Tag: Ukraine

  • ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಹೈದರಾಬಾದ್: ಉಕ್ರೇನ್ ವಧು ಜೊತೆ ಹೈದರಾಬಾದ್ ವರ ಮದುವೆಯಾಗಿದ್ದಾರೆ. ಆರಕ್ಷತೆ ಸಮಾರಂಭದ ವೇಳೆ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲಿ ಹರಿದಾಡುತ್ತಿದೆ.

    ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್‍ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‍ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು. ಹೀಗಾಗಿ ವಧುವಿನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಪ್ರತೀಕ್ ಪೋಷಕರು, ಆಕೆಗೆ ಮಾನಸಿಕವಾಗಿ ಬೆಂಬಲ ನೀಡಿದರು.

    ಇತ್ತೀಚೆಗೆ ಹೈದರಾಬಾದ್‍ನಲ್ಲಿ ಉಕ್ರೇನಿಯನ್ ವಧು ಲ್ಯುಬೊವ್ ಮತ್ತು ಹೈದರಬಾದ್‍ನ ವರ ಪ್ರತೀಕ್ಷ್ ಮದುವೆ ಆರತಕ್ಷತೆ ಸಮಾರಂಭದಲ್ಲಿ, ಅರ್ಚಕ ರಂಗರಾಜನ್ ಭಾಗವಹಿಸಿದ್ದರು. ದೇವರ ವಿಶೇಷ ವಸ್ತ್ರಗಳನ್ನ ಮತ್ತು ಸ್ಮರಣಿಕೆಗಳನ್ನು ವಧು ವರರಿಗೆ ನೀಡಿ ಅವರಿಗೆ ದೀರ್ಘಾಯುಷ್ಯ ಮತ್ತು ಸಂತಾನಫಲ ಸಿಗಲಿ ಎಂದು ನವವಿವಾಹಿತರನ್ನು ಆಶೀರ್ವದಿಸಿದರು. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಅಂತ್ಯವಾಗಿ, ಕೂಡಲೇ ಶಾಂತಿ ನೆಲೆಸುವಂತಾಗಲಿ ಎಂದು ಚಿಲುಕೂರಿನ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಶೀಘ್ರ ಅಂತ್ಯಗೊಳ್ಳಲಿ ಎಂದು ಚಿಲುಕೂರು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ಯುದ್ಧವು ಪ್ರಪಂಚದಾದ್ಯಂತ ರಕ್ತಪಾತ ಮತ್ತು ದುರಂತಕ್ಕೆ ಕಾರಣವಾಯಿತು. ಕೋವಿಡ್‍ನ ದುರತದಿಂದ ಚೇತರಿಕೊಳ್ಳುವುದಕ್ಕೂ ಮುಂಚೆಯೇ ರಷ್ಯಾ ಉಕ್ರೇನ್ ಮೇಲೆ ದಾಳಿ ಆತಂಕವನ್ನ ಸೃಷ್ಟಿಸಿದೆ ಆದಷ್ಟು ಬೇಗ ಯುದ್ದ ಕೊನೆಯಾಗಲಿ ಎಂದು ಹೇಳಿದ್ದಾರೆ.

  • ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ

    ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಉಕ್ರೇನ್ ಮೇಲೆ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದು, ಅಲ್ಲಿ ಸಿಲುಕಿರುವ ಭಾರತೀಯರು ಆತಂಕ ಹೊರಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಕಣ್ಣೀರಾಕುತ್ತಿದ್ದಾರೆ.

    ಇತ್ತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ, 4 ಕೇಂದ್ರ ಸಚಿವರನ್ನು ನಿಯೋಜಿಸಿ ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಕಳುಹಿಸಿದೆ. ಅದರಂತೆ ಸಚಿವರು ಈಗಾಗಲೇ ಅಲ್ಲಿಗೆ ತೆರಳಿದ್ದು, ಆ ದೇಶದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡುವ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಬುಕಾರೆಸ್ಟ್ ತಲುಪಿದ್ದಾರೆ. ಬುಧವಾರ ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಸಿಂಧಿಯಾ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು, ಚಿಂತೆ ಮಾಡಬೇಡಿ, ನಾನು ಎಲ್ಲರನ್ನು ಮನೆಗೆ ಕಳುಹಿಸುತ್ತೇನೆ ಎಂದು ಧೈರ್ಯ ಹೇಳಿದರು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

    ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಧಿಯಾ, ಇಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ದಾಳಿಯಿಂದ ತತ್ತರಿಸಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಇವರನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ

    ಇತ್ತ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ವಿಕೆ ಸಿಂಗ್ ಪೋಲೆಂಡ್‍ನಲ್ಲಿ ಭಾರತೀಯರ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಉಕ್ರೇನ್ ನೆರೆಯ ನಾಲ್ಕು ದೇಶಗಳಿಂದ ಮೂರು ದಿನಗಳಲ್ಲಿ ಸುಮಾರು 5000 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ. ಆಪರೇಷನ್ ಗಂಗಾ ಮಿಷನ್ ಗೆ ಸಿ 17 ವಿಮಾನ ಬಳಕೆ ಮಾಡಲಾಗುತ್ತಿದೆ. ಇಂದೇ ಎರಡು ದೇಶಗಳಿಗೆ ಸಿ 17 ವಿಮಾನ ತೆರಳು ಸಾಧ್ಯತೆ ಇದ್ದು, ಮುಂದಿನ 3-4 ದಿನಗಳಲ್ಲಿ ಬೃಹತ್ ಕಾರ್ಯಚರಣೆ ನಡೆಯಲಿದೆ. ಕಳೆದ ಆರು ದಿನಗಳಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದ್ದು, ನವೀನ್ ಸಾವಿನ ಬೆನ್ನಲೆ ತುರ್ತು ಕಾರ್ಯಚರಣೆಗೆ ವಿದೇಶಾಂಗ ಇಲಾಖೆ ಇಳಿದಿದೆ.

  • ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ

    ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ

    ವಾಷಿಂಗ್ಟನ್: ರಷ್ಯಾಕ್ಕೆ ವಾಯುಮಾರ್ಗವನ್ನು ಮುಚ್ಚಿದ ಅಮೆರಿಕ, ಪುಟಿನ್ ಅವರ ಕ್ರಮಗಳು ಪೂರ್ವಯೋಜಿತವಾಗಿದ್ದು, ಅಪ್ರಚೋದಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದರು.

    ಮಾಧ್ಯಮಗಳ ಜೊತೆ ಮಾತನಾಡುತ್ತಾ ಉಕ್ರೇನ್‍ನ ಮೇಲೆ ಕೈಗೊಂಡ ಪುಟಿನ್‍ನ ಕ್ರಮಗಳನ್ನು ಖಂಡಿಸಿದರು. ಪುಟಿನ್ ಪಶ್ಚಿಮ ಹಾಗೂ ನ್ಯಾಟೋ ಒಕ್ಕೂಟಗಳು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿರುವುದು ತಪ್ಪು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಪುಟಿನ್ ಯುದ್ಧಭೂಮಿಯಲ್ಲಿ ಲಾಭವನ್ನು ಗಳಿಸಬಹುದು. ಆದರೆ ಭವಿಷ್ಯದಲ್ಲಿ ಅವರು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ: ರಾಹುಲ್ ಗಾಂಧಿ

    ತಮ್ಮ ದೇಶವು ಯುಎಸ್ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸುತ್ತದೆ. ಅಮೆರಿಕ ಹಾಗೂ ನಮ್ಮ ಮಿತ್ರ ರಾಷ್ಟ್ರಗಳು ಒಗ್ಗಟ್ಟಿನ ಬಲದಿಂದ ನ್ಯಾಟೋ ಪ್ರದೇಶದ ಪ್ರತೀ ಇಂಚನ್ನು ರಕ್ಷಿಸುತ್ತಿದೆ. ಉಕ್ರೇನ್‍ನವರು ಧೈರ್ಯದಿಂದ ಹೋರಾಡುತ್ತಿದ್ದಾರೆ ಎಂದರು.

    ಉಕ್ರೇನ್ ನೆಲದಲ್ಲಿ ಅಮೆರಿಕದ ಪಡೆಗಳು ರಷ್ಯಾದೊಂದಿಗೆ ತೊಡಗಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಪಡೆಗಳು ಉಕ್ರೇನ್‍ಗಾಗಿ ಹೋರಾಡುತ್ತಿಲ್ಲ. ಆದರೆ ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಮತ್ತು ಪುಟಿನ್ ಪಶ್ಚಿಮಕ್ಕೆ ಚಲಿಸುವುದನ್ನು ತಡೆಯಲು ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ರಕ್ಷಿಸಲು ಸಿದ್ಧಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಉಕ್ರೇನ್‍ಗೆ ಮುಂದಿನ ಕೆಲವು ದಿನಗಳು, ವಾರಗಳು ಮತ್ತು ತಿಂಗಳುಗಳು ಕಠಿಣವಾಗಿರುತ್ತವೆ. ಪುಟಿನ್ ಕೈವ್ ಅನ್ನು ಟ್ಯಾಂಕ್‍ಗಳೊಂದಿಗೆ ಸುತ್ತಬಹುದು. ಆದರೆ ಅವರು ಎಂದಿಗೂ ಉಕ್ರೇನಿನ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

  • ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ: ರಾಹುಲ್ ಗಾಂಧಿ

    ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ: ರಾಹುಲ್ ಗಾಂಧಿ

    ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದರು.

    ಟ್ವೀಟ್ ಮಾಡಿ, ಉಕ್ರೇನ್‍ನ ಖಾರ್ಕಿವ್‍ನಲ್ಲಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿ ನವೀನ್‍ಗೆ ಸಂತಾಪ ಸೂಚಿಸಿದರು. ಭಾರತೀಯ ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವನ್ನಪ್ಪಿರುವುದು ದುರಂತವಾಗಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ. ಪ್ರತಿ ನಿಮಿಷವೂ ಅಮೂಲ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಜ್ಞಾನಗೌಡರ ಕುಟುಂಬ ಹಾಗೂ ಸ್ನೇಹಿತರಿಗೆ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರವನ್ನು ತ್ವರಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಇದನ್ನೂ ಓದಿ: ಸ್ಮಾರ್ಟ್‍ಫೋನ್, ಟ್ಯಾಬ್ ವಿತರಿಸಲು ಎಸ್‍ಪಿಯಿಂದ ತಡೆ: ಯೋಗಿ ಕಿಡಿ

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದು, ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಆದಷ್ಟು ಬೇಗ ವಾಪಸ್ ಕರೆತರುವಂತೆ ಸರ್ಕಾರವನ್ನು ಕೋರಿದ್ದಾರೆ.

    ಉಕ್ರೇನ್‍ನಲ್ಲಿ ಹಾವೇರಿ ಮೂಲದ ನವೀನ್ ಮೃತಪಟ್ಟಿದ್ದಾರೆ. 4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಒಂದು ವಾರದಿಂದ ಬಂಕರ್‌ನಲ್ಲಿದ್ದರು. ಆದರೆ ನಿನ್ನೆ ರೈಲ್ವೆ ಸ್ಟೇಷನ್ ಮೂಲಕ ಹೊರಗೆ ಬಂದಿದ್ದಾನೆ. ಏರ್‌ಸ್ಟ್ರೈಕ್ ವೇಳೆ ಶೆಲ್ ಬಡಿದು ಅವರು ಸಾವನ್ನಪ್ಪಿದ್ದಾರೆ. ನವೀನ್ ಜೊತೆಗೆ ಅವರ ಊರಿನವರೇ ಇನ್ನಿಬ್ಬರು ಸ್ನೇಹಿತರಿದ್ದರು. ಅದರಲ್ಲಿ ಚಳ್ಳಗೆರೆಯ ಓರ್ವನಿಗೆ ಗಾಯವಾಗಿದೆ. ಇನ್ನೊಬ್ಬರಿಗೆ ಅದೃಷ್ಟವಶಾತ್ ಏನೂ ಆಗಿಲ್ಲ. ವಿದೇಶಾಂಗ ಇಲಾಖೆ ನವೀನ್ ಸಾವನ್ನು ದೃಢಪಡಿಸಿತ್ತು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

  • ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

    ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

    ಹಾವೇರಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎಮದು ಮೃತ ನವೀನ್ ಸಹೋದರ ಹರ್ಷ ಭಾವುಕರಾದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ (22) ಬಲಿಯಾಗಿದ್ದಾರೆ. ಖಾರ್ಕೀವ್‍ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದಾರೆ. ಖಾರ್ಕೀವ್‍ನಲ್ಲಿ ಇವತ್ತು ಬೆಳಗ್ಗೆ 7 ಗಂಟೆಗೆ ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ನವೀನ್ ದುರ್ಮರಣಕ್ಕೀಡಾಗಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ಈ ಬಗ್ಗೆ, ಖಾರ್ಕೀವ್‍ನಲ್ಲಿರುವ ನವೀನ್ ಸ್ನೇಹಿತ ಶ್ರೀಕಾಂತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಳಗ್ಗೆ 7.30ಕ್ಕೆ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಿತ್ತು. ರೈಲಿನ ಮೂಲಕ ಪೋಲೆಂಡ್ ಗಡಿ ತಲುಪಬೇಕಿತ್ತು. ನವೀನ್ ಸೇರಿ 8 ಜನರ ನಮ್ಮ ತಂಡ ರೈಲ್ವೇ ನಿಲ್ದಾಣಕ್ಕೆ ಹೊರಡಬೇಕಿತ್ತು. ಈ ವೇಳೆ ಎಲ್ಲರಿಗೂ ಊಟ ತರಲು ಬಂಕರ್‍ನಿಂದ ನವೀನ್ ಹೊರ ಹೋಗಿದ್ದ. ಸೂಪರ್ ಮಾರ್ಕೆಟ್ ಬಳಿ ತುಂಬಾ ಕ್ಯೂ ಇದೆ. ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ. ಅದೇ ಅವನ ಕೊನೆ ಮಾತಾಗಿತ್ತು. ನಮಗೆಂದು ಊಟ ತರಲು ಹೋದವರ ಬರಲೇ ಇಲ್ಲ ಅಂತ ಭಾವುಕರಾದರು.

  • ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ವಾಷಿಂಗ್ಟನ್: ಉಕ್ರೇನ್, ರಷ್ಯಾ ನಡುವೆ ಯುದ್ಧದಲ್ಲಿ ನಿನ್ನೆ ಅಣುಬಾಂಬ್‍ನ ಚರ್ಚೆ ಆಗಿತ್ತು. ಈ ಬೆನ್ನಲ್ಲೇ, ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಕ್ಲಸ್ಟರ್ ಮತ್ತು ವ್ಯಾಕ್ಯೂಮ್ ಬಾಂಬ್ ಪ್ರಯೋಗಿಸಿದೆ ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದಾರೆ.

    ಏನಿದು ವ್ಯಾಕ್ಯೂಮ್ ಬಾಂಬ್?
    ಜಾಗತೀಕವಾಗಿ ಬಲಿಷ್ಠ ಬಾಂಬ್ ಎಂದು ಕರೆಯಲ್ಪಡುವ ಬಾಂಬ್ ವ್ಯಾಕ್ಯೂಮ್ ಬಾಂಬ್. ಇದನ್ನು ಥರ್ಮೋಬಾರಿಕ್ ವೆಪನ್ ಅಂತಲೂ ಕರೆಯಲಾಗುತ್ತದೆ. ಆಕ್ಸಿಜನ್ ಹೈಟೆಂಪರೇಚರ್ ಸ್ಫೋಟಕ ತುಂಬಿರುವ ಬಾಂಬ್ ಇದಾಗಿದ್ದು, ಈ ಬಾಂಬ್ ಸ್ಫೋಟಿಸಿದಾಗ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಸ್ಫೋಟಗೊಂಡರೆ ಅಲ್ಟ್ರಾಸಾನಿಕ್ ಡೇಂಜರಸ್ ತರಂಗಗಳನ್ನು ಹೊರಸೂಸುತ್ತದೆ. ಮನುಷ್ಯರ ದೇಹಗಳನ್ನು ಆವಿಯಾಗಿಸುವ ಸಾಮರ್ಥ್ಯ ಈ ಬಾಂಬ್‍ಗಿದೆ. ದೀರ್ಘಕಾಲ, ಅತಿ ಹೆಚ್ಚು ಸ್ಫೋಟವಾಗುತ್ತದೆ ಮಾರಣಾಂತಿಕ, ವಿನಾಶಕಾರಿ ಬಾಂಬ್ ಎಂಬ ಖ್ಯಾತಿ ವ್ಯಾಕ್ಯೂಮ್ ಬಾಂಬ್‍ಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ವ್ಯಾಕ್ಯೂಮ್ ಬಾಂಬ್ ಸಾಮಾನ್ಯವಾಗಿ 7,100 ಕೆ.ಜಿ ತೂಕ ಇದ್ದು, 300 ಮೀ.ವರೆಗೂ ಭಾರಿ ಹಾನಿ ಉಂಟು ಮಾಡುವ ಸಾಮರ್ಥ್ಯವಿದೆ. ಪರಮಾಣು ರಹಿತ ಅತ್ಯಾಧುನಿಕ ಬಾಂಬ್ ಎಂದು ವ್ಯಾಕ್ಯೂಮ್ ಬಾಂಬ್‍ನ್ನು ಕರೆಯಲಾಗುತ್ತದೆ. 2007ರಲ್ಲಿ ವ್ಯಾಕ್ಯೂಮ್ ಬಾಂಬ್ ಅಭಿವೃದ್ಧಿ ಮಾಡಿದ್ದ ರಷ್ಯಾ. 2016ರಲ್ಲಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ. ವಿಶ್ವದಲ್ಲೇ ಮೊದಲಿಗೆ ಅಮೆರಿಕ ಈ ಬಾಂಬ್ ತಯಾರಿಸಿತ್ತು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ಇದೀಗ ಉಕ್ರೇನ್ ಮೇಲೆ ರಷ್ಯಾ, ವ್ಯಾಕ್ಯೊಮ್ ಬಾಂಬ್‍ನ್ನು ನಿರಾಶ್ರಿತರು ಆಶ್ರಯ ಪಡೆದಿರುವ ಶಾಲೆಯೊಂದರ ಮೇಲೆ ದಾಳಿ ನಡೆಸಿದೆ ಎಂದು ಮಾನವ ಹಕ್ಕುಗಳ ಸಂಘ ಆರೋಪಿಸಿದೆ. ಅಲ್ಲದೇ ಉಕ್ರೇನ್ ಸೈನಿಕರ ಮೇಲೆ ಕೂಡ ವ್ಯಾಕ್ಯೂಮ್ ಬಾಂಬ್ ಎಸೆಯಲಾಗಿದ್ದು, ಪುಟಿನ್ ಉಕ್ರೇನ್‍ನನ್ನು ನಾಶ ಪಡಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

  • ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಕೀವ್: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ. ಅದೇ ಅವನ ಕೊನೆ ಮಾತಾಗಿತ್ತು. ನಮಗೆಂದು ಊಟ ತರಲು ಹೋದವರ ಬರಲೇ ಇಲ್ಲ ಎಂದು ಉಕ್ರೇನ್‍ನ ಖಾರ್ಕಿವ್‍ನಲ್ಲಿ ಶೆಲ್ ದಾಳಿ ವೇಳೆ ಮೃತಪಟ್ಟ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್‍ರನ್ನು ನೆನೆಪಿಸಿಕೊಂಡು ಅವರ ಸ್ನೇಹಿತ ಶ್ರೀಕಾಂತ್ ಭಾವುಕರಾಗಿದ್ದಾರೆ.

    ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ (22) ಬಲಿಯಾಗಿದ್ದಾರೆ. ಖಾರ್ಕಿವ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದಾರೆ. ಖಾರ್ಕೀವ್‍ನಲ್ಲಿ ಇವತ್ತು ಬೆಳಗ್ಗೆ 7 ಗಂಟೆಗೆ ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ನವೀನ್ ದುರ್ಮರಣಕ್ಕೀಡಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ಈ ಬಗ್ಗೆ, ಖಾರ್ಕಿವ್‌ನಲ್ಲಿರುವ ನವೀನ್ ಸ್ನೇಹಿತ ಶ್ರೀಕಾಂತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಳಗ್ಗೆ 7.30ಕ್ಕೆ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಿತ್ತು. ರೈಲಿನ ಮೂಲಕ ಪೋಲೆಂಡ್ ಗಡಿ ತಲುಪಬೇಕಿತ್ತು. ನವೀನ್ ಸೇರಿ 8 ಜನರ ನಮ್ಮ ತಂಡ ರೈಲ್ವೇ ನಿಲ್ದಾಣಕ್ಕೆ ಹೊರಡಬೇಕಿತ್ತು. ಈ ವೇಳೆ, ಎಲ್ಲರಿಗೂ ಊಟ ತರಲು ಬಂಕರ್‌ನಿಂದ ನವೀನ್ ಹೊರ ಹೋಗಿದ್ದ. ಸೂಪರ್ ಮಾರ್ಕೆಟ್ ಬಳಿ ತುಂಬಾ ಕ್ಯೂ ಇದೆ. ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ. ಅದೇ ಅವನ ಕೊನೆ ಮಾತಾಗಿತ್ತು. ನಮಗೆಂದು ಊಟ ತರಲು ಹೋದವರ ಬರಲೇ ಇಲ್ಲ ಅಂತ ಭಾವುಕರಾದರು. ಇದನ್ನೂ ಓದಿ: ಖಾರ್ಕಿವ್ ಶೆಲ್ ದಾಳಿ ಯುದ್ಧಾಪರಾಧ: ಉಕ್ರೇನ್ ಅಧ್ಯಕ್ಷ

  • ಖಾರ್ಕಿವ್ ಶೆಲ್ ದಾಳಿ ಯುದ್ಧಾಪರಾಧ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಮಂಗಳವಾರ ನಡೆದ ರಷ್ಯಾದ ಶೆಲ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಈ ದಾಳಿಯನ್ನು ಯುದ್ಧಾಪರಾಧ ಎಂದು ಕರೆದಿದ್ದಾರೆ.

    ಖಾರ್ಕಿವ್‍ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಯನ್ನು ಯುದ್ಧಾಪರಾಧ ಎಂದು ವಿರೋಧಿಸಿದ ಝೆಲೆನ್ಸ್ಕಿ ಉಕ್ರೇನ್‍ನ ರಾಜಧಾನಿ ಕೀವ್ ಅನ್ನು ರಕ್ಷಿಸುವುದು ರಷ್ಯಾ ಪಡೆಯ ಪ್ರಮುಖ ಆದ್ಯತೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

    ಖಾರ್ಕಿವ್ ಮೇಲಿನ ದಾಳಿ ಯುದ್ಧಾಪರಾಧ. ಖಾರ್ಕಿವ್ ಹಾಗೂ ಕೀವ್, ರಷ್ಯಾದ ಮುಖ್ಯ ಗುರಿಯಾಗಿದೆ. ಇದೀಗ ಖಾರ್ಕಿವ್‍ನಲ್ಲಿ ಘಟಿಸಿರುವ ದುರಂತದಂತೆ ರಾಜಧಾನಿಯಲ್ಲೂ ದಾಳಿ ನಡೆಸುವುದು ರಷ್ಯಾದ ಗುರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಮಂಗಳವಾರ ಖಾರ್ಕಿವ್‍ನಲ್ಲಿರುವ ಸರ್ಕಾರಿ ಪ್ರಧಾನ ಕಛೇರಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಭಾರೀ ಹಾನಿಯನ್ನು ಮಾಡಿದೆ. ಶೆಲ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸೇರಿದಂತೆ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    2ನೇ ಮಹಾಯುದ್ಧದ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‍ನ ಖಾರ್ಕಿವ್ ಹಾಗೂ ಕೀವ್ ನಗರಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿ 1 ವಾರದಿಂದ ದೇಶಾದ್ಯಂತ ದಾಳಿ ನಡೆಸುತ್ತಿದೆ.

  • ನವೀನ್ ಸಾವು ಬಹಳ ದುಃಖ ತರಿಸಿದೆ – ಸಿಎಂ ಭಾವುಕ

    ನವೀನ್ ಸಾವು ಬಹಳ ದುಃಖ ತರಿಸಿದೆ – ಸಿಎಂ ಭಾವುಕ

    ಬೆಂಗಳೂರು: ನವೀನ್ ಸಾವು ಬಹಳ ದುಃಖ ತರಿಸಿದೆ. 2-3 ದಿನಗಳಲ್ಲಿ ಪಾರ್ಥಿವ ಶರೀರವನ್ನು ತರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ನವೀನ್ ಮೃತಪಟ್ಟಿದ್ದಾರೆ. 4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಒಂದು ವಾರದಿಂದ ಬಂಕರ್‌ನಲ್ಲಿದ್ದರು. ಆದರೆ ಇವತ್ತು ರೈಲ್ವೆ ಸ್ಟೇಷನ್ ಮೂಲಕ ಹೊರಗೆ ಬಂದಿದ್ದಾನೆ. ಏರ್‌ಸ್ಟ್ರೈಕ್‌ ವೇಳೆ ಶೆಲ್ ಬಡಿದು ಅವರು ಸಾವನ್ನಪ್ಪಿದ್ದಾರೆ. ನವೀನ್ ಜೊತೆಗೆ ಅವರ ಊರಿನವರೇ ಇನ್ನಿಬ್ಬರು ಸ್ನೇಹಿತರಿದ್ದರು. ಅದರಲ್ಲಿ ಚಳ್ಳಗೆರೆಯ ಓರ್ವನಿಗೆ ಗಾಯವಾಗಿದೆ. ಇನ್ನೊಬ್ಬರಿಗೆ ಅದೃಷ್ಟವಶಾತ್ ಏನು ಆಗಿಲ್ಲ. ವಿದೇಶಾಂಗ ಇಲಾಖೆ ನವೀನ್ ಸಾವನ್ನು ದೃಢಪಡಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ : ಉಕ್ರೇನ್ ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ನವೀನ್ ಅವರ ತಂದೆ ಜೊತೆ ಮಾತಾಡಿದ್ದೇನೆ. ನನಗೆ ಬಹಳ ಬೇಕಾದ ಕುಟುಂಬದವರಾಗಿದ್ದಾರೆ. ಅವರ ಸೋದರ ಸಂಬಂಧಿ ನನ್ನ ಸ್ನೇಹಿತರಾಗಿದ್ದು ದುಬೈನಲ್ಲಿದ್ದಾರೆ. ವಿದೇಶಾಂಗ ಇಲಾಖೆಯ ಸಚಿವರ ಜೊತೆ ಮಾತಾಡಿದ್ದೇನೆ. ಸದ್ಯ ಅಲ್ಲಿನ ವಾರ್ ಝೋನ್ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ನಮ್ಮ ದೇಶಕ್ಕೆ ಮೃತದೇಹವನ್ನು ತರುವ ಕೆಲಸ ಮಾಡುತ್ತಿದ್ದೇವೆ. ಮೋದಿ ಅವರೊಂದಿಗೂ ಮಾತನಾಡಿದ್ದೇನೆ. ನವೀನ್ ಅವರ ಕುಟುಂಬದ ಜೊತೆ ಮೋದಿ ಅವರು ಸಹ ಮಾತನಾಡಿದ್ದಾರೆ. ಸದ್ಯಕ್ಕೆ ಪಾರ್ಥಿವ ಶರೀರ ತರಲು ಸಾಧ್ಯವಾಗದೇ ಇದ್ದರೂ, 2-3 ದಿನಗಳಲ್ಲಿ ಮೃತದೇಹವನ್ನು ತರಲು ಸಾಧ್ಯವಾಗುತ್ತದೆಯಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ನವೀನ್ ಸಾವು ಬಹಳ ದುಃಖತರಿಸಿದೆ ಎಂದು ಹೇಳುತ್ತಾ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಭಾವುಕರಾದರು. ಇದನ್ನೂ ಓದಿ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

  • ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

    ಉಕ್ರೇನ್‌ನ ಖಾರ್ಕೀವ್ ನೆಲದಲ್ಲಿ ನಡೆದ ಶೆಲ್ ದಾಳಿಯ ವೇಳೆ ಕರ್ನಾಟಕದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ನವೀನ್ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ನಿಮ್ಮನ್ನು ಕಳೆದುಕೊಂಡಿರುವ ತಂದೆ ತಾಯಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್

    ನಟ ನೀನಾಸಂ ಸತೀಶ್ ಕೂಡ ನವೀನ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಎದೆಯುದ್ದ ಬೆಳೆದ ಮಕ್ಕಳನ್ನು ತಂದೆ ತಾಯಿಗಳು ಕಳೆದುಕೊಂಡಾಗಿನ ದುಃಖ ಯಾರಿಗೂ ಬರಬಾರದು. ನವೀನ್ ವೈದ್ಯನಾಗಿ ಅದೆಷ್ಟೋ ಜೀವ ಉಳಿಸುತ್ತಿದ್ದ, ಇದೀಗ ಯುದ್ಧದಾಹಿಗಳ ದಾಹಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ಬರಲಿ ಎಂದಿದ್ದಾರೆ.  ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ನಟ, ನಿರ್ಮಾಪಕ ಮತ್ತು ಕೃಷಿ ಮಂತ್ರಿಯೂ ಆಗಿರುವ ಬಿ.ಸಿ.ಪಾಟೀಲ್ ಕೂಡ  ಮೃತ ನವೀನ್ ಗಾಗಿ ಕಂಬನಿ ಮಿಡಿದಿದ್ದಾರೆ. “ನವೀನ್ ಜ್ಞಾನಗೌಡರ್ ಮೃತಪಟ್ಟ ಸುದ್ದಿ ಅತೀವ ದುಃಖ ತಂದಿದೆ. ಅವರು ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ” ಎಂದು ಟ್ವಿಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಸಾಕಷ್ಟು ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಕೂಡ ಕನ್ನಡಿಗ ಸಾವಿಗೆ ಕಂಬನಿ ಮಿಡಿದಿದ್ದಾರೆ.