Tag: vehicles

  • ಸಕಲೇಶಪುರದ ಬಳಿ ನಾಳೆ ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್

    ಸಕಲೇಶಪುರದ ಬಳಿ ನಾಳೆ ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್

    – ವಾಹನ ಸಂಚಾರ ನಿರ್ಬಂಧ, ಬದಲಿ ವ್ಯವಸ್ಥೆ

    ಹಾಸನ: ಸಕಲೇಶಪುರ ನಗರದ ಶ್ರೀ ಸಕಲೇಶ್ವರ ಸ್ವಾಮಿಯ ರಥೋತ್ಸವ ಫೆ.28 ರಂದು ನಡೆಯಲಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

    ರಥೋತ್ಸವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶ್ವರ ಸ್ವಾಮಿ ದೇವಸ್ಥಾನದ ವೃತ್ತದಿಂದ ಪುರಸಭೆವರೆಗೆ ಸಾಗಲಿದೆ. ಈ ಸಮಯದಲ್ಲಿ ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತರು ಸೇರಲಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಾಧ್ಯವಾಗದೇ ಇರುವ ಕಾರಣ, ಫೆಬ್ರವರಿ 28 ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಸಕಲೇಶಪುರ ನಗರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಎಸ್‍ಅರ್ ಟಿಸಿ ಬಸ್ ಹೊರತು ಪಡಿಸಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ಲಘು ವಾಹನಗಳು ಸಕಲೇಶಪುರ ನಗರದ ಪಶು ಚಿಕಿತ್ಸಾಲಯದ ಕಡೆಯಿಂದ ಹಳೆ ಸಂತೆ ಮೇರಿ ರಸ್ತೆಯಲ್ಲಿ ಪ್ರವೇಶಿಸಿ ಆಜಾದ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗಲು ಸೂಚಿಸಿದೆ. ಅದೇ ರೀತಿ ಹಾಸನದಿಂದ ಬರುವ ವಾಹನಗಳು, ಬಸವೇಶ್ವರ ರಸ್ತೆಯ ಮೂಲಕ ಕಾಸ್ಮೋಪಾಲಿಟನ್ ಕ್ಲಬ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 75 ಪ್ರವೇಶಿಸಲು ತಿಳಿಸಲಾಗಿದೆ.

    ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ವಿವಿಧ ಮಾದರಿಯ ಟ್ರಕ್, ಟ್ಯಾಂಕರ್ ಇತರೆ ಭಾರಿ ವಾಹನಗಳು ಮಾರನಹಳ್ಳಿ ಬಳಿ ನಿಲ್ಲಿಸಲು ಸೂಚಿಸಿದೆ. ಹಾಸನದ ಕಡೆಯಿಂದ ಬರುವ ವಾಹನಗಳನ್ನು ಪೇಟೆಯ ಬಳಿ ನಿಲ್ಲಿಸಲು ಸೂಚಿಸಿದೆ. ಸಂಜೆ ರಥೋತ್ಸವ ಸಂಚರಿಸುವ ವೇಳೆ ಪರಿಸ್ಥಿತಿ ಅವಲೋಕಿಸಿ ಬಾರಿ ವಾಹನ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

  • ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಇಂದಿನಿಂದ ದುಪ್ಪಟ್ಟು ಟೋಲ್ ಕಟ್ಟಿ

    – ಟೋಲ್‍ಗಳಲ್ಲಿ ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ ಬೋರ್ಡ್

    ಬೆಂಗಳೂರು: ಇವತ್ತಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ಗಳಲ್ಲಿ ಪ್ರವೇಶವೇ ಇಲ್ಲ. ಇಲ್ಲವೇ 2 ಪಟ್ಟು ಟೋಲ್ ಕಟ್ಟಿ ಪ್ರಯಾಣಿಸಬೇಕಿದೆ.

    ಫಾಸ್ಟ್‌ಟ್ಯಾಗ್ ಕಡ್ಡಾಯ ಹಿನ್ನೆಲೆ ಎಲ್ಲ ಟೋಲ್‍ಗಳಲ್ಲಿ `ನೋ ಫಾಸ್ಟ್‌ಟ್ಯಾಗ್, ನೋ ಎಂಟ್ರಿ’ ಬೋರ್ಡ್ ಹಾಕಲಾಗಿದ್ದು, ಫಾಸ್ಟ್‌ಟ್ಯಾಗ್ ಇಲ್ಲವಾದರೆ ಟೋಲ್‍ನ 2 ಪಟ್ಟು ಹಣ ಕಟ್ಟಬೇಕು. ಇಂದು ಮಧ್ಯ ರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಒಂದೆಡೆ ಫಾಸ್ಟ್‌ಟ್ಯಾಗ್ ಪಡೆಯುವುದು ಸಮಸ್ಯೆಯಾದರೆ, ಮತ್ತೊಂದೆಡೆ ಫಾಸ್ಟ್‌ಟ್ಯಾಗ್ ನಲ್ಲಿ ಹಣ ಇದ್ದರೂ ಸ್ಕ್ಯಾನ್ ಆಗ್ತಿಲ್ಲ. ಹೀಗಾಗಿ ದುಪ್ಪಟ್ಟು ಟೋಲ್ ವಸೂಲಿ ಮಾಡಲಾಗುತ್ತಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ ಸಿಬ್ಬಂದಿ ಜೊತೆಗೆ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದವರ ಬಳಿ ಡಬಲ್ ಚಾರ್ಜ್ ಕಟ್ಟಿಸಿಕೊಳ್ಳಲಾಗುತ್ತಿದೆ.

    ಏರ್ ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದು, ಫಾಸ್ಟ್‌ಟ್ಯಾಗ್ ಮಾಡುವ ಸ್ಥಳದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಕಿರಿಕ್ ಶುರುವಾಗಿದೆ. ಮತ್ತೊಂದೆಡೆ ಟೋಲ್ ಪ್ಲಾಜಾ ಬಳಿಯೇ ಫಾಸ್ಟ್‌ಟ್ಯಾಗ್ ಅಳವಡಿಕೆ ನಡೆದಿದೆ.

    ತೀವ್ರಗೊಂಡ ವಾಗ್ವಾದ
    ಹೊಸಕೋಟೆ ಟೋಲ್ ನಲ್ಲಿ ಸ್ಟೋರ್ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಫಾಸ್ಟ್‌ಟ್ಯಾಗ್ ಮಾಡಿಸದಿದ್ದರೆ ದುಪ್ಪಟ್ಟು ಹಣದ ಬರೆ. ಎಲ್‍ಸಿವಿ ವಾಹನಗಳಿಗೆ 30 ರೂ. ಇದ್ದ ಟೋಲ್ ದರ 60 ರೂ. ಆಗಿದೆ. ಬಸ್, ಲಾರಿಗಳಿಗೆ ಇದ್ದ 65 ರೂ. ಇದೀಗ 135 ರೂ. ಆಗಿದೆ. ಫಾಸ್ಟ್‌ಟ್ಯಾಗ್ ಮಾಡಿಸಿದವರಿಗೆ ಮಾತ್ರ ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಫೆ.15 ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ.

    ದುಪ್ಪಟ್ಟು ಹಣ ಕೇಳುತ್ತಿದ್ದಂತೆ ಕೆಲವು ಕಾರುಗಳು ಹಿಂದಕ್ಕೆ ಹೋಗುತ್ತಿವೆ. ದುಪ್ಪಟ್ಟು ಹಣ ವಸೂಲಿ ಹಿನ್ನೆಲೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ನಿನ್ನೆಯಿಂದಲೇ ಟೋಲ್ ರಸ್ತೆಗೆ ಹೋಗುತ್ತಿಲ್ಲ. ಅಲ್ಲದೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಬಳಿಯೇ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ವಾಹನ ಮಾಲೀಕರು ದುಪ್ಪಟ್ಟು ಹಣ ಯಾಕೆ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವುದು ಕೆಲ ವಾಹನಗಳ ಮಾಲೀಕರಿಗೆ ಗೊತ್ತಿಲ್ಲ.

  • ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಹೈದರಾಬಾದ್: ಕೆಲಸ ಮುಗಿಸಿ ಮನಗೆ ಹೋಗುತ್ತಿದ್ದ ಕೂಲಿ ಕಾರ್ಮಿಕರಿದ್ದ ಆಟೋ ಕಂಟೇನರ್ ಗೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿ, 13 ಜನರಿಗೆ ಗಾಯವಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟ್ ಬಳಿ ನಡೆದಿದೆ.

    ವಾಹನ ಭೀಕರ ರಸ್ತೆ ಅಪಘಾತಕ್ಕಿಡಾಗಿ ವಾಹನದಲ್ಲಿದ್ದ 7 ಮಹಿಳೆಯರು ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರು ಚಿಂತಾಬಾವಿ ಗ್ರಾಮದ ನಿವಾಸಿಗಳಾಗಿದ್ದಾರೆ. 20 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಂಟೇನರ್‍ಗೆ ಡಿಕ್ಕಿಯಾಗಿ ಸಾವು-ನೋವು ಸಂಭವಿಸಿದೆ.

    ಈ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಆಟೋ ಚಾಲಕ ಮಲ್ಲೇಶ್, ಕಲೂಲಿ ಕಾರ್ಮಿಕರಾದ ಪೆದ್ದಮ್ಮ, ನೋಮಲ ಸೈದಮ್ಮ, ಕೊಟ್ಟಂ, ಪೆದ್ದಮ್ಮ ಗೋಡುಗು, ಇದ್ದಮ್ಮ ಮಲ್ಲಮ್ಮ, ಅಂಜನಮ್ಮ ಎಂದು ಗುರುತಿಸಲಾಗಿದೆ. 13 ಜನರು ಗಂಭಿರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

  • ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ನವದೆಹಲಿ: ಜನವರಿ 1ರಿಂದ ದೇಶದ ಎಲ್ಲ 4 ಚಕ್ರ ಮೇಲ್ಪಟ್ಟ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಪ್ರಸ್ತುತ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಉಪಯುಕ್ತವಾಗಿದ್ದು, ವಾಹನಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಹ ಈ ಕುರಿತು ಆದೇಶ ಹೊರಡಿಸಿತ್ತು. ಹಳೆ ವಾಹನ ಸೇರಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ನವೆಂಬರ್ 2020ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಐಟಿ ತಂತ್ರಜ್ಞಾನ ಆಧರಿತ ಶುಲ್ಕ ಪಾವತಿಯನ್ನು ಉತ್ತೇಜಿಸಲಾಗುವುದು. ಜನವರಿ 1, 2021ರಿಂದ ಹಳೆ ವಾಹನಗಳು ಸೇರಿ ಎಂ ಹಾಗೂ ಎನ್ ಮಾದರಿಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಡಿಸೆಂಬರ್ 1,2017ರಿಂದ ಇತ್ತೀಚಿನ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ವಾಹನ ಉತ್ಪಾದನೆ ಕಂಪನಿಗಳು ಅಥವಾ ಡೀಲರ್ ಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ನೀಡಬೇಕು. ಅಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ನ್ಯಾಷನಲ್ ಪರ್ಮಿಟ್ ವಾಹನಗಳಿಗೆ ಅಕ್ಟೋಬರ್ 1, 2019ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

  • ಹಿಟ್ ಆ್ಯಂಡ್ ರನ್ – ಇಬ್ಬರು ಸ್ಥಳದಲ್ಲೇ ಸಾವು

    ಹಿಟ್ ಆ್ಯಂಡ್ ರನ್ – ಇಬ್ಬರು ಸ್ಥಳದಲ್ಲೇ ಸಾವು

    ಹುಬ್ಬಳ್ಳಿ: ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಸರಕಾರಿ ಕಾಲೇಜು ಬಳಿ ತಡರಾತ್ರಿ ಸಂಭವಿಸಿದೆ.

    ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಗಳನ್ನು ಬಸವರಾಜ್ ತಳವಾರ ಹಾಗೂ ಹನಮಂತ ಚಿಕ್ಕನರ್ತಿ ಎಂದು ಗುರುತಿಸಲಾಗಿದೆ. ನವಲಗುಂದ ತಾಲೂಕಿನ ಕಾಲವಾಡ ಗ್ರಾಮದವರಾಗಿದ್ದಾರೆ. ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಅಪರಿಚಿತ ವಾಹನದಲ್ಲಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.

    ರಭಸವಾಗಿ ಹೋಗುತ್ತಿದ್ದ ವಾಹನ ಸವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ತಲೆಗಳು ರಸ್ತೆಗೆ ಬಡಿದು ತೀವ್ರವಾಗಿ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆದಲ್ಲೆ ಮೃತಪಟ್ಟಿದ್ದಾರೆ.

    ಸ್ಥಳೀಯರ ಮಾಹಿತಿ ಮೇರೆಗೆ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಿಮ್ಸಗೆ ರವಾನೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅದರೆ ಕಿಮ್ಸ್ ಗೆ ತೆರಳುವ ಮುನ್ನವೇ ಇಬ್ಬರು ಪ್ರಾಣಬಿಟ್ಟಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

  • ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ- ಜನರಲ್ಲಿ ಹೆಚ್ಚಿದ ಆತಂಕ

    ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ- ಜನರಲ್ಲಿ ಹೆಚ್ಚಿದ ಆತಂಕ

    ಮಡಿಕೇರಿ: ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಅರ್ಚಕರ ಕುಟುಂಬ ಮಣ್ಣಲ್ಲಿ ಸಿಲುಕಿದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ. ಇದರಿಂದಾಗಿ ಜನ ತೀವ್ರ ಆತಂಕಗೊಂಡಿದ್ದಾರೆ.

    ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚೆಗೆ ಮಳೆ ಕಡಿಮೆ ಆಯಿತೆಂದು ನಿಟ್ಟುಸಿರು ಬಿಟ್ಟ ಜನತೆಗೆ ಇದೀಗ ಮತ್ತೆ ಆರಂಭವಾಗಿರುವುದು ನಡುಕ ಹುಟ್ಟಿಸಿದೆ.

    ಅಕ್ಟೋಬರ್ 14ರ ವರಗೆ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಜನರಲ್ಲಿ ಅತಂಕ ಹೆಚ್ಚಾಗಿದೆ. ಅಲ್ಲದೆ ಮತ್ತೆ ಮಳೆ ಮುಂದುವರಿದಿದ್ದರಿಂದ ಗುಡ್ಡಗಾಡು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದರೆ ಏನು ಗತಿ ಎಂಬ ಭಯದಲ್ಲೇ ಜನ ಜೀವನ ನಡೆಸುವಂತಾಗಿದೆ. ಮಳೆಯಿಂದಾಗಿ ಕೊಡಗು ಜನ ನಿದ್ದೆಗೆಡುವಂತಾಗಿದೆ.

    ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಧಾರಾಕಾರವಾಗಿ ಸುರಿಯುತ್ತಿದೆ. ತೀವ್ರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಪರದಾಡುವಂತಾಗಿದೆ. ಕೆಲ ದಿನಗಳಿಂದ ಬೀಡುವು ನೀಡಿದ್ದ ಮಳೆ ಇದೀಗ ಮತ್ತೆ ಅಬ್ಬರಿಸುತ್ತಿದ್ದು, ಇಂದು ಸಂಜೆ 4 ಗಂಟೆಯಿಂದ ಮಳೆ ಬಿರುಸು ಪಡೆದುಕೊಂಡಿದೆ. ಮಡಿಕೇರಿಯಲ್ಲಿ ಜನ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು – ಫುಲ್ ಟ್ರಾಫಿಕ್ ಜಾಮ್

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್‍ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಇದೀಗ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.

    ನಂದಿಗಿರಿಧಾಮದ ಸೂರ್ಯೋದಯ ಸೌಂದರ್ಯ ಸವಿಯೋಕೆ ಮುಂಜಾನೆ 4-5 ಗಂಟೆಯಿಂದಲೇ ನಂದಿಗಿರಿಧಾಮದತ್ತ ಪ್ರವಾಸಿಗರ ದಂಡೇ ಆಗಮಿಸಿದೆ. ಆದರೆ ಬೆಳಗ್ಗೆ 8 ಗಂಟೆ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಅನುಮತಿ ಇದೆ. ಹೀಗಾಗಿ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಚೆಕ್‍ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸರಿಸುಮಾರು 4-5 ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. 8 ಗಂಟೆಗೆ ಚೆಕ್ ಪೋಸ್ಟ್ ಗೇಟ್ ತಡೆದಿದ್ದೆ ತಡ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಡಿದ್ದಾರೆ.

    ಮಾರ್ಚ್ 14ರಿಂದ ಲಾಕ್‍ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕೆಲ ದಿನಗಳ ಹಿಂದೆಯಷ್ಟೇ ಅನ್‍ಲಾಕ್ ಆಗಿದೆ. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿಯುತ್ತಿದ್ದಾರೆ.

  • ಸಾವಿಗೆ ಆಹ್ವಾನ ನೀಡುತ್ತಿರುವ ದೇವದುರ್ಗದ ರಸ್ತೆ

    ಸಾವಿಗೆ ಆಹ್ವಾನ ನೀಡುತ್ತಿರುವ ದೇವದುರ್ಗದ ರಸ್ತೆ

    – ಕೆಸರು ಗದ್ದೆಯಂತಾದ ರಸ್ತೆ
    – ನಿತ್ಯ ಪ್ರಯಾಣಿಕರ ಪರದಾಟ

    ರಾಯಚೂರು: ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದ್ದು, ಹೇಗಪ್ಪ ಮನೆ ಮುಟ್ಟೋದು ಎಂದು ವಾಹನ ಸವಾರರು ತಲೆ ಕೆಡಿಸಿಕೊಂಡು ಕೆಸರಿನಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸುಂಕೇಶ್ವರಹಾಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಯಾರಿಗಾದರೂ ಆರೋಗ್ಯ ತೀವ್ರ ಹದಗೆಟ್ಟರೆ ಅಂಬುಲೆನ್ಸ್ ಸಹ ಇಲ್ಲಿಗೆ ಬರುವುದಿಲ್ಲ. ಗರ್ಭಿಣಿಯರ ಪರಸ್ಥಿತಿಯಂತೂ ಹೇಳತೀರದು. ಅಲ್ಲದೆ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಅಸಾಧ್ಯ ಎನ್ನವ ಹಾಗೆ ರಸ್ತೆ ಹದಗೆಟ್ಟಿದೆ.

    ಯಮನಾಳದಿಂದ ಗೂಗಲ್, ಗೂಗಲ್ ನಿಂದ ಸುಂಕೇಶ್ವರಹಾಳ ಸೇರಿದಂತೆ ಸುಮಾರು 45 ಕಿ.ಮೀ. ರಸ್ತೆ ವಿಪರೀತ ಹಾಳಾಗಿದೆ. ಇದೇ ಮಾರ್ಗದ ಒಟ್ಟು 95 ಕಿ.ಮೀ. ರಸ್ತೆಗೆ ಈಗಾಗಲೇ ಸುಮಾರು 118 ಕೋಟಿ ಘೋಷಣೆಯಾಗಿದೆ. ಆದರೆ ಕೋವಿಡ್ ಲಾಕ್‍ಡೌನ್ ಬಳಿಕ ಸರ್ಕಾರದಿಂದ ಆರ್ಥಿಕ ಅನುಮೋದನೆ ಸಿಗುತ್ತಿಲ್ಲ. ಸರ್ಕಾರದಲ್ಲಿ ರಸ್ತೆಗೆ ಖರ್ಚು ಮಾಡಲು ಹಣವಿಲ್ಲದ ಪರಸ್ಥಿತಿ ಬಂದಿರೋದು ವಿಪರ್ಯಾಸ. ಹೀಗಾಗಿ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಯಾವಾಗ ಆರಂಭವಾಗುತ್ತೋ ಎಂದು ಸ್ಥಳೀಯರು ಕಾಯುತ್ತಿದ್ದಾರೆ.

    ಈ ಹದಗೆಟ್ಟ ರಸ್ತೆಯಿಂದಾಗಿ ರಾಮನಾಳ, ಅರಷಿಣಗಿ, ಕರ್ಕಿಹಳ್ಳಿ, ಕೊಪ್ಪರ, ಗಾಗಲ್, ಗೂಗಲ್, ಯಾಟಗಲ್, ಹೇರೂರು ಸೇರಿ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂಬರುವ ಎಲ್ಲ ಚುನಾವಣೆಗಳ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

    ರಸ್ತೆ ಅವ್ಯವಸ್ಥೆ ಕುರಿತು ಪಬ್ಲಿಕ್ ಟಿವಿ ಈಗಾಗಲೇ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಿದೆ. 2013ರಲ್ಲಿ ಡಿಎನ್‍ಆರ್ ಹೆಸರಿನ ಖಾಸಗಿ ಕಂಪನಿಗೆ ರಸ್ತೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿ ಆರಂಭಿಸಿ ಕೆಲವೇ ದಿನಗಳಲ್ಲಿ ಕಂಪನಿ ಬಿಲ್ ಮೊತ್ತ ಬಿಡುಗಡೆಯಾಗುತ್ತಿಲ್ಲ ಎಂದು ಕಾಮಗಾರಿ ನಿಲ್ಲಿಸಿತು. ಅಲ್ಲಿಂದ ಇಲ್ಲಿಯವರೆಗೆ ಕನಿಷ್ಟ ಮಟ್ಟದ ನಿರ್ವಹಣೆಯೂ ಇಲ್ಲದೆ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಾರೀ ಸುರಿದ ಅತಿಯಾದ ಮಳೆಯಿಂದಾಗಿ ಜನ ರಸ್ತೆಗೆ ಇಳಿಯದಂತಹ ಪರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನ ಸಿಟ್ಟಿಗೆದ್ದಿದ್ದು, ನಿರಂತರ ಹೋರಾಟಕ್ಕೆ ಮುಂದಾಗುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಈ ಕುರಿತು ಪ್ರತಿಕ್ರಿಯಿಸಿ, ನಾನು ಪ್ರಯತ್ನ ಮಾಡುತ್ತಿದ್ದೇನೆ, ಕಾಮಗಾರಿಗೆ ಶೀಘ್ರದಲ್ಲೇ ಆರ್ಥಿಕ ಅನುಮೋದನೆ ಸಿಗುವ ಭರವಸೆಯಿದೆ. ಕೋವಿಡ್ ಲಾಕ್‍ಡೌನ್ ಬಳಿಕ ರಸ್ತೆ ಕಾಮಗಾರಿ ಹಣ ಬಿಡುಗಡೆಯಾಗುವುದು ಕಷ್ಟಕರವಾಗಿದೆ. ಆರ್ಥಿಕ ಇಲಾಖೆ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  • ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

    ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದೆ.

    ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.

    ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ಮುಳುಗಡೆಯಾಗಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆ ಪರಿಸರದಲ್ಲಿ ನೀರಿನ ಮಟ್ಟ ಏರಿದ್ದು, ಹಲವಾರು ಮನೆಗಳಿಗೆ ನೀರು ಹೊಕ್ಕಿರುವ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ನಿಲುಗಡೆಗೊಳಿಸಿರುವ ವಾಹನಗಳು ಮುಳುಗಡೆಯಾಗಿದೆ.

    ಮಲ್ಪೆ ಕಡಲತೀರದಲ್ಲಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಆಸುಪಾಸಿನಲ್ಲಿ ಜಲ ದಿಗ್ಭಬಂಧನವಾಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಇನ್ನೂ ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೆರೆಯ ಮಟ್ಟ ಕಡಿಮೆಯಾಗುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಿಪರೀತವಾಗಿ ಗಾಳಿ ಇರುವುದರಿಂದ ನದಿಯ ನೀರು ಸರಾಗವಾಗಿ ಸಾಗರಕ್ಕೆ ಹರಿಯುತ್ತಿಲ್ಲ.

    ಇಂದು ಮತ್ತು ನಾಳೆ ಕರಾವಳಿ ಭಾಗ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಧಾರವಾಡ ಭಾಗದಲ್ಲಿ ಭಾರೀ ವರ್ಷಧಾರೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಅತ್ತ ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ರಾಯಚೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

    ಜೆಸ್ಕಾಂ ಉಗ್ರಾಣ, ಕಚೇರಿಗೆ ರಾಜಕಾಲುವೆ ನೀರು ನುಗ್ಗಿದೆ. ರಾಯಚೂರಿನ ಸೀಯತಲಾಬ್, ಸುಖಾಣಿ ಕಾಲೋನಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ದೇವಸ್ಥಾನದ ಮೇಲೆ ಐದಡಿ ನೀರು ಹರಿಯುತ್ತಿದೆ.

    ಯಾದಗಿರಿ ನಗರದತ್ತಲೂ ನೀರು ಆವರಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಉಡುಪಿ-ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ಸರಣಿ ಅಪಘಾತ – ನುಜ್ಜುಗುಜ್ಜಾದ ಐದು ವಾಹನಗಳು

    ಸರಣಿ ಅಪಘಾತ – ನುಜ್ಜುಗುಜ್ಜಾದ ಐದು ವಾಹನಗಳು

    ಬಾಗಲಕೋಟೆ: ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮ ಐದು ವಾಹನಗಳ ಮುಂಭಾಗ ನುಜ್ಜುಗುಜ್ಜಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದಿದೆ.

    ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಈ ಸರಣಿ ಅಪಘಾತ ಸಂಭವಿಸಿದ್ದು, ಮೂರು ಲಾರಿ ಮತ್ತು ಎರಡು ಕ್ಯಾಂಟರ್ ನಡುವೆ ಅಪಘಾತ ನಡೆದಿದೆ. ಪರಿಣಾಮ ಐದು ವಾಹನಗಳು ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

    ಮೊದಲಿಗೆ ರಸ್ತೆ ಪಕ್ಕ ನಿಂತಿದ್ದ ಒಂದು ಲಾರಿಗೆ ಮತ್ತೊಂದು ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಬಂದ ಇನ್ನೊಂದು ಲಾರಿ ಕ್ಯಾಂಟರ್‌ಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಓರ್ವ ಲಾರಿ ಚಾಲಕನಿಗೆ ಮಾತ್ರ ಗಾಯವಾಗಿದೆ.

    ಕೂಡಲೇ ಗಾಯಗೊಂಡ ಲಾರಿ ಚಾಲಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.