Tag: veerghati

  • ದೇವ್ರ ಬದ್ಲು ಸಲ್ಮಾನ್ ಫೋಟೋವನ್ನು ಪೂಜಿಸ್ತೇನೆ- ಟೀ ಕುಡಿಯಲು ಪರದಾಡ್ತಿದ್ದ ನಟಿ

    ದೇವ್ರ ಬದ್ಲು ಸಲ್ಮಾನ್ ಫೋಟೋವನ್ನು ಪೂಜಿಸ್ತೇನೆ- ಟೀ ಕುಡಿಯಲು ಪರದಾಡ್ತಿದ್ದ ನಟಿ

    ಮುಂಬೈ: ಟೀ ಕುಡಿಯಲು ಪರದಾಡುತ್ತಿದ್ದ ನಟಿ ಪೂಜಾ ದದ್ವಾಲ್ ಅವರಿಗೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಸಹಾಯ ಮಾಡಿದ್ದರು. ಇದೀಗ ಪೂಜಾ ಹೊಸದೊಂದು ಮನೆ ನಿರ್ಮಿಸಿ ಸಲ್ಮಾನ್ ಖಾನ್ ಫೋಟೋ ಇಟ್ಟು ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹಣಕಾಸಿನ ತೊಂದರೆಯಿಂದಾಗಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಈ ವಿಷಯ ನಟ ಸಲ್ಮಾನ್ ಖಾನ್ ಅವರಿಗೆ ಗೊತ್ತಾಗುತ್ತಿದ್ದಂತೆ ಅವರು ಪೂಜಾ ಅವರ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ. ಸದ್ಯ ಆರೋಗ್ಯದ ಸ್ಥಿತಿಯಲ್ಲಿ ಸುಧಾರಿಸಿದೆ. ನಾನು ಚಿತ್ರರಂಗವನ್ನು 2 ದಶಕಗಳ ಹಿಂದೆ ಬಿಟ್ಟಿದ್ದೆ. ಆದರೆ ಈಗ ನಾನು ಹಿಂದಿರುಗಲು ಇಷ್ಟಪಡುತ್ತೇನೆ. ಕಿರುತೆರೆ, ಬೆಳ್ಳಿತೆರೆ ಅಥವಾ ಡಿಜಿಟಲ್ ಮೀಡಿಯಾದಲ್ಲಿ ನನಗಾಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.  ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಸಂದರ್ಶನದಲ್ಲಿ ಪೂಜಾ ಮೊದಲು ತನಗಿದ್ದ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಮೊದಲು ನನಗೆ ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು ಗೊತ್ತಿರಲಿಲ್ಲ. ನಾನು ಪದೇ ಪದೇ ರಕ್ತ ವಾಂತಿ ಮಾಡುತ್ತಿದ್ದೆ. ಅಲ್ಲದೆ ನನ್ನ ತಲೆಕೂದಲು ಕೂಡ ಸಾಕಷ್ಟು ಉದುರುತ್ತಿತ್ತು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡಿ ನನ್ನ ಪತಿ ಹಾಗೂ ಮಕ್ಕಳು ನನ್ನನ್ನು ಬಿಟ್ಟು ದೂರ ಹೋದರು ಎಂದು ಪೂಜಾ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

    ನನ್ನ ಸ್ನೇಹಿತ, ನಿರ್ದೇಶಕ ರಾಜೇಂದ್ರ ಸಿಂಗ್ ಅವರಿಗೆ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ಹೇಳಿಕೊಂಡೆ. ಆಗ ಅವರು ತಕ್ಷಣ ಮುಂಬೈಗೆ ಟಿಕೆಟ್ ಬುಕ್ ಮಾಡಿದ್ದರು. ನಾನು ಮುಂಬೈಗೆ ತಲುಪಿದಾಗ ಅವರು ನನ್ನನ್ನು ನೋಡಿ ಶಾಕ್ ಆದರು. ಏಕೆಂದರೆ ನಾನು ಕೇವಲ 26 ಕೆಜಿ ತೂಕವಿದ್ದೆ. ಬಳಿಕ ಅವರು ಶಿವಾಡಿ ಟಿಬಿ ಆಸ್ಪತ್ರೆಗೆ ದಾಖಲಿಸಿದ್ದರು. ದರೆ ಹಣದ ಸಮಸ್ಯೆಯಿದ್ದ ಕಾರಣ ಚಿಕಿತ್ಸೆ ಪಡೆಯುವಾಗ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಪೂಜಾ ತಿಳಿಸಿದ್ದಾರೆ.

    ನಾನು ಅನಾರೋಗ್ಯದಿಂದ ಬಳಲುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆಗ ಸಲ್ಮಾನ್‍ಗೆ ನನ್ನ ಬಗ್ಗೆ ತಿಳಿದು ಅವರು ನನಗೆ ಸಹಾಯ ಮಾಡಿದ್ದರು. ಅವರ ಸಂಸ್ಥೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಆದರೆ ನಾನು ಶಿವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದೆ. ಏಕೆಂದರೆ ಅಲ್ಲಿ ಕಾಯಿಲೆ ತುಂಬಾ ಬೇಗ ಗುಣವಾಗುತ್ತೆ ಎಂದು ಕೇಳಿದ್ದೆ. ಸಲ್ಮಾನ್ ಸಂಸ್ಥೆ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯನ್ನಾಗಿ ಮಾಡಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಪೂಜಾ ಹೇಳಿದ್ದಾರೆ.

    ನಾನು ಆಸ್ಪತ್ರೆಯಲ್ಲಿದ್ದಾಗ 2 ದಿನದಲ್ಲಿ 9 ಮಂದಿ ಮೃತಪಟ್ಟಿರುವುದನ್ನು ನೋಡಿದೆ. ಅವರು ಮೃತಪಟ್ಟಾಗ ಈಗ ನನ್ನ ಸರದಿ ಎಂದು ಎನಿಸುತ್ತಿತ್ತು. ಆದರೆ ಸಲ್ಮಾನ್ ನನಗೆ ಹೊಸ ಜೀವನವನ್ನು ನೀಡಿದ್ದಾರೆ. ನಾನು ಈಗ ಬದುಕುವುದನ್ನು ಕಲಿತಿದ್ದು, ಮತ್ತೆ ನಟನೆ ಮಾಡುತ್ತೇನೆ. ನನ್ನ ಸಂಪಾದನೆಯಿಂದ ಒಂದು ಮನೆ ಕಟ್ಟಿಸಿ ದೇವರ ಫೋಟೋ ಬದಲು ಸಲ್ಮಾನ್ ಫೋಟೋ ಇಟ್ಟು ಪೂಜೆ ಮಾಡುತ್ತೇನೆ. ಈಗ ಸಲ್ಮಾನ್‍ರನ್ನು ಭೇಟಿ ಮಾಡಿ ಅವರ ಕಾಲು ಮುಟ್ಟಿ ಧನ್ಯವಾದ ತಿಳಿಸಬೇಕು ಎಂದು ಪೂಜಾ ಹೇಳಿದ್ದಾರೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ `ವೀರ್ ಗತಿ’ ಚಿತ್ರದಲ್ಲಿ ನಟಿಸಿದ್ದರು. ಪೂಜಾ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದರು.