Tag: Vinay Guruji

  • ಎಷ್ಟು ದಿನ ಇರ್ತಿವೋ ಗೊತ್ತಿಲ್ಲ, ಇರಷ್ಟು ದಿನ ಜನಪರ ಕೆಲಸ ಮಾಡ್ತೀವಿ- ಸಿ.ಟಿ.ರವಿ

    ಎಷ್ಟು ದಿನ ಇರ್ತಿವೋ ಗೊತ್ತಿಲ್ಲ, ಇರಷ್ಟು ದಿನ ಜನಪರ ಕೆಲಸ ಮಾಡ್ತೀವಿ- ಸಿ.ಟಿ.ರವಿ

    ಚಿತ್ರದುರ್ಗ: ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಎಲ್ಲಾ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎನ್ನುವುದು ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದು ಸರ್ಕಾರದ ಅಸ್ಥಿತ್ವದ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವುದು ನ್ಯಾಯಾಲಯ. ಕಾನೂನು, ನ್ಯಾಯಾಲಯಕ್ಕಿಂತ ಯಾರೂ ಹಿರಿಯರಲ್ಲ. ಕೆಲವರು ಕಾನೂನಿಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಡಿಕೆಶಿ ವಿಚಾರದಲ್ಲಿ ಯಾರೇ ಅವರ ಬೆನ್ನಿಗೆ ನಿಂತರೂ ನ್ಯಾಯಾಲಯವೇ ತೀರ್ಪು ಕೊಡಲಿದೆ. ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಕೋರ್ಟ್ ತೀರ್ಪಿಗೆ ಎಲ್ಲರೂ ತೆಲೆ ಬಾಗಲೇಬೇಕು ಎಂದರು.

    ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯತೆಯ ವಿಷಯ. ನಾವು ಪ್ರತಿಪಾದಿಸಿದ ವಿಚಾರವನ್ನು ಎಂದೂ ಕೈ ಬಿಟ್ಟಿಲ್ಲ. ಅಕ್ರಮಣಕಾರಿ ಅಕ್ಬರ್ ನನ್ನು ವೈಭವೀಕರಿಸುವದನ್ನು ದೇಶ ಭಕ್ತರು ಸಹಿಸಲ್ಲ. ನ್ಯಾಯಾಲಯ ಇದೀಗ ವಿಚಾರಣೆ ನಡೆಸುತ್ತಿದೆ. ರಾಮಮಂದಿರ ವಿವಾದವನ್ನು ಪರಿಹರಿಸುವ ರೀತಿಯ ತೀರ್ಪು ಸುಪ್ರೀಂ ಕೋರ್ಟ್‍ನಿಂದ ಹೊರಬೀಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

    ಬ್ಯಾಂಕಿಂಗ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದೆವು. ಈ ಕುರಿತು ನಿರ್ಮಲಾ ಸೀತಾರಮನ್ ಜೊತೆಗೂ ಚರ್ಚಿಸಿದ್ದೆವು. ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ. ಈ ರೀತಿಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ ಈ ಹಿಂದೆಯೂ ಇದೇ ರೀತಿಯಾಗಿತ್ತು. ಆಗಿನಿಂದಲೂ ಒತ್ತಾಯಿಸುತ್ತ ಬಂದಿದ್ದೇವೆ. ಈಗಲೂ ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

  • ಎಚ್ಚರ ಎಂದು ಸಿಎಂರನ್ನು ತಬ್ಬಿಕೊಂಡು ಮುತ್ತಿಟ್ಟ ವಿನಯ್ ಗುರೂಜಿ

    ಎಚ್ಚರ ಎಂದು ಸಿಎಂರನ್ನು ತಬ್ಬಿಕೊಂಡು ಮುತ್ತಿಟ್ಟ ವಿನಯ್ ಗುರೂಜಿ

    ಚಿಕ್ಕಮಗಳೂರು: ಅಧಿಕಾರಕ್ಕೆ ಯಾವುದೇ ಸಂಚಕಾರ ಬಾರದಂತಿರಲಿ, ಉಳಿದ ಮೂರುವರೇ ವರ್ಷ ನಾನೇ ಸಿಎಂ ಆಗಿರಲೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಲ್ಕೈದು ಹೋಮ-ಹವನ, ಯಾಗ-ಯಜ್ಞವನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಯಜ್ಞದ ಬೆನ್ನಲ್ಲೇ ಸಿಎಂಗೆ ಅವಧೂತ ವಿನಯ್ ಗುರೂಜಿ ಎಚ್ಚರದಿಂದ ಹೆಜ್ಜೆ ಇಡಿ ಎಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಅವಧೂತ ವಿನಯ್ ಗುರೂಜಿಯ ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ, ಶತರುದ್ರಯಾಗ, ವಿಷ್ಣು ಸಹಸ್ರ ನಾಮ, ಮೃತ್ಯುಂಜಯ ಹೋಮ, ಲಲಿತ ಸಹಸ್ರನಾಮ ಹಾಗೂ ಗಣಪತಿ ಹೋಮ ನಡೆಸಿದರು.

    ವಿನಯ್ ಗುರೂಜಿಯ ಹೋಮದ ಮುಂದಾಳತ್ವ ವಹಿಸಿ, 45 ಪುರೋಹಿತರ ನೇತೃತ್ವದಲ್ಲಿ ಸುಮಾರು ಆರು ಗಂಟೆ ಹೋಮ-ಹವನ ಮಾಡಿಸಿದರು. ಆದರೆ ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಸಿಎಂ ಯಡಿಯೂರಪ್ಪಗೆ ತಬ್ಬಿಕೊಂಡು ನೆತ್ತಿಗೆ ಮುತ್ತಿಟ್ಟಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮೊದಲು ಎಚ್ಚರ, ಎಚ್ಚರದ ಹೆಜ್ಜೆ ಇಡು ಎಂದು ಸಲಹೆ ನೀಡಿದರು.

    ಇದರ ಬೆನ್ನೆಲ್ಲೇ ಹೀಗೆ ಬಾಚಿ ತಬ್ಬಿ ಮುತ್ತಿಕ್ಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರಿಗೆ ಅಧಿಕಾರ ಸಲೀಸಾಗಿಲ್ವಾ, ಅವರ ಮುಖ್ಯಮಂತ್ರಿ ಹಾದಿಯಲ್ಲೂ ಕಲ್ಲು-ಮುಳ್ಳುಗಳಿದ್ಯಾ, ಬಿಜೆಪಿ ಆಂತರಾಳದಲ್ಲಿ ಬಿಎಸ್‍ವೈ ಬಗ್ಗೆ ಏನಿದ್ಯೋ, ಅವಧೂತರಿಗೆ ಎಲ್ಲವೂ ಗೊತ್ತಿದ್ಯಾ ಎಂಬ ಹಲವು ಪ್ರಶ್ನೆಗಳು ಉದ್ಭವವಾಗಿವೆ.

    ವಿನಯ್ ಗುರುಜಿ ಎಚ್ಚರ ಎಂದಿದ್ದು ಉತ್ತರದ ನೆರೆ, ದಕ್ಷಿಣದ ಮಳೆಯ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವುದರಲ್ಲಿ ಎಚ್ಚರ ಎಂದರೋ ಅಥವಾ ನಿಮ್ಮ ಸಿಎಂ ಹಾದಿಯಲ್ಲೇ ಅನಾನುಕೂಲಗಳಿವೆ ಎಚ್ಚರ ಎಂದರೋ ಗೊತ್ತಿಲ್ಲ. ಆದರೆ ಎಚ್ಚರ ಎಂದು ತಬ್ಬಿಕೊಂಡು ನೆತ್ತಿಗೆ ಮುತ್ತಿಕ್ಕಿರೋದು ಮಾತ್ರ ಬಿಎಸ್‍ವೈ ಆತಂಕಕ್ಕಂತೂ ದೂಡಿದೆ.

  • ಫೇಸ್‍ಬುಕ್, ವಾಟ್ಸಾಪ್‍ನಿಂದ ಬ್ರೇಕಪ್ ಆಗಿ- ಯುವಕರಿಗೆ ವಿನಯ್ ಗುರೂಜಿ ಕಿವಿಮಾತು

    ಫೇಸ್‍ಬುಕ್, ವಾಟ್ಸಾಪ್‍ನಿಂದ ಬ್ರೇಕಪ್ ಆಗಿ- ಯುವಕರಿಗೆ ವಿನಯ್ ಗುರೂಜಿ ಕಿವಿಮಾತು

    – ವ್ಯಕ್ತಿತ್ವವೇ ನಿಜವಾದ ಸೌಂದರ್ಯ

    ಉಡುಪಿ: ಫೇಸ್ ಬುಕ್ ಮತ್ತು ವಾಟ್ಸಾಪ್ ನಿಂದ ಯುವಕರು ಆದಷ್ಟು ಬೇಗ ಬ್ರೇಕಪ್ ಆಗಿ. ಆ ಟೈಮಲ್ಲಿ ದೇಶದ ಬಗ್ಗೆ, ನಿಮ್ಮ ತಂದೆ-ತಾಯಿಗಳ ಬಗ್ಗೆ ಚಿಂತೆ ಮಾಡಿ ಎಂದು ಅವಧೂತ ವಿನಯ್ ಗುರೂಜಿ ಕರೆ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಲು ಪ್ರಯತ್ನಿಸಿದರು. ವಿದ್ಯಾಭ್ಯಾಸ ಮಾಡಿ, ವಿದೇಶಕ್ಕೆ ಹಾರುವುದನ್ನು ಕಡಿಮೆ ಮಾಡಿ. ದೇಶದಲ್ಲಿ ಇದ್ದು ಕೆಫೆ ಕಾಫಿ ಡೇಯ ಸಿದ್ಧಾರ್ಥ್ ರೀತಿಯ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

    ಕಾಲೇಜು ವಿದ್ಯಾರ್ಥಿಗಳಿಗೆ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಮುಖದ ಸೌಂದರ್ಯ ಸೌಂದರ್ಯವೇ ಅಲ್ಲ. ವ್ಯಕ್ತಿತ್ವವೇ ನಿಜವಾದ ಸೌಂದರ್ಯ ಆಗಬೇಕು. ವ್ಯಾಲೆಂಟೈನ್ ಡೇ ಮಾಡುವಂತೆ ವಾಲೆಂಟಿಯರ್ ಆಗಿ ಗಿಡ ನೆಡಿ. ಬ್ಲಡ್ ಕೊಡಿ. ಮನೆಯವರ ಕಷ್ಟಕ್ಕೆ ಆಧಾರವಾಗಿ. ದೇಶಕ್ಕೆ ಬೆನ್ನೆಲುಬು ಆಗಿ. ದೇಶದ ನದಿಗಳ ಬಗ್ಗೆ ಕಾಳಜಿ ಇರಲಿ. ದೇಹಕ್ಕೆ ನರಗಳೆಷ್ಟು ಮುಖ್ಯವೋ, ನದಿಗಳು ನಮಗೆ ಅಷ್ಟೇ ಮುಖ್ಯ ಎಂದು ಹೇಳಿದರು.

    2019- 2020 ನೇ ಸಾಲಿನ ಸರ್ವ ಕಾಲೇಜು ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನೀಯರ ಚುನಾವಣೆ ಉತ್ಸಾಹ, ವಿಜಯೋತ್ಸವ, ನೃತ್ಯ, ಅವಧೂತರಿಗೆ ಕೊಂಚ ಇರುಸು ಮುರುಸು ಆದಂತೆ ಕಂಡುಬಂತು.

  • ಸಿಎಂ ಬಳಿಯಿದೆ ಆತಂಕ ನಿವಾರಿಸುವ ಮಂತ್ರದಂಡದ ಪೆನ್

    ಸಿಎಂ ಬಳಿಯಿದೆ ಆತಂಕ ನಿವಾರಿಸುವ ಮಂತ್ರದಂಡದ ಪೆನ್

    ಬೆಂಗಳೂರು: ಶತಾಯ ಗತಾಯ ಸರ್ಕಾರ ರಚಿಸಲೇಬೇಕು ಸಿಎಂ ಆಗಲೇಬೇಕು ಎಂದು ಹಠಕ್ಕೆ ಬಿದ್ದು ಸರ್ಕಾರ ರಚಿಸಿದ ಬಿ.ಎಸ್ ಯಡಿಯೂರಪ್ಪನವರನ್ನು ಒಂದು ಶಕ್ತಿ ಕಾಯುತ್ತಿದೆಯಂತೆ. ಹಾಗಿದ್ರೆ ಆ ಒಂದು ಶಕ್ತಿ ಅವರ ಬಳಿ ಇರುವವರೆಗೂ ಬಿಎಸ್‍ವೈ ಅವರನ್ನ ಅಧಿಕಾರದಿಂದ ಇಳಿಸಲು ಸಾಧ್ಯವೇ ಇಲ್ವ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಹೌದು. ಸಿಎಂ ಯಡಿಯೂರಪ್ಪನವರ ಮಹಾನ್ ಶಕ್ತಿಯ ರಹಸ್ಯ ಅಡಗಿರುವುದು ಒಂದು ಪೆನ್ನಿನಲ್ಲಿ. ಸಿಎಂ ಅವರು ಸದಾ ತಮ್ಮ ಜೇಬಿನಲ್ಲಿ ಕಪ್ಪು ಬಣ್ಣದ ಪೆನ್ನೊಂದನ್ನು ಇಟ್ಟುಕೊಳ್ಳುತ್ತಿದ್ದಾರೆ. ಆ ಪೆನ್ನನ್ನು ಕೊಟ್ಟಿದ್ದು ಗೌರಿಗದ್ದೆಯ ದತ್ತಾತ್ರೆಯ ಆಶ್ರಮದ ವಿನಯ್ ಗುರೂಜಿ. ಯಡಿಯೂರಪ್ಪ ಜುಲೈ 26 ರಂದೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಮೊದಲೇ ಭವಿಷ್ಯ ನುಡಿದಿದ್ದ ಗುರೂಜಿ, ಪೆನ್ ಒಂದನ್ನ ಯಡಿಯೂರಪ್ಪನವರಿಗೆ ಗಿಫ್ಟ್ ಆಗಿ ಕಳುಹಿಸಿಕೊಟ್ಟಿದ್ದರು. ಅದೇ ಪೆನ್ನನ್ನು ಪ್ರಮಾಣ ವಚನ ಸ್ವೀಕರಿಸುವಾಗ ಬಳಸಿ ಎಂದು ಸಲಹೆ ಕೂಡ ನೀಡಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ರಾಜಭವನದ ಅಧಿಕಾರಿ ಕೊಟ್ಟ ಪೆನ್ನನ್ನು ನಿರಾಕರಿಸಿ ಗುರೂಜಿ ಕೊಟ್ಟ ಪೆನ್ನಿನಲ್ಲೇ ಸಹಿ ಮಾಡಿದ್ದರು. ಈಗಲೂ ಪ್ರತಿ ಫೈಲಿಗೆ ಸಹಿ ಹಾಕುವಾಗಲು ಗುರೂಜಿ ಕೊಟ್ಟ ಪೆನ್ನನ್ನೇ ಬಳಸುತ್ತಿದ್ದಾರೆ. ಅಲ್ಲದೆ ಸಿಎಂ ಯಡಿಯೂರಪ್ಪ ಸದಾ ಆ ಪೆನ್ನನ್ನು ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ರಚಿಸುವಾಗಲೂ ಸಾಕಷ್ಟು ಅಗ್ನಿ ಪರೀಕ್ಷೆ ಎದುರಿಸಿದ ಸಿಎಂ ಬಿಎಸ್‍ವೈ, ಸಂಪುಟ ರಚನೆಯ ವೇಳೆಯೂ ಸಾಕಷ್ಟು ಕಸರತ್ತು ನಡೆಸಿ ಅಡ್ಡಿ ಆತಂಕಗಳನ್ನು ಎದುರಿಸಿದ್ದರು.

    ಪ್ರಮಾಣ ವಚನ ಸ್ವೀಕರಿಸಿ ಮೊದಲ ಸಹಿ ಹಾಕುವಲ್ಲಿಂದ ಸದಾ ಆ ಪೆನ್ನನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಿ ಶುಭವಾಗುತ್ತದೆ ಎಂದು ಗುರೂಜಿ ಹೇಳಿದ್ದಾರಂತೆ. ಆ ಪೆನ್ನು ತಮಗೆ ಎದುರಾಗುವ ಎಲ್ಲಾ ಅಡ್ಡಿ ಆತಂಕವನ್ನ ನಿವಾರಿಸುವ ಮಂತ್ರ ದಂಡ ಎಂಬುದು ಸಿಎಂ ಯಡಿಯೂರಪ್ಪನವರ ನಂಬಿಕೆಯಾಗಿದೆ. ಆದ್ದರಿಂದ ಎಲ್ಲಾ ಕೆಲಸಕ್ಕೂ ಅದೇ ಪೆನ್ನು ಬಳಸುವ ಮೂಲಕ ಸಿಎಂ ಯಡಿಯೂರಪ್ಪ ತಮ್ಮ ಅದೃಷ್ಟದ ಮಂತ್ರ ದಂಡ ಆ ಪೆನ್ನು ಅನ್ನೋ ನಂಬಿಕೆ ಇಟ್ಟುಕೊಂಡು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳತೊಡಗಿದ್ದಾರೆ ಎನ್ನಲಾಗಿದೆ.

  • ವಿನಯ್ ಗುರೂಜಿ ಹುಟ್ಟುಹಬ್ಬ – ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಾಸ್ಟರ್ ಆನಂದ್

    ವಿನಯ್ ಗುರೂಜಿ ಹುಟ್ಟುಹಬ್ಬ – ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಾಸ್ಟರ್ ಆನಂದ್

    ಬೆಂಗಳೂರು: ಕಲಿಯುಗ ಅವಧೂತ ವಿನಯ್ ಗುರೂಜಿ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸಂದೀಪ್ ಸೇವಾ ನಿಲಯದ ಮಕ್ಕಳ ಜೊತೆ ಮಾಸ್ಟರ್ ಆನಂದ್ ಹುಟ್ಟುಹಬ್ಬ ಆಚರಿಸಿದ್ದಾರೆ.

    ಬೆಂಗಳೂರಿನ ಕಸ್ತೂರಿ ಬಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಂಧ ಮತ್ತು ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಅನ್ನದಾನ ಮಾಡುವ ಮೂಲಕ ಸರಳ ಹಾಗೂ ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು. ಇದೇ ವೇಳೆ ನಟ ಮಾಸ್ಟರ್ ಆನಂದ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು.

    ಈ ವೇಳೆ ಮಾತನಾಡಿದ ಮಾಸ್ಟರ್ ಆನಂದ್ ಅವರು, ವಿಜಯ್ ಗುರೂಜಿ ಅವರ ಹುಟ್ಟುಹಬ್ಬ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಬಡ ಮಕ್ಕಳಿಗಾಗಿ ಇಲ್ಲಿ ಕೇಕ್ ಕಟ್ ಮಾಡಿ ಅನ್ನದಾನ ಆಯೋಜಿಸಿದ್ದೇವೆ. ಸರಳವಾಗಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿ ಎಂಬುದು ಗುರುಗಳ ಸಂದೇಶ ಎಂದರು.

    ಭಕ್ತಾಧಿಗಳು ತಮ್ಮ ಖುಷಿಗಾಗಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಗುರುಗಳು ಇದನ್ನು ತಡೆದಿದ್ದರು. ಆದರೂ ಭಕ್ತರು ಇದೇ ರೀತಿ ಮಾಡುತ್ತಿದ್ದರು. ಹಾಗಾಗಿ ಗುರೂಜಿ ಉಡುಗೊರೆಗಾಗಿ ಹಣವನ್ನು ವ್ಯರ್ಥ ಮಾಡುವ ಮೊದಲು ಸದ್ವಿನಿಯೋಗ ಮಾಡಿ. ಹಣದಿಂದ ಯಾರಿಗೆ ಏನು ಅವಕಾಶ ಇದೆಯೋ ಅದನ್ನು ಪೂರೈಸಿ ಅದು ನನಗೆ ಸಲ್ಲುತ್ತೆ ಎಂದು ಹೇಳುತ್ತಾರೆ ಎಂದು ಆನಂದ್ ಹೇಳಿದರು.

  • ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ಬೆಂಗಳೂರು: ಹಲವಾರು ಮಂದಿಗೆ ಉದ್ಯೋಗ ನೀಡಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ತಂದೆ ಏನೋ ಸಮಸ್ಯೆ ಇದೆ. ಹೀಗಾಗಿ ಗಮನಹರಿಸು ಎಂದು ವಿನಯ್ ಗುರೂಜಿ ಹಿರಿಯ ಪುತ್ರ ಅಮರ್ತ್ಯಗೆ ಸೂಚನೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಭಾನುವಾರ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಗುರೂಜಿಯನ್ನು ಭೇಟಿ ಮಾಡಿದ್ದರು. ಡಾಲರ್ಸ್ ಕಾಲೋನಿಯ ಭಕ್ತರೊಬ್ಬರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ತಂದೆ ಒತ್ತಡ ಹಾಗೂ ವ್ಯವಹಾರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ಯಾವುದೇ ಕಾರಣಕ್ಕೂ ತಂದೆಯನ್ನು ಬಿಟ್ಟಿರಬೇಡ, ಅವರ ಜೊತೆಯಲ್ಲೇ ಇರು. ಈ ಸಮಯದಲ್ಲಿ ನೀನು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಅವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಸೂಕ್ಷ್ಮವಾಗಿ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬರೀ ನೀರು ಕಾಣಿಸ್ತಿದೆ:
    ಸಿದ್ಧಾರ್ಥ್ ನಾಪತ್ತೆಯಾಗುತ್ತಿದ್ದಂತೆಯೇ ಸೋಮವಾರ ತಡರಾತ್ರಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮ ಕೃಷ್ಣ ಅವರು ವಿನಯ್ ಗುರೂಜಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಗುರೂಜಿಯವರು, ನನಗೆ ಬರೀ ನೀರು ಮಾತ್ರ ಕಾಣಿಸುತ್ತಿದೆ. ಬೇರೇನೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಸೋಮವಾರ ಸಂಜೆ 7 ಗಂಟೆ ಸುಮಾರಿಂದ ನಾಪತ್ತೆಯಾಗಿರುವ ಸಿದ್ಧಾರ್ಥ್ ಪ್ರಕರಣ ಇದೀಗ ಭಾರೀ ಅನುಮಾನಕ್ಕೀಡಾಗಿದೆ. ಸಿದ್ಧಾರ್ಥ್ ಕುಟುಂಬಸ್ಥರು ಆತಂಕ್ಕೀಡಾದರೆ ಇತ್ತ ನದಿ ತಟದಲ್ಲಿ ಸಿದ್ಧಾರ್ಥ್ ಗಾಗಿ ಹುಡುಕಾಟ ಭರದಿಂದ ಸಾಗುತ್ತಿದೆ.

  • ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿರುವ ವಿನಯ್ ಗುರೂಜಿಗಾಗಿ ಗುಹೆ ನಿರ್ಮಾಣವಾಗುತ್ತಿದೆ.

    ಹೌದು. ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಗುಹೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ವಿನಯ್ ಗುರೂಜಿ ಗುಹೆಯಲ್ಲಿ ಧ್ಯಾನ ಮಾಡಲಿದ್ದಾರೆ. ಏಕಾಗ್ರತೆಗಾಗಿ ಭಕ್ತರಿಂದ ದೂರ ಉಳಿಯುವ ನಿಟ್ಟಿನಲ್ಲಿ ಗುರೂಜಿ ಈ ಗುಹೆ ಸೇರಲಿದ್ದಾರೆ ಎನ್ನಲಾಗಿದೆ.

    ಪ್ರತಿ ಶುಕ್ರವಾರ ಮಾತ್ರ ಭಕ್ರಿಗೆ ದರ್ಶನ ಕೊಡ್ತಿರೋ ಗುರೂಜಿಯವರು ಕೆಲ ದಿನಗಳಲ್ಲೇ ಗುಹೆಯೊಳಗೆ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಸಿಮೆಂಟ್ ನಿಂದ ನಿರ್ಮಾಣವಾಗ್ತಿರೋ ಈ ಕೃತಕ ಗುಹೆಯನ್ನು ಗುರೂಜಿಯವರೇ ತಮ್ಮ ಸಿಬ್ಬಂದಿಗೆ ಹೇಳಿ ಸಿದ್ಧಪಡಿಸಿದ್ದಾರೆ.

    ಗುರೂಜಿ ಈ ಹಿಂದೆ ಹಿರಿಯ ರಾಜಕಾರಣಿಗಳಿಂದ ಪಾದಪೂಜೆ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಗುರೂಜಿಯ ಏಕಾಗ್ರತೆಗೆ ಭಂಗವಾಗಿದೆಯಂತೆ. ಇದರಿಂದ ದೂರವಾಗಲು ಗುಹೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದು, ಇದೇ ತಿಂಗಳಲ್ಲಿ ಗುಹೆ ಸಿದ್ಧವಾಗಿ ಪ್ರವೇಶ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ನಾಗಮಂಡಲ, ಭೂತಾರಾಧನೆಯ ಕುರಿತು ಹೇಳಿಕೆ – ವಿನಯ್ ಗುರೂಜಿ ವಿರುದ್ಧ ಕರಾವಳಿಯಲ್ಲಿ ಆಕ್ರೋಶ

    ನಾಗಮಂಡಲ, ಭೂತಾರಾಧನೆಯ ಕುರಿತು ಹೇಳಿಕೆ – ವಿನಯ್ ಗುರೂಜಿ ವಿರುದ್ಧ ಕರಾವಳಿಯಲ್ಲಿ ಆಕ್ರೋಶ

    ಮಂಗಳೂರು: ಭೂತಾರಾಧನೆ ಮತ್ತು ನಾಗಾರಾಧನೆ ಕರಾವಳಿ ಜನರು ಆರಾಧಿಸುವ ಭಕ್ತಿಯ ಆಚರಣೆ. ಆದರೆ ಚಿಕ್ಕಮಗಳೂರು ಮೂಲದ ಅವಧೂತ ವಿನಯ್ ಗುರೂಜಿ, ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

    ಕರಾವಳಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ್ ಗುರೂಜಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಜನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿದ್ದಾರೆ.

    ತುಳುನಾಡಿನ ಭೂತಗಳು ಬ್ರಾಹ್ಮಣರ ಮನೆಯಲ್ಲಿ ಇಡ್ಲಿ ಸಾಂಬಾರ್ ಸ್ವೀಕರಿಸಿದರೆ, ಶೆಟ್ರ ಮನೆಯಲ್ಲಿ ಕೋಳಿ ಸ್ವೀಕಾರ ಮಾಡುತ್ತದೆ. ಇದೇನು ಭೂತಗಳಲ್ಲೂ ವೈರುಧ್ಯ, ತಾರತಮ್ಯ ಇದೆಯೇ? ದೇವರಿರುವುದು ನಮ್ಮಲ್ಲಿ ಶ್ರದ್ಧೆ ತರಿಸಲು ಹೊರತು ಅಂಧ ವಿಶ್ವಾಸಗಳಿಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಿನಯ್ ಗುರೂಜಿಯ ಈ ಮಾತುಗಳ ಬಗ್ಗೆ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದೆ.

    ಹಿಂದಿನಿಂದ ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ನನ್ನ ನಮಸ್ಕಾರ. ಆದರೆ ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡಬಾರದು. ಯಾರ ಕಣ್ಣು ಬೇಕಾದರೂ ಮುಚ್ಚಿಸಬಹುದು. ಆದರೆ ಭಗವಂತನ ಕಣ್ಣು ಮುಚ್ಚಿಸಲು ಸಾಧ್ಯವಿಲ್ಲ. ಸೃಷ್ಟಿ ಇರುವುದು ಎಷ್ಟು ಸತ್ಯವೋ ಅದೇ ರೀತಿ ಸೃಷ್ಟಿಕರ್ತ ಇರುವುದು ಅಷ್ಟೇ ಸತ್ಯ ಎಚ್ಚರವಾಗಿರಿ ಎಂದರು.

    ನಾಗಪಾತ್ರಿಗಳು ಮುಖಕ್ಕೆ ಹಿಂಗಾರ ಲೇಪಿಸಿಕೊಂಡು ಹೊರಳಾಡುತ್ತಾರೆ. ಅದನ್ನು ನೋಡಲು ಒಂದು ಜನರ ಗುಂಪು. ಆ ಹಿಂಗಾರ ಬೆಳೆಯಲು ರೈತ ಆರು ತಿಂಗಳ ಕಾಲ ಬೆವರು ಹರಿಸುತ್ತಾನೆ. ನಾಗಪಾತ್ರಿಗಳಿಗೆ ಇಷ್ಟಿಷ್ಟು ಚಿನ್ನ ಹಾಕಬೇಕೆಂದು ಯಾವ ಸುಬ್ರಹ್ಮಣ್ಯ ಬಂದು ಹೇಳಿದ್ದಾನೆ. ಅರುಣಾಚಲ ಪ್ರದೇಶಕ್ಕೆ ರಮಣ ಮಹರ್ಷಿಯಾಗಿ ಸುಬ್ರಹ್ಮಣ್ಯ ಬಂದಿದ್ದ. ಆದರೆ ಆತ ಲಂಗೋಟಿ ಹಾಕಿಕೊಂಡು ಬಂದಿದ್ದನು. ಅವನ ಹೆಸರು ಹೇಳಿಕೊಂಡು ನಾಟಕವಾಡಿದರೆ ಸರಿಯಿರಲ್ಲ. ಇದು ನನ್ನ ವಾರ್ನಿಂಗ್ ಎಂದು ಹೇಳಿದ್ದಾರೆ.

  • ಸ್ವತಃ ಶೌಚಾಲಯ, ಬಸ್ ಸ್ಟ್ಯಾಂಡ್ ಕ್ಲೀನ್ ಮಾಡಿದ ವಿನಯ್ ಗುರೂಜಿ!

    ಸ್ವತಃ ಶೌಚಾಲಯ, ಬಸ್ ಸ್ಟ್ಯಾಂಡ್ ಕ್ಲೀನ್ ಮಾಡಿದ ವಿನಯ್ ಗುರೂಜಿ!

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಜನರಿಂದ ಖ್ಯಾತಿ ಪಡೆದಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ.

    ಭಾನುವಾರ ಹರಿಹರಪುರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವಧೂತ ವಿನಯ್ ಗುರೂಜಿಯವರು, ಪೊರಕೆ ಹಿಡಿದು ಕೊಂಡು ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ಇದಲ್ಲದೇ ಸ್ವತಃ ಬಸ್ ಸ್ಟ್ಯಾಂಡ್‍ನಲ್ಲಿರುವ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸಿಕೊಟ್ಟಿದ್ದಾರೆ.

    ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ವಿನಯ್ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ದರು. ಅಷ್ಟೇ ಅಲ್ಲದೇ ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ದರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುರ್ದೀಘ 3 ಗಂಟೆಗಳ ಕಾಲ ವಿನಯ್ ಗುರೂಜಿ ಜೊತೆ ಬಿಎಸ್‍ವೈ ಮಾತುಕತೆ

    ಸುರ್ದೀಘ 3 ಗಂಟೆಗಳ ಕಾಲ ವಿನಯ್ ಗುರೂಜಿ ಜೊತೆ ಬಿಎಸ್‍ವೈ ಮಾತುಕತೆ

    ಚಿಕ್ಕಮಗಳೂರು: ನಡೆದಾಡುವ ದೈವ ಎಂದೇ ಖ್ಯಾತಿಯಾಗಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರನ್ನ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ಸುಮಾರು 10.30ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೈಂದೂರು ಶಾಸಕ ಪ್ರಭಾಕರ್ ಶೆಟ್ಟಿ ಜೊತೆ ಯಡಿಯೂರಪ್ಪ ಆಗಮಿಸಿದ್ದಾರೆ. ಬಳಿಕ ಮಠದ ಒಳಗೆ ಹೋಗಿ ಸುಮಾರು 12.30ರ ತನಕ ಮೂರು ಗಂಟೆಗಳ ಕಾಲ ಮೂವರು ಸುರ್ದೀಘವಾಗಿ ಮಾತುಕತೆಯನ್ನು ನಡೆಸಿದ್ದಾರೆ. ನಂತರ ಅವರ ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದರ ಬಗ್ಗೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

    ವಿನಯ್ ಗುರೂಜಿ ನಡೆದಾಡುವ ದೈವ ಎಂದೇ ಖ್ಯಾತಿಯಾಗಿದ್ದು, ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ದರು. ಅಷ್ಟೇ ಅಲ್ಲದೇ ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv