರ್ಣನಾತೀತ ಅನುಭವ ಕೊಡುತ್ತೆ. ಇಂತಿಪ್ಪ ಮಡಿಕೇರಿಯಲ್ಲಿ ಈಗ ಚುನಾವಣೆಯಿಂದಾಗಿ ಬಿಸಿ ಏರಿದೆ.

    ಕೆಚ್ಚೆದೆಯ ಸಿಪಾಯಿಗಳಿಗೆ ಜನ್ಮವಿತ್ತ ವೀರಭೂಮಿ ಮಡಿಕೇರಿ..!
    ಮುತ್ತಿನ ಹಾರ ಸಿನಿಮಾದ ಮಡಿಕೇರಿ ಸಿಪಾಯಿ ಅನ್ನೋ ಹಾಡನ್ನು ಕೇಳದೇ ಇದ್ದವರು ಬಹಳ ವಿರಳ ಅನ್ಸುತ್ತೆ. ಇದೇ ಕೊಡಗಿನ ವೀರ ಯೋಧನ ಸುತ್ತ ಸುತ್ತೋ ಕಥೆ ಹೃದಯ ಕಲಕಿ ಬಿಡುತ್ತೆ. ಹೌದು.. ಕೊಡಗು ಅನ್ನೋ ಕರ್ನಾಟಕದ ಕಾಶ್ಮೀರದಲ್ಲಿ ಇಂದಿಗೂ ಮನೆ ಮನೆಗೊಬ್ಬರಂತೆ ಸೇನೆ ಸೇರುವವರನ್ನು ಕಾಣಬಹುದು. ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಅನೇಕ ವೀರರನ್ನ ಕೊಟ್ಟ ಕೊಡಗು ದೇಶ ರಕ್ಷಣೆಯ ವಿಚಾರ ಬಂದಾಗ ಸದಾ ಸಿದ್ಧ.

    ರಾಷ್ಟ್ರ ಕ್ರೀಡೆ ಹಾಕಿಯೇ ಕೊಡವರ ಹಾಟ್ ಫೇವರೇಟ್..!
    ನಮ್ಮ ದೇಶದ ಕ್ರೀಡೆ ಆಗಿದ್ರೂ ಕ್ರಿಕೆಟ್ ಬಗ್ಗೆಯೇ ನಮ್ಮ ಜನಕ್ಕೆ ಒಲವು ಜಾಸ್ತಿ. ಆದ್ರೆ, ಕೊಡವರು ಮಾತ್ರ ಇದ್ರಲ್ಲೂ ತಮ್ಮ ದೇಶಭಕ್ತಿಯನ್ನ ಮೆರೆದಿದ್ದಾರೆ. ಕ್ರಿಕೆಟ್‌, ವಾಲಿಬಾಲ್‌ ಟೂರ್ನಮೆಂಟ್ ಗಳು ಹೇಗೆ ನಡೆಯುತ್ವೋ ಕೊಡಗಿನಲ್ಲಿ ಮಾತ್ರ ಕೊಡವ ಮನೆತನಗಳ ನಡುವೆ ಹಾಕಿ ಟೂರ್ನಮೆಂಟ್ ಗಳು ನಡೆಯುತ್ತವೆ.

    ಚಾರಣಿಗರ ಪಾಲಿನ ಅಗಣಿತ ರಹಸ್ಯಗಳ ಹೂರಣ..ಪ್ರವಾಸಿಗರಿಗೆ ಇದು ನಿತ್ಯ ನೂತನ..!
    ಹನಿ ಮೂನ್ ಅಂದ್ರೆ ಇವತ್ತಿಗೂ ಕೊಡಗು ನವ ದಂಪತಿಗಳ ನೆಚ್ಚಿನ ತಾಣ. ಅದ್ರ ಹೊರತಾಗಿಯೂ ಚಾರಣಿಗರ, ಪ್ರವಾಸಿಗರ ಎಂದೂ ಮರೆಯಲಾಗದ ನೆನಪುಗಳ ಕಟ್ಟಿ ಕೊಡೋ ಸುಂದರ ಸ್ಥಳ. ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿದೆ ಅಬ್ಬಿ ಜಲಪಾತ. ಏಲಕ್ಕಿಯ ಹಾಗೂ ಕಾಫಿಯ ನವಿರಾದ ಘಮವನ್ನ ಆಸ್ವಾದಿಸುತ್ತಾ ಸ್ವಲ್ಪವೇ ದೂರ ನಡೆದರೆ ಸಿಗುತ್ತಾಳೆ ಹಾಲಿನ ಬಣ್ಣದ ಸುಂದರಿ ಅಬ್ಬಿ. ಬಿರು ಬೇಸಿಗೆಯಲ್ಲೂ ಅಬ್ಬಿ ಮಾತ್ರ ಸದಾ ತುಂಬಿ ಹರಿಯುತ್ತಾಳೆ.

    ಕೊಡಗಿನ ಮತ್ತೊಂದು ಅಟ್ರಾಕ್ಟಿವ್ ಜಾಗ ಅಂದ್ರೆ ರಾಜಾ ಸೀಟ್. ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರೋ ಕಥೆಯ ಪ್ರಕಾರ ರಾಜ ಮಹಾರಾಜರುಗಳು ಇಲ್ಲಿ ಸಂಜೆಯ ವಾಯುವಿಹಾರಕ್ಕೆ ಅಂತಾ ಬರ್ತಿದ್ರಂತೆ. ಹೀಗಾಗಿ ಇದಕ್ಕೆ ಮುಂದೆ ರಾಜಾಸ್ ಸೀಟ್ ಅನ್ನೋ ಹೆಸರು ಬಂತು. ಅದುವೇ ಮುಂದೆ ರಾಜಾ ಸೀಟ್ ಆಗಿದ್ದು ಈಗ ಇತಿಹಾಸ. ಇಲ್ಲಿನ ಸೂರ್ಯಾಸ್ತವನ್ನು ನೋಡೋದೇ ಮನಸ್ಸಿಗೆ ಮುದ ಕೊಡುತ್ತದೆ.

    ಕನ್ನಡನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ. ಏಳು ಪವಿತ್ರ ನದಿಗಳಲ್ಲಿ ಕಾವೇರಿಯ ಹೆಸರೂ ಉಲ್ಲೇಖವಾಗಿದೆ. ಬ್ರಹ್ಮಗಿರಿ ಬೆಟ್ಟ ಸಮುದ್ರ ಮಟ್ಟದಿಂದ 4500 ಅಡಿ ಎತ್ತರವಿದ್ದು ಇಲ್ಲೇ ಕಾವೇರಿ ಉಗಮವಾಗುತ್ತಾಳೆ. ತಲಕಾವೇರಿ ಉಗಮಸ್ಥಾನದ ದೊಡ್ಡ ಕೊಳದಲ್ಲಿ ಭಕ್ತರು ತೀರ್ಥ ಸ್ನಾನ ಮಾಡೋದು ಸರ್ವೇ ಸಾಮಾನ್ಯ. ತುಲಾ ಸಂಕ್ರಮಣದಂದು ತೀರ್ಥೋದ್ಭವವಾಗುತ್ತೆ. ಇನ್ನು, ಕಾವೇರಿ ಹುಟ್ಟಿದ ಜಾಗ ಬ್ರಹ್ಮಗಿರಿ, ಇಲ್ಲೇ ಸಪ್ತ ಋಷಿಗಳು ಯಜ್ಞ ಮಾಡಿದ್ರು ಅನ್ನೋ ಉಲ್ಲೇಖಗಳಿವೆ.

    ಮಡಿಕೇರಿಯ ಮಧ್ಯಭಾಗದಲ್ಲಿರೋ ಪ್ರಮುಖ ಆಕರ್ಷಣೆ ಅಂದ್ರೆ 19ನೇ ಶತಮಾನದ ಕೋಟೆ. ಒಂದು ಮಂದಿರ ಹಾಗೂ ಕಾರಾಗೃಹ ಈ ಕೋಟೆಯ ಒಳಗಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್‌ ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲೆ ನಿಂತು ನೋಡಿದ್ರೆ ಮಡಿಕೇರಿಯ ಸೌಂದರ್ಯ ಗೋಚರಿಸುತ್ತೆ.

    ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಅನ್ನೋ ಮೂರು ನದಿಗಳು ಸಂಧಿಸೋ ಜಾಗ ಭಾಗಮಂಡಲ. ಈ ತ್ರಿವೇಣಿ ಸಂಗಮದಲ್ಲಿ ಕೇರಳ ಮಾದರಿಯ ಆಕರ್ಷಕ ದೇವಸ್ಥಾನವಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇನ್ನು, ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಸ್ಥಳ.

    ಕಾವೇರಿ ನದಿ ತಟದಲ್ಲಿರೋ ದುಬಾರೆ ಆನೆಗಳ ತರಬೇತಿ ಕೇಂದ್ರ ಬಹಳ ಆಕರ್ಷಿಸುತ್ತೆ. ಕಾಡಿನಿಂದ ನಾಡಿಗೆ ಬಂದು ತೊಂದರೆ ಕೊಡೋ ಆನೆಗಳನ್ನು ಇಲ್ಲಿಗೆ ಕರೆತಂದು ಪಳಗಿಸಲಾಗಿಸುತ್ತದೆ. ಪ್ರವಾಸೋಧ್ಯಮ ನಿಟ್ಟಿನಿಂದ ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ. ಬೋಟಿಂಗ್‌ ಇಲ್ಲಿನ ವಿಶೇಷ. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರೋದನ್ನ ನೋಡೋದೇ ಚೆಂದ. ಅಂದ ಹಾಗೆ ಇದು ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿದೆ.

    ಕೊಡವರ ಆಚರಣೆ, ಭಾಷೆ, ವೇಷ ಭೂಷಣ ಸಖತ್ ಡಿಫರೆಂಟ್..!
    ಕೊಡವರದ್ದು ಕ್ಷಾತ್ರ ಧರ್ಮ. ಹೀಗಾಗಿ ಧೈರ್ಯ ಅನ್ನೋದು ರಕ್ತದಲ್ಲೇ ಬಂದಿದೆ. ಪ್ರಕೃತಿ ಹಾಗೂ ಪೂರ್ವಜರನ್ನು ಪೂಜೆ ಮಾಡೋದನ್ನ ಇವರು ಪಾಲಿಸಿಕೊಂಡು ಬಂದಿರೋದು. ಮಾತೃ ಭಾಷೆ ಕೊಡವ ತಕ್ಕ್. ಕೈಲ್‌ ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಪುತ್ತರಿ ಹಬ್ಬವನ್ನು ಇಲ್ಲಿ ಕೊಡವರು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಕುಪ್ಯ, ಚೇಲೆ, ಪೀಚೆಕತ್ತಿ, ಮಂಡೆ ತುಣಿ ಅನ್ನೋ ವಿಭಿನ್ನ ಸಾಂಪ್ರದಾಯಿಕ ವಸ್ತ್ರವನ್ನ ಪುರುಷರು ತೊಡ್ತಾರೆ. ಮಹಿಳೆಯರು ಸೀರೆ ಉಡುವ ಶೈಲಿಗೆ ಕೊಡವ ಪೊಡೆಯ ಅನ್ನೋದಾಗಿ ಕರೆಯಲಾಗುತ್ತೆ. ಪತ್ತಾಕ್, ಜೋಮಾಲೆ, ಕೊಕ್ಕೆತತ್ತಿ, ಪೊಮ್ಮಾಲೆ, ಅಡ್ಡಿಗೆ ಹೀಗೆ ವಿವಿಧ ರೀತಿಯ ಆಭರಣಗಳಿಂದ ತಮ್ಮನ್ನ ತಾವು ಸಿಂಗರಿಸಿಕೊಳ್ತಾರೆ.

    ಬಾಯಲ್ಲಿ ನೀರೂರಿಸುತ್ವೆ ಕೊಡವರ ತಿಂಡಿ ತಿನಿಸುಗಳು
    ಅನ್ನ, ಗಂಜಿ, ಹಿಟ್ಟಿನಿಂದ ರೊಟ್ಟಿ ಮತ್ತು ನೂಪುಟ್ಟ್, ತರಿಯಿಂದ ಪಾಪುಟ್ಟ್ ಮತ್ತು ಕಡಂಬುಟ್ಟ್, ಇತ್ಯಾದಿಗಳಲ್ಲದೆ, ವಿಶೇಷ ಸಂದರ್ಭಗಳಲ್ಲಿ ತುಪ್ಪದನ್ನ ಮಾಡುತ್ತಾರೆ. ತಳಿಯಪುಟ್ಟ್ ಮತ್ತು ದೋಸೆ ಕೊಡವರ ಸಾಂಪ್ರದಾಯಿಕ ಸೈಡ್ ಢಿಶ್ ಜೊತೆ ಆಸ್ವಾದಿಸ್ಲೇಬೇಕು. ಇವರು ಶುದ್ಧ ಮಾಂಸಾಹಾರಿಗಳು. ಕೊಡವ ಶೈಲಿಯ ಪಂದಿಕರಿ ಹಾಗೂ ಅಕ್ಕಿ ರೊಟ್ಟಿ ಒಳ್ಳೇ ಕಾಂಬಿನೇಷನ್.

    ಕರ್ನಾಟಕದ ಕಾಶ್ಮೀರದಲ್ಲಿ ಬೊಂಬಾಟ್ ರಾಜಕೀಯ..!
    ಕಳೆದ ಹಲವಾರು ದಶಕಗಳಿಂದ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅನ್ನೋ ಕೂಗು ಕೇಳ್ತಾನೇ ಇದೆ. ಇದಕ್ಕೆ ಸಂಬಂಧ ಪಟ್ಟಂತೆ ಹಲವಾರು ಹೋರಾಟಗಳೂ ನಡೆದು ಹೋಗಿವೆ. ಇದೂ ಕೂಡಾ ಇಲ್ಲಿ ರಾಜಕೀಯದ ಅಸ್ತ್ರವಾಗಿ ದಶಕಗಳೇ ಕಳೆದಿವೆ. ಅಂದ ಹಾಗೆ, ಕೊಡಗಿನಲ್ಲಿ ಕಾಫಿ ಹಾಗೂ ಕಾಳು ಮೆಣಸು ಪ್ರಧಾನ ಬೆಳೆ. ಆದ್ರೆ, ಇವೆಲ್ಲದ್ರ ನಡುವೆ ಅನೇಕ ಸಮಸ್ಯೆಗಳು ಇಲ್ಲಿ ಬಾಧಿಸ್ತಿವೆ. ಕಾಡಾನೆ ಹಾವಳಿ, ಬೇಸಿಗೆಯಲ್ಲಿ ಕುಡಿಯೋ ನೀರಿನ ಸಮಸ್ಯೆ, ಮಲ್ಲಳ್ಳಿ ಜಲಪಾತದ ತೂಗು ಸೇತುವೆ ಬೇಡಿಕೆ,

    ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ ಹಾಗೂ ವಿರಾಜ ಪೇಟೆ. ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಇಲ್ಲಿಂದ ಗೆದ್ದು ಮುಂದೆ ಸಿಎಂ ಆಗಿದ್ದು ಇತಿಹಾಸ. ಇಲ್ಲಿ ಅರೆ ಒಕ್ಕಲಿಗ ಗೌಡ್ರು ಪ್ರಾಬಲ್ಯ ಹೊಂದಿದ್ರೂ ಕೊಡವ, ಬ್ರಾಹ್ಮಣ ಹಾಗೂ ಇತರರೇ ಗೆದ್ದಿದ್ದಾರೆ.

    ಮಡಿಕೇರಿಯ ಕೇರಿ ಏರೋ ದಿಲ್ ದಾರ್ ಯಾರು..?
    2013ರಲ್ಲಿ ಬಿಜೆಪಿಯಿಂದ ಕಂಟೆಸ್ಟ್ ಮಾಡಿದ್ದ ಅಪ್ಪಚ್ಚು ರಂಜನ್ 56,696 ಮತಗಳನ್ನು ಗಳಿಸಿ ಮಡಿಕೇರಿ ಜನರ ಕೃಪೆಗೆ ಪಾತ್ರರಾಗಿದ್ರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಜೀವಿಜಯ 4000 ಮತಗಳ ಅಂತರದಿಂದ ಸೋತರೂ ಟಫ್ ಫೈಟ್ ಕೊಟ್ಟಿದ್ರು. ಕಾಂಗ್ರೆಸ್ ನ ಕೆ.ಎಂ ಲೋಕೇಶ್ 21% ವೋಟು ಗಳಿಸಿದ್ರು. ಈ ಬಾರಿ ಬಿಜೆಪಿ ಗೆಲ್ಲೋ ಲಕ್ಷಣಗಳಿದ್ರೂ ಜೆಡಿಎಸ್ ನಿಂದ ಮತ್ತೆ ಬಲವಾದ ಸ್ಪರ್ಧೆ ಒಡ್ಡೋ ಎಲ್ಲಾ ನಿರೀಕ್ಷೆಗಳೂ ಕಾಣಿಸ್ತಿವೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಟಿಪ್ಪು ಜಯಂತಿ ಆಚರಣೆ ವಿವಾದಗಳು ತನಗೆ ಪ್ಲಸ್ ಆಗಬಹುದು ಅನ್ನೋ ನಿರೀಕ್ಷೆ ಬಿಜೆಪಿಯದ್ದು. ಹಾಗಾಗಿ ಈ ಬಾರಿ ಬಿಜೆಪಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ. ಈ ಬಾರಿ ಕಾಂಗ್ರೆಸ್ ನಿಂದ  ಕೆಪಿ ಚಂದ್ರಕಲಾ ಅಖಾಡದಲ್ಲಿದ್ದಾರೆ.

    ವಿರಾಜಪೇಟೆಯಲ್ಲಿ ರಾರಾಜಿಸೋರು ಯಾರು..?
    ವಿರಾಜಪೇಟೆಯಿಂದ ಈ ಬಾರಿ ಜೆಡಿಎಸ್ ಮೊದಲೇ ಟಿಕೆಟ್ ಘೋಷಣೆ ಮಾಡಿಯಾಗಿತ್ತು. ರೈತ ಪರ ಹೋರಾಟಗಾರ ಸಂಕೇತ್ ಪೂವಯ್ಯ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾದಪ್ಪ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಕೆಜಿ ಬೋಪಯ್ಯ 67,250 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದ್ರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿಟಿ ಪ್ರದೀಪ್ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದ್ರು. ಈ ಬಾರಿ ಕಾಂಗ್ರೆಸ್ ನಿಂದ ಅರುಣ್ ಮಾಚಯ್ಯ ಸ್ಪರ್ಧಿಸ್ತಾ ಇದ್ದಾರೆ. ಹಾಗಾದ್ರೆ, ಈ ಬಾರಿ ವಿರಾಜ ಪೇಟೆಯ ಗದ್ದುಗೆಯಲ್ಲಿ ವಿರಾಜಮಾನರಾಗೋಕೆ ಯಾರಿಗೆ ಅವಕಾಶ ಮಾಡಿಕೊಡ್ತಾರೆ ಅನ್ನೋದಷ್ಟೇ ಕುತೂಹಲ.

  • ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ಮಡಿಕೇರಿ: ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬಲೂನ್ ಮರೆಮಾಡಿ ಕಿಸ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಡಗು ಜಿಲ್ಲೆ ವಿರಾಜಪೇಟೆಯ ಹೃದಯಭಾಗ ಗಡಿಯಾರ ಕಂಬದ ಬಳಿ ಈ ಘಟನೆ ನಡೆದಿದೆ. ಕಿಸ್ ಕೊಡೋದನ್ನ ನೋಡಲು ಜನ ಜಮಾಯಿಸಿದ್ದು, ಅಲ್ಲದೇ ಆ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಈ ಕಿಸ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಇದೊಂದು ಸಿನಿಮಾ ಚಿತ್ರೀಕರಣದ ಸೀನ್ ಅನ್ನೋದು ಮಾತ್ರ ಇದನ್ನ ಶೇರ್ ಮಾಡುತ್ತಿರೊ ಹಲವರಿಗೆ ಗೊತ್ತಿಲ್ಲ. ನಿರ್ದೇಶಕ ಓಂ ಪ್ರಕಾಶ್‍ರ ಹೊಸ ಸಿನಿಮಾ ಕೊಡಗಿನಲ್ಲಿ ಚಿತ್ರೀಕರಣವಾಗುತ್ತಿದೆ. ಈ ಸಿನಿಮಾಕ್ಕಾಗಿ ನಾಯಕ ಕೃಷ್ಣ, ನಾಯಕಿ ಕೃತಿಕಾ ರಸ್ತೆಯಲ್ಲಿ ಕಿಸ್ ಮಾಡಿದ್ದಾರೆ.