Tag: UNGA

  • ಮಾನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಭಾರತ ಹಿಂಜರಿಯಲ್ಲ- ಚೀನಾ, ಪಾಕ್‍ಗೆ ಮೋದಿ ಟಾಂಗ್

    ಮಾನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಭಾರತ ಹಿಂಜರಿಯಲ್ಲ- ಚೀನಾ, ಪಾಕ್‍ಗೆ ಮೋದಿ ಟಾಂಗ್

    ನವದೆಹಲಿ: ಭಾರತ ವಸುದೈವ ಕುಟುಂಬ ಎಂಬ ನಿಯಮ ಪಾಲಿಸುತ್ತದೆ. ಹೀಗಾಗಿ ಇಡೀ ವಿಶ್ವವನ್ನೇ ಒಂದು ಕುಟುಂಬವೆಂದು ಪರಿಗಣಿಸಿದೆ. ಶಾಂತಿಯನ್ನು ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಮನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವೈರಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಶ್ವಸಂಸ್ಥೆಯ 75ನೇ ಸಾಮಾನ್ಯ ಅಧಿವೇಶನ(ಯುಎನ್‍ಜಿಎ)ದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ನಾವೂ ಒಬ್ಬರು ಎಂಬುದರ ಕುರಿತು ಭಾರತಕ್ಕೆ ಹೆಮ್ಮೆ ಇದೆ. ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದ 130 ಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ಜಾಗತಿಕ ವೇದಿಕೆಗೆ ಬಂದಿದ್ದೇನೆ. ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವ ಪ್ರಕ್ರಿಯೆಗಾಗಿ ಭಾರತದ ಜನ ತುಂಬಾ ಸಮಯದಿಂದ ಕಾಯುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು.

    ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಮಾಡಿದ್ದೇವೆ. ಹಲವು ನಾಕ್ಷತ್ರಿಕ ಸಾಧನೆಗಳನ್ನು ನೋಡಿದ್ದೇವೆ. ಆದರೆ ಇದೇ ಸಮಯದಲ್ಲಿ ವಿಶ್ವಸಂಸ್ಥೆಯ ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವಿದೆ. ಕಳೆದ 8-9 ತಿಂಗಳಿಂದ ಇಡೀ ಜಗತ್ತು ಕೊರೊನಾ ವೈರಸ್ ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಜಂಟಿ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ? ಇದರ ಪರಿಣಾಮಕಾರಿ ಪ್ರತಿಕ್ರಿಯೆ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವುದನ್ನು ಭಾರತ ತುಂಬಾ ಸಮಯದಿಂದ ಕಾಯುತ್ತಿದೆ. ಈ ಸುಧಾರಣಾ ಪ್ರಕ್ರಿಯೆ ಕುರಿತು ಯಾವಾಗ ತಾರ್ಕಿಕ ತೀರ್ಮಾನ ಕೈಗೊಳ್ಳುತ್ತದೆ ಎಂದು ಭಾರತದ ಜನತೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ವಿಭಾಗದಿಂದ ಭಾರತವನ್ನು ಇನ್ನೂ ಎಷ್ಟು ದಿನ ದೂರವಿಡಲಾಗುವುದು ಎಂದು ಶಾಶ್ವತ ಸದಸ್ಯತ್ವದ ಕುರಿತು ಮೋದಿ ಗುಡುಗಿದ್ದಾರೆ.

    ನಾವು ಬಲಶಾಲಿಯಾಗಿದ್ದಾಗ ಎಂದಿಗೂ ಜಗತ್ತಿಗೆ ಬೆದರಿಕೆ ಹಾಕಿಲ್ಲ. ಅದೇ ರೀತಿ ದುರ್ಬಲರಾಗಿದ್ದಾಗ ಸಹ ಎಂದೂ ವಿಶ್ವಕ್ಕೆ ಹೊರೆಯಾಗಿಲ್ಲ. ಒಂದು ದೇಶದಲ್ಲಿ ಆಗುತ್ತಿರುವ ಪರಿವರ್ತನೆ, ಬದಲಾವಣೆಗಳು ವಿಶ್ವದ ಬಹುಪಾಲು ಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶ ಎಷ್ಟು ಸಮಯ ಕಾಯಬೇಕು. ಭಾರತವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಧೈರ್ಯಶಾಲಿ ಸೈನಿಕರನ್ನು ಕಳೆದುಕೊಂಡಿದೆ. ಇಂದು ಪ್ರತಿಯೊಬ್ಬ ಭಾರತೀಯನು ಯುಎನ್‍ಗೆ ಭಾರತದ ಕೊಡುಗೆಯನ್ನು ನೋಡಿದಾಗ ವಿಶ್ವಸಂಸ್ಥೆಯಲ್ಲಿ ಭಾರತದ ವಿಸ್ತೃತ ಪಾತ್ರವನ್ನು ಆಶಿಸುತ್ತಿದ್ದಾನೆ ಎಂದು ಮೋದಿ ಹೇಳಿದ್ದಾರೆ.

  • ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ: ಗಂಗೂಲಿ ತಿರುಗೇಟು

    ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ: ಗಂಗೂಲಿ ತಿರುಗೇಟು

    ನವದೆಹಲಿ: ನ್ಯೂಯಾರ್ಕ್ ನಗರದಲ್ಲಿ ಇತ್ತೀಚೆಗೆ ನಡೆದ 47ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಯುದ್ಧೋನ್ಮಾದ ಭಾಷಣ ಮಾಡಿದ್ದರು. ಈ ವಿಚಾರವಾಗಿ ಇಮ್ರಾನ್ ಖಾನ್ ಅವರಿಗೆ ಭಾರತ ತಂಡದ ಕ್ರಿಕೆಟ್ ಆಟಗಾರರು ಛೀಮಾರಿ ಹಾಕುತ್ತಿದ್ದಾರೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು, ಇಮ್ರಾನ್ ಖಾನ್ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಅವಮಾನಕ್ಕೊಳಗಾಗಿದ್ದ ಇಮ್ರಾನ್ ಖಾನ್, ತಮ್ಮನ್ನು ತಾವೇ ಅವಮಾನಿಸಿಕೊಳ್ಳಲು ಮತ್ತೆ ಕೆಲವು ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

    ಸೆಹ್ವಾಗ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಈ ವಿಡಿಯೋ ನೋಡಿ ನನಗೆ ಶಾಕ್ ಆಯ್ತು. ಇಡೀ ಪ್ರಪಂಚವೇ ಶಾಂತಿಯನ್ನು ಬಯಸುತ್ತಿದೆ. ಆದರೆ ಪಾಕಿಸ್ತಾನದ ಪ್ರಧಾನಿ ಹೀಗೆ ಮಾತನಾಡುವುದು ಸರಿಯಲ್ಲ. ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ ಎಂದು ಹೇಳಿದ್ದಾರೆ.

    ಪಾಕ್ ಪ್ರಧಾನಿ ಮಾತಿಗೆ ಹರ್ಭಜನ್ ಸಿಂಗ್, ಮೊಹಮ್ಮದ್ ಶಮಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಬೇಕಿರುವುದು ಅಭಿವೃದ್ಧಿ ಕುರಿತು ಮಾತನಾಡುವ ನಾಯಕ, ಯುದ್ಧವನ್ನ ಕುರಿತು ಮಾತನಾಡುವ ವ್ಯಕ್ತಿಯಲ್ಲ ಎಂದಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಇಮ್ರಾನ್ ಖಾನ್ ಅಮೆರಿಕದ ಮಾಧ್ಯಮಗಳ ಜೊತೆಗೆ ಮಾತನಾಡುವಾಗ, ಇಲ್ಲಿಗಿಂತ ಚೀನಾದಲ್ಲಿ ಉತ್ತಮವಾಗಿ ಅಭಿವೃದ್ಧಿಯಾಗಿದೆ ಎಂದು ಅಮೆರಿಕವನ್ನು ಅಣಕಿಸಿದ್ದರು. ಇದರಿಂದ ಕೋಪಗೊಂಡ ಟಿವಿ ನಿರೂಪಕ, ನೀವು ಪಾಕಿಸ್ತಾನದ ಪ್ರಧಾನಿಯಂತೆ ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದ್ದರು.

    ಇಮ್ರಾನ್ ಖಾನ್ ಯುದ್ಧೋನ್ಮಾದ ಭಾಷಣದ ಬಗ್ಗೆ ಕಿಡಿಕಾರಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಮಹಾತ್ಮ ಗಾಂಧೀಜಿ ತಮ್ಮ ಇಡೀ ಜೀವನವನ್ನು ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ಸಂದೇಶ ರವಾನಿಸಲು ಮುಡಿಪಿಟ್ಟರು. ಆದರೆ ಇಮ್ರಾನ್ ಖಾನ್ ಪ್ರಮುಖ ವೇದಿಕೆಯಲ್ಲೇ ಬೆದರಿಕೆ ಹಾಕಿ ದ್ವೇಷದ ಮಾತುಗಳನ್ನು ಆಡುತ್ತಾರೆ. ಪಾಕಿಸ್ತಾನಕ್ಕೆ ಅಭಿವೃದ್ಧಿ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತನಾಡುವ ನಾಯಕ ಬೇಕೆ ಹೊರತು, ಯುದ್ಧ ಮತ್ತು ಭಯೋತ್ಪಾದನೆಯನ್ನು ಆಶ್ರಯಿಸುವಂತವರಲ್ಲ ಎಂದು ಟ್ವೀಟ್ ಮಾಡಿದ್ದರು.

    ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ಇಮ್ರಾನ್ ಖಾನ್ ಭಾಷಣದ ಬಗ್ಗೆ ಗುಡುಗಿದ್ದರು. ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಅವರ ಮಾತುಗಳು ಭಯೋತ್ಪಾದಕರಿಗೆ ಸ್ಫೂರ್ತಿ ನೀಡುವಂತಿತ್ತು. ಕ್ರಿಕೆಟಿಗ-ರಾಜಕಾರಣಿ, ಕ್ರೀಡಾಪಟುಗಳು ಉತ್ತಮ ನಡವಳಿಕೆ ಮತ್ತು ಪಾತ್ರದ ಶಕ್ತಿಯ ಮಾದರಿಗಳಾಗಿರಬೇಕು. ಸ್ವತಃ ಮಾಜಿ ಕ್ರಿಕೆಟಿಗನಾಗಿದ್ದ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶಪ್ರಾಯ ಎಂದು ತರಾಟೆಗೆ ತೆಗೆದುಕೊಂಡಿದ್ದರು.

  • ಯುದ್ಧದ ಬದಲು ಬುದ್ಧನನ್ನು ವಿಶ್ವಕ್ಕೆ ನೀಡಿದ್ದೇವೆ: ಮೋದಿ

    ಯುದ್ಧದ ಬದಲು ಬುದ್ಧನನ್ನು ವಿಶ್ವಕ್ಕೆ ನೀಡಿದ್ದೇವೆ: ಮೋದಿ

    – ವಿಶ್ವಸಂಸ್ಥೆಯಲ್ಲೂ ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮಂತ್ರ

    ನ್ಯೂಯಾರ್ಕ್: ಭಾರತವು ವಿಶ್ವಕ್ಕೆ ಯುದ್ಧದ ಬದಲು ಬುದ್ಧನನ್ನು ಕೊಡುಗೆ ನೀಡಿ, ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 130 ಕೋಟಿ ಭಾರತೀಯರ ಪ್ರತಿನಿಧಿಯಾಗಿ ಮಾತನಾಡುತ್ತಿರುವೆ. ಭಾರತವು ಅತ್ಯಂತ ಪುರಾತನ ಶ್ರೀಮಂತಿಕೆಯ ನೆಲವಾಗಿದೆ. ನಾವು ಸದಾ ಶಾಂತಿ-ಸೌಹಾರ್ದತೆಗೆ ಒತ್ತು ಕೊಡುತ್ತೇವೆ. ಜಾಗತಿಕ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧ ಬಯಸುತ್ತಿದ್ದೇವೆ. ನಾವು ಬುದ್ಧರನ್ನು ಪ್ರತಿಪಾದಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ಹೇಳಿದರು.

    ಭಯೋತ್ಪಾದನೆ ಮಟ್ಟ ಹಾಕಲು ಪ್ರತಿಯೊಂದು ದೇಶವೂ ಕೈ ಜೋಡಿಸಬೇಕು. ಸದಾ ಶಾಂತಿಮಂತ್ರವನ್ನೇ ಜಪಿಸುವ ಭಾರತವು ಈಗಲೂ ಅದನ್ನೇ ಮುಂದುವರಿಸಿದೆ. ಆದರೆ ಭಯೋತ್ಪಾದನೆ ಹುಟ್ಟಡಗಿಸಲು ಮುಂದಾಗಿದೆ. ಇದು ಕೇವಲ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಅದು ಮನುಕುಲಕ್ಕೆ ಸವಾಲಾಗಿದೆ. ಆದ್ದರಿಂದ ಮಾನವೀಯ ಕಾರಣಗಳಿಗಾದರೂ ಭಯೋತ್ಪಾದನೆ ಮಟ್ಟಹಾಕಲು ವಿಶ್ವವೇ ಒಗ್ಗಟ್ಟಾಗಬೇಕು ಎಂದರು.

    ಮಹಾತ್ಮ ಗಾಂಧೀಜಿ ಅವರ ಅಹಿಂಸಾ ವಾದ, ಸತ್ಯ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ದೇಶ ಅಭಿವೃದ್ಧಿ ಹಾಗೂ ಪ್ರಗತಿಗೆ ಶಾಂತಿಯು ಪೂರಕವಾಗಿದೆ. ಭಾರತವು ಶರವೇಗದಲ್ಲಿ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ನೋಡುತ್ತಿದೆ. ಇಡೀ ಜಾಗತಿಕ ಸಮುದಾಯವನ್ನು ಉತ್ತೇಜಿಸುವುದಕ್ಕೆ ಭಾರತ ಮಹತ್ವಾಕಾಂಕ್ಷಿ ಯೋಜನೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮೋದಿ ಹೇಳಿದರು.

    ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದ ಮೂಲಕ ಭಾರತವು ಅಭಿವೃದ್ಧಿ ಹೊಂದುವುದು ಸಾಧ್ಯವಾಗಿದೆ. ಕಳೆದ ಐದು ವರ್ಷದಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಭಾರತ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಜನಭಾಗಿಧಾರಿಯೊಂದಿಗೆ ಜನಕಲ್ಯಾಣ ನಮ್ಮ ಧೋರಣೆ, ಸಿದ್ಧಾಂತ ಎಂದು ಮೋದಿ ತಿಳಿಸಿದರು.