Tag: United Nations

  • ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

    ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

    ನ್ಯೂಯಾರ್ಕ್: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂದು ವಿಶ್ವಸಂಸ್ಥೆಯ ಮೊರೆ ಹೋಗಿದ್ದ  ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ ವಿಚಾರ ಸಂಬಂಧ ಪಾಕಿಸ್ತಾನ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ವಿಶ್ವಸಂಸ್ಥೆಯ ನಿರ್ಧಾರವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ನೀಡಿತ್ತು. ಅಷ್ಟೇ ಅಲ್ಲದೇ ಎರಡು ದೇಶಗಳ ಮಧ್ಯೆ ಸಂಧಾನ ಮಾಡುವಂತೆ ಮನವಿ ಮಾಡಿತ್ತು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೆ  ಜೊವಾನ್ನಾ ವ್ರೊನೆಕ್ಕಾ ಹೇಳಿದ್ದಾರೆ.

    ಪಾಕ್ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಬಂದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ವಿಶ್ವಂಸಂಸ್ಥೆಯ ಅಧ್ಯಕ್ಷ ಆಂಟೋನಿಯೋ ಗುಟೆರಸ್ ಅವರ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ರಾಷ್ಟ್ರಗಳು ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಹೀಗಾಗಿ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

    ಪದೇ ಪದೇ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಅಷ್ಟೇ ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳು ಸಹ ತನ್ನ ಪರವಾಗಿ ನಿಲ್ಲಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಪಾಕ್ ಮಿತ್ರ ಚೀನಾ ಹೊರತುಪಡಿಸಿ ವಿಶ್ವದ ಯಾವುದೇ ಬಲಾಢ್ಯ ರಾಷ್ಟ್ರಗಳು ಭಾರತ ಕೈಗೊಂಡ ಐತಿಹಾಸಿಕಾ ನಿರ್ಧಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ ಬಳಿಕ ಪಾಕಿಸ್ತಾನ ಭಾರತದ ಭಾರತೀಯ ಚಲನ ಚಿತ್ರ, ಸಂಜೋತಾ ರೈಲು ಸ್ಥಗಿತ, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ, ರಾಯಭಾರಿಯನ್ನು ಉಚ್ಚಾಟನೆ ಮಾಡಿತ್ತು.

  • ‘ಇಷ್ಟವಾಗದೇ ಇದ್ರೂ ನೀವು ಒಪ್ಪಿಕೊಳ್ಳಬೇಕು’ – ಕೊನೆಗೆ  ಸುಷ್ಮಾ ಮಾತಿಗೆ ಮಣಿದ ಮೋದಿ

    ‘ಇಷ್ಟವಾಗದೇ ಇದ್ರೂ ನೀವು ಒಪ್ಪಿಕೊಳ್ಳಬೇಕು’ – ಕೊನೆಗೆ ಸುಷ್ಮಾ ಮಾತಿಗೆ ಮಣಿದ ಮೋದಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉತ್ತಮ ಭಾಷಣಗಾರ. ಆದರೆ ಅವರು ತಮ್ಮ ಅವಧಿಯಲ್ಲಿ ಮೊದಲ ಬಾರಿಗೆ ಓದಿಕೊಂಡು ಭಾಷಣ ಮಾಡಿದ್ದರು. ಓದಿಕೊಂಡು ಭಾಷಣ ಮಾಡಲು ಕಾರಣವಾಗಿದ್ದು ಸುಷ್ಮಾ ಸ್ವರಾಜ್ ಅವರ ಖಡಕ್ ನಿಲುವು.

    ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 2014 ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಎಂದಿನಂತೆ ಮೋದಿ ಭಾಷಣ ಮಾಡದೇ ಓದಿಕೊಂಡು ಭಾಷಣ ಮಾಡಿದ್ದರು. ನಾನು ಯಾಕೆ ಓದಿಕೊಂಡು ಭಾಷಣ ಮಾಡಿದ್ದೆ ಎನ್ನುವುದನ್ನು ಮೋದಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.

    ಆ ಘಟನೆಯನ್ನು ಮೋದಿ ಮೆಲುಕು ಹಾಕಿದ್ದು ಹೀಗೆ:
    ನಾನು ಭಾಷಣ ಮಾಡಬಲ್ಲೆ ಎನ್ನುವ ಅತಿಯಾದ ವಿಶ್ವಾಸವನ್ನು ಹೊಂದಿದ್ದೆ. ಇದು ನನ್ನ ಸಮಸ್ಯೆಯೂ ಹೌದು. ನನ್ನ ಭಾಷಣಕ್ಕೆ ನಾನು ಯೋಚನೆ ಮಾಡಿ ಸಿದ್ಧಗೊಂಡಿದ್ದೆ. ನಾನು ವಿಶ್ವಸಂಸ್ಥೆಗೆ ಭೇಟಿ ನೀಡುವ ಮೊದಲೇ ಅಲ್ಲಿ ಸುಷ್ಮಾ ಸ್ವರಾಜ್ ಅವರು ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ನಾನು ಅಲ್ಲಿ ಅವರನ್ನು ಭೇಟಿಯಾದೆ.

    ಮಾತುಕತೆಯ ವೇಳೆ ಸುಷ್ಮಾ ಸ್ವರಾಜ್ ನನ್ನ ಭಾಷಣದ ವಿಚಾರದ ಬಗ್ಗೆ ಕೇಳಿದರು. ಅದಕ್ಕೆ ನಾನು ಮ್ಯಾನೇಜ್ ಮಾಡುತ್ತೇನೆ ಎಂದು ಉತ್ತರಿಸಿದೆ. ಈ ವೇಳೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದಂತೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಸಾಧ್ಯವಿಲ್ಲ. ಬರೆದಿದ್ದನ್ನು ಓದಿ ಭಾಷಣ ಮಾಡಬೇಕೆಂದು ಸೂಚಿಸಿದರು.

    ಓದಿ ಭಾಷಣ ಮಾಡುವುದು ನನಗೆ ಇಷ್ಟ ಇಲ್ಲದ ಕಾರಣ ನಮ್ಮಿಬ್ಬರ ಮಧ್ಯೆ ಸುಮಾರು 30 ನಿಮಿಷಗಳ ಆರೋಗ್ಯಕರ ಚರ್ಚೆ ನಡೆಯಿತು. ಆದರೂ ಸುಷ್ಮಾ ಸ್ವರಾಜ್ ಯಾವುದೇ ಕಾರಣಕ್ಕೂ ತಮ್ಮ ನಿಲುವಿನಲ್ಲಿ ಬದಲಾಗಲಿಲ್ಲ. ಅಷ್ಟೇ ಅಲ್ಲದೇ, ನಿಮಗೆ ಇದು ಇಷ್ಟವಾಗದೇ ಇರಬಹುದು. ಆದರೂ ನೀವು ಒಪ್ಪಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ನಾನು ಏನು ಭಾಷಣ ಮಾಡಬೇಕು ಎಂದು ಯೋಚಿಸಿದ್ದೇನೋ ಆ ಎಲ್ಲ ವಿಚಾರಗಳನ್ನು ಅವರಲ್ಲಿ ತಿಳಿಸಿದೆ. ನಂತರ ನನ್ನ ಭಾಷಣ ಸಿದ್ಧಗೊಂಡಿತು. ಬರೆದ ಭಾಷಣವನ್ನು ವಿಶ್ವಸಂಸ್ಥೆಯಲ್ಲಿ ಓದಲು ನನಗೆ ಬಹಳ ಕಷ್ಟವಾಯಿತು. ಯಾಕೆಂದರೆ ಈ ಹಿಂದೆ ನಾನು ಎಲ್ಲಿಯೂ ಬರೆದ ಭಾಷಣವನ್ನು ಓದಿರಲಿಲ್ಲ.

    ಸುಷ್ಮಾ ಸ್ವರಾಜ್ ಕೆಲಸದಲ್ಲಿ ರಾಜಿ ಆಗುತ್ತಿರಲಿಲ್ಲ. ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ನೇರವಾಗಿ ಹೇಳುತ್ತಿದ್ದರು ಎನ್ನುವ ವಿಚಾರ ಈ ಘಟನೆಯಿಂದ ತಿಳಿಯುತ್ತದೆ. ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಮೋದಿ ತನ್ನ ಬಗ್ಗೆ ಹೇಳಿದ ಮಾತನ್ನು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದರು.

  • ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್ ಬಂಧನ

    ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್ ಬಂಧನ

    ಲಾಹೋರ್: ಮುಂಬೈ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಜಮಾತ್ ಉದ್ ದಾವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯ್ಯದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದ ಪಂಜಾಬ್‍ನ ಕೌಂಟರ್ ಟೆರರಿಸಂ ಡಿಪಾರ್ಟ್‍ಮೆಂಟ್(ಸಿಟಿಡಿ) ಪೊಲೀಸರು ಹಫೀಜ್ ಸಯ್ಯದ್‍ನನ್ನು ಲಾಹೋರ್ ಬಳಿ ಬಂಧಿಸಿದ್ದಾರೆ. ಆತ ಗುಜ್ರಾನ್‍ವಾಲಾಗೆ ತೆರಳುತ್ತಿದ್ದ ವೇಳೆ ಲಾಹೋರ್ ಬಳಿ ಪೊಲೀಸರು ಬಂಧಿಸಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    ಪಾಕಿಸ್ತಾನ ಮಂಗಳವಾರವಷ್ಟೇ ಭಾರತದ ವಿಮಾನಗಳಿಗೆ ಹೇರಿದ್ದ ವಾಯುಸೀಮೆ ನಿಷೇಧವನ್ನು ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಇಂದು ಹಫೀಜ್ ಸಯ್ಯದ್‍ನನ್ನು ಬಂಧಿಸಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದೆ.

    ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ಎಚ್ಚರಿಕೆಯ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಭಯೋತ್ಪಾದನೆ ಪ್ರೋತ್ಸಾಹಿಸಲು ಹಣ ನೀಡಿದ್ದಾನೆ ಎಂಬ ಆರೋಪದ ಮೇಲೆ ಹಫೀಜ್ ಸಯ್ಯದ್ ಹಾಗೂ ಆತನ 12 ಸಹಚರರನ್ನು ಬಂಧಿಸಲಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಈಗಾಗಲೇ 23 ಪ್ರಕರಣಗಳು ದಾಖಲಾಗಿವೆ. ಹಿಂದೆ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

    ಮುಂಬೈ ದಾಳಿಯ ಬಳಿಕ ಭಾರತ ಪಾಕಿಸ್ತಾನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದರೂ ಹಫೀಜ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಸಂಬಂಧ ಭಾರತ ವಿಶ್ವಸಂಸ್ಥೆಯಲ್ಲಿ ಹಲವು ಬಾರಿ ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುವ ಮುಖವನ್ನು ಬಯಲು ಮಾಡಿತ್ತು.

    ಇತ್ತಿಚೆಗೆ ಪಾಕಿಸ್ತಾನ ಕೌಂಟರ್ ಟೆರರಿಸಂ ಡಿಪಾರ್ಟ್‍ಮೆಂಟ್‍ನ ಮಾಹಿತಿ ಪ್ರಕಾರ, ಹಫೀಜ್ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ. ಈತ ಐದು ಸಂಸ್ಥೆಗಳ ಮೂಲಕ ಹಣ ಸಂಗ್ರಹಿಸಿ ಭಯೋತ್ಪಾದಕರಿಗೆ ಹಣದ ಸಹಾಯ ಮಾಡುತ್ತಿದ್ದ ಎಂಬ ಆರೋಪದ ಮೇಲೆ 23 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಈಗಾಗಲೇ ಎಚ್ಚರಿಕೆ ನೀಡಿದೆ.

    ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಎಎಫ್‍ಎಟಿಎಫ್ ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಪ್ರಸ್ತುತ ಎಫ್‍ಎಟಿಎಫ್ ನಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪಾಕಿಸ್ಥಾನವನ್ನು ಎಫ್‍ಎಟಿಎಫ್‍ನ ಕಪ್ಪು ಪಟ್ಟೆಗೆ ಸೇರಿಸಲಾಗುವುದು ಎಂದು ಎಚ್ಚರಿಸಿತ್ತು.

    ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲದೆ ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗಡುವು ನೀಡಿತ್ತು. ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿತ್ತು.

    ಅಕ್ಟೋಬರ್ ನಲ್ಲಿ ನಡೆಯುವ ಮಹಾ ಸಭೆಯಲ್ಲಿ ಈ ಸಂಬಂಧ ವೋಟಿಂಗ್ ನಡೆಯಲಿದ್ದು ಅದರ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ವೋಟಿಂಗ್ ಮೇಲೆ ಪಾಕಿಸ್ತಾನದ ಭವಿಷ್ಯ ನಿಂತಿದೆ.

    ಲಷ್ಕರ್ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯ್ಯದ್, ಜೈಷ್ ಸಂಘಟನೆಯ ಮುಖ್ಯಸ್ಥ ಅಜರ್ ಮೊಹಮ್ಮದ್ ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಎಫ್‍ಎಟಿಎಫ್‍ಗೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿತ್ತು. ಅಲ್ಲದೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದನ್ನು ತಡೆಯಲು ಕನಿಷ್ಠ ಮೂರು ರಾಷ್ಟ್ರಗಳ ಬೆಂಬಲ ಇರಬೇಕು. ಈಗಾಗಲೇ ಚೀನಾ, ಮಲೇಷ್ಯಾ ಹಾಗೂ ಟರ್ಕಿ ದೇಶಗಳು ಪಾಕ್ ಪರ ನಿಂತಿದೆ ಎನ್ನಲಾಗುತ್ತಿದೆ.

    ಕಳೆದ ವರ್ಷದ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಗೆ ಸೇರಿಸಿದ ಮೇಲೆ ಎಫ್‍ಎಟಿಎಫ್ ಪಾಕ್‍ಗೆ 27 ಅಂಶಗಳುಳ್ಳ ಕ್ರಿಯಾ ಯೋಜನೆ ಪಟ್ಟಿಯನ್ನು ನೀಡಿತ್ತು. ಹಾಗೆಯೇ ಇದನ್ನು ಪೂರ್ಣಗೊಳಿಸಿದರೆ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಸೂಚಿಸಿತ್ತು. ಚೀನಾದಲ್ಲಿ ನಡೆದ ಸಭೆಯಲ್ಲಿ 27 ಅಂಶಗಳಲ್ಲಿ 18 ಅಂಶಗಳನ್ನು ಇನ್ನೂ ಪಾಕಿಸ್ಥಾನ ಬಾಕಿ ಉಳಿಸಿಕೊಂಡಿತ್ತು. ಅಲ್ಲದೆ ಅಕ್ಟೋಬರಿನಲ್ಲಿ ಎಫ್‍ಎಟಿಎಫ್ ಸಭೆಯಲ್ಲಿ ನಡೆಯುವ ವೋಟಿಂಗ್‍ನಲ್ಲಿ 36 ಮತದಲ್ಲಿ ಕನಿಷ್ಠ 15 ಮತ ಇಸ್ಲಾಮಾಬಾದ್ ಪಡೆದರೆ ಬೂದು ಪಟ್ಟಿಯಿಂದ ಅದನ್ನು ಮುಕ್ತಗೊಳಿಸಲಾಗುತ್ತದೆ ಎಂದು ಎಫ್‍ಎಟಿಎಫ್ ತಿಳಿಸಿತ್ತು.

    ಬೂದು ಪಟ್ಟಿಯಲ್ಲಿ (ಗ್ರೇ ಲಿಸ್ಟ್) ಪಾಕಿಸ್ತಾನ ಮುಂದುವರಿಯುತ್ತಿರುವುದರಿಂದ ವಾರ್ಷಿಕವಾಗಿ 68 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ವಿದೇಶಾಂಗ ಸಚಿವ ಮೆಹಮ್ಮೂದ್ ಖುರೇಷಿ ತಿಳಿಸಿದ್ದಾರೆ. ಈಗ ಭಾರತ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಹರಸಹಾಸ ಪಡುತ್ತಿದೆ. ಇದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಬಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರಿದ್ದೇ ಆದಲ್ಲಿ ನಮಗೆ ಭಾರೀ ನಷ್ಟವಾಗಲಿದೆ ಎಂದು ತಿಳಿಸಿದ್ದರು.

    ಆಗಿದ್ದು ಏನು?
    ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.

    ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

    1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ. ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ 27 ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಏನಿದು ಗ್ರೇ ಲಿಸ್ಟ್?
    ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.

    ಏನಿದು ಕಪ್ಪು ಪಟ್ಟಿ?
    ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

    ಪಾಕಿಸ್ತಾನಕ್ಕೆ ಹೊಸದೆನಲ್ಲ:
    ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.

  • ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    – ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡುವುದರಿಂದ ಅಭಿವೃದ್ಧಿಯಾಗಲ್ಲ

    ಹುಬ್ಬಳ್ಳಿ: ಸಿಎಂ ಗ್ರಾಮ ವಾಸ್ತವ್ಯ ಮಾಡಿ ಕೇವಲ ಅರ್ಜಿ ತೆಗೆದುಕೊಂಡು ಬಂದರೆ ಅಭಿವೃದ್ಧಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾಡೋ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿದರೆ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದಾರೆ.

    ಒಂದು ಗ್ರಾಮಕ್ಕೆ ಹೋಗಿ ಒಂದು ದಿನ ಇದ್ದು ಕೇವಲ ಅರ್ಜಿಗಳನ್ನು ತೆಗೆದುಕೊಂಡು ಬಂದರೆ ಏನ್ ಅಭಿವೃದ್ಧಿ ಆಗತ್ತೆ, ಅದು ಅಧಿಕಾರಿಗಳು ಮಾಡೋ ಕೆಲಸ. ಮೊದಲು ಸಿಎಂ ಕಟ್ಟುನಿಟ್ಟಿನ ಆಡಳಿತ ನಡೆಸಲಿ. ತಮ್ಮಲ್ಲಿನ ಒಳ ಜಗಳವನ್ನು ಬಗೆಹರಿಸಲಿ. ಅದು ಬಿಟ್ಟು ಗ್ರಾಮ ವಾಸ್ತವ್ಯ ಎಂದು ನಾಟಕ ಮಾಡಿದರೆ ಏನು ಅಭಿವೃದ್ಧಿ ಆಗಲ್ಲ ಎಂದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಮಾತನಾಡಿ, ಈ ಯೋಗ ಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಭಾರತದ ಪ್ರಧಾನಿ ಮೋದಿ ಅವರು ಕಾರಣ. 2015 ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದು ಮೋದಿ ಅವರು ಇದಕ್ಕೆ ಪ್ರಪಂಚದ 170 ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಅದ್ದರಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ತಿಳಿಯಿರಿ

    ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ತಿಳಿಯಿರಿ

    ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಯೋಗ ಎಂಬುದು ಬರಿ ವಿದ್ಯೆಯಲ್ಲ. ಅದು ಭಾರತದಲ್ಲಿ ಹುಟ್ಟಿರುವ ಜಾಗತೀಕ ವಿದ್ಯೆಯಾಗಿದೆ. ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ವಿಶ್ವ ಸಂಸ್ಥೆಯು ಘೋಷಿಸಿದೆ.

    ಯೋಗ ದಿನದ ಅಂಗವಾಗಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನ ನೂತನ ಇತಿಹಾಸ ದಾಖಲಿಸಲು ಸಜ್ಜಾದ್ದು, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಂಚಿಯಲ್ಲಿ ಸಾವಿರಾರು ಜನರೊಂದಿಗೆ ಯೋಗ ಪ್ರದರ್ಶಿಸಿದ್ದಾರೆ. ರಾಂಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

    ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ. ಪ್ರತಿವರ್ಷದ ಯೋಗದ ಆಚರಣೆಯು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ಎಲ್ಲಾ ರಾಷ್ಟ್ರ್ರಗಳ ಜನರಿಂದ ಆಚರಿಸಲ್ಪಡುವ ದಿನವಾಗಿದೆ. 2014 ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪವನ್ನು ಮಂಡಿಸಿದ್ದರು.

    ಯೋಗದ ಮಹತ್ವ
    ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

    ಇತಿಹಾಸ:
    ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21ನೇ ದಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

    ಜೂನ್21 ರಂದೇ ಯೋಗದಿನಾಚರಣೆ ಏಕೆ?
    ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

    ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.

    ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

    ಆಧ್ಯಾತ್ಮಿಕ ಹಿನ್ನೆಲೆ:
    ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ದಿನವನ್ನು ಉಪನ್ಯಾಸ ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಶಿವ ದೇವರು ಯೋಗದ ಆದಿ ಗುರುವಾದ ದಿನವೂ ಹೌದು. ಕೆಲವು ಇತಿಹಾಸಕಾರರು ಶಿವನನ್ನು ಯೋಗದ ಪಿತಾಮಹ ಎನ್ನುತ್ತಾರೆ. ಇನ್ನೂ ಕೆಲವರು ಪತಂಜಲಿ ಆಧುನಿಕ ಯೋಗದ ಪಿತಾಮಹ ಎಂದು ಹೇಳುತ್ತಾರೆ.

    ಆಚರಣೆ:
    2015 ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರೀ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗ ಆಸನಗಳನ್ನು ಅಭ್ಯಸಿಸಲಾಯಿತು.

    2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆಮಾಡಿತು.ರಾಜಪಥದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಹೊಸ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿತು. ಮೊದಲನೆಯದಾಗಿ ವಿಶ್ವದ ಅತಿ ದೊಡ್ಡ ಯೋಗ ಕ್ಲಾಸ್‍ನಲ್ಲಿ ದಾಖಲೆ ಸಂಖ್ಯೆಯ 35,985 ಮಂದಿ ಭಾಗವಹಿಸಿದ್ದರು. ಎರಡನೇಯದಾಗಿ ಗರಿಷ್ಠ ಸಂಖ್ಯೆಯ ರಾಷ್ಟ್ರೀಯತೆಯನ್ನು (84) ಹೊಂದಿರುವ ವ್ಯಕ್ತಿಗಳು ಭಾಗವಹಿಸಿದ್ದರು.

    2017ರಲ್ಲಿ ಲಕ್ನೊದಲ್ಲಿ 51,000 ಸ್ಪರ್ಧಿಗಳೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವದಾಖಲೆ ಬರೆದಿದೆ. ನಗರದ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸುವುದರ ಮೂಲಕ ದೇಶದಲ್ಲೇ ಬೃಹತ್ ಮಟ್ಟದ ಯೋಗ ದಿನಾಚರಣೆ ಅದಾಗಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವಿಶ್ವಸಂಸ್ಥೆಯಲ್ಲಿ ಮತ್ತೆ ಚೀನಾ ಅಡ್ಡಗಾಲು: ಕಾಂಗ್ರೆಸ್, ಬಿಜೆಪಿಯಲ್ಲಿ ಯಾರ ವಾದ ಸರಿ?

    ವಿಶ್ವಸಂಸ್ಥೆಯಲ್ಲಿ ಮತ್ತೆ ಚೀನಾ ಅಡ್ಡಗಾಲು: ಕಾಂಗ್ರೆಸ್, ಬಿಜೆಪಿಯಲ್ಲಿ ಯಾರ ವಾದ ಸರಿ?

    – ಚೀನಾ ಭಯದಿಂದ ಮೋದಿ ಮಾತನಾಡಿಲ್ಲ – ರಾಹುಲ್
    – ಚೀನಾಗೆ ಭದ್ರತಾ ಮಂಡಳಿಯಲ್ಲಿ ಸ್ಥಾನ ನೀಡಿದ್ದೆ ನೆಹರು – ಬಿಜೆಪಿ

    ನವದೆಹಲಿ: ವಿಶ್ವಂಸ್ಥೆಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲು ಹಾಕಿದ ನಡೆ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಟ್ವಿಟ್ಟರ್ ಸಮರಕ್ಕೆ ಕಾರಣವಾಗಿದೆ.

    ಭಾರತದ ನಡೆಗೆ ಚೀನಾ ವಿರೋಧ ಮಾಡಿದ್ದರೂ ಕೂಡ ದುರ್ಬಲ ಪ್ರಧಾನಿ ನರೇಂದ್ರ ಮೋದಿ ಅವರು ಭಯದಿಂದ ಇದುವರೆಗೂ ಒಂದು ಮಾತನಾಡಿಲ್ಲ ಎಂದು ರಾಹುಲ್ ಟೀಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟಿಗೆ ಬಿಜೆಪಿ ತಿರುಗೇಟು ನೀಡಿದ್ದು, ರಾಹುಲ್‍ರ ಈ ಹೇಳಿಕೆ ಪಾಕಿಸ್ತಾನದಲ್ಲಿ ಹೆಡ್ ಲೈನ್ ಆಗಲಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

    ರಾಹುಲ್ ಗಾಂಧಿ ಅವರ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ದೇಶದ ವಿದೇಶಾಂಗ ನೀತಿ ಟ್ವಿಟ್ಟರ್ ನಲ್ಲಿ ನಿರ್ಧರಿಸುವಂತದಲ್ಲ ಎಂದಿದ್ದಾರೆ. ಅಲ್ಲದೇ ಚೀನಾ ನಡೆಯಿಂದ ದೇಶ ನೋವು ಅನುಭವಿಸುತ್ತಿರುವ ವೇಳೆ ರಾಹುಲ್ ಏಕೆ ಸಂಭ್ರಮದಲ್ಲಿದ್ದಾರೆ? ಏಕೆಂದರೆ ಆ ಮೂಲಕ ಪಾಕಿಸ್ತಾನದಲ್ಲಿ ಹೆಡ್ ಲೈನ್ ಆಗಲಿಕ್ಕೆ ಎಂದು ತಿರುಗೇಟು ನೀಡಿದ್ದಾರೆ.

    ಚೀನಾಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸ್ಥಾನ ಪಡೆಯಲು ಯಾರು ಬೆಂಬಲಿಸಿದ್ದರು ಎಂದು ಕೂಡ ರವಿಶಂಕರ್ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶಶಿತರೂರ್ ಅವರ ಪುಸ್ತಕದ ಅಂಶಗಳನ್ನು ಉಲ್ಲೇಖ ಮಾಡಿ, ಹೌದು ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ನೀಡಲು ಬಯಸಿದ್ದರೆ ಆದರೆ ನೆಹರು ನಿರಾಕರಿಸಿದ್ದರು. 1953 ರಲ್ಲಿ ಈ ಸ್ಥಾನವನ್ನು ಚೀನಾಗೆ ನೀಡಲಾಗಿದೆ ಎಂಬುದನ್ನು ನೆನಪಿಸಿದ್ದಾರೆ.

    ಸದ್ಯ ಚೀನಾ ನಡೆ ಭಾರತ ವಿಶ್ವಸಂಸ್ಥೆಯಲ್ಲಿ ಏಕೆ ಶಾಶ್ವತ ಸದಸ್ಯತ್ವ ಸ್ಥಾನ ಪಡೆಯಲಿಲ್ಲ ಎಂಬ ಬಗ್ಗೆ ಚರ್ಚೆ ನಡೆಯಲು ಕಾರಣವಾಗಿದೆ. ಹಲವು ಸಮಯದಿಂದ ಭಾರತ ಯುಎನ್ ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯತ್ವ ಸ್ಥಾನ ಪಡೆಯಲು ಚೀನಾ ಹೇಗೆ ಅಡ್ಡಗಾಲು ಹಾಕುತ್ತಿದೆ ಎಂಬುವುನ್ನು ಬಿಜೆಪಿ ವಿವರಿಸಿ ನೆಹರೂ ವಿದೇಶಾಂಗ ನೀತಿಯತ್ತ ಕೈ ಮಾಡಿ ತೋರಿಸಿದೆ.

    ರಾಹುಲ್ ಟೀಕೆಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿರುವ ಬಿಜೆಪಿ, ನೀವು ಚೀನಾ ಸಂಸ್ಥೆಯೊಂದಿಗೆ ತುಂಬಾ ಹತ್ತಿರದಲ್ಲಿದ್ದರೆ ನಿಮ್ಮ ಆ ಸಂಬಂಧ ಮೂಲಕ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವನೆಯನ್ನು ಅಂಗೀಕಾರ ಪಡೆಯಲು ಬಳಸಿಕೊಳ್ಳಿ ಎಂದು ಟಾಂಗ್ ನೀಡಿದೆ. ಈ ಮೂಲಕ ಹಿಂದೆ ರಾಹುಲ್ ಚೀನಾದ ಅಂಬಾಸಿಡರ್ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನೆನಪಿಸಿದೆ.

    ಇಂದು ಬೆಳಗ್ಗೆ ಮೋದಿ ಅವರನ್ನು ಟೀಕೆ ಮಾಡಿದ್ದ ರಾಹುಲ್ ಗಾಂಧಿ, ನಮೋ ಚೀನಾ ಡಿಪ್ಲೋಮಸಿ 1.ಗುಜರಾತಿನಲ್ಲಿ ಚೀನಾ ಅಧ್ಯಕ್ಷರ ಜೊತೆ ಜೋಕಾಲಿ 2.ದಿಲ್ಲಿಯಲ್ಲಿ ಅಪ್ಪುಗೆ 3. ಚೀನಾದಲ್ಲಿ ತಲೆ ಬಾಗುವುದು ಎಂದು ಟ್ವೀಟ್ ಮಾಡಿದ್ದರು. ಅಲ್ಲದೇ ದುರ್ಬಲ ಮೋದಿ ಚೀನಾ ಅಧ್ಯಕ್ಷರಿಗೆ ಹೆದರಿದ್ದಾರೆ. ಇದುವರೆಗೂ ಒಂದು ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜಾಗತಿಕ ಉಗ್ರ ಪಟ್ಟಿಗೆ ಮತ್ತೆ ಅಡ್ಡಿ – ಚೀನಾಗೆ ಅಮೆರಿಕ ಎಚ್ಚರಿಕೆ

    ಜಾಗತಿಕ ಉಗ್ರ ಪಟ್ಟಿಗೆ ಮತ್ತೆ ಅಡ್ಡಿ – ಚೀನಾಗೆ ಅಮೆರಿಕ ಎಚ್ಚರಿಕೆ

    – ಎಲ್ಲದಕ್ಕೂ ತಡೆ ಒಡ್ಡಿದ್ರೆ ಬಲವಂತವಾಗಿ ಕ್ರಮ
    – ಚೀನಾ ನಡೆಗೆ ಭದ್ರತಾ ಮಂಡಳಿಯ ಸದಸ್ಯರಿಂದ ವಿರೋಧ

    ವಾಷಿಂಗ್ಟನ್: ಪಾಕಿಸ್ತಾನ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ, ಭಯೋತ್ಪಾದಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ 4ನೇ ಬಾರಿ ಅಡ್ಡಗಾಲು ಹಾಕಿದ್ದು, ಚೀನಾದ ಈ ನಡೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

    ಪಾಕಿಸ್ತಾನದ ಉಗ್ರವಾದಕ್ಕೆ ಬೆಂಬಲ ನೀಡುವ ಕುತಂತ್ರಿ ಬುದ್ದಿಯನ್ನು ಚೀನಾ ಮತ್ತೊಮ್ಮೆ ಪ್ರದರ್ಶನ ಮಾಡಿದ್ದು, ಮಸೂದ್ ಅಜರ್ ನನ್ನು ರಕ್ಷಣೆ ಮಾಡುತ್ತಲೇ ಬಂದಿದೆ. ಇದರ ಬೆನ್ನಲ್ಲೇ ಭದ್ರತಾ ಮಂಡಳಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವನ್ನು ಮುಂದುವರಿಸಿದರೆ ಬಲವಂತವಾಗಿ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಅಮೆರಿಕದ ರಾಯಭಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್ ನೇತ್ರತ್ವದ ಜೈಷೆ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಇದು ತನ್ನ ಕೃತ್ಯ ಎಂದು ಹೊಣೆ ಹೊತ್ತುಕೊಂಡಿತ್ತು. ಪರಿಣಾಮ ಭಾರತದ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಫೆ.27 ರಂದು ಪ್ರಸ್ತಾವನೆ ರವಾನಿಸಿದ್ದವು. ಆದರೆ ತಾಂತ್ರಿಕ ಕಾರಣ ನೀಡಿ ಚೀನಾ ಈ ಪ್ರಸ್ತಾವನೆಗೆ ತಡೆ ನೀಡಿದೆ.

    ಜೈಷ್ ಇ ಮೊಹಮ್ಮದ್ ಸಂಘಟನೆ ತನ್ನದೇ ಕೃತ್ಯ ಎಂದು ಒಪ್ಪಿಕೊಂಡ ಬಳಿಕವೂ ಕೂಡ ಚೀನಾ ಅಜರ್‍ಗೆ ಬೆಂಬಲ ನೀಡಿರುವುದರ ವಿರುದ್ಧ ಭದ್ರತಾ ಮಂಡಳಿ ಸದಸ್ಯರು ಟೀಕೆ ಮಾಡಿದ್ದಾರೆ.

    ಅಂದಹಾಗೇ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಚೀನಾ 4ನೇ ಬಾರಿಗೆ ಅಡ್ಡ ಬಂದಿದೆ. ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದರೆ ಆತನ ಆಸ್ತಿ, ಪ್ರಯಾಣದ ಮೇಲೆ ನಿರ್ಬಂಧ ಬೀಳಲಿದೆ. ಆತನ ಇಡೀ ಆಸ್ತಿ ಸರ್ಕಾರ ಪಾಲಾಗುತ್ತದೆ. ಬೇರೆ ಯಾವ ರಾಷ್ಟ್ರಗಳು ಕೂಡ ಆತನಿಗೆ ಹಣ ಸಹಾಯ ನೀಡಲು ಸಾಧ್ಯವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಜೈ ಹಿಂದ್’ ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ

    ‘ಜೈ ಹಿಂದ್’ ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ

    – ಆನ್‍ಲೈನ್ ಪಿಟಿಷನ್ ಸಲ್ಲಿಸಿದ ಪಾಕಿಸ್ತಾನ

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ಏರ್ ಫೋರ್ಸ್ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಬಾಲಿವುಡ್‍ನ ಹಲವು ತಾರೆಯರು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಂತೆ ನಟಿ ಪ್ರಿಯಾಂಕ ಚೋಪ್ರಾ ಕೂಡ ಟ್ವೀಟ್ ಮಾಡಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

    ಸದ್ಯ ಪ್ರಿಯಾಂಕ ಅವರ ಈ ಟ್ವೀಟ್ ಬಗ್ಗೆ ಪಾಕಿಸ್ತಾನ ನೆಟ್ಟಿಗರು ಗರಂ ಆಗಿದ್ದು, ಭಾರತಕ್ಕೆ ಬೆಂಬಲ ನೀಡಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ ಪರಿಣಾಮ ಅಸಮಾಧಾನ ವ್ಯಕ್ತಪಡಿಸಿ ಆನ್‍ಲೈನ್ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ.

    ಪ್ರಿಯಾಂಕ ಅವರ ವಿರುದ್ಧ ಪಾಕ್ ದೂರು ಸಲ್ಲಿಸಲು ಕಾರಣವೂ ಇದ್ದು, ಸದ್ಯ ಪ್ರಿಯಾಂಕ ಯೂನಿಸೆಫ್‍ನ ಸೌಯರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ 2 ದೇಶಗಳ ನಡುವಿನ ಈ ವಿಚಾರದಲ್ಲಿ ಪ್ರಿಯಾಂಕ ಅಂತರ ಕಾಯ್ದುಕೊಳ್ಳಬೇಕಿತ್ತು. ಅಲ್ಲದೇ ಶಾಂತಿ ಕಾಪಾಡಲು ಪ್ರಯತ್ನಿಸಬೇಕಿತ್ತು ಎಂಬುವುದು ಪಾಕಿಸ್ತಾನಿಗರ ಮೊಂಡು
    ವಾದವಾಗಿದೆ.

    ಭಾರತ ಏರ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೆ ಪ್ರಿಯಾಂಕ ಅವರು ಕೂಡ ಟ್ವೀಟ್ ಮಾಡಿದ್ದರು. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುವುದು ಪಾಕ್  ವಾದವಾಗಿದೆ. ಈ ಆನ್ ಲೈನ್ ಅರ್ಜಿಗೆ ಸಾವಿರಾರರು ಮಂದಿ ಸಹಿ ಕೂಡ ಮಾಡಿದ್ದಾರೆ. ಪ್ರಮುಖವಾಗಿ ಯೂನಿಸಿಫ್ ಹ್ಯಾಶ್ ಟ್ಯಾಗ್ ಬಳಿಸಿ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಪಾಕ್ ನೆಟ್ಟಿಗರ ಈ ಆನ್ ಲೈನ್ ಪಿಟಿಷನನ್ನು ಹೇಗೆ ಸ್ವೀಕಾರ ಮಾಡುತ್ತದೆ ಎಂಬುವುದನ್ನು ಕಾದುನೋಡ ಬೇಕಿದೆ.

    ಅಂದಹಾಗೇ ಪ್ರಿಯಾಂಕ ಚೋಪ್ರಾ ಅವರ ಇಬ್ಬರು ಪೋಷಕರು ಕೂಡ ಭಾರತ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಈ ಹಿಂದೆಯೂ ಕೂಡ ಪ್ರಿಯಾಂಕರ ಹಿಂದಿಯವರು ಎಂದು ಗೂಗಲ್ ಮಾಡಿ ಪ್ರಶ್ನಿಸಿದ್ದ ಮಂದಿಗೆ ತಿರುಗೇಟು ನೀಡಿದ್ದ ಅವರು, ಹಿಂದಿ ಎಂದರೆ ಭಾಷೆ ಅಷ್ಟೇ, ನಾನು ಹಿಂದೂ, ಅದು ಧರ್ಮ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಿಂದ ಪರಿಸರ ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ದೂರು ನೀಡಲಿದೆ ಪಾಕ್

    ಭಾರತದಿಂದ ಪರಿಸರ ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ದೂರು ನೀಡಲಿದೆ ಪಾಕ್

    ಇಸ್ಲಾಮಾಬಾದ್: ಭಾರತ ನಮ್ಮ ನೆಲದಲ್ಲಿ ಪರಿಸರ ಭಯೋತ್ಪಾದನೆ ಮಾಡಿದೆ. ಭಾರತದ ಯುದ್ಧ ವಿಮಾನಗಳು ಬಾಂಬ್ ಎಸೆದು ಅರಣ್ಯ ಪರಿಸರವನ್ನು ಹಾಳು ಮಾಡಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ನೀಡಲು ಪಾಕಿಸ್ತಾನ ಮುಂದಾಗಿದೆ.

    ಭಾರತದ ಯುದ್ಧ ವಿಮಾನಗಳು ಅಕ್ರಮವಾಗಿ ನಮ್ಮ ವಾಯುನೆಲೆಯನ್ನು ಬಳಸಿಕೊಂಡು ಬಾಂಬ್ ದಾಳಿ ಮಾಡಿವೆ. ಇದರಿಂದ 15 ಪೈನ್ ಮರಗಳು ನಾಶವಾಗಿದೆ ಎಂದು ಪಾಕಿಸ್ತಾನದ ಆರೋಪಿಸಿದೆ.

    ಹವಾಮಾನ ಬದಲಾವಣೆ ಖಾತೆಯ ಸಚಿವ ಮಲಿಕ್ ಅಮಿನ್ ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಅರಣ್ಯದಲ್ಲಿ ಬಾಂಬ್ ಹಾಕಿದ್ದಾರೆ. ಸರ್ಕಾರ ಈ ಬಾಂಬ್ ದಾಳಿಯಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಿದೆ. ಅಧ್ಯಯನದಿಂದ ಬಂದ ಫಲಿತಾಂಶವನ್ನು ಇಟ್ಟುಕೊಂಡು ವಿಶ್ವಸಂಸ್ಥೆ ಮತ್ತು ಇತರ ಒಕ್ಕೂಟಗಳಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಬಾಲಕೋಟ್ ನಲ್ಲಿ ಜೈಷ್ ಉಗ್ರಗಾಮಿಗಳ ನೆಲೆ ಇಲ್ಲ. ಅರಣ್ಯ ಪ್ರದೇಶದ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನ ಹತ್ಯೆ ಮಾಡಿದೆ ಎಂದು ಭಾರತ ಸುಳ್ಳು ಹೇಳುತ್ತಿದೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

    ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

    ನವದೆಹಲಿ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪಿದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪಾಲಂ ವಾಯುನೆಲೆಯಲ್ಲಿ ಅಂತಿಮ ಸಲ್ಲಿಸಿದ್ದಾರೆ.

    ಜಮ್ಮುವಿನಿಂದ ಹೋರಾಟ ಯೋಧರ ಪಾರ್ಥಿಕ ಶರೀರಗಳು ನವದೆಹಲಿಗೆ ತಲುಪಿದ್ದು, ಪ್ರಧಾನಿ ಮೋದಿ ಅವರು 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ವೇಳೆ ಸೇನಾ ಬ್ಯಾಂಡ್‍ಗಳ ಮೂಲಕವೂ ನಮನ ಸಲ್ಲಿಸಲಾಯಿತು. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಹಾಜರಿದ್ದರು.

    ನವದೆಹಲಿಯಲ್ಲಿ ಯೋಧರಿಗೆ ಅಂತಿಮ ಸಲ್ಲಿಸದ ಬಳಿಕ ಅಲ್ಲಿಂದ ಎರಡು ವಿಶೇಷ ವಿಮಾನಗಳಲ್ಲಿ ದಾಳಿಯಲ್ಲಿ ವೀರ ಮರಣ ಹೊಂದಿದ ಕರ್ನಾಟಕದ ಸೈನಿಕರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನ ಯೋಧರ ಪಾರ್ಥಿವ ಶರೀರಗಳನ್ನು ತವರಿಗೆ ತರಲಾಗುತ್ತದೆ. ದೆಹಲಿಗೆ ಹತ್ತಿರವಿರುವ ಯೋಧರ ಸ್ವಗ್ರಾಮಗಳಿಗೆ ಪಾರ್ಥಿಕ ಶರೀರಗಳನ್ನು ರಸ್ತೆ ಮೂಲಕವೇ ಸಾಗಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

    ದೆಹಲಿಯಿಂದ ಏರ್ ಲಿಫ್ಟ್ ಆದ ಬಳಿಕ ಮಧ್ಯರಾತ್ರಿ 1.30 ರ ವೇಳೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಗುರು ಅವರ ಪಾರ್ಥಿವ ಶರೀರ ತಲುಪುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಸೇನಾ ಟ್ರಕ್ ಮೂಲಕ ಮಂಡ್ಯದ ಕೆಎಂ ದೊಡ್ಡಿಗೆ ತರಲಾಗುತ್ತದೆ. ಯೋಧ ಗುರು ಅವರ ಸ್ವಗ್ರಾಮದಲ್ಲಿ ನಾಳೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv