Tag: Vijugouda patil

  • ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಬೆಂಗಳೂರು: ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನನ್ನ ಮಗನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿಸುತ್ತೇನೆ ಎಂದು ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಹೇಳಿದ್ದಾರೆ.

    ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್ ಬಳಿ ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಟೋಲ್ ಬಳಿ ಹೋಗಿದ್ದು ನಿಜ. ಟೋಲ್‌ನಲ್ಲಿದ್ದ ಸಿಬ್ಬಂದಿ ಯಾರ ವಾಹನ ಅಂತ ಕೇಳಿದ್ದಾರೆ. ನಾನು ವಿಜೂಗೌಡ ಅವರ ಮಗ ಅಂತ ಹೇಳಿದ್ದಾನೆ. ಯಾವ ವಿಜೂಗೌಡ? ಅವರ ಮಗ ಆದ್ರೆ ಏನಂತೆ ಟೋಲ್ ಕಟ್ಟಿ ಹೋಗಬೇಕು ಅಂತ ಹೇಳಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ನಾವು ಅಲ್ಲಿ ದಿನ ಹೋಗೋದು ಬರೋದು ಮಾಡುತ್ತೇವೆ. ನಮ್ಮನ್ನ ಗುರುತು ಹಿಡಿಬೇಕು ಅಂತ ಹೇಳಿದ್ದಾನೆ. ನನ್ನ ಮಗ ಹೊಡೆದಿಲ್ಲ. ಹಿಂದಿನಿಂದ ಬಂದು ಅವನ ಸ್ನೇಹಿತರೆಲ್ಲ ಸೇರಿ ಹೊಡೆದಿದ್ದಾರೆ. ನನ್ನ ಮಗ ಜಗಳ ಬಿಡಿಸಲು ಹೋಗಿದ್ದಾನೆ ಅಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಎಲ್ಲರೂ ಟೋಲ್ ಕಟ್ಟಲೇಬೇಕು. ಕಟ್ಟುವುದಿಲ್ಲ ಅಂತ ನನ್ನ ಮಗ ಹೇಳಿಲ್ಲ. ಆದರೆ ಯಾರದ್ರೂ ತಂದೆ ಬಗ್ಗೆ ಮಾತನಾಡಿದರೆ ಕೋಪ ಬರುತ್ತದೆ ಅಲ್ವಾ? ಹಾಗಾಗಿ ನನ್ನ ಮಗ ಕೋಪದಿಂದ ಮಾತನಾಡಿದ್ದಾನೆ. ಈ ವಿಚಾರದಲ್ಲಿ ನಾನು ನನ್ನ ಮಗನನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

    ಯಾರೆಲ್ಲ ಹಲ್ಲೆ ಮಾಡಿದ್ದಾರೆ ಅವರೆಲ್ಲರಿಗೂ ನಾನು ಬೈದಿದ್ದೇನೆ. ಅಲ್ಲದೇ ಕ್ಷಮಾಪಣೆ ಕೇಳಬೇಕು ಅಂತ ಹೇಳಿದ್ದೇನೆ. ಯಾರೂ ತಪ್ಪು ಮಾಡಿದ್ರೂ ಕ್ಷಮೆ ಕೇಳಬೇಕು. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.

    ಉಪ್ಪು ತಿಂದವರೂ ನೀರು ಕುಡಿಯಲೇ ಬೇಕು. ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ನನ್ನ ಮಗ ತಪ್ಪು ಮಾಡಿದ್ರೆ ಕ್ಷಮೆ ಕೇಳಿಸುತ್ತೇನೆ. ನನ್ನ ಮಗ ತಪ್ಪು ಮಾಡಿರುವ ಬಗ್ಗೆ ನನಗೆ ಇನ್ನೂ ಸಂಶಯವಿದೆ. ನಾನೇ ಖುದ್ದು ಸ್ಥಳಕ್ಕೆ ಹೋಗಿ ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

  • ಎಂಎಲ್‍ಸಿ ಮಾಡೋಕೆ ಕುಮಾರಸ್ವಾಮಿ 25 ಕೋಟಿ ರೂ. ಕೇಳಿದ್ರು: ವಿಜುಗೌಡ ಪಾಟೀಲ್

    ಎಂಎಲ್‍ಸಿ ಮಾಡೋಕೆ ಕುಮಾರಸ್ವಾಮಿ 25 ಕೋಟಿ ರೂ. ಕೇಳಿದ್ರು: ವಿಜುಗೌಡ ಪಾಟೀಲ್

    ವಿಜಯಪುರ: ನನ್ನನ್ನ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಲು 25 ಕೋಟಿ ರೂ. ನೀಡಬೇಕೆಂದು ಅಂತ ಸಿಎಂ ಕುಮಾರಸ್ವಾಮಿ ಅವರು 2014ರಲ್ಲಿ ಕೇಳಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ವಿಧಾನಸಭಾ ಚುನಾವಣಾ ವೇಳೆ ಕುಮಾರಸ್ವಾಮಿ ಅವರು ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ನಾನು 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತೆ. ಇದರಿಂದಾಗಿ ನನ್ನನ್ನ ವಿಧಾನ ಪರಿಷತ್ ಸದಸ್ಯನಾಗಿ ಮಾಡಬೇಕು ಅಂತ ಮತಕ್ಷೇತ್ರದ ಜನರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು. ಆದರೆ ಅವರು 25 ಕೋಟಿ ರೂ. ಕೊಡುವಂತೆ ಕೇಳಿದರು. ಇದಕ್ಕೆ ಪೂರಕ ದಾಖಲೆಗಳು ನನ್ನ ಬಳಿ ಇವೆ ಎಂದು ದೂರಿದ್ದಾರೆ.

    ಹಣ ಕೇಳಿದ ಕುಮಾರಸ್ವಾಮಿ ಅವರು, ಕಾರ್ಯಕರ್ತರಿಗೆ ಅವಮಾನ ಮಾಡಿದರು. ನಿಮ್ಮನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ವಿಜಯಪುರ ಜಿಲ್ಲೆಯ ಅಭಿವೃದ್ಧಿಯಾಗುತ್ತಾ ಅಂತ ವ್ಯಂಗ್ಯವಾಡಿದರು. ಈಗ ಅದನ್ನು ಮರೆತು ನನಗೆ ಟೋಪಿ ಹಾಕುತ್ತಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ನಿಜವಾಗಿ ಯಾರು ಯಾರಿಗೆ ಮೋಸ ಮಾಡಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಕಿಡಿಕಾರಿದರು.

    ನಾಗಠಾಣ ಶಾಸಕ ದೇವಾನಂದ್ ಚೌಹಾಣ್ ಅವರಿಗೆ ನಾನು ಬಿಜೆಪಿ ಸೇರುವಂತೆ ಬೆದರಿಕೆ ಒಡ್ಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಬಳಿ ಇರುವ ದಾಖಲೆಗಳನ್ನು ಪ್ರಸ್ತುತ ಪಡಿಸಲಿ. ಅವರು ಒಪ್ಪುವುದಾದರೆ ಮುಖಾಮುಖಿ ಚರ್ಚೆಗೂ ನಾನು ಸಿದ್ಧ ಸವಾಲು ಹಾಕಿದರು.

    ಬಿಜೆಪಿಗೆ ಬರುವಂತೆ ದೇವಾನಂದ ಚವ್ಹಾಣ ಅವರಿಗೆ ಆಹ್ವಾನ ನೀಡಿಲ್ಲ. ನಿಜ ಹೇಳಬೇಕು ಅಂದ್ರೆ ಕುಮಾರಸ್ವಾಮಿ ಅವರೇ ನನಗೆ ಮೋಸ ಮಾಡಿದ್ದಾರೆ. 2013ರ ಚುನಾವಣೆಯಲ್ಲಿ ನನ್ನ ಪರ ಪ್ರಚಾರಕ್ಕೆ ಗೈರಾಗಿ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv