Tag: uttar pradesh

  • ಪಿಎಫ್‍ಐ ಸಂಘಟನೆ ನಿಷೇಧಿಸುವಂತೆ ಗೃಹ ಸಚಿವಾಲಯಕ್ಕೆ ಪೊಲೀಸರಿಂದ ಪತ್ರ

    ಪಿಎಫ್‍ಐ ಸಂಘಟನೆ ನಿಷೇಧಿಸುವಂತೆ ಗೃಹ ಸಚಿವಾಲಯಕ್ಕೆ ಪೊಲೀಸರಿಂದ ಪತ್ರ

    – ಹಿಂಸಾಚಾರದಲ್ಲಿ ಪ್ರಮುಖ ಪಾತ್ರದ ಆರೋಪ
    – ಸಾಮಾಜಿಕ ಜಾಲತಾಣಗಳಿಂದ ಪ್ರಚೋದನೆ

    ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    ಉತ್ತರ ಪ್ರದೇಶದಲ್ಲಿ ನಡೆದ ಭಾರೀ ಹಿಂಸಾಚಾದಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಸಹ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಈ ಮೂಲಕ ಯುಪಿಯ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೆ ಯುಪಿ ರಾಜಧಾನಿ ಲಕ್ನೋದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಪಿಎಫ್‍ಐ ಸಂಘಟನೆಯಾಗಿದೆ. ಸಿಎಎ ಕುರಿತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ. ಈ ಕುರಿತು ಪಿಎಫ್‍ಐ ಮುಖ್ಯಸ್ಥ ಹಾಗೂ ಖಜಾಂಚಿ ಹಿಂಸಾಚಾರದಲ್ಲಿ ತಮ್ಮ ಪಾತ್ರವಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಿಎಫ್‍ಐ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚುವಂತೆ ಭಾಗವಹಿಸಿದ್ದ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಯುಪಿ ಪೊಲೀಸರು ಸಿಎಎ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ ವಾಸಿಮ್, ನದೀಮ್ ಹಾಗೂ ಅಶ್ಫಾಕ್ ಮೂವರು ಪಿಎಫ್‍ಐ ಸದಸ್ಯರನ್ನು ಬಂಧಿಸಿದ್ದಾರೆ. ವಾಸಿಮ್ ಯುಪಿ ಪಿಎಫ್‍ಐ ಮುಖ್ಯಸ್ಥನಾಗಿದ್ದು, ಅಶ್ಫಾಕ್ ಖಜಾಂಚಿಯಾಗಿದ್ದಾನೆ. ನದೀಮ್ ಸಂಘಟನೆಯ ಕಾರ್ಯಕರ್ತನಾಗಿದ್ದಾನೆ.

    ತನಿಖೆ ವೇಳೆ ಪೊಲೀಸರು ಈ ಮೂವರಿಂದ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ಬಾವುಟಗಳು, ಬರವಣಿಗೆ, ಪೋಸ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನದೀಮ್ ಹಾಗೂ ಅಶ್ಫಾಕ್ ಅವರು ಈ ಕುರಿತು ತಪ್ಪೊಪ್ಪಿಕೊಂಡಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಿಎಎ ವಿರುದ್ಧದ ಪ್ರತಿಭಟನೆಯ ಸಂದೇಶ ಕಳುಹಿಸುತ್ತಿದ್ದೆವು. ವಾಟ್ಸಪ್, ಟೆಲಿಗ್ರಾಂ ಬಳಸಿ ವಿಡಿಯೋ ಹಾಗೂ ಬರವಣಿಗೆ ಮೂಲಕ ಮಾಹಿತಿ ಹಂಚುತ್ತಿದ್ದೆವು ಎಂದು ತಿಳಿಸಿದ್ದಾರೆ.

    ಯುಪಿಯ ಶಾಮ್ಲಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿದ್ದ 14 ಪಿಎಫ್‍ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಮೀರತ್‍ನಲ್ಲಿ ಸಹ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಒಟ್ಟು 20 ಜನ ಸಾವನ್ನಪ್ಪಿದ್ದು, ಇದರಲ್ಲಿ ಬಹುತೇಕರು ಉತ್ತರ ಪ್ರದೇಶದವರಾಗಿದ್ದಾರೆ. ಉತ್ತರ ಪ್ರದೇಶದ ಡಿಜಿಪಿ ಒ.ಪಿ.ಸಿಂಗ್ ಅವರು ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿ, ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ ಎಂದು ಖಚಿತಪಡಿಸಿದ್ದಾರೆ.

    ಈ ಮಧ್ಯೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ಪೊಲೀಸರು ಪಿಎಫ್‍ಐ ಬ್ಯಾನ್ ಮಾಡುವ ಕುರಿತು ದಾಖಲೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಹಿಂಸಾಚಾರದಲ್ಲಿ ಪಿಎಫ್‍ಐ ಪಾತ್ರವಿರುವುದು ಕಂಡು ಬಂದಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಸಂಘಟನೆ ಕುರಿತು ಹಲವು ಆರೋಪಗಳಿದ್ದು, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪ ಸಹ ಇದೆ ಎಂದು ತಿಳಿಸಿದ್ದಾರೆ.

  • ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಲಕ್ನೋ: ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಹಿಂದೂ ಎಂಬ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರಿಗೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಾಜಾ ಸಲಹೆ ನೀಡಿದ್ದಾರೆ.

    ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಮಂದಿ ಭಾರತದ ಪೌರತ್ವಕ್ಕೆ ಅರ್ಜಿಸಲ್ಲಿಸುವಂತೆ ಪ್ರತಿಕಾಗೋಷ್ಠಿಯಲ್ಲಿ ಮೊಹ್ಸಿನ್ ರಾಜಾ ತಿಳಿಸಿದರು. ಈ ವೇಳೆ ಪತ್ರಕರ್ತರಿಂದ ಕೇಳಿ ಬಂದ ದಾನಿಶ್ ಕನೇರಿಯಾ ಅವರ ವಿರುದ್ಧ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕನೇರಿಯಾ ಸೇರಿದಂತೆ ಧಾರ್ಮಿಕ ಅಸಮಾನತೆ, ಕಿರುಕುಳಕ್ಕೆ ಒಳಗಾಗಿರುವ ಜನರು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಉತ್ತರಿಸಿದರು.

    ದಾನಿಶ್ ಕನೇರಿಯಾ ಅವರನ್ನು ಡ್ಯಾನಿಶ್, ಯೂಸುಫ್ ಯೋಹಾನಾರನ್ನು ಮೊಹಮ್ಮದ್ ಯೂಸುಫ್ ಆಗಿ ಬದಲಾಯಿಸಲಾಯಿತು. ಈ ರೀತಿ ಪಾಕಿಸ್ತಾನದಲ್ಲಿ ಎಷ್ಟು ಸಾಮಾನ್ಯ ನಾಗರಿಕರು ತಾರತಮ್ಯ ಎದುರಿಸಿರಬಹುದು. ಅಲ್ಲಿ ಎಷ್ಟು ಕಿರುಕುಳ ನೀಡಲಾಗುತ್ತಿದೆ ಎಂಬುವುದು ಸುಲಭವಾಗಿ ಆರ್ಥೈಸಿಕೊಳ್ಳಬಹುದು ಎಂದು ಮೊಹ್ಸಿನ್ ರಾಜಾ ಟ್ವೀಟ್ ಮಾಡಿದ್ದಾರೆ.

    ಇತ್ತ ದಾನಿಶ್ ಕನೇರಿಯಾ ತಮ್ಮ ಹೇಳಿಕೆ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದು, ನಾನು ನಿಮ್ಮಂತೆ ಹಣಕ್ಕಾಗಿ ದೇಶವನ್ನು ಮಾರಾಟ ಮಾಡಿಲ್ಲ. ತಾರತಮ್ಯ ಎದುರಾದರೂ ನಾನು ಕ್ರಿಕೆಟ್‍ಗಾಗಿ ರಕ್ತವನ್ನು ಹರಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಪಾಕ್ ಕ್ರಿಕೆಟ್ ತಂಡದಲ್ಲಿದ್ದ ವೇಳೆ ದಾನಿಶ್ ಕನೇರಿಯಾ ಎಷ್ಟು ತಾರತಮ್ಯಕ್ಕೆ ಒಳಗಾಗಿದ್ದರು ಎಂದು ವಿವರಿಸಿದ್ದರು. ಅಖ್ತರ್ ಅವರ ಈ ಹೇಳಿಕೆಗಳು ಸತ್ಯ, ಶೀಘ್ರವೇ ತಮ್ಮನ್ನು ತಾರತಮ್ಯದಿಂದ ನಡೆಸಿಕೊಂಡ ಪ್ರಮುಖ ಆಟಗಾರರ ಹೆಸರುಗಳನ್ನು ರಿವೀಲ್ ಮಾಡುವುದಾಗಿಯೂ ದಾನಿಶ್ ಕನೇರಿಯಾ ತಿಳಿಸಿದ್ದರು. ಆದರೆ ದಾನಿಶ್‍ರ ಈ ಹೇಳಿಕೆಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು.

  • ಉತ್ತರ ಪ್ರದೇಶದಲ್ಲಿ ಶುರುವಾಗಲಿದೆ ದೇಶದ ಮೊದಲ ಲೈಂಗಿಕ ಅಲ್ಪಸಂಖ್ಯಾತರ ವಿವಿ

    ಉತ್ತರ ಪ್ರದೇಶದಲ್ಲಿ ಶುರುವಾಗಲಿದೆ ದೇಶದ ಮೊದಲ ಲೈಂಗಿಕ ಅಲ್ಪಸಂಖ್ಯಾತರ ವಿವಿ

    ಲಕ್ನೋ: ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಫಜೀಲ್ ನಗರದಲ್ಲಿ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ.

    ಒಂದನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೂ ಪ್ರಪ್ರಥಮವಾಗಿ ವಿವಿ ಪ್ರಾರಂಭವಾಗಲಿದ್ದು, ಅಲ್ ಇಂಡಿಯಾ ಟ್ರಾನ್ಸ್ ಜೆಂಡರ್ಸ್ ಎಜುಕೇಷನ್ ಸರ್ವಿಸ್ ಟ್ರಸ್ಟ್ ಈ ವಿವಿ ಪ್ರಾರಂಭ ಮಾಡುತ್ತಿದೆ.

    2020 ಜನವರಿ 15ಕ್ಕೆ ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಬೆಳೆದ ಇಬ್ಬರ ದಾಖಲಾತಿ ನಡೆಯಲಿದೆ. ಫೆಬ್ರವರಿ, ಮಾರ್ಚ್ ವೇಳೆಗೆ ಎಲ್ಲ ತರಗತಿಗಳು ಪ್ರಾರಂಭವಾಗಲಿವೆ. ಉನ್ನತ ವ್ಯಾಸಂಗ ಮುಗಿಸಿ ಪಿಎಚ್‍ಡಿ ರಿಸರ್ಚ್ ಮಾಡಿ ಡಾಕ್ಟರೇಟ್ ಸಹ ಪಡೆಯಬಹುದಾಗಿದೆ. ಶಿಕ್ಷಣ ಮುಗಿಸಿ ತಮ್ಮ ಸಮುದಾಯಕ್ಕೆ ಹೊಸ ದಾರಿಯನ್ನು ಹಾಕಿಕೊಡಲಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

    ಈ ಬೃಹತ್ ಯೋಜನೆಗೆ ದೇಶದ ಲೈಂಗಿಕ ಅಲ್ಪಸಂಖ್ಯಾತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ ಪಡೆದು ಸಮಾಜದಲ್ಲಿ ಗೌರವವನ್ನು ಹೆಚ್ಚು ಮಾಡಿಕೊಳ್ಳಲಿದ್ದೇವೆ ಎನ್ನುವ ಮನಸ್ಥಿತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಒಬ್ಬರು ಶಿಕ್ಷಿತರಾದರೆ ಹಲವರನ್ನು ಶಿಕ್ಷಣದ ಕಡೆ ಸೆಳೆಯಬಹುದು. ಇದರಿಂದ ಸಮುದಾಯದ ಅಭಿವೃದ್ಧಿ ಆಗುತ್ತದೆ ಎನ್ನುವ ಆಲೋಚನೆಯನ್ನಿಟ್ಟುಕೊಂಡು ಟ್ರಸ್ಟ್ ಈ ವಿವಿಯನ್ನು ಆರಂಭಿಸುತ್ತಿದೆ.

  • ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪೋಷಕರು ಅರೆಸ್ಟ್ – ಮನೆಯಲ್ಲಿ ಅನಾಥವಾಯ್ತು ಮಗು

    ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪೋಷಕರು ಅರೆಸ್ಟ್ – ಮನೆಯಲ್ಲಿ ಅನಾಥವಾಯ್ತು ಮಗು

    ಲಕ್ನೋ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ತಂದೆ-ತಾಯಿ ಅರೆಸ್ಟ್ ಆಗಿ ಅವರು 14 ತಿಂಗಳ ಹೆಣ್ಣು ಮಗು ಅನಾಥವಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಪೌರತ್ವ ವಿಧೇಯಕ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ವಾರಣಾಸಿಯ 60 ಜನರನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಕಳೆದ ಗುರುವಾರ ಬಂಧಿಸಿದೆ. ಇವರಲ್ಲಿ ಏಕ್ತಾ ಮತ್ತು ರವಿಶೇಖರ್ ದಂಪತಿಯನ್ನು ಬಂಧಿಸಿದ್ದು, ಅವರಿಗೆ 14 ತಿಂಗಳ ಹಿಂದೆ ಜನಿಸಿದ್ದ ಹೆಣ್ಣು ಮಗು ತಂದೆ ತಾಯಿ ಇಲ್ಲದೇ ಕಷ್ಟಪಡುವಂತೆ ಆಗಿದೆ.

    ಪ್ರತಿಭಟನೆ ನಿಷೇಧಿಸಿ 144 ಸೆಕ್ಷನ್ ಹಾಕಿದ್ದರೂ ವಾರಣಾಸಿಯಲ್ಲಿ ಪ್ರತಿಭಟನೆಯನ್ನು ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ವಾರಣಾಸಿಯ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ದಂಪತಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗಳು ಹವಾಮಾನ ಅಜೆಂಡಾ ಎಂಬ ಎನ್‍ಜಿಒ ನಡೆಸುತ್ತಿದ್ದು, ಪರಿಸರ ಮಾಲಿನ್ಯದ ಬಗ್ಗೆ ಅರಿವು ಮಾಡಿಸುವ ಕೆಲಸ ಮಾಡುತ್ತಿದ್ದರು.

    ಈ ದಂಪತಿ ಡಿಸೆಂಬರ್ 19 ರಂದು ಎಡ ಗುಂಪಿನವರು ಆಯೋಜನೆ ಮಾಡಿದ್ದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೋಷಕರ ಬಂಧನದ ನಂತರ ಅವರ 14 ತಿಂಗಳ ಮಗಳು ಐರಾ ಅನಾಥವಾಗಿ ಅವರ ಸಬಂಧಿಕರ ಮನೆಯಲ್ಲಿ ಇದ್ದಾಳೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ರವಿಶೇಖರ್ ಅವರ ತಾಯಿ ಶೀಲಾ ತಿವಾರಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆದರೆ ಪೊಲೀಸರು ಯಾಕೆ ಅವನನ್ನು ಬಂಧಿಸಿದ್ದಾರೆ? ಅವನು ಶಾಂತಿಯೂತವಾಗಿ ಪ್ರತಿಭಟನೆ ಮಾಡುತ್ತಿದ್ದ. 14 ತಿಂಗಳ ಮಗು ತಾಯಿಯನ್ನು ಬಿಟ್ಟು ಹೇಗೆ ಬದುಕುತ್ತದೆ. ಈ ರೀತಿಯಲ್ಲಿ ನೀವು ಅಪರಾಧವನ್ನು ನಿಯಂತ್ರಿಸುತ್ತೀರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

    ಮಗು ಏನನ್ನು ತಿನ್ನುತ್ತಿಲ್ಲ. ಅಪ್ಪ ಅಮ್ಮ ಬೇಕು ಎಂದು ಯಾವಾಗಲೂ ಅಳುತ್ತದೆ. ನಾವು ಅಪ್ಪ ಅಮ್ಮ ಬರುತ್ತಾರೆ ಎಂದು ಸುಳ್ಳು ಹೇಳಿ ಮಗುವಿಗೆ ಊಟ ಮಾಡಿಸುತ್ತಿದ್ದೇವೆ. ನಮಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಈ ಮಗುವಿನ ಮುಖ ನೋಡಿಯಾದರೂ ಏಕ್ತಾ ಮತ್ತು ರವಿಶೇಖರ್ ಕೋರ್ಟ್ ಜಾಮೀನು ಮಂಜೂರು ಮಾಡಬೇಕೆಂದು ದಂಪತಿಯ ಸಂಬಂಧಿಕರು ಮನವಿ ಮಾಡಿದ್ದಾರೆ.

  • ಮಕ್ಕಳು ತಪ್ಪು ಮಾಡುವುದು ಸಹಜ, ಬಂಧಿತರನ್ನು ಬಿಡುಗಡೆ ಮಾಡಿ – ಕ್ಷಮೆ ಕೇಳಿದ ವಿದ್ಯಾರ್ಥಿಗಳು

    ಮಕ್ಕಳು ತಪ್ಪು ಮಾಡುವುದು ಸಹಜ, ಬಂಧಿತರನ್ನು ಬಿಡುಗಡೆ ಮಾಡಿ – ಕ್ಷಮೆ ಕೇಳಿದ ವಿದ್ಯಾರ್ಥಿಗಳು

    – ಜಿಲ್ಲಾಧಿಕಾರಿ ಹೆಸರಲ್ಲಿ 2 ದಿನ ರಜೆ ಘೋಷಿಸಿದ ವಿದ್ಯಾರ್ಥಿಗಳು

    ಲಕ್ನೋ: ಡಿಸೆಂಬರ್ 23 ಹಾಗೂ 24ರಂದು ರಜೆ ಘೋಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದು ಅವರ ಸಹಪಾಠಿಗಳಿಗೆ ತಿಳಿದಿದ್ದು, ತಕ್ಷಣ ಇತರ ವಿದ್ಯಾರ್ಥಿಗಳು ಇಬ್ಬರು ಸಹಪಾಠಿಗಳ ರಕ್ಷಣೆಗೆ ಧಾವಿಸಿದ್ದಾರೆ. ನೋಯ್ಡಾ ಸೆಕ್ಟರ್ 27ರಲ್ಲಿರುವ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ಅವರ ಕಚೇರಿಗೆ ಧಾವಿಸಿ ಕ್ಷಮೆಯಾಚಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ನಮ್ರತೆಯಿಂದ ಕ್ಷಮೆಯಾಚಿಸಿದ್ದು, ಮಂಡಿಯೂರಿ ಕುಳಿತು, ಎರಡೂ ಕೈಗಳಿಂದ ಕಿವಿ ಹಿಡಿದು ಕುಳಿತುಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.

    ನಾವು ಮಕ್ಕಳು ತಪ್ಪು ಮಾಡುವುದು ಸಹಜ. ಹಿರಿಯರು ಇದನ್ನು ತಿಳಿದು ನಮ್ಮನ್ನು ಕ್ಷಮಿಸಬೇಕು ಎಂದು ನೋಯ್ಡಾ ಸೆಕ್ಟರ್ 12ರ ಶಾಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

    ಅಲ್ಲದೆ ಈ ಕುರಿತು ವಿದ್ಯಾರ್ಥಿಗಳು ಸೆಕ್ಟರ್ 20ರಲ್ಲಿ ಪೊಲೀಸ್ ಠಾಣೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಥಸಂಚಲನ ನಡೆಸಿದ್ದಾರೆ. ನಮ್ಮ ಸ್ನೇಹಿತರ ಪರವಾಗಿ ನಾವು ಕ್ಷಮೆಯಾಚಿಸುತ್ತೇವೆ. ಅವರು ತಪ್ಪು ಮಾಡಿದ್ದಾರೆ, ಆದರೆ ಈ ಕುರಿತು ಅವರಿಗೆ ಅರಿವಾಗಿದೆ. ಅವರ ಕುಟುಂಬದವರು ಸಹ ಈ ಕುರಿತು ಎಚ್ಚರಿಕೆ ವಹಿಸಿದ್ದಾರೆ. ವಿವಾದ ಸೃಷ್ಟಿಸುವುದು ಅವರ ಉದ್ದೇಶವಾಗಿರಲಿಲ್ಲ ಎಂದು 12ನೇ ತರಗತಿ ವಿದ್ಯಾರ್ಥಿ ತಿಳಿಸಿದ್ದಾನೆ.

    ಈ ವೇಳೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಬಳಿ ಕುಳಿತುಕೊಳ್ಳದಂತೆ ತಿಳಿಸಿದ್ದಾರೆ. ಆಗ ವಿದ್ಯಾರ್ಥಿನಿ ಉತ್ತರಿಸಿ, ನಾವು ನಿಮ್ಮೊಂದಿಗೆ ವಾದ ಮಾಡುತ್ತಿಲ್ಲ. ಕೇವಲ ಕ್ಷಮೆಯಾಚಿಸಲು ಬಂದಿದ್ದೇವೆ ಅಷ್ಟೇ ಎಂದು ವಿದ್ಯಾರ್ಥಿನಿ ಅಳುತ್ತಲೇ ತಿಳಿಸಿದ್ದಾಳೆ. ಅಲ್ಲದೆ ಅವರನ್ನು ಬಿಡುಗಡೆ ಮಾಡದಿದ್ದರೆ ಅಂತಿಮ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

    ಈ ಕುರಿತು ಜಿಲ್ಲಾಧಿಕಾರಿ ಸಿಂಗ್ ಪ್ರತಿಕ್ರಿಯಿಸಿ, ತಪ್ಪು ಮಾಡಿದವರು ವಿದ್ಯಾರ್ಥಿಗಳೆಂದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ದೂರು ದಾಖಲಿಸಲಾಗಿದೆ. ಕಾನೂನು ವಿಚಾರವಾಗಿದ್ದರಿಂದ ಎಫ್‍ಐಆರ್ ಕೂಡ ದಾಖಲಾಗಿದೆ, ತನಿಖೆ ನಡೆಯುತ್ತಿದೆ. ಎಫ್‍ಐಆರ್ ದಾಖಲಾಗಿದ್ದರಿಂದ ಹಿಂಪಡೆಯುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೆ ಡಿಸೆಂಬರ್ 23 ಹಾಗೂ 24ರಂದು ರಜೆ ಘೋಷಿಸಲಾಗಿದೆ ಎಂಬ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ನಕಲಿ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ವೈರಲ್ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪತ್ರ ವೈರಲ್ ಆಗುತ್ತಿದ್ದಂತೆ, ಸಿಂಗ್ ಈ ವದಂತಿ ಕುರಿತು ಸ್ಪಷ್ಟನೆ ನೀಡಿದ್ದು, ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿಲ್ಲ, ಇಂತಹ ಯಾವುದೇ ಆದೇಶ ಹೊರಡಿಸಿಲ್ಲ. ನನ್ನ ಸಹಿ ಇರುವ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಇದು ನನ್ನ ಪತ್ರವಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದರು.

  • ಯೋಗಿ ಸರ್ಕಾರದಿಂದ ಪ್ರತಿಭಟನಾಕಾರರ 67 ಅಂಗಡಿ ಮುಟ್ಟುಗೋಲು

    ಯೋಗಿ ಸರ್ಕಾರದಿಂದ ಪ್ರತಿಭಟನಾಕಾರರ 67 ಅಂಗಡಿ ಮುಟ್ಟುಗೋಲು

    ಲಕ್ನೋ: ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ ಪ್ರತಿಭಟನಾಕಾರರ 67 ಅಂಗಡಿಗಳನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

    ಈ ಅಂಗಡಿಗಳು ಪೌರತ್ವ ವಿಧೇಯಕ ಕಾಯ್ದೆಯ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾತ್ಮಕವಾಗಿ ಸಾರ್ವಜನಿಕ ಆಸ್ತಿ ಹಾನಿ ಉಂಟುಮಾಡಿದರಿಗೆ ಸೇರಿದೆ. ಈ ವಿಚಾರದ ಬಗ್ಗೆ ನಾವು ತನಿಖೆ ಮಾಡುತ್ತಿದ್ದು, ಒಂದು ವೇಳೆ ತನಿಖೆಯಲ್ಲಿ ಈ ಅಂಗಡಿಗಳು ಅವರಿಗೆ ಸೇರದೇ ಇದ್ದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಕ್ತಾರರು ಹೇಳಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಮತ್ತು ಅವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರ ಆಸ್ತಿಯನ್ನು ಮತ್ತೆ ದುರಸ್ಥಿ ಮಾಡಿಸಲಾಗುವುದು ಎಂದು ಹೇಳಿದ್ದರು. ಮುಖ್ಯಮಂತ್ರಿಯವರ ಈ ಹೇಳಿಕೆಯಂತೆ ಪ್ರತಿಭಟನಾಕರರ 67 ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ಮಾರ್ಗದಲ್ಲಿ ನಡೆದಿದ್ದು. ಇದರಲ್ಲಿ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಅಪಾರ ಆಸ್ತಿ ನಾಶವಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಎಲ್ಲ ಆಸ್ತಿಯನ್ನು ವಶಪಡಿಸಿಕೊಂಡು ಅವುಗಳನ್ನು ಹರಾಜು ಹಾಕಿ ಅದರಿಂದ ನಷ್ಟವನ್ನು ಸರಿದೂಗಿಸಲಾಗುವುದು ಎಂದು ಯೋಗಿ ಅದಿತ್ಯನಾಥ್ ಹೇಳಿದ್ದರು.

    ಗಲಭೆಯ ಸಮಯದಲ್ಲಿ ಸಿಸಿಟಿವಿ ದೃಶ್ಯವಾಳಿಗಳು ಮತ್ತು ಘಟನೆಯ ವಿಡಿಯೋವನ್ನು ರೆಕಾರ್ಡಿಂಗ್ ಮಾಡಿ ಅದರಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಎಂದು ಯೋಗಿ ಹೇಳಿದ್ದಾರೆ. ಆದರೆ ಮುಜಫರ್ ನಗರದಲ್ಲಿ ಒಂದೇ ಬಾರಿ ಜನಸಮೂಹ ಅಂಗಡಿಗಳ ಹೊರಗೆ ಜಮಾವಣೆಗೊಂಡಿತ್ತು. ಇದರಲ್ಲಿ ಅಂಗಡಿಯ ಮಾಲೀಕ ಯಾರು ಎಂದು ತಿಳಿಯಲು ಆಗಿಲ್ಲ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಆ ಜಿಲ್ಲೆಯ ಎಸ್‍ಪಿ ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ.

    ಮುಜಫರ್ ನಗರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಶುಕ್ರವಾರ ನಮಾಜ್ ಮುಗಿದ ಮಧ್ಯಾಹ್ನದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಪ್ರತಿಭಟನೆಯಲ್ಲಿ ಸುಮಾರು 10 ಬೈಕ್ ಮತ್ತು ಹಲವಾರು ಕಾರುಗಳನ್ನು ಸುಟ್ಟು ಹಾಕಲಾಗಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ದ್ವಂಸಗೊಳಿಸಿದ್ದರು. ಈ ಪ್ರತಿಭಟನೆಯಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30 ಜನರು ಗಾಯಗೊಂಡಿದ್ದರು.

    ಉತ್ತರ ಪ್ರದೇಶದಲ್ಲಿ ಇನ್ನೂ ಪ್ರತಿಭಟನೆಯ ಕಿಚ್ಚು ಹಾಗೇ ಉಳಿದಿದ್ದು, ರಾಜ್ಯದ ಕೆಲ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಇಂಟರ್ ನೆಟ್ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 879 ಜನರನ್ನು ಬಂಧಿಸಲಾಗಿದೆ. ಈವರೆಗೆ 131 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಉತ್ತರ ಪ್ರದೇಶದಲ್ಲಿ ಮುಂದುವರಿದ ಪೌರತ್ವದ ಕಿಚ್ಚು- ಸಾವಿನ ಸಂಖ್ಯೆ 17ಕ್ಕೆ ಏರಿಕೆ

    ಉತ್ತರ ಪ್ರದೇಶದಲ್ಲಿ ಮುಂದುವರಿದ ಪೌರತ್ವದ ಕಿಚ್ಚು- ಸಾವಿನ ಸಂಖ್ಯೆ 17ಕ್ಕೆ ಏರಿಕೆ

    ನವದೆಹಲಿ: ಪೌರತ್ವ ಕಾಯ್ದೆ(ಸಿಎಎ) ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ.

    ಉತ್ತರ ಪ್ರದೇಶದಲ್ಲಿ ಪೌರತ್ವದ ಕಿಚ್ಚು ಜೋರಾಗಿದ್ದು, 260 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಈ ಪೈಕಿ 57 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್ಪುರದಲ್ಲಿ ಪ್ರತಿಭಟನಾಕಾರರು ಯತಿಮ್ಖಾನಾ ಪೊಲೀಸ್ ಠಾಣೆಗೆ ಇಟ್ಟಿಗೆಯಿಂದ ಹೊಡೆದು ಬೆಂಕಿ ಹಚ್ಚಿದ ಪರಿಣಾಮ ಪೊಲೀಸರು ಸೇರಿದಂತೆ ಸಾರ್ವಜನಿಕರೂ ಗಾಯಗೊಂಡಿದ್ದಾರೆ. ಇತ್ತ ರಾಮ್‍ಪುರದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಅನೇಕರು ಪ್ರತಿಭಟನೆಯ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.

    ಸುಳ್ಳು ಸುದ್ದಿ ಹಬ್ಬುವವರನ್ನು, ಹಿಂಸಾತ್ಮಕ ಪ್ರತಿಭಟನೆ ಮಾಡುವವರನ್ನು, ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

    ರಾಜ್ಯದಾದ್ಯಂತ ನಿಷೇಧಾಜ್ಞೆ ಜಾರಿಯಿದ್ದರೂ ನಿಯಮ ಉಲ್ಲಂಘಿಸಿದ ಮಹಿಳಾ ಪ್ರತಿಭಟನಾಕಾರರು ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಮೀರತ್, ಹಾಪುರ್, ಭುಲಂಧರ್ ಶಹರ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ್‍ನಲ್ಲಿ 120 ಮಂದಿಯನ್ನು ಬಂಧಿಸಲಾಗಿದೆ. ಕಾನ್ಪುರದಲ್ಲಿ 40 ಮಂದಿಯನ್ನು ಬಂಧಿಸಲಾಗಿದ್ದು, 15 ಸಾವಿರ ಪ್ರತಿಭಟನಾಕಾರರ ಮೇಲೆ ದೂರು ದಾಖಲಾಗಿದೆ. ಇತ್ತ ಪ್ರಯಾಗ್‍ರಾಜ್‍ನಲ್ಲಿ 10 ಸಾವಿರ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಳೆ ದೆಹಲಿಯ ದರಿಯಾಗಂಜ್‍ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಅಸ್ಸಾಂನಲ್ಲಿ ಕೂಡ ಸಿಎಎ ವಿರೋಧಿಸಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಆದರೆ ಯಾವುದೇ ಹಿಂಸಾಚಾರ ನಡೆದಿಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮೇಘಾಲಯದಲ್ಲಿ ಶಾಂತಿಯುತ ವಾತಾವರಣವಿದೆ.

    ಸಿಎಎ ವಿರೋಧಿಸಿ ಆರ್‍ಜೆಡಿ(ರಾಷ್ಟ್ರೀಯ ಜನತಾ ದಳ) ಕರೆ ನೀಡಿದ್ದ ಬಂದ್ ಹಿನ್ನೆಲೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಭಾರೀ ವಿಧ್ವಂಸಕ ಕೃತ್ಯಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಇತ್ತ ಚೆನ್ನೈ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆಯಲು ಸಿಪಿಐ ಪ್ರತಿಭಟನಾಕಾರರು ಯತ್ನಿಸಿದರು. ಕಾಂಗ್ರೆಸ್ ನೇತೃತ್ವದಲ್ಲಿ ಕೇರಳದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

  • ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಹತ್ತು ಮಂದಿ ಬಲಿ ಪಡೆದ CAA ಪ್ರತಿಭಟನೆ

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹತ್ತು ಮಂದಿಯನ್ನು ಬಲಿ ಪಡೆದುಕೊಂಡಿದೆ. ನಿನ್ನೆಯಿಂದ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

    ಫಿರೋಝ್ ಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್, ಮೀರಠ್ ನಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಯೋಗಿ ಆದಿತ್ಯನಾಥ್ ವದಂತಿಗಳಿಗೆ ಕಿವಿಗೊಡದೆ ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಡುವಂತೆ ಮನವಿ ಮಾಡಿದ್ದಾರೆ.

    ಸುಳ್ಳು ಸುದ್ದಿ ಹಬ್ಬುವವರನ್ನ ಹಿಂಸಾತ್ಮಕ ಪ್ರತಿಭಟನೆ ಮಾಡುವುವರನ್ನ ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

    ಈ ಮಧ್ಯೆ, ಯಾವೊಬ್ಬ ಪ್ರತಿಭಟನಾಕಾರನೂ ಪೊಲೀಸರ ಗುಂಡಿಗೆ ಬಲಿಯಾಗಿಲ್ಲ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ. ಒಂದೇ ಒಂದು ಬಾರಿಯೂ ನಾವು ಶೂಟ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಗುಂಡಿನ ದಾಳಿ ನಡೆದಿದೆ ಎಂದಾಗಿದ್ದಲ್ಲಿ ಅದು ಪ್ರತಿಭಟನಾಕಾರರ ಕಡೆಯಿಂದಲೇ ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

    ಶುಕ್ರವಾರ ಲಕ್ನೊ, ವಾರಾಣಾಸಿ, ಬರೋಲಿ, ಗೋರಕಪುರ್, ಬದೋಹಿ, ಸಂಬಾಲ್ ನಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

  • ಸೋನಿಯಾ ಸಾರ್ವಜನಿಕರ ದಾರಿ ತಪ್ಪಿಸ್ತಿದ್ದಾರೆ- ನಿರ್ಮಲಾ ಸೀತಾರಾಮನ್

    ಸೋನಿಯಾ ಸಾರ್ವಜನಿಕರ ದಾರಿ ತಪ್ಪಿಸ್ತಿದ್ದಾರೆ- ನಿರ್ಮಲಾ ಸೀತಾರಾಮನ್

    ನವದೆಹಲಿ: ಪೌರತ್ವ ಕಾಯ್ದೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

    ಪೌರತ್ವ ಕಾಯ್ದೆ ಕುರಿತು ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಪೌರತ್ವ ಕಾಯ್ದೆಯನ್ನು ಎನ್‍ಆರ್‍ಸಿಯೊಂದಿಗೆ ಹೊಂದಿಕೆ ಮಾಡಿ ಸೋನಿಯಾ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆದರೆ ಇದನ್ನು ಇನ್ನೂ ರೂಪಿಸಿಲ್ಲ ಎಂದು ಕಿಡಿ ಕಾರಿದ್ದಾರೆ.

    ಪ್ರತಿಭಟನಾಕಾರರು ಕಾನೂನನ್ನು ಸಂಪೂರ್ಣವಾಗಿ ಓದಿಕೊಂಡು ಈ ಕುರಿತು ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ಪ್ರತಿಭಟನೆಯಿಂದ ದೂರ ಉಳಿಯಬೇಕು. ದಾರಿ ತಪ್ಪಿಸಿ, ಹಿಂಸಾಚಾರಕ್ಕೆ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

    ಈ ಕುರಿತು ಸಾರ್ವಜನಿಕರು ಗೊಂದಲಕ್ಕೊಳಗಾಗಬೇಕಿಲ್ಲ ಹಾಗೂ ಭಯ ಪಡಬೇಕಿಲ್ಲ. ಕಾಂಗ್ರೆಸ್, ಟಿಎಂಸಿ, ಎಎಪಿ ಹಾಗೂ ಇತರೆ ಪಕ್ಷಗಳು ಪೌರತ್ವ ಕಾಯ್ದೆಯನ್ನು ಎನ್‍ಆರ್‍ಸಿಗೆ ಹೊಂದಾಣಿಕೆ ಮಾಡಿ ಗೊಂದಲ ಸೃಷ್ಟಿಸುತ್ತಿವೆ. ಆದರೆ ಎನ್‍ಆರ್‍ಸಿಯನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.

    ಈ ಕಾಯ್ದೆಯು ಯಾವುದೇ ಭಾರತೀಯರಿಗೆ ಪೌರತ್ವ ನೀಡಲು ನಿರಾಕರಿಸುವುದಿಲ್ಲ. ಅಲ್ಲದೆ ಯಾವುದೇ ಭಾರತೀಯ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ. ಆದರೆ ದುರದೃಷ್ಟಕರ ಎಂಬಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಕುರಿತು ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಸಿಎಎ ವಿದೇಶದಲ್ಲಿ ಕಿರುಕುಳ ಅನುಭವಿಸುತ್ತಿರುವವರಿಗೆ ಪೌರತ್ವ ನೀಡುವುದಾಗಿದೆ. ಇದಕ್ಕಾಗಿ ನಾವು 70 ವರ್ಷಗಳ ಕಾಲ ಕಾಯಬೇಕಾಯಿತು ಎಂದು ತಿಳಿಸಿದ್ದಾರೆ.

    ದೇಶದ ಬಹುತೇಕ ಕಡೆಗಳಲ್ಲಿ ಪೌರತ್ವ ಕಿಚ್ಚು ಹೆಚ್ಚಾಗಿದ್ದು, ಉತ್ತರ ಭಾರತ ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಲ್ಲಿ ಬೇಯುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಹಿಂಸಾಚಾರ ತಹಬದಿಗೆ ಬರುತ್ತಿಲ್ಲ. ರಾಜ್ಯದ ಮಂಗಳೂರಿನಲ್ಲಿಯೂ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗೋಲಿಬಾರ್ ಗೆ ಒಳಗಾಗಿ ಇಬ್ಬರು ಮೃತಪಟ್ಟಿದ್ದಾರೆ.

    ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಗರದಿಂದ ನಗರಕ್ಕೆ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‍ಪುರ್, ಬುಲಂದ್ ಶಹರ್, ಫಿರೋಜಾಬಾದ್, ಭೈರುಚ್, ಕಾನ್ಪುರ್, ಮೀರಟ್, ಹಾಪುರ್ ಧಗಧಗಿಸಿವೆ. ಫಿರೋಜಾಬಾದ್‍ನಲ್ಲಿ ಗೋಲಿಬಾರ್ ನಡೆದು ಒಬ್ಬರು ಬಲಿ ಆಗಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

    ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದರೆ, ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಗೋರಖ್‍ಪುರದಲ್ಲಿ ಪ್ರತಿಭಟನಾಕಾರರನ್ನು ಸಿಕ್ಕಸಿಕ್ಕಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಎಲ್ಲಾ ಕಡೆ ಪೊಲೀಸ್ ವಾಹನಗಳು ಮತ್ತು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ಧಗಧಗಿಸಿವೆ.

    ಕಾನ್ಪುರದಲ್ಲಿ ಗುಂಡೇಟು ತಗಲಿರುವ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಪ್ರತಿಭಟನೆ, ಹಿಂಸೆ ಮಾತ್ರ ವಿಪರೀತ ವೇಗದಲ್ಲಿ ಹರಡುತ್ತಿದೆ. ಆದರೆ ಈಶಾನ್ಯದಲ್ಲಿ ಪ್ರತಿಭಟನೆಗಳು ನಿಯಂತ್ರಣಕ್ಕೆ ಬರುತ್ತಿವೆ. ಹೀಗಾಗಿ ಅಸ್ಸಾಂನಲ್ಲಿ ಇಂಟರ್‍ನೆಟ್ ಸೇವೆ ಮತ್ತೆ ಆರಂಭಿಸಲಾಗಿದೆ.

  • ಪೌರತ್ವ ಕಿಚ್ಚಿನಲ್ಲಿ ಉತ್ತರ ಭಾರತ ಧಗಧಗ- ಹಿಂಸೆಗೆ ತಿರುಗಿದ ಪ್ರತಿಭಟನೆ

    ಪೌರತ್ವ ಕಿಚ್ಚಿನಲ್ಲಿ ಉತ್ತರ ಭಾರತ ಧಗಧಗ- ಹಿಂಸೆಗೆ ತಿರುಗಿದ ಪ್ರತಿಭಟನೆ

    – ಬಿಜ್ನೋರ್, ಕಾನ್ಪುರ, ಸಂಬಲ್‍ನಲ್ಲಿ ಆರು ಮಂದಿ ಬಲಿ

    ನವದೆಹಲಿ: ಉತ್ತರ ಭಾರತ ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಲ್ಲಿ ಬೇಯುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಹಿಂಸಾಚಾರ ತಹಬದಿಗೆ ಬರುತ್ತಿಲ್ಲ.

    ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಗರದಿಂದ ನಗರಕ್ಕೆ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‍ಪುರ್, ಬುಲಂದ್ ಶಹರ್, ಫಿರೋಜಾಬಾದ್, ಭೈರುಚ್, ಕಾನ್ಪುರ್, ಮೀರಟ್, ಹಾಪುರ್ ಧಗಧಗಿಸಿವೆ. ಫಿರೋಜಾಬಾದ್‍ನಲ್ಲಿ ಗೋಲಿಬಾರ್ ನಡೆದು ಒಬ್ಬರು ಬಲಿ ಆಗಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

    ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದರೆ, ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಗೋರಖ್‍ಪುರದಲ್ಲಿ ಪ್ರತಿಭಟನಾಕಾರರನ್ನು ಸಿಕ್ಕಸಿಕ್ಕಂಗೆ ಲಾಠಿ ಚಾರ್ಜ್ ಮಾಡಿದ್ದಾರೆ. ಎಲ್ಲಾ ಕಡೆ ಪೊಲೀಸ್ ವಾಹನಗಳು ಮತ್ತು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ಧಗಧಗಿಸಿವೆ.

    ಉತ್ತರ ಪ್ರದೇಶದಾದ್ಯಂತ ಇಂಟರ್‍ನೆಟ್ ಸೇವೆ ಬಂದ್ ಮಾಡಲಾಗಿದೆ. ಕಾನ್ಪುರದಲ್ಲಿ ಗುಂಡೇಟು ತಗಲಿರುವ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಪ್ರತಿಭಟನೆ, ಹಿಂಸೆ ಮಾತ್ರ ವಿಪರೀತ ವೇಗದಲ್ಲಿ ಹರಡುತ್ತಿದೆ. ಆದರೆ ಈಶಾನ್ಯದಲ್ಲಿ ಪ್ರತಿಭಟನೆಗಳು ನಿಯಂತ್ರಣಕ್ಕೆ ಬರುತ್ತಿವೆ. ಹೀಗಾಗಿ ಅಸ್ಸಾಂನಲ್ಲಿ ಇಂಟರ್‍ನೆಟ್ ಸೇವೆ ಮತ್ತೆ ಆರಂಭಿಸಲಾಗಿದೆ.

    ಶುಕ್ರವಾರ ಸಂಜೆಯವರೆಗೂ ಶಾಂತವಾಗಿದ್ದ ನವದೆಹಲಿ ಕತ್ತಲಾಗ್ತಾ ಇದ್ದಂತೆ ಧಗಧಗಿಸಿದೆ. ದರಿಯಾಗಂಜ್‍ನಲ್ಲಿ ಪ್ರತಿಭಟನೆ ಹಿಂಸಾರೂಪ ತಾಳಿಗೆ. ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ. ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಮಧ್ಯಾಹ್ನದಿಂದ ಜಂತರ್‍ಮಂತರ್‍ಗೆ ರ್ಯಾಲಿ ನಡೆಸಸಲು ಜಾಮಾ ಮಸೀದಿಯಲ್ಲಿ ಸಾವಿರಾರು ಮಂದಿ ಕಾದು ನಿಂತಿದ್ದರು. ಸಂಜೆ ಆದ ಕೂಡಲೇ ಪೊಲೀಸರ ಭದ್ರತೆ ಬೇಧಿಸಿ ರ್ಯಾಲಿ ಹೊರಟರು. ಆದರೆ ದರಿಯಾಗಂಜ್ ಬಳಿ ಬರುತ್ತಿದ್ದಂತೆ ಹಿಂಸೆ ಭುಗಿಲೆದ್ದಿತ್ತು.

    ಇದಕ್ಕೂ ಮುನ್ನ, ಜಾಮಾ ಮಸೀದಿಯ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಚಂದ್ರಶೇಖರ್ ಆಜಾದ್ ಪೊಲೀಸರಿಂದ ತಪ್ಪಿಸಿಕೊಂಡು ಮತ್ತೆ ಪ್ರತಿಭಟನಾಕಾರರನ್ನು ಸೇರಿಕೊಂಡರು. ಅತ್ತ ಗೃಹ ಸಚಿವ ಅಮಿತ್ ಶಾ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶರ್ಮಿಷ್ಠಾ ಮುಖರ್ಜಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು.