Tag: video conference

  • ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರು 10 ಹೆಲ್ತ್ ಟಿಪ್ಸ್ ಗಹಳನ್ನು ನೀಡಿದ್ದಾರೆ.

    ತಲೆ ಬರಹ ಓದಿ ಕನ್‍ಫ್ಯೂಸ್ ಆಗಬೇಡಿ. ಮೋದಿ ಸರ್ಕಾರದ ಅಯುಷ್ ಇಲಾಖೆ ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವೊಂದು ಸಲಹೆ ನೀಡಿದೆ. ಈ ಸಲಹೆ ಇರುವ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಓದಿ: ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    10 ಹೆಲ್ತ್ ಟಿಪ್ಸ್
    1. ದಿನವಿಡಿ ಬಿಸಿ ನೀರು ಕುಡಿಯಿರಿ.
    2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
    3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
    4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
    5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
    6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
    7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
    8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
    9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
    10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು.

  • ಹೊರಗೆ ಬಂದ್ರೆ ಅರೆಸ್ಟ್ – ಸಿಎಂ ಖಡಕ್ ಸೂಚನೆ

    ಹೊರಗೆ ಬಂದ್ರೆ ಅರೆಸ್ಟ್ – ಸಿಎಂ ಖಡಕ್ ಸೂಚನೆ

    – ಅಂತರ್ ರಾಜ್ಯ, ಎಲ್ಲಾ ಜಿಲ್ಲೆಗಳ ಬಾರ್ಡರ್ ಸೀಲ್

    ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ಮನೆಯಿಂದ ಹೊರಗಡೆ ಬಂದು ಸುತ್ತಾಡುತ್ತಿದ್ದಾರೆ. ಹೀಗಾಗಿ ನಾಳೆಯಿಂದ ಮನೆಯಿಂದ ಹೊರ ಬಂದವರನ್ನು ಅರೆಸ್ಟ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಪೊಲೀಸರು ಎಷ್ಟೇ ಹೇಳಿದರೂ ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ. ಇತ್ತ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಾಳೆಯಿಂದ ಲಾಕ್‍ಡೌನ್ ಉಲ್ಲಂಘಿಸಿ ಹೊರಗಡೆ ತಿರುಗಾಡಿದರೆ ಅರೆಸ್ಟ್ ಮಾಡಿ ಎಂದು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಯಡಿಯೂರಪ್ಪ ಡಿಸಿ ಮತ್ತು ಎಸ್‍ಪಿಗಳಿಗೆ ಮೌಖಿಕ ಆದೇಶ ರವಾನಿಸಿದ್ದಾರೆ.

    ಕೊರೊನಾಗೆ ಕರ್ನಾಟಕ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸಿಗಳ ಜೊತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಜಿಲ್ಲೆಗಳ ಪರಿಸ್ಥಿತಿ ತಿಳಿಯಲು ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ಮೂಲಕ ಸಭೆ ನಡೆಸಿದ್ದು, ಸಚಿವರಾದ ಅಶೋಕ್, ಬೊಮ್ಮಾಯಿ, ಸುರೇಶ್ ಕುಮಾರ್, ಸುಧಾಕರ್, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

    ವಿಡಿಯೋ ಕಾನ್ಫರೆನ್ಸ್‍ನ ಮುಖ್ಯಂಶಗಳು:
    * ಮಾನ್ಯ ಪ್ರಧಾನ ಮಂತ್ರಿ ಅವರ ಸೂಚನೆಯಂತೆ 21 ದಿನಗಳ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ.
    * ಲಾಕ್‍ಡೌನ್ ಮೀರಿ ಹೊರ ಬರುವವರನ್ನು ಅರೆಸ್ಟ್ ಮಾಡುವಂತೆ ಸೂಚನೆ.
    * ಅಂತರ್ ರಾಜ್ಯ ಮತ್ತು ಎಲ್ಲಾ ಜಿಲ್ಲೆಯ ಬಾರ್ಡರ್‌ಗಳನ್ನು ಸೀಲ್ ಮಾಡಬೇಕು.
    * ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡಬೇಕು.
    * ಈಗಾಗಲೇ ಡಿಸ್ಟಲರಿ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದ್ದು, ಕೆಲವು ಕಂಪನಿಗಳ ಉಚಿತವಾಗಿ ನೀಡಲು ಮುಂದೆ ಬಂದಿವೆ. ಅದರ ಸದಾವಕಾಶ ಬಳಕೆಗೆ ಸೂಚನೆ

    * ನಿಮ್ಮ ಏನೇ ಸಮಸ್ಯೆ ಇದ್ದರು ಕೂಡಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು.
    * ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್‍ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ಧ ಕ್ರಮ.
    * ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಮ.
    * ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್‍ಗಾಗಿ ಮೀಸಲಿಡುವಂತೆ ಸೂಚನೆ.
    * ವೈದ್ಯರು ಮತ್ತು ನರ್ಸ್ ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು.
    * ಪಾಸ್ ಇದ್ದವರು ತುರ್ತು ಕೆಲಸ ಇದ್ದವರಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ.
    * ಅಗತ್ಯ ವಸ್ತು ತೆಗೆದುಕೊಳ್ಳೋರು ಅದೇ ಏರಿಯಾದ ರಸ್ತೆಯಲ್ಲಿನ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು. ಅಲ್ಲಿ ಇಲ್ಲದೆ ಹೋದರೆ ಪಕ್ಕದ ರಸ್ತೆಯಲ್ಲಿ ಅಗತ್ಯ ವಸ್ತು ತೆಗೆದುಕೊಳ್ಳಬೇಕು. ಬೇರೆ ಏರಿಯಾಗೆ ಹೋದರೆ ಅರೆಸ್ಟ್.

  • ವೈದ್ಯರು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತಿರುವ ದೇವರು: ಪ್ರಧಾನಿ ಮೋದಿ

    ವೈದ್ಯರು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತಿರುವ ದೇವರು: ಪ್ರಧಾನಿ ಮೋದಿ

    – ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದರೆ ಕಠಿಣ ಕ್ರಮ

    ನವದೆಹಲಿ: ಬಿಳಿ ಸಮವಸ್ತ್ರ ತೊಟ್ಟು ನಮಗಾಗಿ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ನಮ್ಮ ಪಾಲಿನ ದೇವರು. ಅವರ ಜೀವವನ್ನು ಪಣಕ್ಕಿಟ್ಟು ನಮಗಾಗಿ ಅವರೆಲ್ಲಾ ದುಡಿಯುತ್ತಿದ್ದಾರೆ. ಅವರ ವಿರುದ್ಧ ಹಲ್ಲೆ ನಡೆಸುವುದಾಗಲಿ, ದೌರ್ಜನ್ಯ ಎಸೆಗುವುದಾಗಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ.

    ವಾರಣಾಸಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಾರಣಾಸಿಯ ಆಯ್ದ ಮತದಾರರ ಜೊತೆ ಮೋದಿ ಸಂವಾದ ನಡೆಸಿದರು. ಈ ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ದೇಶಕ್ಕಾಗಿ, ಎಲ್ಲರ ಜೀವ ಉಳಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಳಿ ಸಮವಸ್ತ್ರದಲ್ಲಿರುವ ದೇವರು. ಎಲ್ಲರನ್ನೂ ಸೋಂಕಿನಿಂದ ಉಳಿಸಲು ದುಡಿಯುತ್ತಿದ್ದಾರೆ. ಅವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಹಾಗೆಯೇ ನಾಗರಿಕರಲ್ಲಿ ವಿನಂತಿ ಮಾಡುತ್ತೇನೆ ಒಂದು ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಯಾರಾದರು ತಪ್ಪಾಗಿ ನಡೆದುಕೊಂಡರೆ ಅವರಿಗೆ ನೀವು ಬುದ್ಧಿ ಹೇಳಿ. ಪರಿಸ್ಥಿತಿಯನ್ನು ವಿವರಿಸಿ ಎಂದು ಮೋದಿ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದ ಜೊತೆ ವೈದ್ಯಕೀಯ ಕ್ಷೇತ್ರ ನಿಂತಿದೆ. ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ದಿನಕ್ಕೆ 18 ಗಂಟೆಗಿಂತ ಹೆಚ್ಚು ಸಮಯ ದುಡಿಯುತ್ತಿದ್ದಾರೆ. 2ರಿಂದ 3 ಗಂಟೆ ನಿದ್ರೆ ಮಾಡಿ ಮತ್ತೆ ಕೆಲಸಕ್ಕೆ ಹಾಜಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಹೊರಗೆ ಹಗಲು ರಾತ್ರಿ ನಮ್ಮ ಒಳಿತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕ ಸಮಾಜದ ಜನರು ಬಡವರಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಇವರಿಗೆ ನಾವು ಸೆಲೂಟ್ ಹೊಡಿಯಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಧನ್ಯವಾದ ಎಂದು ಮೋದಿ ಶ್ಲಾಘಿಸಿದ್ದಾರೆ.

    ಕೊರೊನಾ ವೈರಸ್ ಸೋಂಕನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ. ಅಥವಾ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಿ. ಮನೆಯಲಿಯೇ ಇರಿ. ಕೊರೊನಾ ವೈರಸ್‍ಗೆ ಇನ್ನೂ ಔಷಧಿ ಸಿಕ್ಕಿಲ್ಲ. ವೈದ್ಯರು, ವಿಜ್ಞಾನಿಗಳು ಔಷಧಿ ಕಂಡುಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದಷ್ಟು ಬೇಗ ಔಷಧಿಯನ್ನು ಕಂಡುಹಿಡಿಯಲಿದ್ದಾರೆ. ದಯವಿಟ್ಟು ಗಾಳಿ ಮಾತುಗಳಿಗೆ, ಮೂಡನಂಬಿಕೆಗಳಿಗೆ ಕಿವಿಗೊಡಬೇಡಿ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿಸಿ, ಚಿಕಿತ್ಸೆ ಪಡೆಯಿರಿ ಎಂದು ಪ್ರಧಾನಿ ಅವರು ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ದೇಶವಾಸಿಗಳು ಬೆಂಬಲ ನೀಡಿದಕ್ಕೆ ಧನ್ಯವಾದ. ಜೊತೆಗೆ ಸಂಜೆ 5 ಗಂಟೆಗೆ ಮನೆಯಿಂದ ಹೊರಬಂದು ಈ ಕಠಿಣ ಪರಿಸ್ಥಿತಿಯಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ, ಪೌರಕಾರ್ಮಿಕರಿಗೆ ನೀವು ಅಭಿನಂದಿಸಿದ್ದಕ್ಕೂ ಧನ್ಯವಾದ ಎಂದು ಮೋದಿ ಅವರು ಹೇಳಿದ್ದಾರೆ.

  • ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ನವದೆಹಲಿ: ಕೊರೊನಾ ವೈರಸ್ ಅಟ್ಟಹಾಸದ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಆಯ್ದ ಪ್ರಜೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಮಹಾಭಾರತ ಯುದ್ಧ 18 ದಿನಗಳು ನಡೆಯಿತು. ಆದ್ರೆ ಕೊರೊನಾ ವೈರಸ್ ವಿರುದ್ಧ ದೇಶ ಯುದ್ಧ ಮಾಡಿ ಜಯಗಳಿಸಲು 21 ದಿನಗಳು ಬೇಕಾಗುತ್ತೆ ಎಂದು ದೇಶದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಭಾರತದಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬಳಿಕ ಮೋದಿ ಅವರು ನಡೆಸುತ್ತಿರುವ ಮೊದಲ ವಿಡಿಯೋ ಕಾನ್ಫರೆನ್ಸ್ ಇದಾಗಿದ್ದು, ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದರು. ಮಹಾಭಾರತ ಯುದ್ಧ 18 ದಿನ ನಡೆಯಿತು, ಆದರೆ ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಸಮರ 12 ದಿನ ನಡೆಯಬೇಕಿದೆ. ಈ ಯುದ್ಧದಲ್ಲಿ ದೇಶವನ್ನ ಗೆಲ್ಲಿಸೋದೇ ನಮ್ಮ ಗುರಿ ಎಂದು ಪ್ರಧಾನಿ ಹೇಳಿದರು.

    ಅಷ್ಟೇ ಅಲ್ಲದೇ ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ. ಕೊರೊನಾ ವೈರಸ್ ಶ್ರೀಮಂತ, ಬಡವ ಎಂದು ನೋಡುವುದಿಲ್ಲ. ದಯಮಾಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಮೋದಿ ಅವರು ಮನವಿ ಮಾಡಿಕೊಂಡರು.

    ಹಾಗೆಯೇ ವಾಟ್ಸಪ್ ಸಹಯೋಗದೊಂದಿಗೆ ಸರ್ಕಾರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೂಲಕ ಕೊರೊನಾ ವೈರಸ್ ಬಗ್ಗೆ ಸರಿಯಾದ ಮಾಹಿತಿ ಪಡೆಯುವಲ್ಲಿ ಜನರಿಗೆ ಸಹಕಾರಿಯಾಗಲಿದೆ. 9013151515 ಈ ನಂಬರ್ ಗೆ ‘ನಮಸ್ತೆ’ ಎಂದು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ವಾಟ್ಸಪ್ ಮಾಡಿದರೆ ನಿಮಗೆ ತಕ್ಷಣ ಪ್ರತಿಕ್ರಿಯಿಸಲಾಗುತ್ತದೆ. ಆಗ ಕೊರೊನಾ ವೈರಸ್ ಬಗ್ಗೆ ಇರುವ ಗೊಂದಲ, ಮಾಹಿತಿಗಳನ್ನು ವಾಟ್ಸಪ್ ಮೂಲಕವೇ ಪಡೆಯಬಹುದು ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮತರಾರರಿಗೆ ಮೋದಿ ಅವರು ತಿಳಿಸಿದರು.

  • ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವಲೋಕಿಸಿದರು. ಅಲ್ಲದೆ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾಸ್ಕುಗಳನ್ನು ಕೂಡಲೇ ಒದಿಗಿಸುವುದಾಗಿ ತಿಳಿಸಿದ್ದಾರೆ.

    ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರು ಧರಿಸುವ 900 ರಕ್ಷಾ ಕವಚಗಳು (ಪರ್ಸನಲ್ ಪ್ರೊಟೆಕ್ಷನ್ ಗೇರ್), 1000 ಎನ್ 95 ಮಾಸ್ಕುಗಳು ಹಾಗೂ ಸಾರ್ವಜನಿಕರು ಬಳಸುವ ಮೂರು ಪದರಗಳ 3000 ಮಾಸ್ಕುಗಳನ್ನು ಶುಕ್ರವಾರ ಬೆಳಗ್ಗೆ ಹೊತ್ತಿಗೆ ಕಲಬುರಗಿಗೆ ತಲುಪಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಅವರನ್ನು ಕೂಡಲೇ ಕಲಬುರಗಿ ಜಿಲ್ಲೆಗೆ ನಿಯೋಜಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.

    ಸೋಮವಾರದ ವೇಳೆಗೆ ರೋಗ ಪತ್ತೆ ಮಾಡುವ ಪ್ರಯೋಗಾಲಯವನ್ನು ಕಲಬುರ್ಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ ಇದ್ದರು.

  • ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಬೆಂಗಳೂರು: ದೇಶಾದ್ಯಂತ ಕೂರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರದ ನೆಮ್ಮದಿಯನ್ನು ಕೆಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರವು ಹಲವು ಗಂಭೀರ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ರಾಜ್ಯಗಳ ಮಟ್ಟದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆಯಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಾಗಿದ್ದಾರೆ.

    ನಾಳೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರುಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದು, ಕೊರೊನಾ ನಿಯಂತ್ರಣ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳಿಂದ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರುಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪ್ರಧಾನಿಗಳ ವಿಡಿಯೋ ಸಂವಾದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಗೂ ಮುನ್ನ ಸಿಎಂ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಕರೆದಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಾಳೆ ಮಧ್ಯಾಹ್ನ 3.30ಕ್ಕೆ ಸಿಎಂ ಪೂರ್ವಭಾವಿ ಸಭೆ ನಡೆಸಲಿದ್ದಾರೆ.

    ಈ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಪೀಡಿತರು, ಶಂಕಿತರು, ನಿಯಂತ್ರಣ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಎಂ ಪಡೆಯಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳು ನಡೆಸುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಯಾವ ಸಲಹೆ-ಸೂಚನೆಗಳನ್ನು ಕೊಡುತ್ತಾರೆ ಕಾದು ನೋಡಬೇಕಿದೆ.

  • ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಬೀದರ್: ಕೊರೊನಾ ವೈರಸ್ ಸೋಂಕು ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲು ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್ ಮಹಾದೇವ್ ಅವರು ಡಿಹೆಚ್‍ಓ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ ವಿಜಯ್‍ಭಾಸ್ಕರ್ ಅವರು ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೊರ ದೇಶ ಅಥವಾ ಹೊರ ರಾಜ್ಯಗಳಿಂದ ವಿಮಾನ, ರೈಲ್ವೆ ಅಥವಾ ಬಸ್‍ಗಳ ಮೂಲಕ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳ ತಪಾಸಣೆ ನಡೆಸಬೇಕು. ಕೆಲವು ದಿನಗಳ ಹಿಂದೆ ಜಿಲ್ಲೆಗೆ ಯಾರಾದರೂ ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ಆಗಮಿಸಿದ್ದರೆ ಆ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ, ಅವರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ತಿಳಿಸಿದರು.

    ಜಾತ್ರೆ, ಸಂತೆಗಳು ಸಾಧ್ಯವಾದಷ್ಟು ನಡೆಯದಂತೆ ಎಚ್ಚರ ವಹಿಸುವುದು ಸೂಕ್ತ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಘೋಷಣಾ ಪ್ರಮಾಣ ಪತ್ರಗಳ ಅರ್ಜಿಗಳು ಮತ್ತು ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸಹ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸೂರ್ಯಕಾಂತ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ ರೆಡ್ಡಿ, ಬೀದರ ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಬ್ರಿಮ್ಸ್ ವೈದ್ಯಾಧಿಕಾರಿಗಳಾದ ವಿಜಯ್‍ಕುಮಾರ್ ಅಂತಪನೋರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ನವದೆಹಲಿ: ಮಹಿಳೆಯೊಬ್ಬರ ಮಾತು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ.

    ಇಂದು ಮೋದಿ ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆ ದೀಪಾ ಶಾ, ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮಲ್ಲಿ ದೇವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮೋದಿ ಒಂದು ಕ್ಷಣ ಭಾವುಕರಾದರು.

    ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ದೀಪಾ ಶಾ, ನಾನು 2011 ರಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೆ. ವೈದ್ಯರು ನೀವು ಗುಣವಾಗಲ್ಲ ಎಂದು ಹೇಳಿದ್ದರು. ಆದರೆ ನಾನು ಜನೌಷಧಿ ಕೇಂದ್ರದಿಂದ ಕಡಿಮೆ ಬೆಲೆಗೆ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸಿ ಈಗ ಗುಣವಾಗಿದ್ದೇನೆ. ಜೊತೆಗೆ ತಿಂಗಳಿಗೆ 3,500 ರೂ. ಹಣವನ್ನು ಉಳಿಸಿಕೊಳ್ಳುತ್ತಿದ್ದೇನೆ. ಈ ಹಣ ನನ್ನ ಊಟದ ಮತ್ತು ತಿಂಗಳ ಬಳಕೆಗೆ ಖರ್ಚು ಮಾಡುತ್ತೇನೆ ಎಂದರು.

