ಬೆಂಗಳೂರು: ಇಂದು ಸಂಜೆ 6 ಗಂಟೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೇಡ್ ಫ್ಲೈ ಓವರ್ ಮೇಲೆ ಬಸ್ ಮತ್ತು ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್ಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಇದಾಗಿದ್ದು, ಈ ಸೇತುವೆ ನಿರ್ಮಾಣವಾಗಿ 8 ವರ್ಷಗಳಾಗಿದ್ದರಿಂದ ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ತಡೆ ಏರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ವಹಣೆ ನಡೆಯಲಿದ್ದು, ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ಅವಕಾಶವಿಲ್ಲ.
ಲಘು ವಾಹನಗಳು, ಕಾರು, ದ್ವಿಚಕ್ರ ವಾಹನಗಳು ಸಂಚಾರ ಎಂದಿನಂತೆ ಇರಲಿದ್ದು ಫ್ಲೈ ಓವರ್ ಮೇಲೆ ಯಾವುದೇ ಅಪಾಯವಿಲ್ಲ. ಕೇವಲ ನಿರ್ವಹಣೆಗಾಗಿಯೇ ಬೃಹತ್ ವಾಹನಗಳಿಗೆ ಪ್ರವೇಶವಿಲ್ಲವೆಂದು ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್) ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಲ್ಸೆತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್ಗಳ ನಿರ್ವಹಣೆ ಹಾಗೂ ಪಾಟ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಪ್ರಕಟಣೆಯಲ್ಲಿ ಬಿಇಟಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಅಯ್ಯಪ್ಪನ ಸನ್ನಿಧಾನದ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷ ತೆರಳುತ್ತಿರುವ ಕರ್ನಾಟಕದ ಭಕ್ತರಿಗೆ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಸಿಗುತ್ತಿದೆ.
ಒಂದು ಕಡೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯ ವಾತಾವರಣ ಇದ್ದರೆ, ಇನ್ನೊಂದಡೆ ಹಳೆ ಬಾಕಿ ಎಲ್ಲಾ ಸೇರಿಸಿ ಕೇರಳ ಸರ್ಕಾರ ರಾಜ್ಯದ ವಾಹನಗಳಿಗೆ ವಿಪರೀತ ಸುಂಕ ವಸೂಲಿಗೆ ನಿಂತುಬಿಟ್ಟಿದೆ.
2014 ರಿಂದ ಸತತ ಮೂರು ವರ್ಷಗಳ ಕಾಲ ಕರ್ನಾಟಕಕ್ಕೆ ವಾಹನ ಸುಂಕ ವಿನಾಯಿತಿ ಇತ್ತು. ಆದರೆ ಈಗ ಏಕಾಏಕಿ ಕೋರ್ಟ್ ನಿಂದ ಆದೇಶ ಮಾಡಿಕೊಂಡು ಬಂದಿರುವ ಕೇರಳ ಸರ್ಕಾರ ಕರ್ನಾಟಕದ ಅಯ್ಯಪ್ಪ ಭಕ್ತರು ಬರುವ ವಾಹನಗಳಿಗೆ ಹಿಗ್ಗಾಮುಗ್ಗಾ ತೆರಿಗೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಪ್ಪಿ-ತಪ್ಪಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಕೇರಳಕ್ಕೆ ಹೋಗಿದ್ರೆ ಆ ವಾಹನಗಳಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು ದಂಡ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಕೇರಳ ಪೊಲೀಸರು ಈಗ ಹಳೆ ಬ್ಯಾಲೆನ್ಸ್ ವಾಹನದ ಸುಂಕವನ್ನು ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಕರ್ನಾಟಕದ ವಾಹನಗಳು ದಂಡ ಕಟ್ಟಲಾರದೆ ಇದ್ದಿದ್ದಕ್ಕೆ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ಭಯಕ್ಕೆ ಟೂರಿಸ್ಟ್ ವಾಹನಗಳು ಕೇರಳಕ್ಕೆ ಎಂಟ್ರಿಯಾಗೋದಕ್ಕೆ ಹಿಂದೇಟು ಹಾಕುತ್ತಿವೆ. ಇನ್ನೊಂದಡೆ ಕರ್ನಾಟಕದ ಭಕ್ತರ ಸಂಖ್ಯೆಯೂ ಇಳಿಮುಖಗೊಂಡಿದೆ. ಇತ್ತ ಬಸ್ಗಳು ಕೂಡ ಶಬರಿಮಲೆಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿವೆ ಎಂದು ದಂಡ ಕಟ್ಟಿದ್ದ ರಮೇಶ್ ಹೇಳಿದ್ದಾರೆ.
ನವದೆಹಲಿ: ದಕ್ಷಿಣ ದೆಹಲಿಯ ಮಧನ್ಗಿರಿ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ 4 ಕಾರುಗಳು ಸೇರಿ ಒಟ್ಟು 18 ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ.
ಆರೋಪಿಯು 25 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಧನ್ಗಿರಿಯ ವಸತಿ ಕಟ್ಟಡಗಳ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ, 14 ದ್ವಿಚಕ್ರ ವಾಹನಗಳು ಹಾಗೂ 4 ಕಾರುಗಳನ್ನು ಕುಡಿದ ನಶೆಯಲ್ಲಿ ಆರೋಪಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತರಾದ ವಿಜಯ್ ಕುಮಾರ್ ತಿಳಿಸಿದ್ದಾರೆ.
ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋದಲ್ಲಿ ಆರೋಪಿ ಪಾರ್ಕಿಂಗ್ನಲ್ಲಿ ನಿಂತಿದ್ದ ವಾಹನಗಳ ಪೆಟ್ರೋಲ್ ಪೈಪ್ಗಳನ್ನು ಕತ್ತರಿಸಿ, ಸೋರುವಂತೆ ಮಾಡಿ, ನಂತರ ಬೆಂಕಿ ಹಚ್ಚಿ ಸುಟ್ಟಿದ್ದಾನೆ.
ವಾಹನಗಳಿಂದ ಪೆಟ್ರೋಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ಹತ್ತಿರದಲ್ಲಿದ್ದ 6 ಮೋಟರ್ ಬೈಕ್ಗಳಿಗೂ ಬೆಂಕಿ ಹತ್ತಿಕೊಂಡಿದೆ. 8 ದ್ವಿಚಕ್ರ ವಾಹನಗಳು ಹಾಗೂ 2 ಕಾರುಗಳು ಬೆಂಕಿಯಿಂದ ಸಂಪೂರ್ಣ ಸುಟ್ಟುಹೊಗಿದ್ದು, 6 ಬೈಕ್ ಮತ್ತು 2 ಕಾರುಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬೆಳಗಿನ ಜಾವ 3:05 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಘಟನೆ ನಡೆದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿ, ಹೆಚ್ಚಿನ ದುರಂತ ಆಗುವುದನ್ನು ತಡೆದಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿಯನ್ನು ಹಿಡಿಯುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ.
ಸದ್ಯ ಈ ಘಟನೆಯ ದೃಶ್ಯ ಸ್ಥಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ವಿರುದ್ಧ ಐಪಿಸಿ 435 ಮತ್ತು 427 ಕಾಯ್ದೆಯ ಅಡಿಯಲ್ಲಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಚಾಮರಾಜನಗರ: ಕಾಡಾನೆಯೊಂದು ಪ್ರಯಾಣಿಕರನ್ನು ಅಟ್ಟಿಸಿಕೊಂಡು ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಬಳಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರ ಗುಂಡ್ಲುಪೇಟೆ ಕೇರಳ ನಡುವಿನ ರಸ್ತೆಯ ಮೂಲೆಹೊಳೆ ಬಳಿ ಶುಕ್ರವಾರ ಸಂಜೆ ಕಾಡಾನೆಯೊಂದು ರಸ್ತೆ ಬದಿಯಲ್ಲಿ ನಿಂತಿತ್ತು. ಕೇರಳ ಹಾಗೂ ಗುಂಡ್ಲುಪೇಟೆ ಕಡೆ ವಾಹನಗಳು ಸಂಚರಿಸುತ್ತಿದ್ದವು.
ಈ ವೇಳೆ ಸಿಟ್ಟಿಗೆದ್ದ ಕಾಡಾನೆ ಪ್ರಯಾಣಿಕರನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಬಂದಿದೆ. ಕಾಡಾನೆ ಬೆನ್ನಟ್ಟಿದ್ದರಿಂದ ಬೆದರಿದ ಪ್ರಯಾಣಿಕರು ಕೆಲಕಾಲ ಭಯಭೀತರಾಗಿದ್ದರು. ಕೆಲವು ಪ್ರಯಾಣಿಕರು ಜೀವ ಭಯದಿಂದ ತಮ್ಮ ವಾಹನವನ್ನು ಹಿಂತಿರುಗಿಸಿ ವಾಪಾಸ್ಸಾದರು. ಕಾಡಾನೆ ಸ್ವಲ್ಪ ಸಮಯದ ನಂತರ ಕಾಡಿನತ್ತ ಹೆಜ್ಜೆ ಹಾಕಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಆನೆ ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು: ನಾಡಿನೆಲ್ಲೆಡೆ ಇಂದು ದಸರಾ ಹಾಗೂ ಆಯುಧ ಪೂಜೆಯ ಸಂಭ್ರಮ. ಕಾಫಿನಾಡಿ ಚಿಕ್ಕಮಗಳೂರಿನಲ್ಲೂ ಜನಸಾಮಾನ್ಯರು ಸಂಭ್ರಮದಿಂದ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಂತೆ ತನ್ನ ವಾಹನಗಳಿಗೆ ಆಯುಧ ಪೂಜೆ ಮಾಡಿರೋದು ಮಾತ್ರ ವಿಶೇಷವಾಗಿದೆ.
ಎಸ್ಎಂಎಸ್ ಬಸ್ ಮಾಲೀಕರಾದ ಸಿರಾಜ್ ಹಿಂದೂಗಳಿಗೆ ಕಡಿಮೆ ಇಲ್ಲದಂತೆ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಹಿಂದು-ಮುಸ್ಲಿಂ ಎಂಬ ಭೇದ-ಭಾವವಿಲ್ಲ. ನಾವು ವಾಹನಗಳನ್ನ ಇಟ್ಟಿದ್ದೇವೆ. ಅನ್ನ ತಿನ್ನುತ್ತಿರೋದು ಅದರಲ್ಲೇ. ನಾವೆಲ್ಲರೂ ಒಂದೇ. ಭೂಮಿಯ ಮೇಲೆ ಇರುವುದು ಎರಡೇ ಜಾತಿ. ಒಂದು ಹೆಣ್ಣು, ಮತ್ತೊಂದು ಗಂಡು ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಮಾಡೋದು ಕಿಡಿಗೇಡಿಗಳು ನಾವೆಲ್ಲರೂ ಒಂದೇ ಎಂದು ಹೇಳಿ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸಿದ್ದಾರೆ.
ತನ್ನ ಬಸ್ಸುಗಳಿಗೆ ಚೆಂಡು ಹೂವಿನಿಂದ ಸಿಂಗಾರ ಮಾಡಿ, ಬಲೂನ್, ಬಾಳೆದಿಂಡು, ಮಾವಿನತೋರಣ ಕಟ್ಟಿ ಪೂಜೆ ಮಾಡಿ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
– ಬೃಹತ್ ಜಾಹಿರಾತು ಫಲಕ ಬಿದ್ದು 3 ಸಾವು, ಐವರಿಗೆ ಗಂಭೀರ ಗಾಯ
ಮುಂಬೈ: ಬೃಹತ್ ಜಾಹಿರಾತು ಫಲಕವೊಂದು ಬಿದ್ದು, ಪತ್ನಿಯ ಚಿತಾಭಸ್ಮ ಬಿಟ್ಟು ಮನೆಗೆ ಬರುತ್ತಿದ್ದ ಪತಿ ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪತ್ನಿಯ ಚಿತಾಭಸ್ಮ ಬಿಟ್ಟು ಬರುತ್ತಿದ್ದ ಶಿವಾಜಿ ಪರದೇಶಿ (40) ಸೇರಿದಂತೆ ಶಾಮ್ರಾವ್ ಕಾಸರ್ (70) ಹಾಗೂ ಶಾಮ್ರಾವ್ ದೋತ್ರೆ (48) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಐವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಗಿದ್ದು ಏನು?:
ಪುಣೆಯ ರೈಲ್ವೇ ನಿಲ್ದಾಣದ ಸಮೀಪದ ಸಿಗ್ನಲ್ನಲ್ಲಿ ವಾಹಗಳು ನಿಂತಿದ್ದವು. ಈ ವೇಳೆ ಪಕ್ಕದಲ್ಲಿಯೇ ಇದ್ದ ಬೃಹತ್ ಜಾಹಿರಾತು ಫಲಕ ವಾಹನಗಳ ಮೇಲೆ ಬಿದ್ದಿದೆ. ಫಲಕ ಬಿದ್ದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದು, ಎರಡು ಆಟೋಗಳು ಜಖಂಗೊಂಡಿವೆ.
ಸುಮಾರು ದಿನಗಳಿಂದ ಜಾಹಿರಾತು ಫಲಕವನ್ನು ದುರಸ್ತಿಗೊಳಿಸದೆ ಹಾಗೆ ಬಿಡಲಾಗಿತ್ತು. ಹೀಗಾಗಿ ಈ ಅವಘಡ ಸಂಭವಿಸಿದ್ದು, ಅದರ ಗುತ್ತಿಗೆದಾರರು ಹಾಗೂ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಎಂದಿನಂತೆ ಟ್ರಾಫಿಕ್ ಹೆಚ್ಚಾಗಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಉಪಆಯುಕ್ತ ಬಿ.ಸಿಂಗ್ ತಿಳಿಸಿದ್ದಾರೆ.
ರೈಲ್ವೇ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಜಾಹಿರಾತು ಎಜೆನ್ಸಿಗಳಿಗೆ ಫಲಕಗಳನ್ನು ಗುತ್ತಿಗೆ ನೀಡಿತ್ತು. ಆದರೆ ಅವರು ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ್ದ ಪರಿಣಾಮ ಅವಘಡ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುಣೆ ವಿಭಾಗೀಯ ರೈಲ್ವೇ ಮಾನೇಜರ್ ಮಿಲಿಂದ್ ಡಿಯೋಸ್ಕರ್ ಹೇಳಿದ್ದಾರೆ.
ಇನ್ನು ಮುಂದೆ ಮುಂಜಾಗ್ರತ ಕ್ರಮವಾಗಿ ಜಾಹಿರಾತು ಫಲಕಗಳ ನಿರ್ವಹಣೆ ಮಾಡದ ಏಜೆನ್ಸಿಗಳ ಪರವಾನಿಗೆ ರದ್ದು ಮಾಡುತ್ತೇವೆ. ಜೊತೆಗೆ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆಸ್ಪತ್ರೆಯ ವೆಚ್ಚ ಪಾವತಿಸುತ್ತೇವೆ ಎಂದು ಮಿಲಿಂದರ್ ಭರವಸೆ ನೀಡಿದ್ದಾರೆ.
ಹಾಸನ: ಭಾರೀ ಮಳೆಯಿಂದ ರಸ್ತೆಗೆ ಗುಡ್ಡ ಜರಿದು ಸಂಪರ್ಕ ಕಡಿತಗೊಂಡಿದ್ದ ಬಿಸಿಲೆ ಘಾಟಿಯಲ್ಲಿ ರಸ್ತೆ ಸಂಚಾರ ಮತ್ತೆ ಆರಂಭವಾಗಿದೆ.
ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಸಿಮೆಂಟ್ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸಕಲೇಶಪುರ ಕರಾವಳಿ ಮಾರ್ಗದ ಸಂಪರ್ಕ ಸಂಪೂರ್ಣ ಕಡಿತವಾಗಿತ್ತು. ಈಗ ರಸ್ತೆಯನ್ನು ದುರಸ್ತಿ ಮಾಡಿದ್ದು ಲಘು ವಾಹನಗಳು ಸಂಚರಿಸಬಹುದಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಶಿರಾಡಿ ಘಾಟ್ ಆರಂಭವಾಗಿತ್ತು. ಈಗ ಬಿಸಿಲೆ ಘಾಟಿಯೂ ಆರಂಭಗೊಂಡಿದ್ದು ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯ ರಭಸಕ್ಕೆ 7 ಕಿಮೀ ಕಾಂಕ್ರೀಟ್ ರಸ್ತೆ ನಾಶವಾಗಿತ್ತು. ಬೆಟ್ಟದ ಮೇಲೆ ಸಣ್ಣ ತೊರೆಯಂತಿದ್ದ ನದಿ ದೊಡ್ಡ ನದಿಯಾಗಿ ರೂಪಾಂತರಗೊಂಡು ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿತ್ತು.
ರಸ್ತೆ ಸಂಪರ್ಕ ಸರಿಯಾದರೂ ರೈಲು ಮಾರ್ಗ ಇನ್ನೂ ಆರಂಭಗೊಂಡಿಲ್ಲ. ಸಕಲೇಶಪುರ ಭಾಗದಲ್ಲಿ ಭಾರೀ ಕಲ್ಲು ಮತ್ತು ಗುಡ್ಡಗಳು ಹಳಿ ಮೇಲೆ ಬಿದ್ದ ಪರಿಣಾಮ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ರೈಲು ಸೇವೆಯೂ ಆರಂಭಗೊಳ್ಳುವ ಸಾಧ್ಯತೆಯಿದೆ.
ಹಾಸನ: ಶಿರಾಡಿಘಾಟ್ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಯಾವುದೇ ಸಂಚಾರಕ್ಕೆ ಅವಕಾಶ ನೀಡಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್ಡಿ ರೇವಣ್ಣ ಹೇಳಿದ್ದಾರೆ.
ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಶಿರಾಡಿಘಾಟ್ ರಸ್ತೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಯಾವುದೇ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಕಾಮಗಾರಿ ಮುಗಿಯಲು ನಾಲ್ಕೈದು ತಿಂಗಳ ಕಾಲ ಸಮಯವಕಾಶ ಬೇಕಿದೆ. ಶಿರಾಡಿಘಾಟ್ ಸಂಚಾರ ರಸ್ತೆ ಕಾಮಗಾರಿ ಪ್ರಗತಿಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿ ರಸ್ತೆ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರವಾಹದಲ್ಲಿ ಸಿಲುಕಿರುವ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಸಚಿವರು, ಸಕಲೇಶಪುರ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನರ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅತ್ತಿಹಳ್ಳಿ, ಹೊಂಗಡಹಳ್ಳ ಮಾಗೇರಿ, ಪಟ್ಲ, ಹೆತ್ತೂರು ಗ್ರಾಮಸ್ಥರಿಗೆ ಗಂಜಿಕೇಂದ್ರ ತೆರೆಯಲು ಆದೇಶಿಸಲಾಗಿದೆ ಎಂದರು.
ಜಿಲ್ಲೆಯ ಇತರೇ ಭಾಗಗಳಲ್ಲಿ ಅಪಾಯವಿದೆಯೋ ಅಲ್ಲಿರುವ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೊಡಗಿನಲ್ಲಿರುವ ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಅಂದಾಜು 138 ಕೋಟಿ ರೂ. ನಷ್ಟ ಉಂಟಾಗಿದೆ. ಅಲ್ಲದೇ ಒಟ್ಟು ಲೋಕೋಪಯೋಗಿ ಇಲಾಖೆಯಲ್ಲಿ 150 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದರು.
ಪ್ರವಾಹದಲ್ಲಿ ಸಿಲುಕಿರುವ ಜನರನನ್ನು ರಕ್ಷಿಸಲು ಎರಡು ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಸಂತ್ರಸ್ತರಿಗೆ ಬೇಕಾದ ಎಲ್ಲಾ ನೆರವನ್ನು ಸರ್ಕಾರದಿಂದ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಪ್ರವಾಹ ನಷ್ಟದ ಬಗ್ಗೆ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಮಾಹಿತಿ ನೀಡಿದರು.
ಜುಲೈ 15 ರಂದು ಸಚಿವ ಹೆಚ್.ಡಿ.ರೇವಣ್ಣ ಶಿರಾಡಿ ಘಾಟ್ ಉದ್ಘಾಟಿಸಿದ್ದರು. ಆರಂಭದಲ್ಲಿ ಲಘು ವಾಹನಗಳಿಗೆ, ಬಳಿಕ ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಗಳು ಜರಿದು ಬೀಳುತ್ತಿದ್ದ ಕಾರಣ ಇಲ್ಲೂ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟಿಯ ಮದೇನಾಡು, ಜೋಡುಪಾಲದಲ್ಲಿ ಗುಡ್ಡ ಕುಸಿದು ಅಲ್ಲಲ್ಲಿ ಪ್ರವಾಹ ರೂಪದಲ್ಲಿ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹೋಗುತ್ತಿದೆ. ಹೀಗಾಗಿ ಈ ರಸ್ತೆಯ ರಿಪೇರಿಯಾಗಲು ಹಲವು ತಿಂಗಳು ಬೇಕಾಗಬಹುದು ಎಂದು ಈ ಸ್ಥಳಕ್ಕೆ ತೆರಳಿದವರು ಹೇಳುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಮಾರ್ಗದ ಮೂಲಕವಷ್ಟೇ ಮಂಗಳೂರನ್ನು ಸಂಪರ್ಕಿಸಬೇಕಾಗುತ್ತದೆ. ಎರಡು ಹೆದ್ದಾರಿಗಳು ಬಂದ್ ಆಗಿರುವ ಕಾರಣ ಈ ರಸ್ತೆಯಲ್ಲೂ ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ.
ಚಿಕ್ಕಮಗಳೂರು: ಸಂಪಾಜೆ, ಶಿರಾಡಿ ಘಾಟಿ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟ್ನಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.
ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ ಎದುರಾಗಿದೆ.
ಜಿಲ್ಲೆಯ ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯ ನಿವಾಸಿ ಚಂಗಪ್ಪನವರ ಶೆಡ್ ಕುಸಿದಿದ್ದು, ಪರಿಣಾಮ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು, ಜೀಪು, ಬೈಕ್ ಮತ್ತು ಟ್ರೇಲರ್ ಸಂಪೂರ್ಣ ಜಖಂಗೊಂಡಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಸಮೀಪದ ಬರೆಯಲ್ಲಿ ನೀರಿನ ಜಲ ಹರಿಲಾರಂಭಿಸಿದ ಪರಿಣಾಮ ಬರೆ ಕುಸಿತಗೊಂಡಿದೆ.
ಬರೆ ಕುಸಿದು ಕಾಂಪೌಂಡ್ ಮೇಲೆ ಬಿದ್ದದೆ. ನಂತರ ಕುಸಿತದ ರಭಸಕ್ಕೆ ಕಾಂಪೌಂಡ್ ಶೆಡ್ ನ ಮೇಲೆ ಉರುಳಿದೆ. ಆದ್ದರಿಂದ ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನಗಳು ತೀವ್ರ ಜಖಂಗೊಂಡಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ತೆರಳಿ ರೆವಿನ್ಯೂ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸುಮಾರು 7 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.