Tag: ventilator

  • 40 ವೆಂಟಿಲೇಟರ್ ಇದ್ರೂ ಬಳಕೆ ಮಾಡ್ತಿಲ್ಲ, ಇದೊಂದು ದೊಡ್ಡ ಅಪರಾಧ: ಸುಧಾಕರ್

    40 ವೆಂಟಿಲೇಟರ್ ಇದ್ರೂ ಬಳಕೆ ಮಾಡ್ತಿಲ್ಲ, ಇದೊಂದು ದೊಡ್ಡ ಅಪರಾಧ: ಸುಧಾಕರ್

    ಕೋಲಾರ: 40 ವೆಂಟಿಲೇಟರ್ ಇದ್ದರೂ ಬಳಕೆ ಮಾಡುತ್ತಿಲ್ಲ. ಇದೊಂದು ದೊಡ್ಡ ಅಪರಾಧ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೆಂಟಿಲೇಟರ್ ಬಳಕೆ ಮಾಡಿದ್ದರೆ ಕನಿಷ್ಠ ನಲವತ್ತು ಜನರನ್ನು ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಪ್ರತಿನಿತ್ಯ ಹತ್ತರಿಂದ ಹನ್ನೊಂದು ಜನ ಸಾಯುತ್ತಿದ್ದಾರೆ ಎಂದರು.

    ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ಇದು ರಾಜ್ಯದಲ್ಲೆಲ್ಲೂ ಇಲ್ಲ ಇದು ತಪ್ಪು. ಕೊರೊನಾ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

    ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ನಿರ್ವಹಣೆ ಮಾಡುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

    ಏನಿದು ಘಟನೆ..?
    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಗುತ್ತಿರುವ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲೇ ಶನಿವಾರ ಒಂದೇ ದಿನ ಎಂಟು ಜನ ಮೃತಪಟ್ಟಿದ್ದರು. ರಾತ್ರಿ ಆಕ್ಸಿಜನ್ ಸಮಸ್ಯೆಯಿಂದ ಐದು ಜನ ಕೊರೊನಾಗೆ ಬಲಿಯಾಗಿದ್ದರು.

  • ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    – ಕ್ರಿಕೆಟ್, ಫುಟ್‍ಬಾಲ್ ಮ್ಯಾಚ್ ವೀಕ್ಷಣೆ
    – ಎಸ್‍ಪಿಬಿ ಪುತ್ರ ಚರಣ್ ಮಾಹಿತಿ

    ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಳೆದ ವಾರಕ್ಕಿಂತ ಈ ವಾರ ತುಂಬಾ ಸುಧಾರಣೆಯಾಗಿದೆ ಎಂದು ಎಸ್‍ಪಿಬಿ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.

    ತಂದೆಯ ಆರೋಗ್ಯದ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಇಷ್ಟು ದಿನ ಅಪ್‍ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಅವರ ಲಂಗ್ಸ್‍ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಿರುವುದರಿಂದ ವೆಂಟಿಲೇಟರ್‍ನಲ್ಲಿಯೇ ಇಡಲಾಗಿದೆ. ಖುಷಿಯ ವಿಚಾರ ಎಂಬಂತೆ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಆದರೆ ಕೋವಿಡ್ ವರದಿ ನೆಗೆಟಿವ್ ಪಾಸಿಟಿವ್ ಏನೇ ಇರಲಿ ನಮಗೀಗ ಶ್ವಾಸಕೋಶಗಳು ಬೇಗನೇ ಗುಣಮುಖವಾಗಬೇಕಿದೆ ಎಂದು ತಿಳಿಸಿದ್ದಾರೆ.

    ಶ್ವಾಸಕೋಶಗಳು ಗುಣಮುಖವಾಗುತ್ತಿವೆ. ಆದರೆ ಕೆಲ ಸಮಯವನ್ನು ತೆಗೆದುಕೊಳ್ಳುತ್ತವೆ. ಮತ್ತೊಂದು ವಿಚಾರವೆಂದರೆ ನಮ್ಮ ತಂದೆ, ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಕಳೆದ ವಾರ ಸರಳವಾಗಿ ಸೆಲೆಬ್ರೇಟ್ ಮಾಡಿದ್ದೇವೆ. ತಂದೆಯವರು ಅವರ ಐ ಪ್ಯಾಡ್‍ನಲ್ಲಿಯೇ ಕ್ರಿಕೆಟ್ ಹಾಗೂ ಟೆನ್ನಿಸ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಅಲ್ಲದೆ ಬರವಣಿಗೆ ಹಾಗೂ ಮಾತನಾಡುವುದನ್ನು ಮಾಡುತ್ತಿದ್ದಾರೆ. ಫಿಸಿಯೋಥೆರಪಿಯನ್ನು ಸಹ ಮಾಡಲಾಗುತ್ತಿದೆ. ನಿಮ್ಮೆಲ್ಲರ, ಪ್ರೀತಿ, ಕಾಳಜಿ, ಪ್ರಾರ್ಥನೆಗೆ ಧನ್ಯವಾದಗಳು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

     

    View this post on Instagram

     

    A post shared by S. P. Charan/Producer/Director (@spbcharan) on

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

  • ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    – ಪಿಎಂ ಕೇರ್ಸ್‍ನಿಂದ ನೀಡಿದ ಹೊಸ ವೆಂಟಿಲೇಟರ್ ಗಳು

    ಕೊಪ್ಪಳ: ಹಲವೆಡೆ ವೆಂಟಿಲೇಟರ್ ಗಳಿಲ್ಲ ಎಂದು ರೋಗಿಗಳು ನರಳುತ್ತಿದ್ದಾರೆ, ಕೆಲವರು ಸಾವನ್ನಪ್ಪುತ್ತಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಹೊಸ ವೆಂಟಿಲೇಟರ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ.

    ಕೊಪ್ಪಳ ಜಿಲ್ಲೆಯ ಕೋವಿಡ್-19 ವಾರ್ಡ್ ಪಕ್ಕದ ಕೊಠಡಿಯಲ್ಲಿ ವೆಂಟಿಲೇಟರ್ ಅನಾಥವಾಗಿ ಬಿದ್ದಿವೆ. ಇದನ್ನು ಸೂಕ್ತ ರೀತಿಯಲ್ಲಿ ಅಳವಡಿಸಿ ರೋಗಿಗಳಿಗೆ ಸಹಾಯಕವಾಗುವಂತೆ ವ್ಯವಸ್ಥೆ ಕಲ್ಪಿಸುವ ಬದಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೀಗ ವೆಂಟಿಲೇಟರ್ ಅನಾಥವಾಗಿ ಮೂಲೆಯಲ್ಲಿ ಬಿದ್ದಿವೆ. ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಅನಾಥವಾಗಿ ಬಿದ್ದಿದ್ದು, ಸೂಕ್ತ ಸಿಬ್ಬಂದಿ ನೇಮಿಸಿ, ವೆಂಟಿಲೇಟರ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡದೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಜಿಲ್ಲೆಯಲ್ಲಿ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಜನ ಕೋವಿಡ್-19 ನಿಂದ  ಸಾವನ್ನಪ್ಪುತ್ತಿದ್ದಾರೆ. ಕಳೆದ ವಾರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ಕೊರತೆಯೇ ಸಾವಿಗೆ ಕಾರಣ ಎಂಬ ಆರೋಪ ಸಹ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದರೂ ಆರೋಗ್ಯ ಇಲಾಖೆ ಮಾತ್ರ ವೆಂಟಿಲೇಟರ್ ಇನ್‍ಸ್ಟಾಲ್ ಮಾಡಿ, ಕಾರ್ಯಾರಂಭಿಸಿಲ್ಲ ಇದರಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ವೆಂಟಿಲೇಟರ್ ಗಳು ಇದೀಗ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿವೆ.

    ಪಿಎಂ ಕೇರ್ಸ್ ನಿಂದ ಈ ವೆಂಟಿಲೇಟರ್ ಗಳನ್ನು ನೀಡಲಾಗಿದ್ದು, ಅಗತ್ಯ ಇರುವ ಆಸ್ಪತ್ರೆಗಳಿಗೆ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಾದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅವುಗಳ ಕಾರ್ಯಾರಂಭದ ಬಗ್ಗೆ ಚಿಂತಿಸಿಲ್ಲ.

  • ಕೊರೊನಾ ಹಗರಣ – ಅನುಮಾನ ಮೂಡಿಸುತ್ತಿದೆ ಸರ್ಕಾರದ ನಡೆ

    ಕೊರೊನಾ ಹಗರಣ – ಅನುಮಾನ ಮೂಡಿಸುತ್ತಿದೆ ಸರ್ಕಾರದ ನಡೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ 2 ಸಾವಿರ ಕೋಟಿ ರೂ. ಹಗರಣದ ಆರೋಪ ಮಾಡಿದ ಬೆನ್ನಲ್ಲೇ ತಾನು ಹೆಣೆದ ಬಲೆಯಲ್ಲಿ ಬಿಜೆಪಿ ಸರ್ಕಾರ ಸಿಲುಕಿಕೊಳ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

    ಈ ಪ್ರಶ್ನೆ ಏಳಲು ಕಾರಣ ಸರ್ಕಾರದ ಅನುಮಾನದ ನಡೆ. ಯಾಕಂದ್ರೆ, ಕೊರೊನಾ ವೈದ್ಯಕೀಯ ಸಲಕರಣೆಗಳ ಖರೀದಿ ಆರೋಪ ಕೇಳಿ ಬಂದ ದಿನದಿಂದಲೂ ಸರ್ಕಾರದ ಪ್ರತಿಯೊಂದು ನಡೆಯೂ ಅನುಮಾನ ಮೂಡಿಸುವಂತೆ ಇದೆ.

    ಯಾಕೆ ಅನುಮಾನ?
    ಆರಂಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನಿಖೆಯನ್ನು ಸರ್ಕಾರ ತಡೆದಿತ್ತು. ಬಳಿಕ – ಆಸ್ಪತ್ರೆಗಳ ಪರಿಶೀಲನೆಗೆ ಮುಂದಾದಾಗ ಅದನ್ನು ತಡೆದಿತ್ತು. ಸಿದ್ದರಾಮಯ್ಯ ಹಗರಣ ಆರೋಪ ಮಾಡಿ ಪತ್ರ ಬರೆದಾಗ 17 ದಿನಗಳ ಕಾಲ ಪ್ರತಿಕ್ರಿಯೆ ನೀಡಿರಲಿಲ್ಲ. ಯಾರಿಗೂ ಕೊರೊನಾ ಕುರಿತ ಮಾಹಿತಿ ನೀಡದಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ದಾದ ಬಳಿಕ ಹಗರಣದ ಆರೋಪದ ಯಾವುದೇ ಪ್ರಶ್ನೆಗಳಿಗೂ ನಿಖರ ಮಾಹಿತಿ, ದಾಖಲೆ ನೀಡದೇ ಇರುವ ಕಾರಣ ಸರ್ಕಾರದ ನಡೆ ಅನುಮಾನ ಮೂಡಿಸುವಂತಿದೆ.

    ಮತ್ತೆ ಕೆಣಕಿದ ಸಿದ್ದರಾಮಯ್ಯ
    ನಿನ್ನೆ 2000 ಕೋಟಿ ಹಗರಣ ಆರೋಪ ಮಾಡಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಕೂಡ ಬಿಜೆಪಿ ಸರ್ಕಾರವನ್ನು ಕೆಣಕಿದ್ದಾರೆ. ವೈದ್ಯಕೀಯ ಉಪಕರಣಗಳ ಖರೀದಿಯೆಲ್ಲವೂ ಪಾರದರ್ಶಕವಾಗಿದ್ದರೆ, ನ್ಯಾಯಾಂಗ ತನಿಖೆಗೆ ಭಯವೇಕೆ ಅಂತ ಚಿವುಟಿದ್ದಾರೆ. ಇವತ್ತು ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡುವ ಜೊತೆಗೆ, 15ಕ್ಕೂ ಹೆಚ್ಚು ಟ್ವೀಟ್‍ಗಳ ಮೂಲಕ ಬಿಜೆಪಿ ಸರ್ಕಾರವನ್ನು ಕಾಡಿದ್ದಾರೆ. ಆದ್ರೆ, ಹಗರಣದ ತನಿಖೆಗೆ ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದಿದ್ದರೂ, ಬಿಜೆಪಿ ಸಚಿವರು ಮಾತ್ರ ತುಟಿ ಬಿಚ್ಚಿಲ್ಲ.

    ನ್ಯಾಯಾಂಗ ತನಿಖೆ ನಡೆಸುವುದನ್ನು ಬಿಟ್ಟು ಉಳಿದೆಲ್ಲದರ ಮಾತನಾಡಿದ್ದಾರೆ. ನಿನ್ನೆ ವೀರಾವೇಶದ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಕಾಣುತ್ತಿದೆ. ತನಿಖೆ ನಡೆಸುವಂತೆ ಸಿದ್ದರಾಮಯ್ಯ ನಮಗೆ ಸೂಚನೆ ಕೊಡುವ ಅಧಿಕಾರ ಹೊಂದಿಲ್ಲ. 2019ರ ವೆಂಟಿರೇಟರ್ ಖರೀದಿಯ ತನಿಖೆ ಬಗ್ಗೆ ನಾವ್ ತೀರ್ಮಾನ ಮಾಡ್ತೀವಿ. ಸಿದ್ದರಾಮಯ್ಯ ಹೇಳಿದ್ರು ಅಂತ ತನಿಖೆ ಮಾಡುವುದಿಲ್ಲ ಎಂದಿದ್ದಾರೆ.

    ಇನ್ನೊಂದೆಡೆ ಡಿಸಿಎಂ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿದರಾದರೂ, ತನಿಖೆ ಬಗ್ಗೆ ಮಾತನಾಡಲಿಲ್ಲ. ಸಿದ್ದರಾಮಯ್ಯ ಹೇಳಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 500 ಕೋಟಿ ಅಕ್ರಮವಾಗಿಲ್ಲ. ನನ್ನ ಇಲಾಖೆಯಲ್ಲಿ 5 ಕೋಟಿಯೂ ಖರ್ಚಾಗಿಲ್ಲ. ಹೀಗಾಗಿ ಸುಳ್ಳಿಗೆ ತನಿಖೆ ಬೇಕಾ ಅಂತ ಪ್ರಶ್ನಿಸಿದರು.

    ಈ ಮಧ್ಯೆ, ಸರಣಿ ಪ್ರಶ್ನೆಗಳ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಪಂಚ ಸಚಿವರಿಗೆ ಪಂಚ ಪ್ರಶ್ನೆ ಕೇಳಿದ್ದಾರೆ. ಆದರೆ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಯಾರು ತುಟಿಬಿಚ್ಚಿಲ್ಲ. ತಪ್ಪೇ ಮಾಡಿಲ್ಲ ಎಂದಾದರೆ ತನಿಖೆಗೆ ಭಯ ಏಕೆ? ಅನ್ನೋದು ಇಲ್ಲಿ ಪ್ರಶ್ನೆ. ಜೊತೆಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಐವರು ಸಚಿವರ ಪೈಕಿ ನಾಲ್ವರು ಇಂದು ಎಲ್ಲೂ ಕಾಣಿಸಿಕೊಳ್ಳಲಿಲ್ಲ.

    ಸರ್ಕಾರಕ್ಕೆ ಸಿದ್ದು ಪಂಚಪ್ರಶ್ನೆ..
    ಪ್ರಶ್ನೆ 1 > ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ?
    ಪ್ರಶ್ನೆ 2 > ಸರ್ಕಾರ ಅಕ್ರಮ ಮಾಡಿಲ್ಲ, ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ?
    ಪ್ರಶ್ನೆ 3 > ವೆಂಟಿಲೇಟರ್‌ಗಳನ್ನು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಖರೀದಿಸಿದ್ದು ಸುಳ್ಳಾ?
    ಪ್ರಶ್ನೆ 4 > ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಖರೀದಿ ಬಗ್ಗೆ ತನಿಖೆ ನಡೆಸಬಹುದಲ್ಲವೇ?
    ಪ್ರಶ್ನೆ 5 > ಬಿಬಿಎಂಪಿ ಆಯುಕ್ತರ ಏಕಾಏಕಿ ವರ್ಗಾವಣೆ ಯಾಕಾಯ್ತು? ಯಾರ ಭ್ರಷ್ಟಾಚಾರ ಮುಚ್ಚಿಡಲು ಅವರನ್ನು ಬಲಿ ಕೊಟ್ಟಿರಿ?

  • ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ- ‘ಕೈ’ ಆರೋಪಕ್ಕೆ ಅಪ್ಪಚ್ಚು ರಂಜನ್ ಸಲಹೆ

    ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ- ‘ಕೈ’ ಆರೋಪಕ್ಕೆ ಅಪ್ಪಚ್ಚು ರಂಜನ್ ಸಲಹೆ

    ಮಡಿಕೇರಿ: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಎಂದು ವಿರೋಧ ಪಕ್ಷ ಆರೋಪಿಸುತ್ತಿದ್ದು ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯ-ಅಸತ್ಯತೆಯನ್ನು ಜನತೆಯ ಮುಂದೆ ಇಡಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಲಹೆ ನೀಡಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ವಿರೋಧ ಪಕ್ಷದ ಆರೋಪಗಳಿಗೆ ಅಗತ್ಯವಾದ ಮಾಹಿತಿ ಹಾಗೂ ದಾಖಲೆಗಳನ್ನು ಕೊಡಬೇಕಾಗಿರುವುದು ಆಡಳಿತ ಪಕ್ಷದವಾದ ನಮ್ಮ ಜವಾಬ್ದಾರಿ. ಬಿಜೆಪಿ ಸರ್ಕಾರದ ಮೇಲಿನ ಆರೋಪಕ್ಕೆ ಈಗಾಗಲೇ ಉಪ ಮುಖ್ಯಮಂತ್ರಿ ಅಶೋಕ್ ಸೇರಿದಂತೆ ಹಲವರು ಉತ್ತರವನ್ನು ಕೊಟ್ಟಿದ್ದಾರೆ ಎಂದರು.

    ಕೊರೊನಾ ಸಮಯದಲ್ಲಿ 665 ಕೋಟಿ ಖರ್ಚು ಮಾಡಿದ್ದೇವೆ ಎಂದು ಆಡಳಿತ ಪಕ್ಷದ ಸಚಿವರು ಹೇಳುತ್ತಾರೆ. ಮತ್ತೊಂದೆಡೆ ವಿರೋಧ ಪಕ್ಷದವರು 4 ಸಾವಿರ ಕೋಟಿ ಅಂತಾರೆ. ಹೀಗೆ ಇರುವಾಗ 2 ಸಾವಿರ ಕೋಟಿ ಹಣ ದುರುಪಯೋಗವಾಗಲು ಹೇಗೆ ಸಾಧ್ಯ. ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಬದಲು ದಾಖಲೆಗಳ ಸಮೇತ ಮಾತನಾಡಬೇಕು ಎಂದು ಅಪ್ಪಚ್ಚು ರಂಜನ್ ಕಿಡಿಕಾರಿದ್ದಾರೆ.

  • ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡ್ತಿದಾರೆ: ಆರ್.ಅಶೋಕ್

    ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡ್ತಿದಾರೆ: ಆರ್.ಅಶೋಕ್

    ಬೆಂಗಳೂರು: ಇಂಥ ಸಂಕಷ್ಟದ ವೇಳೆಯಲ್ಲಿ ಲೆಕ್ಕ ಕೊಡಿ ಎನ್ನುವುದು ಸರಿಯಲ್ಲ. ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ದಕ್ಷಿಣ ವಲಯದ ಸಭೆ ಬಳಿಕ ಮಾತನಾಡಿದ ಅವರು, ವೆಂಟಿಲೇಟರ್ ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದರು. ಇಂಥ ಸಂಕಷ್ಟದ ವೇಳೆ ಲೆಕ್ಕ ಕೊಡಿ ಎಂದು ಕೇಳುವುದು ಸರಿಯಲ್ಲ. ಸಲಕರಣೆಗಳ ಬೆಲೆ ಬದಲಾಗುತ್ತಿರುತ್ತದೆ. ಪ್ರಸಕ್ತ ದರದಂತೆ ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಆತುರ ಬಿದ್ದು ಗೋತ್ರ ಕೆಡಿಸಿಕೊಳ್ಳೋದು ಬೇಡ. ಲೆಕ್ಕ ಕೇಳಲು ಒಂದು ಸಮಯ ಬರುತ್ತೆ, ಆಗ ಕೇಳಿ ಎಂದು ಹೇಳಿದ್ದಾರೆ.

    ಅಧಿವೇಶನ ವೇಳೆ ನಿಮ್ಮ ಮನೆಮನೆಗೆ ಲೆಕ್ಕ ಕಳಿಸುತ್ತೇವೆ. ಆಗ ನೀವು ಲೆಕ್ಕನಾದರೂ ಕೇಳಿ ನಾಟಕವಾದರೂ ಮಾಡಿ. 400-500 ಕೋಟಿ ರೂ.ಗಷ್ಟೇ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗಿದೆ. ಕಾಂಗ್ರೆಸ್ ಆರೋಪದಂತೆ 3000 ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲ. ಜೆಡಿಎಸ್ ನೋಡಿ ಕಾಂಗ್ರೆಸ್ ಕಲಿಯಬೇಕಿದೆ. ಜೆಡಿಎಸ್ ಸಮಯ ಪ್ರಜ್ಞೆ ತೋರಿಸುತ್ತಿದೆ, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್‍ನವರು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಭೂಪಟದಿಂದ ಕಾಂಗ್ರೆಸ್ ಕಳಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆಯನ್ನು ತಲಾ ಒಬ್ಬೊಬ್ಬ ಕಾರ್ಪೊರೇಟ್ ಹೆಗಲಿಗೆ ಹೊರಿಸಲಾಗಿದೆ. ಇವರ ಜೊತೆ ಒಬ್ಬೊಬ್ಬ ಪಾಲಿಕೆ ಅಧಿಕಾರಿ, ಪೊಲೀಸ್ ಸಿಬ್ಬಂದಿ ಇರುತ್ತಾರೆ. ವಾರ್ಡ್‍ಗೆ ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗುವುದು. ಪ್ರತಿ ವಾರ್ಡ್‍ಗೂ 25 ಲಕ್ಷ ರೂ. ಕೋವಿಡ್-19 ನಿಧಿ ಇದೆ. ಈ ನಿಧಿ ಬಳಕೆ ಸಂಬಂಧ ನೀತಿ ನಿಯಮ ರೂಪಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗುವುದು ಎಂದರು.

    ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾರಿ ಕೇಸ್ ಇರುವ ರೋಗಿಗಳು ಹೆಚ್ಚು ಸಾವನ್ನಪ್ಪುತ್ತಿದ್ದು, ಇವರನ್ನು ಕರೆದೊಯ್ಯುವ ಅಂಬುಲೆನ್ಸ್ ನಲ್ಲಿ ಕೃತಕ ಉಸಿರಾಟ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಚರ್ಚಿಸಿ ಯಂತ್ರಗಳ ಖರೀದಿ ಮಾಡಲಾಗುವುದು. ವಾರ್ಡ್‍ವಾರು ಕೃತಕ ಉಸಿರಾಟ ಯಂತ್ರಗಳ ಖರೀದಿ ಮಾಡಲಾಗುವುದು ಎಂದರು.

    ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆ ಕೊಡುವುದರಿಂದ ವಿನಾಯಿತಿ ಕೇಳಿ ಪತ್ರ ಬರೆಯುತ್ತಿದ್ದಾರೆ. ಇಂಥದ್ದಕ್ಕೆಲ್ಲ ವಿನಾಯಿತಿ ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಓಡಿ ಹೋಗಬಾರದು. ಖಾಸಗಿ ಆಸ್ಪತ್ರೆಗಳು ಈಗ ಸಮಾಜದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ನುಣುಚಿಕೊಳ್ಳುವ ಯತ್ನ ಮಾಡಬಾರದು. ಸಹಕಾರ ಕೊಡದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು, ಅದನ್ನು ಸಂಪೂರ್ಣ ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಟೆಲಿ ಕನ್ಸಲ್ಟೇಷನ್ ಸೇವೆ ನಮ್ಮ ವಲಯದಲ್ಲಿ ಆರಂಭ ಮಾಡುತ್ತಿದ್ದೇವೆ. ಹೋಮ್ ಐಸೋಲೇಷನ್ ನಲ್ಲಿರುವವರಿಗೆ ವೈದ್ಯರು ಅಗತ್ಯ ಸಲಹೆ ಸೂಚನೆ ಕೊಡುತ್ತಾರೆ. ಇದರ ಸಹಾಯವಾಣಿ ನಂಬರ್ ನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

    ಮಹಾರಾಷ್ಟ್ರ, ದೆಹಲಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರವಾಹ ಎಲ್ಲೆಲ್ಲಿ ಆಗುತ್ತೆ ಎಂಬ ಬಗ್ಗೆ ಸದ್ಯದಲ್ಲೇ ಸಭೆ ಕರೆಯುತ್ತೇನೆ. ಡಿಸಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

  • ರಾಜ್ಯದಲ್ಲಿ ವೆಂಟಿಲೇಟರ್ ಖರೀದಿ ಹಗರಣ ಆರೋಪ- ‘ಉತ್ತರ ಕೊಡಿ ಬಿಜೆಪಿ’ ಎಂದ ಡಿಕೆಶಿ

    ರಾಜ್ಯದಲ್ಲಿ ವೆಂಟಿಲೇಟರ್ ಖರೀದಿ ಹಗರಣ ಆರೋಪ- ‘ಉತ್ತರ ಕೊಡಿ ಬಿಜೆಪಿ’ ಎಂದ ಡಿಕೆಶಿ

    ಬೆಂಗಳೂರು: ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಉತ್ತರ ಕೊಡಿ ಬಿಜೆಪಿ’ ಅಂತಾ ಸಮರ ಸಾರಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವೆಂಟಿಲೇಟರ್ ಹಗರಣದ ಆರೋಪ ಮಾಡಿದ್ದಾರೆ.

    ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂಪಾಯಿಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂಪಾಯಿ ಕೊಟ್ಟಿದೆ. ಬೊಕ್ಕಸಕ್ಕೆ ಆರು ಕೋಟಿಗೂ ಹೆಚ್ಚು ನಷ್ಟವಾಗಿದೆ. ಕೊರೊನಾ ಕರಪ್ಷನ್ ಬಗ್ಗೆ ಸಿಎಂ ಉತ್ತರ ಕೊಡಬೇಕಿದೆ ಅಂತಾ ಒತ್ತಾಯಿಸಿದ್ದಾರೆ. ಒಂದ್ಕಡೆ ವೆಂಟಿಲೇಟರ್ ಸಿಗದೇ ಸೋಂಕಿತರು ಸಾಯುತ್ತಿದ್ದಾರೆ. ಆದರೆ ಬಿಜೆಪಿ ಸಚಿವರು ಪಿಪಿಇ ಕಿಟ್‍ಗಳಿಂದ ಹಿಡಿದು ಪ್ರತಿಯೊಂದರ ಖರೀದಿಯಲ್ಲೂ ಲೂಟಿಗಿಳಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಏನದು ವೆಂಟಿಲೇಟರ್ ಖರೀದಿ ಹಗರಣ?
    * ತಮಿಳುನಾಡು ಸರ್ಕಾರದಿಂದ 4.78 ಲಕ್ಷ ರೂ.ಗೆ ಒಂದರಂತೆ 100 ವೆಂಟಿಲೇಟರ್ ಖರೀದಿ.
    * ಕರ್ನಾಟಕ ಸರ್ಕಾರದಿಂದ 18.20 ಲಕ್ಷ ರೂ.ಗೆ ಒಂದರಂತೆ 200 ವೆಂಟಿಲೇಟರ್ ಖರೀದಿ.
    * ಪ್ರತಿ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ ನೀಡಿದ ಹೆಚ್ಚುವರಿ ಹಣ 13.42 ಲಕ್ಷ ರೂ.
    * 9.65 ಕೋಟಿ ವೆಚ್ಚ ಮಾಡಬೇಕಿದ್ದ ಜಾಗದಲ್ಲಿ 15.86 ಕೋಟಿ ವೆಚ್ಚ ಮಾಡಿದ ಸರ್ಕಾರ.
    * ಈ ಅವ್ಯವಹಾರದಲ್ಲಿ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 6.40 ಕೋಟಿ ನಷ್ಟ.

  • ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ: ಡಿಕೆ ಶಿವಕುಮಾರ್

    ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ: ಡಿಕೆ ಶಿವಕುಮಾರ್

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯದ ಸರ್ಕರ ಕೊರೊನಾ ಸಂಕಷ್ಟದ ಸಂದರ್ಭವನ್ನು ಲೂಟಿ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಡಿಕೆಶಿ, ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೊನಾ ಸೋಂಕಿತರು ಸಾಯುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್‍ಗಳಿಂದ ಹಿಡಿದು ಬೆಡ್‍ಗಳವರೆಗೂ ಎಲ್ಲಾ ಕೊರೊನಾ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಕೊರೊನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಎಂದು ಹೇಳಿದ್ದಾರೆ.

    ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿಕೆಶಿ, ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂ. ಕೊಟ್ಟಿದೆ. ಈ ಕೊರೊನಾ ಭ್ರಷ್ಟಾಚಾರದ ಕುರಿತು ಸಿಎಂ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.

  • ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದೆ ಎಂದು ಹಾಸನದ ಅರಕಲಗೂಡಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆರೋಪ ಮಾಡಿದ್ದಾರೆ.

    ಅರಕಲಗೂಡು ಪಟ್ಟಣ ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಭಾರೀ ಲೂಟಿ ಮಾಡುತ್ತಿದೆ. ಒಂದು ವೆಂಟಿಲೇಟರ್ ಖರೀದಿಗೆ 8.5 ಲಕ್ಷ ಚಾರ್ಜ್ ಮಾಡಿದೆ. ಆದರೆ ನಾನು ಕೇವಲ 2.5 ಲಕ್ಷವನ್ನು ನೀಡಿ ಸಂಸದರ ನಿಧಿಯಿಂದ ಸಕಲೇಶಪುರ ಆಸ್ಪತ್ರೆಗೆ ವೆಂಟಿಲೇಟರ್ ನೀಡಿದ್ದೇನೆ ಎಂದಿದ್ದಾರೆ.

    ರಾಜ್ಯ ಸರ್ಕಾರ ವೆಂಟಿಲೇಟರ್ ಹೆಸರಲ್ಲಿ 40 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದೆ. ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.

  • ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ವೆಂಟಿಲೇಟರ್ ಗಳ ಖರೀದಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದೆ.

    ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಯಾರಾದ ವೆಂಟಿಲೇಟರ್ ಖರೀದಿಗೆ 2,000 ಕೋಟಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಹಂಚಿಕೆ 1,000 ಕೋಟಿ ಮೀಸಲಿಟ್ಟಿದೆ.

    2,000 ಕೋಟಿ ವೆಚ್ಚ ದಲ್ಲಿ ಸುಮಾರು 50,000 ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದ್ದು ಈ ಪೈಕಿ 30,000 ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿಸುತ್ತಿದೆ. ಆಗ್ವಾ ಹೆಲ್ತ್‍ಕೇರ್ 10,000 ಎಎಂಟಿಝಡ್ ಬೇಸಿಕ್ 5,650 ಎಎಂಟಿಝಡ್ ಹೈ ಎಂಡ್ 4,000 ಹಾಗೂ ಅಲೈಡ್ ಮೆಡಿಕಲ್ ನಿಂದ 350 ವೆಂಟಿಲೇಟರ್ ಖರೀದಿಯಾಗಲಿದೆ.

    ಈವರೆಗೂ 2,923 ವೆಂಟಿಲೇಟರ್ ತಯಾರಿಸಿದ್ದು 1340 ವೆಂಟಿಲೇಟರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಹಂಚಿಕೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತ್ 175, ಬಿಹಾರ್ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಿದ್ದು ಮುಂದಿನ ಹಂತದಲ್ಲಿ 14,000 ವೆಂಟಿಲೇಟರ್ ಹಂಚಿಕೆಯಾಗಲಿದೆ.

    ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾವಿರ ಕೋಟಿ ನೀಡಿದ್ದು, ಕಾರ್ಮಿಕರ ಜನಸಂಖ್ಯೆ ಆಧಾರದಡಿ ಅನುದಾನ ನೀಡಿದೆ. ಮಹಾರಾಷ್ಟ್ರ 181 ಕೋಟಿ, ಉತ್ತರ ಪ್ರದೇಶ 103 ಕೋಟಿ, ತಮಿಳುನಾಡು 83 ಕೋಟಿ, ಗುಜರಾತ್ 66 ಕೋಟಿ, ದೆಹಲಿ 55 ಕೋಟಿ, ಪಶ್ಚಿಮ ಬಂಗಾಳ 53 ಕೋಟಿ, ಬಿಹಾರ 51 ಕೋಟಿ, ಮಧ್ಯಪ್ರದೇಶ 50 ಕೋಟಿ, ರಾಜಸ್ಥಾನ 50 ಕೋಟಿ ಮತ್ತು ಕರ್ನಾಟಕ 34 ಕೋಟಿ ನೀಡಲಾಗಿದೆ.

    ಈ ಹಿಂದೆ ಮೊದಲ ಹಂತದಲ್ಲಿ 3,100 ಕೋಟಿ ಹಣವನ್ನು ಪಿಎಂ ಕೇರ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲೂ ವೆಂಟಿಲೇಟರ್ ಖರೀದಿಗೆ ಎರಡು ಸಾವಿರ, ವಲಸೆ ಕಾರ್ಮಿರಿಗೆ ಸಾವಿರ ಹಾಗೂ ಲಸಿಕೆ ಅಭಿವೃದ್ಧಿ ನೂರು ಕೋಟಿ ಬಿಡುಗಡೆ ಮಾಡಲಾಗಿತ್ತು.

    ಪಿಎಂ ಕೇರ್ಸ್ ಗೆ ಕೋಟ್ಯಾಂತರ ರೂ. ದಾನ ಬಂದಿದ್ದು ಕೇಂದ್ರ ಸರ್ಕಾರ ಇದರ ಲೆಕ್ಕ ನೀಡುತ್ತಿಲ್ಲ ಮತ್ತು ಅದರ ಬಳಕೆ ಮಾಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾಹಿತಿ ನೀಡಲು ಸೂಚಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಮದ್ರಾಸ್ ಸೇರಿಸಂತೆ ಹಲವು ಹೈಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಅನುದಾನ ಬಿಡುಗಡೆ ಮಾಡಿದೆ.