Tag: ventilator

  • ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ: ಟ್ರಂಪ್

    ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ: ಟ್ರಂಪ್

    – ಭಾರತಕ್ಕೆ ಅಮೆರಿಕದಿಂದ ವೆಂಟಿಲೇಟರ್ ದಾನ

    ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಮೋದಿ ಮತ್ತು ಭಾರತದ ಜೊತೆಗೆ ಇದ್ದೇವೆ. ನಾವು ಇಂಡಿಯಾಗೆ ವೆಂಟಿಲೇಟರ್ ಗಳನ್ನು ಸಪ್ಲೈ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಭಾರತದಲ್ಲಿ 85,000 ಸಾವಿರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ ಚೀನಾಗಿಂತ ಭಾರತದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಈಗ 83 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಅಮೆರಿಕ ಕೂಡ ಕೊರೊನಾ ವಿರುದ್ಧ ಹೋರಾಟದಲ್ಲಿ ಇಂಡಿಯಾ ಜೊತೆ ಕೈ ಜೋಡಿಸುವುದಾಗಿ ಘೋಷಣೆ ಮಾಡಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕ ವೆಂಟಿಲೇಟರ್ ಗಳನ್ನು ದಾನ ಮಾಡುತ್ತದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ. ಜೊತೆಗೆ ಕೊರೊನಾಗೆ ಲಸಿಕೆ ತಯಾರಿಸಲು ನಾವು ಭಾರತದ ಜೊತೆ ಸಹಕರಿಸುತ್ತಿದ್ದೇವೆ. ನಾವು ಒಟ್ಟಾಗಿ ಕಣ್ಣಿಗೆ ಕಾಣದ ಶತ್ರುವನ್ನು ಸೋಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಭಾರತ ಮತ್ತು ಅಮೆರಿಕದ ಸಂಬಂಧ ಚೆನ್ನಾಗಿದ್ದು, ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ಕಳೆದ ತಿಂಗಳು 50 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಗೆ ರಫ್ತು ಮಾಡಿತ್ತು. ಅಮೆರಿಕದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ರೋಗಿಗಳಿಗೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕೆಂದು ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದರು. ಭಾರತ ಕೂಡ ಮಾತ್ರೆಗಳನ್ನು ರಫ್ತು ಮಾಡಿತ್ತು.

    ಭಾರತಕ್ಕೆ ವೆಂಟಿಲೇಟರ್ ನೀಡುವ ವಿಚಾರದಲ್ಲಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ, ನಮ್ಮ ಅಧ್ಯಕ್ಷರು ಭಾರತದೊಂದಿಗೆ ನಮ್ಮ ಉತ್ತಮ ಸಂಬಂಧವನ್ನು ಶ್ಲಾಘಿಸಿದರು. ಭಾರತದ ನಮಗೆ ಉತ್ತಮ ಸ್ನೇಹಿ ದೇಶವಾಗಿದೆ. ಅವರಿಗೆ ವೆಂಟಿಲೇಟರ್ ಗಳನ್ನು ನೀಡುತ್ತಿದ್ದೇವೆ. ಜೊತೆಗೆ ಬೇರೆ ದೇಶಗಳಿಗೂ ನಾವು ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಭಾರತಕ್ಕೆ ಎಷ್ಟು ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ತಿಳಿಸಿಲ್ಲ.

    ಇದೇ ವೇಳೆ ಭಾರತದ ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿರುವ ಟ್ರಂಪ್, ಇಂಡಿಯಾ ತುಂಬ ವಿಶಾಲವಾದ ದೇಶ. ನಿಮಗೆ ತಿಳಿದಿರುವಂತೆ ಭಾರತದ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನಾನು ಈ ಹಿಂದೆ ಭಾರತಕ್ಕೆ ಹೋಗಿ ಬಂದಿದ್ದೆ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳುವ ಮೂಲಕ ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಮಯವನ್ನು ಟ್ರಂಪ್ ಅವರು ನೆನಪು ಮಾಡಿಕೊಂಡಿದ್ದಾರೆ.

    ಇದರ ಜೊತೆಗೆ ಭಾರತದೊಂದಿಗೆ ಸೇರಿಕೊಂಡು ಕೊರೊನಾಗೆ ಲಸಿಕೆ ಕಂಡುಹಿಡಿಯಲು ಟ್ರಂಪ್ ಅವರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಭಾರತ ಮತ್ತು ಅಮೆರಿಕ ತಜ್ಞರನ್ನೊಳಗೊಂಡ ಒಂದು ತಂಡವನ್ನು ರಚಿಸಿದ್ದಾರೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ನಾವು ಕೊರೊನಾಗೆ ನಿರ್ದಿಷ್ಟ ಲಸಿಕೆಯನ್ನು ಸಿದ್ಧ ಪಡಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

  • ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

    ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

    – ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಣ್ಣು ಮಗು
    – ಪೋಷಕರು, ಆಸ್ಪತ್ರೆಯ ವೈದ್ಯರಿಗಿಲ್ಲ ಸೋಂಕು

    ಚಂಡೀಗಢ: ಮಹಾಮಾರಿ ಕೊರೊನಾ ವಿರುದ್ಧ 26 ಗಂಟೆಗಳ ಹೋರಾಡಿ 6 ತಿಂಗಳ ಕಂದಮ್ಮವೊಂದು ಮೃತಪಟ್ಟ ಮನಕಲಕುವ ಘಟನೆ ಇಂದು ಚಂಡೀಗಢದಲ್ಲಿ ನಡೆದಿದೆ.

    ಹೃದಯ ರಂಧ್ರದ ಚಿಕಿತ್ಸೆಗಾಗಿ 6 ತಿಂಗಳ ಹೆಣ್ಣು ಮಗುವನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗುವಿಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಅಂದ್ರೆ ಬುಧವಾರ ಬೆಳಗ್ಗೆ 11 ಗಂಟೆಗೆ ಕೋವಿಡ್-19 ವಾರ್ಡಿಗೆ ದಾಖಲಿಸಲಾಗಿತ್ತು. ರಾತ್ರಿಯಿಂದಲೇ ಮಗುವನ್ನು ವೆಂಟಿಲೇಟರ್ ಮತ್ತು ಗ್ಲೂಕೋಸ್‍ನಲ್ಲಿ ಇಡಲಾಗಿತ್ತು. ಆದರೆ ಸೋಂಕು ತೀವ್ರವಾಗಿ ಏರಿಕೆ ಕಂಡು ಕಂದಮ್ಮ ಪ್ರಾಣಬಿಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಮಗು ಜನಿಸಿದಾಗ ಎರಡೂವರೆ ಕೆಜಿ ಇತ್ತು. ನಂತರ 6 ತಿಂಗಳ ಕಳೆದರೂ ತೂಕವು 3 ಕೆಜಿಗಿಂತ ಹೆಚ್ಚಾಗಲಿಲ್ಲ. ಹೀಗಾಗಿ ಪೋಷಕರು ಮಗುವನ್ನು ಜಲಂಧರಿನ ಅಪೊಲೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ 36 ದಿನಗಳವರೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಅರಿತ ಅಪೊಲೊ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ ಪೋಷಕರು ಏಪ್ರಿಲ್ 9ರಂದು ಅಂಬುಲೆನ್ಸ್ ಮೂಲಕ ಪಿಜಿಐಗೆ ಕರೆತಂದಿದ್ದರು.

    ಚಿಕಿತ್ಸೆ ಆರಂಭಿಸಿದ ವೈದ್ಯರು ಮಗುವಿನ ಹೃದಯದಲ್ಲಿ ರಂಧ್ರವಿದೆ, ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನವೇ ಮಗುವಿಗೆ ಸೋಂಕು ತಗುಲಿತ್ತು. ಮಗುವಿಗೆ ಜ್ವರದ ಲಕ್ಷಣಗಳು ಇರಲಿಲ್ಲ. ಆದರೆ ಕೈ-ಕಾಲು ಸೇರಿದಂತೆ ದೇಹದ ಭಾಗಗಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದವು.

    ತಾಯಿ-ತಂದೆ ಕೊರೊನಾ ಬಂದಿಲ್ಲ:
    ವೆಂಟಿಲೇಟರ್ ಮೇಲೆ ಇರಿಸಿದ್ದ ಮಗಳನ್ನು ನೋಡಲು ತಾಯಿ ಹೋಗಿದ್ದರು. ಮಗುವಿನ ತಂದೆ ರಾಮು ಮತ್ತು ತಾಯಿ ಇಬ್ಬರೂ ಕೊರೊನಾ ಟೆಸ್ಟ್‌ಗೆ ಒಳಗಾಗಿದ್ದರು. ಆದರೆ ಅವರ ರಿಪೋರ್ಟ್ ನಲ್ಲಿ ಸೋಂಕು ದೃಢಪಟ್ಟಿಲ್ಲ. ಅಜ್ಜಿ ಮತ್ತು ಅಜ್ಜನಿಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ಅವರಲ್ಲಿಯೂ ಸೋಂಕು ಕಂಡುಬಂದಿಲ್ಲ. ಹೀಗಾಗಿ ಮಗುವಿಗೆ ಕೊರೊನಾ ಹೇಗೆ ಹರಡಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಹೆಣ್ಣು ಮಗುವಿನೊಂದಿಗೆ ಸಂಪರ್ಕ ಹೊಂದಿದ್ದ 18 ವೈದ್ಯರು, ಎಚ್‍ಎ ಮತ್ತು ಎಕ್ಸ್ ರೇ ತಂತ್ರಜ್ಞರು ಸೇರಿದಂತೆ 54 ಮಂದಿ ಆಸ್ಪತ್ರೆಯ ಉದ್ಯೋಗಿಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಪಿಜಿಐ ಬುಧವಾರ 18 ವೈದ್ಯರನ್ನು ಪ್ರತ್ಯೇಕಿಸಿ ಪ್ರತ್ಯೇಕ ವಾರ್ಡಿಗೆ ದಾಖಲಿಸಿದೆ. ಉಳಿದ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದ್ದರಿಂದ ಅವರನ್ನು ಮನೆಗೆ ಕಳುಹಿಸಿದೆ.

  • ಮೈಸೂರು ವ್ಯಕ್ತಿಯ ಸ್ಥಿತಿ ಗಂಭೀರ – ವೈದ್ಯರು, ನರ್ಸ್‍ಗಳಿಗೆ ಕ್ವಾರಂಟೈನ್

    ಮೈಸೂರು ವ್ಯಕ್ತಿಯ ಸ್ಥಿತಿ ಗಂಭೀರ – ವೈದ್ಯರು, ನರ್ಸ್‍ಗಳಿಗೆ ಕ್ವಾರಂಟೈನ್

    ಮೈಸೂರು: ಯಾರ ಸಂಪರ್ಕ ಇರದೇ ಕೊರೊನಾ ಸೋಂಕು ಬಂದಿರುವ 72 ವರ್ಷದ ರೋಗಿಯ ಸ್ಥಿತಿ ಗಂಭೀರವಾಗಿದೆ.

    ಸಿವಿಯರ್ ಅಕ್ಯೂಟ್ ರೆಸ್ಪರೇಟರಿ ಇಲ್‍ನೆಸ್(SARI) ಬಂದಿದೆ ಎಂದು ವೈದ್ಯರು ಗುರುತಿಸಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿ ಐಸೋಲೇಷನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಿತ ವಿಶೇಷ ನಿಗಾದಲ್ಲಿದ್ದಾರೆ.

    ನಂಜನಗೂಡು ಫಾರ್ಮಾ ಕಂಪನಿ ಅಥವಾ ಇಲ್ಲಿನ ನೌಕರರ ಜೊತೆ ಸಂಪರ್ಕದಿಂದ ಕೊರೊನಾ ಬಂದರೆ ಭಯವಾಗುತ್ತಿರಲಿಲ್ಲ. ದೆಹಲಿಯ ನಿಜಾಮುದ್ದೀನ್ ಸಂಪರ್ಕವೂ ಇಲ್ಲ. ಕೊರೊನಾ ಪೀಡಿತ ವ್ಯಕ್ತಿಗಳ ಜೊತೆ ಸಂಪರ್ಕ ಇಲ್ಲದೇ ಸೋಂಕು ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಈ ವೃದ್ಧ ಆರಂಭದದಲ್ಲಿ ಮೈಸೂರಿನ ಶ್ರೀ ಮಹದೇಶ್ವರ ನರ್ಸಿಂಗ್ ಹೋಂ ನಲ್ಲಿ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದರು. ಇಲ್ಲಿ ರಕ್ತಪರೀಕ್ಷೆ ಮಾಡಲಾಗಿತ್ತು. ನಂತರ ಆಂಟಿಬಯೋಟಿಕ್ ಕೊಟ್ಟು ಅಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಈಗ ಆ ವ್ಯಕ್ತಿಗೆ ಕರೋನಾ ಸೋಂಕು ದೃಢವಾಗಿದೆ. ಇದರಿಂದ ಇಡೀ ನರ್ಸಿಂಗ್ ಹೋಂ ನಲ್ಲಿದ್ದ ಎಲ್ಲಾ ವೈದ್ಯರು, ನರ್ಸ್ ಗಳು, 200 ರೋಗಿಗಳು ಎಲ್ಲರನ್ನೂ ಮೈಸೂರು ಜಿಲ್ಲಾಡಳಿತ ಹೋಂಕ್ವಾರಟೈನ್ ಮಾಡಿದೆ.

    ಈಗ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ರೋಗಿಗಳು ಮೈಸೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ 71 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 35 ಮಂದಿ ಗುಣಮುಖರಾಗಿದ್ದಾರೆ. 34 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ ಮೈಸೂರಿನಲ್ಲಿ 58 ಮಂದಿಗೆ ಸೋಂಕು ಬಂದಿದ್ದು, 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 46 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸದ್ಯ ಅತಿ ಹೆಚ್ಚು ಕೊರೊನಾ ಪೀಡಿತರು ಮೈಸೂರು ಜಿಲ್ಲೆಯಲ್ಲಿದ್ದಾರೆ. ಒಟ್ಟು 1,564 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

  • ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    – ನೃತ್ಯದ ಮೂಲಕ ಧೈರ್ಯ ಹೇಳುತ್ತಿರುವ ವೈದ್ಯರು

    ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ರೋಗಿ ಗುಣಮುಖನಾಗಿ ವೆಂಟಿಲೇಟರ್ ನಿಂದ ಎದ್ದರೆ ಐಸಿಯುನಲ್ಲಿರುವ ವೈದ್ಯರ ತಂಡ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

    ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಗೆಲವು ಸಾಧಿಸಲು ವಿಶ್ವಾದ್ಯಂತ ವೈದ್ಯರು ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‍ನಲ್ಲಿರುವ ರೊನಾಲ್ಡ್ ರೇಗನ್ ಯುಸಿಎಲ್‍ಎ ಆಸ್ಪತ್ರೆಯ ಐಸಿಯುನಲ್ಲಿರುವ ವೈದ್ಯರ ತಂಡವು ಕೊರೊನಾ ವೈರಸ್ ನಿಂದ ರೋಗಿ ಗುಣಮುಖವಾದರೆ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದೆ.

    ವೈದ್ಯರು ಡ್ಯಾನ್ಸ್ ಮಾಡುವ ವಿಡಿಯೋವನ್ನು ಅಮೆರಿಕದ ವೈದ್ಯೆ ಡಾ. ನಿಡಾ ಖಾದಿರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖವಾದರೆ, ವೆಂಟಿಲೇಟರ್ ನಿಂದ ಎದ್ದು ಬಂದರೆ ನಮ್ಮ ಐಸಿಯು ಸಿಬ್ಬಂದಿ ಡ್ಯಾನ್ಸ್ ಮಾಡುತ್ತಾರೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://twitter.com/HungryDes/status/1247369358705176577

    ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಖಾದಿರ್ ಅವರು ಸಹೋದ್ಯೋಗಿ, ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಸಿಬ್ಬಂದಿ ಸಣ್ಣ ಗೆಲುವನ್ನು ಕೂಡ ಆಚರಣೆ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ವೆಂಟಿಲೇಟರ್ ನಿಂದ ಎದ್ದು ಸ್ವತಃ ತಾವೇ ಉಸಿರಾಡುತ್ತಿದ್ದಾರೆ. ಇದರಿಂದ ನಮಗೆ ಸಂತೋಷವಾಗಿ ಸ್ವಲ್ಪ ಡ್ಯಾನ್ಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋವನ್ನು 8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಜೊತೆ 30 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಎಲ್ಲರೂ ಆರೋಗ್ಯ ಯೋಧರ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅಮೆರಿಕದ ಜನರಿಗೆ ನೀವು ಮಾಡಿದ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನೀವು ನಿಜವಾದ ಹೀರೋಗಳು ಎಂದು ಜನ ಕಮೆಂಟ್ ಮಾಡಿದ್ದಾರೆ.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

  • ಎಮರ್ಜೆನ್ಸಿ ಅಂಬುಲೆನ್ಸ್‌ನಿಂದ್ಲೇ ರೋಗಿಗಳ ಜೀವಕ್ಕೆ ಕುತ್ತು

    ಎಮರ್ಜೆನ್ಸಿ ಅಂಬುಲೆನ್ಸ್‌ನಿಂದ್ಲೇ ರೋಗಿಗಳ ಜೀವಕ್ಕೆ ಕುತ್ತು

    -ಪಬ್ಲಿಕ್ ಟಿವಿ ಸ್ಟಿಂಗ್ ಕ್ಯಾಮೆರಾದಲ್ಲಿ ಬಯಲು

    ಬೆಂಗಳೂರು: 108 ಅಂಬುಲೆನ್ಸ್ ರೋಗಿಗಳ ಪಾಲಿಗೆ ಮಿನಿ ಸಂಜೀವಿನಿ ಇದ್ದಂತೆ. ತುರ್ತು ಆರೋಗ್ಯ ಚಿಕಿತ್ಸೆಗೆ ಕ್ಷಣಾರ್ಧದಲ್ಲೇ ರೋಗಿಯ ಪ್ರಾಣವನ್ನು ಉಳಿಸುವ ಕೆಲಸ ಮಾಡುವ ಈ ಅಂಬುಲೆನ್ಸ್ ಇದೀಗ ಸಾವಿನ ಹಾದಿಯನ್ನು ತೋರಿಸುತ್ತಿವೆ.

    ರಾಜಧಾನಿ ಬೆಂಗಳೂರಿನಲ್ಲಿರುವ ಅಂಬುಲೆನ್ಸ್‌ಗಳಿಗೆ ವೆಂಟಿಲೇಟರ್ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಟ್ಟು 73 ಅಂಬುಲೆನ್ಸ್‌ಗಳಿವೆ. ಈ ಪೈಕಿ ಕೇವಲ 17ರಲ್ಲಿ ಮಾತ್ರ ವೆಂಟಿಲೇಟರ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ತುಂಬಾ ಸಮಸ್ಯೆಯಾಗಿದೆ. ವೆಂಟಿಲೇಟರ್ ಇರುವ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳು, ಇದನ್ನೇ ಬಂಡಾವಳ ಮಾಡಿಕೊಂಡು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ತುರ್ತು ಪರಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಲು ಕೈ ತುಂಬಾ ಹಣ ನೀಡಲೇಬೇಕು. ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳ ಜೊತೆ ಮಾತಿಗಿಳಿದಾಗ ಈ ಬಗ್ಗೆ ಮಾಫಿಯಾ ಬಯಲಾಗಿದೆ.

    ಪ್ರತಿನಿಧಿ: ಒಂದೊಂದು ಡ್ರೈವರ್‌ಗಳು ವೆಂಟಿಲೇಟರ್ ಗಳೇ ಹಾಕಿರಲ್ವಲ್ಲ
    ಚಾಲಕ: ಹೇ. ಇರ್ತಾವೆ
    ಪ್ರತಿನಿಧಿ: ಸುಮಾರು ಅಂಬುಲೆನ್ಸ್ ಗೆ ಇರಲ್ಲ
    ಚಾಲಕ: ಹಾ. ಹೌದು
    ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್ ನಾ ಕರ್ಕೊಂಡು ಬಂದ್ವಿ. ಇರಲಿಲ್ಲ
    ಚಾಲಕ: ವೆಂಟಿಲೇಟರ್ ಇರೋ ಗಾಡಿ ಕಾಸ್ಟ್ಲಿ ಅದು
    ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್‍ನಾ ಕರ್ಕೊಂಡು ಬಂದಿದ್ವಿ. ವೆಂಟಿಲೇಟರ್ ಇರಲಿಲ್ಲ
    ಚಾಲಕ: ಪೇಷೆಂಟ್ ಎಲ್ಲಿದಾರೆ
    ಪ್ರತಿನಿಧಿ: ಮೊನ್ನೆ ಕರ್ಕೊಂಡು ಬಂದಿದ್ವಿ
    ಚಾಲಕ: ಬೇಕಾದ್ರೆ ಹೇಳಿ ಇರ್ತಿವಿ. ವೆಂಟಿಲೇಟರ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
    ಪ್ರತಿನಿಧಿ: ದುಡ್ಡೇನಾದ್ರೂ ಚಾರ್ಜ್ ಮಾಡ್ತೀರಾ
    ಚಾಲಕ: ಹೌದು
    ಪ್ರತಿನಿಧಿ: ಎಷ್ಟು?
    ಚಾಲಕ: ಯಾವ ಆಸ್ಪತ್ರೆಗೆ ಹೋಗ್ತೀರಾ

    ಅಂಬುಲೆನ್ಸ್‌ಗಳಲ್ಲಿ ಮುಖ್ಯವಾಗಿ ಎರಡು ಕ್ಯಾಟಗರಿ ಇರುತ್ತೆ. ಒಂದು ಬೇಸಿಕ್ ಲೈಫ್ ಸಪೋರ್ಟ್. ಮತ್ತೊಂದು ಅಡ್ವಾನ್ಸ್ ಲೈಫ್ ಸಪೊರ್ಟ್ ಅಂತ. ಅಡ್ವಾನ್ಸ್ ಲೈಫ್ ಸಪೊರ್ಟ್‍ನಲ್ಲಿ ವೆಂಟಿಲೇಟರ್ ಇರುತ್ತೆ. ಹೃದಯಘಾತ, ರಸ್ತೆ ಅಪಘಾತ ಹೀಗೆ ರೋಗಿಗಳು ತುಂಬಾ ಕ್ರಿಟಿಕಲ್ ಕಂಡಿಷನ್ ಇರುವ ಸಮಯದಲ್ಲಿ ಈ ಅಂಬುಲೆನ್ಸ್ ಬಳಸುತ್ತಾರೆ. ಬೇಸಿಕ್ ಲೈಫ್ ಸಪೋರ್ಟ್ ಮಶಿನ್, ವೆಂಟಿಲೇಟರ್ ಗಿಂತ ಕಡಿಮೆ ಗುಣಮಟ್ಟ ಇರುತ್ತೆ. ಲಘು ಹೃದಯಾಘಾತ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಇದರ ಉಪಯೋಗವಾಗುತ್ತೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೃದಯಾಘಾತ, ರಸ್ತೆ ಅಪಘಾತಗಳಾದ್ರೆ ವೆಂಟಿಲೇಟರ್ ಇರಲೇಬೇಕು. ಹೃದಯ ಬಡಿತ ಸ್ಲೋ ಮೂವಿಂಗ್ ಆದಾಗ ಹೃದಯವನ್ನು ಈ ವೆಂಟಿಲೇಟರ್ ಆ್ಯಕ್ಟಿವ್ ಮಾಡುತ್ತೆ. ಆದರೆ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕೇವಲ 17 ಮಾತ್ರ ಇದೆ.

    ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕೇವಲ 17 ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಏಕಕಾಲಕ್ಕೆ ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳೇ ಬೇಕು ಎಂಬ ಮೂರ್ನಾಲ್ಕು ದೂರುಗಳು ಬಂದರೆ, ತುರ್ತಾಗಿ ಚಿಕಿತ್ಸೆ ನೀಡಲಾಗದಂತಹ ಸ್ಥಿತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಇದೆ. ಈ ಸ್ಟೋರಿಯನ್ನ ನೋಡಿದ ಮೇಲೆನಾದ್ರೂ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಈ ಬಗ್ಗೆ ಗಮನ ಹರಿಸ್ತಾರಾ? ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ವೆಂಟಿಲೇಟರ್ ಅಂಬುಲೆನ್ಸ್ ಸೇವೆಯನ್ನು ಓದಗಿಸುತ್ತಾರೆ ಎಂಬುದನ್ನು ನೋಡಬೇಕು.

    108 ಎಮರ್ಜೆನ್ಸಿ ತಂಡದ ಮುಖ್ಯಸ್ಥ ಡಾ. ಪ್ರಮೋದ್ ಈ ಬಗ್ಗೆ ಪ್ರತಿಕ್ರಿಯಿಸಿ, ತುರ್ತು ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ, ವೆಂಟಿಲೇಟರ್ ಇರೋ ಅಂಬುಲೆನ್ಸ್ ಗಳ ಸೇವೆ ತುಂಬಾ ಅವಶ್ಯಕತೆ ಇದೆ. ರೋಗಿಗೆ ಕ್ರಿಟಿಕಲ್ ಕಂಡಿಷನ್ ಇದ್ದಾಗ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವಾಗ ವೆಂಟಿಲೇಟರ್ ಇರಲೇಬೇಕು. ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕಡಿಮೆ ಇದೆ. ವೆಂಟಿಲೇಟರ್ ಇರುವ ಅಂಬುಲೆನ್ಸ್ ಅನ್ನು ಕಳುಹಿಸುವಷ್ಟರಲ್ಲಿ ತಡವಾಗುತ್ತೆ. ಹೀಗಾಗಿ ರೋಗಿಗೆ ಸಮಸ್ಯೆಯಾಗುತ್ತೆ. ಆದರೂ ನಾವು ನಮ್ಮ ಶಕ್ತಿ ಮೀರಿ ಕಡಿಮೆ ಸಮಯದಲ್ಲಿ ಈ ಅಂಬುಲೆನ್ಸ್ ಅನ್ನು ಕಳುಹಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಪ್ರಾಣದ ಜೊತೆ ಅಧಿಕಾರಿಗಳ ಆಟ – ಕೆ.ಆರ್ ಆಸ್ಪತ್ರೆಗೆ ಬರ್ಲಿಲ್ಲ ಜೀವರಕ್ಷಕ ವೆಂಟಿಲೇಟರ್

    ಪ್ರಾಣದ ಜೊತೆ ಅಧಿಕಾರಿಗಳ ಆಟ – ಕೆ.ಆರ್ ಆಸ್ಪತ್ರೆಗೆ ಬರ್ಲಿಲ್ಲ ಜೀವರಕ್ಷಕ ವೆಂಟಿಲೇಟರ್

    ಮೈಸೂರು: ನಗರದ ಕೆ.ಆರ್. ಆಸ್ಪತ್ರೆ ಎಂದರೆ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ದೊಡ್ಡಾಸ್ಪತ್ರೆ ಎಂದೇ ಹೆಸರುವಾಸಿ. ಆದರೆ ಈ ಆಸ್ಪತ್ರೆಯೇ ದೀರ್ಘಕಾಲದ ರೋಗದಿಂದ ಬಳಲುತ್ತಿದೆ.

    ಹೌದು. ಚಾಮರಾಜನಗರ ಜಿಲ್ಲೆಯ ಹನೂರಿನ ಸುಳ್ವಾಡಿ ವಿಷಹಾರ ದುರಂತ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ದುರಂತ ನಡೆದ ದಿನ ನೂರಾರು ರೋಗಿಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ಆದರೆ ಅಂದು ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ಮೈಸೂರಿನ ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಲಾಗಿತ್ತು. ಆಗ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೆ.ಆರ್. ಆಸ್ಪತ್ರೆಗೆ ಆಗತ್ಯವಿರುವಷ್ಟು ವೆಂಟಿಲೇಟರ್ ಮಂಜೂರು ಮಾಡೋದಾಗಿ ಹೇಳಿತ್ತು. ಆದರೆ ಘಟನೆ ನಡೆದು 7 ತಿಂಗಳಾದರೂ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ವೆಂಟಿಲೇಟರ್‍ಗಳು ಮಾತ್ರ ಆಸ್ಪತ್ರೆಗೆ ಸೇರಿಲ್ಲ ಎಂದು ಆಸ್ಪತ್ರೆ ಸೂಪರಿಡೆಂಟ್ ನಂಜುಂಡಸ್ವಾಮಿ ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ ಸದ್ಯ 15 ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿದ್ದು, 7 ಹೊಸ ವೆಂಟಿಲೇಟರ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಕೆ.ಆರ್ ಆಸ್ಪತ್ರೆಯಲ್ಲಿ ಇರುವ ಯಾವುದೇ ಅಂಬುಲೆನ್ಸ್ ಗಳಿಗೂ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಇದರಿಂದ ಅಂಬುಲೆನ್ಸ್‍ಗಳಿಗೂ ವೆಂಟಿಲೇಟರ್ ಅಳವಡಿಸುವ ಬೇಡಿಕೆ ಸಹ ಇದೆ. ಆದರೂ ಸರ್ಕಾರ ಮಾತ್ರ ಇನ್ನು ಯಾವುದೇ ಕ್ರಮ ವಹಿಸಿಲ್ಲ.

    ಮೈಸೂರು ಜಿಲ್ಲೆಯಲ್ಲಿ ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಇಬ್ಬರು ಸಚಿವರಿದ್ದಾರೆ. ಅದಾಗ್ಯೂ, ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೆಂಟಿಲೇಟರ್ ಒದಗಿಸುವಲ್ಲಿ ಇವರಿಗೂ ಕೂಡ ಕಾಳಜಿ ಇಲ್ಲದಂತಿದೆ.

  • ವಿಮ್ಸ್ ನಲ್ಲಿ ವೆಂಟಿಲೇಟರ್ ಸಮಸ್ಯೆ- ಅಪಘಾತದ ಗಾಯಾಳು ಸಾವು

    ವಿಮ್ಸ್ ನಲ್ಲಿ ವೆಂಟಿಲೇಟರ್ ಸಮಸ್ಯೆ- ಅಪಘಾತದ ಗಾಯಾಳು ಸಾವು

    ಬಳ್ಳಾರಿ: ವಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗಲ್ಲ ಎನ್ನುವ ಆರೋಪ ಮಧ್ಯೆಯೇ ರೋಗಿಯೊಬ್ಬರು ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ಮೃತಪಟ್ಟ ಘಟನೆ ನಡೆದಿದೆ.

    ಗುರುವಾರ ಕುರುಗೋಡ್ ತಾಲೂಕಿಮ ಬೈಲೂರಿನಲ್ಲಿ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೈಲೂರಿನ ಜಿಎಂ ವೀರೇಶಯ್ಯ(48) ಗಂಭೀರವಾಗಿ ಗಾಯಗೊಂಡಿದ್ದರು. ಕೆಎಸ್‍ಆರ್ ಟಿಸಿ ಬಸ್ ಗುದ್ದಿದ ಪರಿಣಾಮ ವೀರೇಶಯ್ಯನ ಕಾಲು ಮುರಿದಿತ್ತು. ಹೀಗಾಗಿ ಕೂಡಲೇ ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

    ಆಸ್ಪತ್ರೆಗೆ ತಂದಾಗ ವೆಂಟಿಲೇಟರ್ ಇಲ್ಲ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂದು ವಿಮ್ಸ್ ಸಿಬ್ಬಂದಿ ಹೇಳಿದ್ದಾರೆ. ಗಾಯಾಳಿಗೆ ಸರಿಯಾದ ಚಿಕಿತ್ಸೆ ನೀಡದ ಪರಿಣಾಮ ಆಸ್ಪತ್ರೆಗೆ ತಂದು ಎರಡು ಗಂಟೆಯಲ್ಲೇ ವೀರೇಶಯ್ಯ ಸಾವನ್ನಪ್ಪಿದ್ದಾರೆ.

    ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಿದ್ದಾರೆಂದು ವಿರೇಶಯ್ಯನ ಸಂಬಂಧಿಗಳ ಆರೋಪಿಸಿದ್ದಾರೆ. ನಮಗಾದಂತೆ ಇನ್ಯಾರಿಗೂ ಈ ರೀತಿ ಆಗದಿರಲಿ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಅವರು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ಮಂಡ್ಯ: ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಮೃತಪಟ್ಟ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶಶಿಕುಮಾರ್ ಮತ್ತು ಶೃತಿ ದಂಪತಿಯ ಗಂಡು ಮಗು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಪೋಷಕರು ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದ್ದರಿಂದ ಮಗುವನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

    ವೈದ್ಯರು ನಿರಾಕರಿಸುತ್ತಿದ್ದಂತೆ ಮಗುವನ್ನು ಆ್ಯಂಬುಲೆನ್ಸ್ ಮುಖಾಂತರ ಮೈಸೂರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಮಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಮಗವನ್ನು ತಕ್ಷಣವೇ ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿನ ಸಾವಿಗೆ ಮಿಮ್ಸ್ ವೈದ್ಯರುಗಳೇ ಕಾರಣವೆಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವೆಂಟಿಲೇಟರ್ ಕೆಟ್ಟುಹೋಗಿ ಮಂಡ್ಯ ಆಸ್ಪತ್ರೆಯಲ್ಲಿ ರೋಗಿ ಸಾವು

    ವೆಂಟಿಲೇಟರ್ ಕೆಟ್ಟುಹೋಗಿ ಮಂಡ್ಯ ಆಸ್ಪತ್ರೆಯಲ್ಲಿ ರೋಗಿ ಸಾವು

    ಮಂಡ್ಯ: ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ರೋಗಿಗೆ ಹಾಕಿದ್ದ ವೆಂಟಿಲೇಟರ್ ಕೆಟ್ಟು ಹೋದ ಪರಿಣಾಮ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆ ಗಾಜುಗಳನ್ನು ಪುಡಿ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಸಮೀವುಲ್ಲಾಖಾನ್ ಮತ್ತು ಸರಿಯಾಸುಲ್ತಾನ್ ದಂಪತಿಯ ಪುತ್ರ, ಮಹಮದ್ ಉಮರ್ ಖಾನ್(18) ಜೂನ್ 27 ರಂದು ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆತನನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈದ್ಯರ ಸೂಚನೆಯಂತೆ ನಿಮಾನ್ಸ್ ನಲ್ಲಿಯೂ ಚಿಕಿತ್ಸೆ ಕೊಡಿಸಿ ಮತ್ತೆ ಮಂಡ್ಯ ಮಿಮ್ಸ್ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರಲ್ಲಿ ಐಸಿಯುನಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಕೊಠಡಿ ಸಂಖ್ಯೆ 22ರಲ್ಲಿ ಒಟ್ಟು ಐದು ವೆಂಟಿಲೇಟರ್‍ಗಳು ಇದ್ದು ಅದರಲ್ಲಿ ಈಗಾಗಲೇ ನಾಲ್ಕು ವೆಂಟಿಲೇಟರ್‍ಗಳು ತಾಂತ್ರಿಕ ದೋಷ ಹೊಂದಿದ್ದವು.

    ಇದನ್ನು ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ ಕೆಟ್ಟು ಹೋಗಿದ್ದ ವೆಂಟಿಲೇಟರ್‍ನಲ್ಲೇ ನನ್ನ ಮಗನಿಗೆ ಚಿಕಿತ್ಸೆ ನೀಡುತ್ತಿದ್ದು, ಇದ್ದಕ್ಕಿದ್ದಂತೆ ಮಗನಿಗೆ ಅಳವಡಿಸಿದ್ದ ವೆಂಟಿಲೇಟರ್ ಕೈಕೊಟ್ಟಿದೆ. ಪರಿಣಾಮ ನಮ್ಮ ಮಗ ಮಹಮದ್ ಉಮರ್‍ಖಾನ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಆಸ್ಪತ್ರೆ ಕಿಟಕಿ ಗಾಜುಗಳನ್ನು ಪುಡಿ ಆಕ್ರೋಶ ಹೊರಹಾಕಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದರು.

    ಕೊನೆಗೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯಶಸ್ವಿಯಾದ್ರು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪದೇ ಪದೇ ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನಿಗೆ ಒದಗಿದ ದುಸ್ಥಿತಿ ಬೇರೆ ಯಾವ ತಂದೆ, ತಾಯಿಗೂ ಬರಬಾರದು ಎಂದು ಮೃತನ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.