    ಜೊತೆಗೆ ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಯೂ ಕೂಡ ಸಹಾಯ ಮಾಡಿದ್ದಾರೆ. ನಾನು ಯಾವತ್ತು ಶಿವನನ್ನು ನೋಡಿಲ್ಲ. ಆದರೆ ನಿಮ್ಮನ್ನು ನೋಡಿದಾಗ ನನಗೆ ನಿಮ್ಮಲ್ಲಿ ಶಿವ ಕಾಣುತ್ತಾನೆ ಎಂದು ಹೇಳಿ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ದೀಪಾ ಶಾ ಅಳುವುದನ್ನು ಕಂಡ ಮೋದಿ ಅವರು ಕೂಡ ಕಣ್ಣೀರು ಹಾಕಿದ್ದಾರೆ.

    ಇದಾದ ನಂತರ ಮಾತನಾಡಿದ ಮೋದಿ ಅವರು, ನೀವು ನಿಮ್ಮ ಇಚ್ಛಾಶಕ್ತಿಯಿಂದ ನಿಮ್ಮ ರೋಗವನ್ನು ಸೋಲಿಸಿದ್ದೀರಾ. ನಿಮ್ಮ ಧೈರ್ಯ ನಿಮ್ಮ ದೇವರು, ಆ ಧೈರ್ಯವೇ ನಿಮ್ಮನ್ನು ರೋಗದಿಂದ ಹೋರಬರುವ ಶಕ್ತಿ ನೀಡಿದೆ. ನಿಮ್ಮಲ್ಲಿರುವ ಈ ವಿಶ್ವಾಸ ಹೀಗೆ ಇರಲಿ ಎಂದು ವಿಡಿಯೋ ಕಾನ್ಫರೆನ್ಸ್ ಅಲ್ಲಿ ತಿಳಿಸಿದ್ದಾರೆ.

    ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಕೊರೊನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೊನಾ ಈ ನಿಟ್ಟಿನಲ್ಲಿ ನಾವು ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಕರೆ ಕೊಟ್ಟರು. ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತ್ತಿದ್ದೇವೆ. ಆದರೆ ಇಂದು ಇಡೀ ಪ್ರಪಂಚವೇ ನಮಸ್ಕಾರ ಮಾಡಿ ಆಹ್ವಾನಿಸುವುದನ್ನು ಮಾಡುತ್ತಿದೆ. ನಮಗೆ ಇದೇ ಸರಿಯಾದ ಸಮಯ ಹ್ಯಾಂಡ್‍ಶೇಕ್ ಮಾಡುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

    ಪ್ರತಿ ತಿಂಗಳು, ಒಂದು ಕೋಟಿ ಕುಟುಂಬಗಳು ಈ ಜನೌಷಧಿ ಕೇಂದ್ರಗಳಿಂದ ಅಗ್ಗದ ಔಷಧಿಗಳ ಲಾಭವನ್ನು ಪಡೆಯುತ್ತಿವೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಜನರಿಗೆ 2,000-2,500 ಕೋಟಿ ರೂ. ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

  • ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ: ಪ್ರಧಾನಿ ಮೋದಿ

    ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ: ಪ್ರಧಾನಿ ಮೋದಿ

    ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡಿದ್ದಾರಾ ಹೀಗೊಂದು ಚರ್ಚೆ ಈಗ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.

    ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಬಿಜೆಪಿ ಯುವಾ ಮೋರ್ಚಾದ ಜತೆ ಮಾತನಾಡುತ್ತಿದ್ದರು. ಈ ವೇಳೆ ತೇಜಸ್ವಿಸೂರ್ಯ ಅವರ ಹೆಸರನ್ನು ಹೇಳಿ, “ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ” ಎಂದು ಮೋದಿ ಹೊಗಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.

    ಸಂವಾದದ ಆರಂಭದಲ್ಲಿ “ಮೋದಿಜೀ ನಮಸ್ತೇ” ಎಂದು ತೇಜಸ್ವಿ ಸೂರ್ಯ ಹೇಳಿ ಮಾತನ್ನು ಆಡಲು ಆರಂಭಿಸುತ್ತಾರೆ. ಈ ವೇಳೆ ಮೋದಿ, “ಅಪ್ ತೋ ಸ್ವಯಂ ಸೂರ್ಯ ಹೇ ಔರ್ ತೇಜಸ್ವಿ ಬಿ ಹೇ” ಎಂದು ಹೇಳಿ ಹೊಗಳಿದ್ದರು. ಇದನ್ನೂ ಓದಿ: ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ಕರ್ನಾಟಕದ ಪೈಕಿ ಬೆಂಗಳೂರು ದಕ್ಷಿಣ ಕೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1977ಕ್ಕೆ ಲೋಕಸಭಾ ಕ್ಷೇತ್ರವಾಗಿ ರಚನೆಯಾಗಿದ್ದು ಆರಂಭದ ಮೂರು ಚುನಾವಣೆಯಲ್ಲಿ ಜನತಾ ಪಕ್ಷ ಇಲ್ಲಿ ಗೆಲುವನ್ನು ಕಂಡಿತ್ತು. 1989 ರಲ್ಲಿ ಒಂದು ಬಾರಿ ಕಾಂಗ್ರೆಸ್ ಗೆಲುವು ಕಂಡಿದ್ದು, ನಂತರ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. 1996ರಿಂದ 2014ರ ವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಕಳೆದ ವರ್ಷ ನಿಧನರಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಜಯಗಳಿಸುತ್ತಾ ಬಂದಿದ್ದರು. ಇದನ್ನೂ ಓದಿ: ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    ಅನಂತ್ ಕುಮಾರ್ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಕಳೆದ ಬಾರಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ಕಣಕ್ಕೆ ಇಳಿಸಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲೇ ಇರುವುದರ ಜೊತೆಗೆ ಸಾಕ್ಷರತಾ ಮತದಾರರ ಸಂಖ್ಯೆಯೂ ಹೆಚ್ಚು ಇರುವ ಕಾರಣದಿಂದಲೂ ಈ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಅನಂತ್ ಕುಮಾರ್ 2.28 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರೆ, ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು.

  • ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ನವದೆಹಲಿ: ವಿರೋಧ ಪಕ್ಷಗಳ ಟೀಕೆಯ ನಡುವೆಯೂ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಈ ವೇಳೆ, ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶತ್ರು ದೇಶವು ಭಯೋತ್ಪಾದಕರಿಗೆ ಬೆಂಬಲಿಸಿ ಭಾರತ ವಿರುದ್ಧ ನಿಂತರೆ, ಅವರಿಂದ ಭಾರತದ ಅಭಿವೃದ್ಧಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಜೊತೆಗೂಡಿ, ಒಂದಾಗಿ ಭಾರತೀಯ ಸೈನಿಕರ ಬೆಂಬಲಕ್ಕೆ ನಿಂತು ನಮ್ಮ ದೇಶವನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸಬೇಕು ಎಂದು “ಮೆರಾ ಬೂತ್ ಸಬ್ಸೇ ಮಜಬೂತ್” ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಭಾರತ ಒಂದಾಗಿ ನಿಲ್ಲುತ್ತದೆ, ಒಂದಾಗಿ ಕೆಲಸ ಮಾಡುತ್ತದೆ, ಒಂದಾಗಿ ಬೆಳೆಯುತ್ತದೆ. ಒಂದಾಗಿ ಹೋರಾಡುತ್ತದೆ ಹಾಗೂ ಒಂದಾಗಿ ಗೆಲ್ಲುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾವೆಲ್ಲ ಒಂದಾಗಿ ನಿಂತು ಶತ್ರುಗಳನ್ನು ಮಟ್ಟಹಾಕಬೇಕು ಎಂದು ಮೋದಿ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    ಭಾರತ- ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವಾಗ ಪ್ರಧಾನಿ ಅವರು ತಮ್ಮ ಪಕ್ಷದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತ ಪೈಲಟ್ ಪಾಕ್ ವಶದಲ್ಲಿದ್ದಾರೆ. ಗಡಿಯಲ್ಲಿ ಸೈನಿಕರು ಜಮಾವಣೆಗೊಂಡಿದ್ದಾರೆ. ಈ ಪರಿಸ್ಥಿತಿಯಲ್ಲೂ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv