https://www.youtube.com/watch?v=eoB0ZCByQ64
Tag: VG Siddhartha
-

ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ
– ಸಿದ್ಧಾರ್ಥ್ ಅಭಿಮಾನಿಗಳಿಂದ ಅಭಿಯಾನ
ಚಿಕ್ಕಮಗಳೂರು: ನಿಗೂಢವಾಗಿ ಸಾವನ್ನಪ್ಪಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಮನೆಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇಂದು ಭೇಟಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರುವ ಸಿದ್ದಾರ್ಥ್ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು, ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಹಾಗೂ ಪತ್ನಿ ಮಾಳವಿಕಾ ಸೇರಿದಂತೆ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

ಯುವಕರಿಂದ ಅಭಿಯಾನ:
ಸಿದ್ಧಾರ್ಥ್ ಅವರು ಮೃತಪಟ್ಟ ಬಳಿಕ ಕಾಫಿ ಡೇ ಷೇರು ದಿನೇ, ದಿನೇ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರು ಅಭಿಯಾನಯೊಂದಕ್ಕೆ ಚಾಲನೆ ನೀಡಿದ್ದಾರೆ.ಸಿದ್ದಾರ್ಥ್ ಅವರ ಅಭಿಮಾನಿ ಯುವಕರು `ಟೀಮ್ ನಮ್ಮುಡುಗ್ರು’ ತಂಡದಿಂದ ಷೇರು ಖರೀದಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ. ಸಿದ್ಧಾರ್ಥ್ ಅವರು ಕೆಫೆ ಕಾಫಿ ಡೇ ಸೇರಿದಂತೆ ಅವರ ಸಂಸ್ಥೆಗಳಲ್ಲಿ ಯುವಕರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಯುವಕರಿಗೆ ತರಬೇತಿ ನೀಡಲೆಂದೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

-

ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಆತ್ಮಹತ್ಯೆಯಲ್ಲ ಕೊಲೆಯೆಂದು ವ್ಯಾಪಕ ಚರ್ಚೆ
ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಅವರದ್ದು ಆತ್ಮಹತ್ಯೆ ಅಲ್ಲ ಕೊಲೆಯೆಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಸಿದ್ಧಾಥ್ ಅವರು ತಮ್ಮ ಕಾರಿನಲ್ಲಿ ಜಪ್ಪಿನಮೊಗರಿನಲ್ಲಿರುವ ನೇತ್ರಾವತಿ ಸೇತುವೆ ಬಳಿ ಬರುತ್ತಿದ್ದಂತೆಯೇ ಹಲವು ಬೆಳವಣಿಗೆಗಳು ನಡೆದಿದೆ. ಈ ಎಲ್ಲಾ ಘಟನೆಗಳು ಅನುಮಾನ ಹುಟ್ಟುವಂತೆ ಮಾಡಿವೆ. ಈ ಅನುಮಾನಗಳು ಇದೀಗ ಸಿದ್ಧಾರ್ಥ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಸಿದ್ಧಾರ್ಥ್ ಅವರ ಕಾರು ಸಂಜೆ 5.28ರ ಸುಮಾರಿಗೆ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲುವಿನಲ್ಲಿ ಪಾಸಾಗಿದೆ. ಆ ಬಳಿಕ ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸಿದ್ಧಾರ್ಥ್ ಯಾಕೆ ಹೇಳಿದರು. ಅಲ್ಲದೆ ಸೇತುವೆ ಪಕ್ಕ ಕಾರಿನಿಂದ ಇಳಿದ ಸಿದ್ಧಾರ್ಥ್, 7 ಗಂಟೆಗೆ ಬರುತ್ತೇನೆ. ಕೊಟ್ಟಾಯಂ ಏರ್ ಪೋರ್ಟಿಗೆ ಬಿಡಬೇಕು ಎಂದು ಚಾಲಕನಿಗೆ ಹೇಳಿದ್ದರಂತೆ. ಹೀಗಾಗಿ ನೇತ್ರಾವತಿ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಜಪ್ಪಿನ ಮೊಗರಿನಲ್ಲಿ ಸಿದ್ಧಾರ್ಥ್ ಯಾಕೆ ಇಳಿದರು, ಒಂದು ವೇಳೆ ಅಲ್ಲಿ ಅವರನ್ನು ಯಾರಾದರೂ ಭೇಟಿಯಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ:ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್

ಸಾವಿಗೂ ಮುನ್ನ ಸಿದ್ಧಾರ್ಥ್ ಅವರು ಸಾಲ ಪಡೆದಿದ್ದ ವ್ಯಕ್ತಿಗಳನ್ನ ಭೇಟಿಯಾಗಿದ್ದಾರೆಯೇ, ನೇತ್ರಾವತಿ ಸೇತುವೆ ಬಳಿ ಸಿದ್ಧಾರ್ಥ್ ಜೊತೆ ಕಾರಿನಲ್ಲಿ ರಹಸ್ಯ ಮಾತುಕತೆ ನಡೆದಿತ್ತೇ, ಹಣ ಪಡೆದಿದ್ದ ರಾಜಕಾರಣಿ ಮತ್ತು ಮುಂಬೈ ಫೈನಾನ್ಸ್ ದಲ್ಲಾಳಿಗಳಿಂದ ರಹಸ್ಯ ಭೇಟಿಯಾಗಿದೆಯೇ, ತನ್ನ ಕಾರಿನಿಂದ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಇಳಿದಿದ್ದ ಸಿದ್ದಾರ್ಥ್ ಯಾರನ್ನಾದರೂ ಭೆಟಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಂಜೆ ಏಳು ಗಂಟೆಗೆ ನೇತ್ರಾವತಿ ಸೇತುವೆ ಪಕ್ಕ ತೆರಳಿದ್ದೆ ಎಂದು ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚಾಲಕ ಹೇಳಿಕೆಯಿಂದಲೇ ಅನುಮಾನ ಹುಟ್ಟಿಕೊಂಡಿದ್ದು, ಹಾಗಾದರೆ ಸಿದ್ಧಾರ್ಥ್ ಅವರು ಸುದೀರ್ಘ ಒಂದೂವರೆ ಗಂಟೆ ಆಗಂತುಕರ ಜೊತೆ ಮಾತುಕತೆ ನಡೆಸಿದ್ದಾರೆಯೇ ಅನ್ನೋ ಸಂಸಯ ಮೂಡಿದೆ. ಈ ವೇಳೆ, ಸಿದ್ಧಾರ್ಥ್ ತಮ್ಮ ವಿರೋಧಿಗಳ ಕಾರಿನಲ್ಲಿ ತೆರಳಿರುವ ಬಗ್ಗೆ ಶಂಕೆಯೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿದ್ಧಾರ್ಥ್ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದವರು ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆಯಾಗಿದ್ದು ಹೇಗೆ?

ಮಂಗಳೂರು ತಲುಪುತ್ತಿದ್ದಂತೆಯೇ ಸಿದ್ಧಾರ್ಥ್ ಅವರು ತಮ್ಮ ಚಾಲಕನಲ್ಲಿ ಉಳ್ಳಾಲದ ಸೈಟ್ ನೋಡಲು ಹೋಗಬೇಕು ಎಂದು ಹೇಳಿದ್ದರು. ಕಾಫಿ ಸಾಮ್ರಾಟ, ಉಳ್ಳಾಲ ಮತ್ತು ನೇತ್ರಾವತಿ ಪಕ್ಕದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದರು. ಎರಡು ವರ್ಷಗಳಿಂದ ರೆಸಾರ್ಟ್ ಕನಸು ಈಡೇರದೇ ಉಳಿದಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಕೈಹಾಕಲು ಮುಂದಾಗಿದ್ದ ವಿ.ಜಿ ಸಿದ್ಧಾರ್ಥ್, ಕೋಸ್ಟಲ್ ಟೂರಿಸಂ ಅವರ ಪಾಲಿಗೆ ಮುಳ್ಳಾಗಿ ಹೋಯಿತೇ ಅನ್ನೋ ವ್ಯಾಪಕ ಚರ್ಚೆಯಾಗುತ್ತಿದೆ.
https://www.youtube.com/watch?v=wZvAI8ub-RY
-

ಸಿದ್ಧಾರ್ಥ್ ಸಾವಿನ ಸುತ್ತ ಅನುಮಾನದ ಹುತ್ತ!
ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಕಾಫಿ ಕಿಂಗ್ ಸಿದ್ಧಾರ್ಥ್ ಅವರದ್ದು ಸಹಜ ಸಾವೋ? ಅಸಹಜ ಸಾವೋ ಎನ್ನುವ ಪ್ರಶ್ನೆ ಎದ್ದಿದೆ. ಇಂತಹ ಅನುಮಾನಗಳಿಗೆ ಹಲವು ಬೆಳವಣಿಗೆ ಇಂಬು ಕೊಡುತ್ತಿದೆ.
ಸಿದ್ಧಾರ್ಥ್ ಅವರು ಧರಿಸಿದ್ದ ಟೀ ಶರ್ಟ್ ಮಾಯವಾಗಿರುವುದು ಮೊದಲ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶರ್ಟ್ ಆಗಿದ್ದರೆ ನೀರಿನ ಸೆಳೆತಕ್ಕೆ ಕಿತ್ತು ಹೋಗಿರಬಹುದು ಎಂದು ಹೇಳಬಹುದಿತ್ತು. ಆದರೆ ಅವರು ನಾಪತ್ತೆಯಾದ ಕ್ಷಣದಲ್ಲಿ ಧರಿಸಿದ್ದು ಟೀ ಶರ್ಟ್. ಇದು ಸಾಮಾನ್ಯವಾಗಿ ಕಿತ್ತು ಹೋಗುವುದಿಲ್ಲ. ಆದರೆ ಸಿದ್ಧಾರ್ಥ್ ಅವರ ಮೃತದೇಹವನ್ನು ನೀರಿನಿಂದ ಹೊರಗೆ ತಂದಾಗ ಟೀ ಶರ್ಟ್ ಇರಲಿಲ್ಲ.

ರಕ್ತಸ್ರಾವ: ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದು ಸೋಮವಾರ ಸಂಜೆ 7.30ರ ಆಸುಪಾಸಿನಲ್ಲಿ. ಅವರ ಮೃತದೇಹ ಸಿಕ್ಕಿದ್ದು ಬುಧವಾರ ಬೆಳಗ್ಗೆ 6.30ಕ್ಕೆ. ಅಂದರೆ ಈ ನಡುವಿನ ಅವಧಿ 36 ಗಂಟೆ. ಒಂದು ವೇಳೆ ಸಿದ್ಧಾರ್ಥ್ ಸೋಮವಾರವೇ ನೀರಿಗೆ ಜಿಗಿದಿದ್ದರೆ ಅಥವಾ ಗಾಯಗೊಂಡಿದ್ದರೆ ಇಷ್ಟೊತ್ತಿಗೆ ದೇಹದಲ್ಲಿನ ರಕ್ತವೆಲ್ಲಾ ಸೋರಬೇಕಿತ್ತು. ಆದರೆ ದೇಹವನ್ನು ನೀರಿನಿಂದ ಹೊರ ತೆಗೆದಾಗಲೂ ರಕ್ತಸ್ರಾವ ಆಗುತಿತ್ತು.
ದೇಹ ಊದಿಕೊಂಡಿಲ್ಲ: ಸಾಮಾನ್ಯವಾಗಿ ಮುಳುಗಿ ಸಾವನ್ನಪ್ಪಿದರೆ ನೀರು ದೇಹ ಸೇರುತ್ತದೆ. ನಂತರ ನಿಧಾನವಾಗಿ ಮೃತದೇಹ ಊದಿಕೊಳ್ಳುತ್ತದೆ. ಆದರೆ ಸಿದ್ಧಾರ್ಥ್ ವಿಚಾರದಲ್ಲಿ ಇದಾಗಿಲ್ಲ. ಮೀನುಗಳು ಸಹ ತಿಂದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ, ಸಿದ್ಧಾರ್ಥ್ ನಾಪತ್ತೆಯಾದ ಸ್ಥಳದಿಂದ ನಾಲ್ಕೂವರೆ ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಯಾರು ಶೋಧ ಕಾರ್ಯವನ್ನು ನಡೆಸಿಯೇ ಇರಲಿಲ್ಲ. ಇನ್ನು ಒಂದು ಕಿಲೋಮೀಟರ್ ದೂರ ಹೋದರೆ ಸಮುದ್ರ ಬೇರೆ ಸಿಗುತ್ತಿತ್ತು. ಸಿದ್ಧಾರ್ಥ್ ಮೃತದೇಹ ಸಮುದ್ರ ಪಾಲಾಗಿದ್ದರೆ, ಸಿಗುವ ಸಾಧ್ಯತೆಗಳು ಕಡಿಮೆ ಇದ್ದವು.

ಈ ನಡುವೆ ಸಿದ್ಧಾರ್ಥ್ ಸಾವು ಅಹಜವೋ? ಆತ್ಮಹತ್ಯೆಯೋ? ಎಂಬ ಬಗ್ಗೆ ತನಿಖೆ ನಡೆಸಲು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಬುಧವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಿದ್ಧಾರ್ಥ್ ಅವರ ಮೃತದೇಹದ ಮೇಲೆ ಶರ್ಟ್ ಇರಲಿಲ್ಲ. ಪ್ಯಾಂಟ್ ಜೇಬಲ್ಲಿ ನೋಕಿಯಾ ಮೊಬೈಲ್, ಕೈಯಲ್ಲಿ ಉಂಗುರ ಹಾಗೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
-

ಕಾಫಿ ತೋಟದಲ್ಲಿ ‘ಕಾಫಿ ಕಿಂಗ್’ ಲೀನ
ಚಿಕ್ಕಮಗಳೂರು: ಉದ್ಯಮಿ ವಿಜಿ ಸಿದ್ಧಾರ್ಥ್ ಹೆಗ್ಡೆ ಅವರ ಅಂತ್ಯಸಂಸ್ಕಾರವು ಸ್ವಗ್ರಾಮ ಬೇಲೂರಿನ ಚಿಕ್ಕನಹಳ್ಳಿಯ ಚೇತನಹಳ್ಳಿ ಎಸ್ಟೇಟ್ ನಿವಾಸದ ಬಳಿ ಸಾವಿರಾರು ಜನರ ಕಣ್ಣೀರಧಾರೆ ನಡುವೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು.
ವಿಜಿ ಸಿದ್ಧಾರ್ಥ ಅವರ ಚಿತೆಗೆ ಹಿರಿಯ ಪುತ್ರ ಅಮರ್ತ್ಯ ಅಂತಿಮ ವಿಧಿವಿಧಾನ ನಡೆಸಿ ಪೂಜೆ ನಡೆಸಿದರು. ಬಳಿಕ ಪುತ್ರರಾದ ಅಮರ್ತ್ಯ ಮತ್ತು ಕಿರಿಯ ಪುತ್ರ ಇಶಾನ್ ಅಗ್ನಿ ಸ್ಪರ್ಶ ನೇರವೇರಿಸಿದರು. ಹಲಸು, ಶ್ರೀಗಂಧ, ಮಾವು, ಆಲದ ಮರದಿಂದ ಸಿದ್ಧಪಡಿಸಿರುವ ಚಿತೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ದಾರ್ಥ್ ಮೂರು ದಿನಗಳ ಹಿಂದೆ ಇಳಿ ಸಂಜೆ ನೇತ್ರಾವತಿ ಸೇತುವೆ ಮೇಲಿನಿಂದ ಕಣ್ಮರೆಯಾಗಿದ್ದರು. ಅವರಿಗಾಗಿ ನಿರಂತರವಾಗಿ ಮೂರು ದಿನ ಹುಡುಕಾಟ ನಡೆಸಲಾಗಿತ್ತು. ಸಿದ್ಧಾರ್ಥ್ ಅವರು ಹೊಯಿಗೆ ಬಜಾರಿನ ಅಳಿವೆ ಬಾಗಿಲಿನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಶವದ ರೂಪದಲ್ಲಿ ಪತ್ತೆಯಾದರು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕಣ್ಣಿಗೆ ಸಿದ್ದಾರ್ಥ್ ಮೃತದೇಹ ಕಂಡಿತ್ತು. ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರು, ಆಪ್ತರು, ಕಾಫಿಡೇ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.

ಮಧ್ಯಾಹ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್ನಲ್ಲಿ ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ಅವರಣಕ್ಕೆ ತರಲಾಯಿತು. ಅಳಿಯ ಪಾರ್ಥಿವ ಶರೀರ ನೋಡಿದ ಹಿರಿಯ ಜೀವ ಎಸ್.ಎಂ.ಕೃಷ್ಣ ಮನಸ್ಸು ಭಾರವಾಗಿತ್ತು. ಕಪ್ಪು ಕನ್ನಡಕ ಅವರ ದುಃಖವನ್ನು ಮರೆ ಮಾಚಿತ್ತು. ಎಸ್ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಸಿದ್ದಾರ್ಥ್ ಧರ್ಮಪತ್ನಿ ಮಾಳವಿಕಾ, ತಾಯಿ ವಸಂತಿ ಕಣ್ಣಾಲಿಗಳು ತುಂಬಿಬಂದಿದ್ದವು. ಎಲ್ಲರ ದುಃಖದ ಕಟ್ಟೆ ಒಡೆದಿತ್ತು. ಮಕ್ಕಳಾದ ಅಮಥ್ಯ ಮತ್ತು ಇಶಾನ್ರ ಕಣ್ಣೀರ ಕೋಡಿ ನಿಲ್ಲಲೇ ಇಲ್ಲ. ಆದರೆ ಮೈಸೂರಿನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರಿಗೆ ಪುತ್ರನ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿಲ್ಲ.

ಎಬಿಸಿ ಕಾಫಿ ಕ್ಯೂರಿಂಗ್ ಅವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ನೂರಾರು ರಾಜಕಾರಣಿಗಳು, ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು, ಕಾರ್ಮಿಕರು ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ಧಾರ್ಥ್ ಅವರನ್ನು ನೆನೆದು ಕಣ್ಣೀರಿಟ್ಟರು.
ಕಾಫಿ ನಾಡು ಚಿಕ್ಕಮಗಳೂರಿಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೂ ಅವಿನಾಭಾವ ಸಂಬಂಧ. ಚಿಕ್ಕಮಗಳೂರಿನ ಬಹುತೇಕರು ಒಂದಲ್ಲ ಒಂದು ರೀತಿ, ಒಂದಲ್ಲ ಒಂದು ಕ್ಷಣದಲ್ಲಿ ಸಿದ್ಧಾರ್ಥ್ ಅವರಿಂದ ನೆರವು ಪಡೆದವರೇ. ಹೀಗಾಗಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಿದ್ಧಾರ್ಥ್ ಪಾರ್ಥಿವ ಶರೀರವನ್ನು ತರುವ ಮಾರ್ಗದುದ್ದಕ್ಕೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು. ಮಲೆನಾಡ ಹೆಬ್ಬಾಗಿಲು ಕೊಟ್ಟಿಗೆಹಾರ, ಬಣಕಲ್ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿತ್ತು. ಪಾರ್ಥಿವ ಶರೀರ ಬರುವಿಕೆಗಾಗಿ ಮಾರ್ಗದುದ್ದಕ್ಕೂ ಕಾದು ನಿಂತ ಸಾವಿರಾರು ಜನ, ವಾಹನ ನಿಲ್ಲಿಸಿ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು, ಹಾಸನ, ಮಡಿಕೇರಿ ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಾಫಿ ಕೆಲಸ ಸಂಪೂರ್ಣ ಸ್ತಬ್ಧವಾಗಿತ್ತು.

ಸಿದ್ಧಾರ್ಥ್ ಅಕಾಲಿಕ ಅಗಲಿಕೆಗೆ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಆಪ್ತರ ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ. ಸಿದ್ದಾರ್ಥ್ ಬದುಕಿನ ವಿಚಾರದಲ್ಲಿ ದುಡುಕಿದ್ದಾರೆ. ಭಗವಂತ ಎಸ್ಎಂ ಕೃಷ್ಣ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದಾರ್ಥ್ ನಿಧನವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಇದು ದೇಶಕ್ಕೆ ದೊಡ್ಡ ನಷ್ಟ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿ ಹೋಗಿದೆ ಅಂತ ಸಂತಾಪ ಸೂಚಿಸಿದ್ದಾರೆ. ಅವರ ಈ ದಾರುಣ ಸಾವಿಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್ ಮಾತನಾಡಿ, ಸಿದ್ಧಾರ್ಥ್ ನಮ್ಮ ರಾಜ್ಯದ ಆಸ್ತಿ. ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆ ಏನ್ ಬೇಕಾದರೂ ಮಾತಾಡಿಕೊಳ್ಳಲಿ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.

ಖುದ್ದು ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮಾಜಿ ಸಚಿವ ಯು.ಟಿ ಖಾದರ್, ಸಂತಾಪ ಸೂಚಿಸಿದರು. ಶವ ಪತ್ತೆಯಾದ ರೀತಿಯನ್ನು ವಿವರಿಸಿದರು. ನೀರಿನ ಸೆಳೆತ, ವೇಗಕ್ಕೆ ಸಿದ್ಧಾರ್ಥ್ ಧರಿಸಿದ್ದ ಟೀ ಶರ್ಟ್ ಬಿಚ್ಚಿ ಹೋಗಿದೆ. ಸಿದ್ಧಾರ್ಥ್ ಪ್ಯಾಂಟಿನಲ್ಲಿ ಮೊಬೈಲ್, ಕರ್ಚಿಫ್ ಸಿಕ್ಕಿದೆ. ಕೈಯಲ್ಲಿ ಉಂಗುರ, ಡಿಜಿಟಲ್ ವ್ಹಾಚ್ ಇದೆ ಎಂದು ತಿಳಿಸಿದರು. ಶೃಂಗೇರಿ ಶಾಸಕ ರಾಜೇಗೌಡರರು ಆಪ್ತ ಮಿತ್ರ ಸಿದ್ಧಾರ್ಥ್ ಅವರನ್ನು ನೆನೆದು ಕಂಬನಿ ಮಿಡಿದರು.
https://www.youtube.com/watch?v=zudpwA7rBm4
-

ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್
ಮಂಗಳೂರು: ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ತನ್ನ ಫೋನಿನಲ್ಲಿ ಮಾತನಾಡಿಕೊಂಡು ಹೋದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮತ್ತೆ ಹಿಂದಿರುಗಿ ಬರಲೇ ಇಲ್ಲ. ಇಂದು ಪತ್ತೆಯಾದ ಅವರ ಮೃತದೇಹದ ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಸಿಕ್ಕಿದೆ.
ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಅವರು ಇಂದು ನೇತ್ರಾವತಿ ನದಿ ಸೇತುವೆಯ ಕೆಲ ದೂರದಲ್ಲಿರುವ ಹೊಯಿಗೆ ಬಜಾರ್ ಎಂಬಲ್ಲಿ ಮೀನುಗಾರರಿಗೆ ಶವವಾಗಿ ದೊರೆತಿದ್ದಾರೆ. ಇವರ ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ನೋಕಿಯಾ ಕಂಪನಿಗೆ ಸೇರಿದ ಮೊಬೈಲ್ ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಅದೇ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಆಪ್ತರ ಜೊತೆ ಕರೆ ಮಾಡಿದ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಜಿಗಿದಿರಬಹುದು ಎಂದು ಶಂಕಿಸಲಾಗುತ್ತಿದೆ.

ಸದ್ಯ ಮೃತದೇಹದಲ್ಲಿನ ಗಾಯಗಳ ಬಗ್ಗೆ ಪೊಲೀಸರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆತ್ಮಹತ್ಯೆ ಮಾಡಿ 36 ಗಂಟೆ ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಅವರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೊಬೈಲ್ ಲೊಕೇಷನ್:
ಸಿದ್ಧಾರ್ಥ್ ಅವರು ಸೋಮವಾರ ಸಂಜೆ 6.30ರ ಸುಮಾರಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಇತ್ತ ಸಿದ್ಧಾರ್ಥ್ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೊಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಬೆಳಗ್ಗೆ ತನಿಖೆ ನಡೆಸಲು ಆಗಮಿಸಿದ್ದ ಶ್ವಾನ ದಳದ ನಾಯಿ ಸಹ ಸೇತುವೆ ಮಧ್ಯಭಾಗದವರೆಗೆ ಬಂದಿತ್ತು. ಪೊಲೀಸ್ ವಿಚಾರಣೆ ವೇಳೆ ಡ್ರೈವರ್ ಬಸವರಾಜ್, ಸೋಮವಾರ ಸಂಜೆ ಹೊತ್ತಿನಲ್ಲಿ ಸೇತುವೆಯ ಬಳಿ ಕಾರನ್ನು ನಿಲ್ಲಿಸು ಎಂದು ಸಿದ್ಧಾರ್ಥ್ ಹೇಳಿದ್ದರು. ಕಾರಿನಿಂದ ಇಳಿದು ಸೇತುವೆಯ ಮೇಲೆ ಸಿದ್ದಾರ್ಥ್ ನಡೆದುಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಕೆಲ ನಿಮಿಷ ಕಳೆದರೂ ಅವರು ಬಾರದೇ ಇದ್ದಾಗ ಕರೆ ಮಾಡಿದ್ದೆ. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದರು.
-

ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?
ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲವಾದರೂ ಅವರು ಸಾಲದ ಸುಳಿಗೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.
ಮಾಧ್ಯಮಗಳ ವರದಿ ಪ್ರಕಾರ 2019ರ ಮಾರ್ಚ್ ವೇಳೆ ಸಿದ್ಧಾರ್ಥ್ ಅವರು ಒಟ್ಟು 6,500 ಕೋಟಿ ರೂ. ಸಾಲದಲ್ಲಿದ್ದರು. ಈ ಸಾಲ ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.

ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ ‘ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.
ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.

ಮೈಂಡ್ ಟ್ರೀ ಷೇರು ಎಷ್ಟಿತ್ತು?
2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.
2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.
ಷೇರು ಬೆಲೆ ಇಳಿಕೆ: ವಿಜಿ ಸಿದ್ಧಾರ್ಥ್ ನಾಪತ್ತೆಯಾದ ಬೆನ್ನಲ್ಲೇ ಕೆಫೆ ಕಾಫಿ ಡೇ ಕಂಪನಿಯ ಷೇರು ಮೌಲ್ಯ ಶೇ.20ರಷ್ಟು ಇಳಿಕೆಯಾಗಿದೆ. 2018ರ ಸಪ್ಟೆಂಬರ್ ತಿಂಗಳಿನಲ್ಲಿ ಒಂದು ಷೇರಿನ ಮೌಲ್ಯ ಗರಿಷ್ಟ 325 ರೂ.ಗೆ ಏರಿಕೆಯಾಗಿದ್ದರೆ ಮಂಗಳವಾರ ಬೆಳಗ್ಗೆ 154.05 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸೋಮವಾರದ ಮುಕ್ತಾಯಕ್ಕೆ 192 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಷೇರು ಇಂದು 38 ರೂ.ಗೆ ಕುಸಿದಿದೆ.

ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.
ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.
https://www.youtube.com/watch?v=S8AvtIh5VB8
-

ಭಾನುವಾರ ಕರೆ ಮಾಡಿ ಭೇಟಿಯಾಗುವಂತೆ ಸಿದ್ಧಾರ್ಥ್ ಕೇಳಿಕೊಂಡಿದ್ರು- ಡಿಕೆಶಿ
ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವರು, ಭಾನುವಾರ ಅಂದ್ರೆ ಜುಲೈ 28ರಂದು ಸಿದ್ಧಾರ್ಥ್ ಫೋನ್ ಮಾಡಿದ್ದರು. ಆಗ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಬೇಕಿದೆ. ನನ್ನನ್ನು ಭೇಟಿಯಾಗುತ್ತೀರಾ ಅಂತ ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
However, I find this utterly fishy and urge that a thorough Investigation be conducted into this matter.
Shri Siddhartha and his family were closely known to me for decades now.
— DK Shivakumar (@DKShivakumar) July 30, 2019
ಈ ಸಂಬಂಧ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನನ್ನ ಜೊತೆಗೆ ಚೆನ್ನಾಗಿ ಮಾತನಾಡಿದ ಸಿದ್ಧಾರ್ಥ್ ಭೇಟಿಯಾಗಬೇಕು ಅಂತ ಕೇಳಿದ್ದರು. ಆದರೆ ನಾನು ರಾಜಕೀಯದಲ್ಲಿ ಸ್ವಲ್ಪ ಬ್ಯುಸಿ ಆಗಿದ್ದೇನೆ. ಎರಡು ದಿನ ಬಿಟ್ಟು ಭೇಟಿಯಾಗುತ್ತೇನೆ ಅಂತ ತಿಳಿಸಿದ್ದೆ. ಆದರೆ ಸಿದ್ಧಾರ್ಥ್ ಇಂತಹ ನಿರ್ಧಾರ ಕೈಗೊಳ್ಳುತ್ತಾರೆ ಅಂತ ನಾನು ಊಹೆ ಕೂಡ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.
ಐಟಿ ದಾಳಿಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ಧಾರ್ಥ್ ಅತ್ಯಂತ ಧೈರ್ಯಶಾಲಿ ವ್ಯಕ್ತಿ. ಸಾಲ ಮಾಡಿಕೊಂಡಿದ್ದಾರೆ ಅಂತ ಹೇಳಿದರೆ ಅವರಿಗೆ ಅದು ದೊಡ್ಡ ಹೊರೆಯಲ್ಲ. ಸಾಲಕ್ಕಿಂತ ಅವರ ಆಸ್ತಿಯೇ ಹೆಚ್ಚಿತ್ತು. ಅದನ್ನು ಚನ್ನಾಗಿ ನಿಭಾಯಿಸುವ ಸಾಮಥ್ರ್ಯ ಸಿದ್ಧಾರ್ಥ್ ಅವರಿಗೆ ಇತ್ತು ಎಂದು ಹೇಳಿದರು.

ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳು ನನಗೆ ಗೊತ್ತಿದೆ. ಆದರೆ ಅವುಗಳನ್ನು ಎದುರಿಸುವ ಶಕ್ತಿ ಅವರಿಗಿತ್ತು. ಸಿದ್ಧಾರ್ಥ್ ಅವರು ಅನೇಕ ಜನರಿಗೆ ಕೆಲಸ ಕೊಟ್ಟು, ಭಾರೀ ಎತ್ತರಕ್ಕೆ ಬೆಳೆದ ವ್ಯಕ್ತಿ. ಅವರು ರಾಜ್ಯಕ್ಕೆ ದೊಡ್ಡ ಕೀರ್ತಿ ತಂದಿದ್ದರು ಎಂದು ತಿಳಿಸಿದರು.
ಸಿದ್ಧಾರ್ಥ್ ಅವರನ್ನು ಯಾರಾದರು ಕರೆದುಕೊಂಡು ಹೋಗಿದ್ದಾರಾ? ಬೆದರಿಕೆ ಕರೆ ಬಂದಿತ್ತಾ? ಅವರನ್ನು ಯಾರಾದರೂ ಸೇತುವೆಯಿಂದ ನದಿಗೆ ತಳ್ಳಿದ್ದಾರಾ? ಅವರನ್ನು ಅಲ್ಲಿಗೆ ಕರೆಸಿಕೊಂಡು, ಅಲ್ಲಿಂದ ಅಪಹರಿಸಿದ್ದಾರಾ ಎಂಬ ಅನುಮಾನ ಎದ್ದಿದೆ. ಹೀಗಾಗಿ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ ಎಂದು ಹೇಳಿದರು.
ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಡಿಕೆಶಿ ಈ ಪತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
-

ಸಿದ್ಧಾರ್ಥ್ ಆದಷ್ಟು ಬೇಗ ನಮ್ಮ ಕಣ್ಮುಂದೆ ಬರಲಿ – ಕಾಫಿ ಡೇ ಸಿಬ್ಬಂದಿ
ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆ ನಾಪತ್ತೆಯಾಗಿದ್ದು, ಇದೀಗ ಅವರ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಸಿಬ್ಬಂದಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ನಗರದ ಮಲ್ಲೇಶ್ವರಂ ಕಾಫಿ ಡೇಯ ಮಹಿಳಾ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಾಮಾನ್ಯವಾಗಿ ಸಿದ್ಧಾರ್ಥ್ ಅವರು ಒಳ್ಳೆಯ ವ್ಯಕ್ತಿತ್ವದವರು. ಅವರು ನಮ್ಮ ಜೊತೆ ಚೆನ್ನಾಗಿದ್ದರು. ಅಂಥವರು ಇದೀಗ ಕಾಣೆಯಾಗಿದ್ದಾರೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ಆದಷ್ಟು ಬೇಗ ಅವರು ನಮ್ಮ ಕಣ್ಣ ಮುಂದೆ ಬರಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದರು.

ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ತನ್ನ ಸಿಬ್ಬಂದಿಯನ್ನು ಅವರು ತುಂಬಾನೇ ಚೆನ್ನಾಗಿಯೇ ಉಪಚರಿಸುತ್ತಿದ್ದರು. ಆದರೆ ಇದೀಗ ಅವರು ದಿಢೀರ್ ನಾಪತ್ತೆಯಾಗಿರುವುದು ನಮಗೆಲ್ಲ ಬೇಸರ ತಂದಿದೆ. ಹೀಗಾಗಿ ನಮಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಸುದ್ದಿ ನಮಗೆ ನಮ್ಮ ವಾಟ್ಸಪ್ ಗ್ರೂಪಿನಿಂದಾಗಿ ಬೆಳಗ್ಗೆ ಗೊತ್ತಾಯಿತು. ಈ ವಿಚಾರ ತಿಳಿದ ತಕ್ಷಣವೇ ನನಗೆ ತುಂಬಾನೆ ದುಃಖವಾಯಿತು. ಯಾಕೆಂದರೆ ಅವರು ತುಂಬಾನೆ ಚೆನ್ನಾಗಿ ಸಿಬ್ಬಂದಿಯನ್ನು ನೋಡಿಕೊಳ್ಳುತ್ತಾರೆ ಹಾಗೆಯೇ ಮಾತನಾಡಿಸುತ್ತಾರೆ. ಹೀಗಾಗಿ ಅವರು ಆದಷ್ಟು ಬೇಗ ಅವರು ಸುರಕ್ಷಿತವಾಗಿ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.

ಅವರು ಹೆಣ್ಣು- ಗಂಡು ಎಂಬ ಬೇಧ-ಭಾವವಿಲ್ಲದೆ ಎಲ್ಲರಿಗೂ ಕಾಫಿ ಡೇಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಚಿಕ್ಕಮಗಳೂರಲ್ಲಿ ಅವರ ಸಂಸ್ಥೆಯೊಂದಿದೆ. ಅಲ್ಲಿ ನಮಗೆ ತರಬೇತಿ ಕೊಡುತ್ತಾರೆ ಎಂದರು.
ತರಬೇತಿ ಪಡೆದು ಬಂದು ಸುಮಾರು 6 ತಿಂಗಳು ಆಯ್ತು. ಮಲ್ಲೇಶ್ವರಂನಲ್ಲಿರುವ ಇನ್ನೊಂದು ಕಾಫಿ ಡೇಗೆ ಒಂದು ಬಾರಿ ಅವರು ಬಂದಿದ್ದರು. ತುಂಬಾ ಸರಳವಾಗಿರುವ ಅವರು ನಗುನಗುತ್ತಾ ಸಿಬ್ಬಂದಿಯನ್ನು ಮಾತನಾಡಿಸಿದ್ದರು. ದೊಡ್ಡ ವ್ಯಕ್ತಿಯೆಂಬ ಅಹಂಕಾರ ಅವರಲ್ಲಿ ಇಲ್ಲ. ಹೀಗಾಗಿ ಅವರನ್ನು ನೋಡಿದ್ದರೆ ನಮಗೆ ಪಾಸಿಟಿವ್ ಥಿಂಕಿಂಗ್ ಬರುತ್ತದೆ ಎಂದು ತಮ್ಮ ಬಾಸ್ ಬಗ್ಗೆ ಹೇಳಿಕೊಂಡರು.
https://www.youtube.com/watch?v=UN-UV3nFFwo

