Tag: Vijayalaya

  • ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ಲಂಡನ್: ದೇಶದ ಬ್ಯಾಂಕ್‍ಗಳಿಂದ ಸಾಲಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ತಾನು ಭಾರತವನ್ನು ತೊರೆಯುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.

    ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಇಂದು ವಿಜಯ್ ಮಲ್ಯ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಮಲ್ಯ, ಕೋರ್ಟ್ ಪ್ರವೇಶಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಈ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಹೊರಾಂಗಣದಲ್ಲಿ ಮಾತನಾಡುವ ವೇಳೆ ಮಲ್ಯ ಈ ಕುರಿತು ಮಾತನಾಡಿದ್ದು, ನನಗೆ ಜಿನಿವಾದಲ್ಲಿ ಪೂರ್ವ ನಿರ್ಧರಿತ ಸಭೆ ಇತ್ತು. ಅದ್ದರಿಂದ ಅಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೂ ಮುನ್ನ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಬ್ಯಾಂಕ್‍ಗಳಿಗೆ ನೀಡಬೇಕಿದ್ದ ಹಣ ಮರುಪಾವತಿ ಬಗ್ಗೆ ಮಾತುಕತೆ ನಡೆಸಿದ್ದೆ. ಇದು ಸತ್ಯ ಎಂದು ಹೇಳಿದ್ದಾರೆ.

    ವಿಜಯ್ ಮಲ್ಯರ ಹೇಳಿಕೆ ಹೊರ ಬೀಳುತ್ತಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2014ರ ವರೆಗೂ ವಿಜಯ್ ಮಲ್ಯರಿಗೆ ನನ್ನ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದಾದರೇ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಮಲ್ಯ ಸಂಸತ್ ಭವನಕ್ಕೆ ಹಾಜರಾಗಿದ್ದರು. ಈ ವೇಳೆ ನಿಯಮಗಳನ್ನು ಮೀರಿ ನಡೆದ ಮಲ್ಯ ನಾನು ನನ್ನ ಕೊಠಡಿಗೆ ತೆರಳುತ್ತಿದ್ದ ವೇಳೆ ಎದುರು ಬಂದು ನಡೆದುಕೊಂಡು ಹೋಗುತ್ತಾ ಕೆಲ ಸಮಯ ಮಾತನಾಡಲು ಯತ್ನಿಸಿದ್ದರು. ಆದರೆ ನಾನು ಅವರ ಮಾತನ್ನು ಮುಂದುವರಿಸಲು ಅವಕಾಶ ನೀಡದೇ ನನ್ನ ಜೊತೆ ಮಾತನಾಡುವ ಅಗತ್ಯವಿಲ್ಲ. ಏನಿದ್ದರೂ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಎಂದು ಸೂಚಿಸಿದ್ದೆ ಎಂದು ಹೇಳಿದರು.

    https://www.facebook.com/notes/arun-jaitley/the-factual-situation/878476325674250/

    ಮಲ್ಯ ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಾತುಕತೆ ನಡೆಸಲು ಯತ್ನಿಸಿದ್ದರು. ಆದರೆ ಅವರಿಗೆ ನಾನು ಭೇಟಿ ಮಾಡಲು ಯಾವುದೇ ಅವಕಾಶವನ್ನೇ ನೀಡಿಲ್ಲ ಎಂದಾದರೆ ಇನ್ನು ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಮಲ್ಯರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ವಿಜಯ್ ಮಲ್ಯ ದೇಶ ಬಿಡುವ ಮುನ್ನ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. ಮಲ್ಯ ದೇಶಬಿಟ್ಟು ತೆರಳಲು ಬೇಕಾದ ದಾಖಲೆಗಳನ್ನು ನೀಡಲು ಜೇಟ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ.

    ಇನ್ನು 62 ವರ್ಷದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡುವ ಮೂಲಕ ಭಾರತದಲ್ಲಿ ವಿಚಾರಣೆ ಎದುರಿಸಲು ಅವಕಾಶ ನೀಡುವ ಕುರಿತು ವಿಚಾರಣೆ ನಡೆಸಿದ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಖ್ಯ ನ್ಯಾ. ಎಮ್ಮಾ ಅರ್ಬುತ್ನೋಟ್, ಡಿಸೆಂಬರ್ 10ಕ್ಕೆ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv